IMG 20210924 WA0030

ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುವುದಾದರೆ ಆ ಹುದ್ದೆಗೆ ಮಹತ್ವವೇನಿದೆ- ಸಿದ್ದರಾಮಯ್ಯ

POLATICAL STATE

ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುವುದಾದರೆ ಆ ಹುದ್ದೆಗೆ ಮಹತ್ವವೇನಿದೆ

ಬೆಂಗಳೂರು : ಸಭಾಧ್ಯಕ್ಷರ ಹುದ್ದೆ ರಾಜಕಿಯ ಮತ್ತು ಪಕ್ಷಗಳನ್ನು ಮೀರಿದ ಹುದ್ದೆ. ಅವರ ನಿರ್ಣಯಗಳು ಯಾವಾಗಲೂ ಪಕ್ಷಾತೀತವಾಗಿರಬೇಕು. ಸಭಾಧ್ಯಕ್ಷರು ಒಂದು ರಾಜಕೀಯ ಪಕ್ಷದ ಸದಸ್ಯನಂತೆ ವರ್ತಿಸುವುದಾದರೆ ಆ ಹುದ್ದೆಗೆ ಮಹತ್ವವೇನಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಜಾಪ್ರಭುತ್ವದಲ್ಲಿ, ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟಿದ್ದಾರೆ ಎಂಬ ನನ್ನ ನಂಬಿಕೆ ಹುಸಿಯಾಗಿದೆ. ಮುಖ್ಯಮಂತ್ರಿಯಾದಿಯಾಗಿ ಇಡೀ ಸರ್ಕಾರ ಆರ್.ಎಸ್.ಎಸ್ ನವರ ನಿರ್ದೇಶನದಲ್ಲಿ ಮುಖವಾಡ ಧರಿಸಿ, ಅವರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ವಿಧಾನಸಭೆ ಕಲಾಪವನ್ನು ಸಭಾಧ್ಯಕ್ಷರು ಅನಿರ್ಧಿಷ್ಟ ಅವಧಿಗೆ ಮುಂದೂಡಿದ ಬಳಿಕ ಸಿದ್ದರಾಮಯ್ಯ ಅವರು ಮೊಗಸಾಲೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಅವರು ಹೇಳಿದ್ದು :
ಸರ್ಕಾರದ ನಿರ್ದೇಶನದ ಮೇರೆಗೆ ಸಭಾಧ್ಯಕ್ಷರು ಕಲಾಪವನ್ನು ಅನಿರ್ಧಿಷ್ಟ ಅವಧಿಗೆ ಮುಂದೂಡಿದ್ದಾರೆ. ಆರು ತಿಂಗಳ ಬಳಿಕ ಅಧಿವೇಶನ ನಡೆಯುತ್ತಿದೆ. ಚರ್ಚಿಸಲು ಸಾಕಷ್ಟು ವಿಷಯಗಳಿವೆ. ಸರ್ಕಾರದ ಗಮನ ಸೆಳೆಯಬೇಕಾದ ಸಮಸ್ಯೆಗಳಿವೆ, ಹಾಗಾಗಿ ಕನಿಷ್ಟ ಇಪ್ಪತ್ತು ದಿನ ಸದನ ನಡೆಸಬೇಕು ಎಂದು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಹೇಳಿದ್ದೆ. ಸಭಾಧ್ಯಕ್ಷರು ಇನ್ನೊಂದು ಸಭೆ ಕರೆದಾಗ ಈ ಬಗ್ಗೆ ತೀರ್ಮಾನ ಮಾಡೋಣ ಎಂಬ ಭರವಸೆ ನೀಡಿದ್ದರು. ಆದರೆ ಈ ವಾರ ಸಭೆ ಕರೆಯಲೇ ಇಲ್ಲ, ಇನ್ನು ಐದು ದಿನವಾದರೂ ಸದನ ಮುಂದುವರೆಸುವಂತೆ ಆಗ ಸಭಾಧ್ಯಕ್ಷರಿಗೆ ಪತ್ರ ಬರೆದೆ. ಅದಕ್ಕವರು ಸರ್ಕಾರ ಸಿದ್ಧವಿಲ್ಲ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಚರ್ಚೆಗೆ ನಾನು ಅವಕಾಶ ಕೇಳಿದ್ದೆ. ಸಮಯ ಇಲ್ಲ ಎಂದು ಅವಕಾಶವನ್ನೇ ನೀಡಿಲ್ಲ. ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ತೀರ ಕೆಟ್ಟದಾಗಿದೆ, ಹೀಗೆ ಅನೇಕ ವಿಚಾರಗಳ ಬಗ್ಗೆಯೂ ಚರ್ಚೆ ಮಾಡಬೇಕಿತ್ತು. ಸನದ ಮುಂದುವರೆಸಿದ್ದರೆ ಈ ಎಲ್ಲಾ ವಿಷಯಗಳ ಮೇಲೆ ಚರ್ಚಿಸಬಹುದಿತ್ತು. ಈ ವರೆಗೆ ಸದನದಲ್ಲಿ ಪ್ರಸ್ತಾಪಿಸಿದ ವಿಷಯಗಳ ಬಗ್ಗೆಯಾದರೂ ಸರ್ಕಾರ ಸಕಾರಾತ್ಮಕವಾಗಿ ಉತ್ತರ ನೀಡಿದೆಯೇ, ಅದೂ ಇಲ್ಲ. ಸದನದಲ್ಲಿ ಧರಣಿ, ಪ್ರತಿಭಟನೆ ಮಾಡದೆ ಜನರ ಸಮಸ್ಯೆಗಳ ಚರ್ಚೆಗೆ ಹೆಚ್ಚು ಸಮಯ ಸಿಗಲಿ ಎಂದು ಶಾಸಕಾಂಗ ಸಭೆಯಲ್ಲಿ ನಿರ್ಧರಿಸಿದ್ದೆವು. ಯಾವಾಗ ಸದನ ಮುಂದುವರೆಸಲು ಆಗುವುದೇ ಇಲ್ಲ ಎಂದು ಹೇಳಿದರೋ ಆಗ ಅನಿವಾರ್ಯವಾಗಿ ಧರಣಿ ಮಾಡಬೇಕಾಯಿತು.IMG 20210924 WA0032

ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಕ ಕೇಂದ್ರ ಸರ್ಕಾರ ಶೋಷಿತರು, ದಲಿತರು, ಮಹಿಳೆಯರನ್ನು ಸಂಘ ಪರಿವಾರದ, ಮೇಲ್ವರ್ಗದ ಜನರ ಗುಲಾಮರನ್ನಾಗಿಸಲು ಹೊರಟಿದೆ. ಇದನ್ನು ಸದನದಲ್ಲಿ ವಿರೋಧ ಮಾಡಿದರೆ ಸಭಾಧ್ಯಕ್ಷರೇ ಸಮರ್ಥನೆಗೆ ಇಳಿಯುತ್ತಾರೆ.
ಕೆಐಎಡಿಬಿ ಅಧೀನದಲ್ಲಿರುವ ಸುಮಾರು 400 ಕೋಟಿ ಮೌಲ್ಯದ 116 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಕೇವಲ ರೂ. 50 ಕೋಟಿಗೆ ಸೆಸ್ ಎಂಬ ಆರ್.ಎಸ್.ಎಸ್ ನವರನ್ನು ಒಳಗೊಂಡ ಸಂಸ್ಥೆಗೆ ಮಾರಲು ನಿರ್ಧರಿಸಿದೆ. ಇದನ್ನು ಪ್ರಶ್ನಿಸಿದರೆ ಸಭಾಧ್ಯಕ್ಷರು ಸರ್ಕಾರದ ಕೈಗೊಂಬೆಯಂತೆ ವರ್ತಿಸಿದರು.

ಕೊರೊನಾದಿಂದ ಸತ್ತವರ ಲೆಕ್ಕದಲ್ಲೂ ಸರ್ಕಾರ ಸುಳ್ಳು ಹೇಳಿದೆ. ಹಿಂದಿನ ಮುಖ್ಯಮಂತ್ರಿ ಮೃತರ ಕುಟುಂಬಗಳಿಗೆ ತಲಾ ಒಂದು ಲಕ್ಷ ರೂ. ಪರಿಹಾರ ನೀಡಲು ಮೂನ್ನೂರು ಕೋಟಿ ಘೋಷಣೆ ಮಾಡಿದ್ದರು. ಅವರು ಅಧಿಕಾರದಿಂದ ಇಳಿದು ಎರಡು ತಿಂಗಳಾಯಿತು. ಇನ್ನೂ ಒಂದು ಪೈಸೆ ಪರಿಹಾರ ಕೊಟ್ಟಿಲ್ಲ. ಶ್ರೀರಾಮುಲು ಪರಿಹಾರ ಕೊಟ್ಟಿದ್ದೀವಿ ಎಂದು ಹೇಳಿ ಸಿಕ್ಕಿಬಿದ್ದರು, ಕೊನೆಗೆ ಯಡಿಯೂರಪ್ಪ ಅವರೇ ಪರಿಹಾರ ಕೊಟ್ಟಿಲ್ಲ ಎಂದು ಸಮಜಾಯಿಷಿ ಹೇಳಿದರು.

ಲೋಕಸಭೆಯ ಸಭಾಧ್ಯಕ್ಷರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಸಂವಿಧಾನದಲ್ಲಿ ಅವಕಾಶ ಇಲ್ಲ. ದೇಶದ 75 ವರ್ಷಗಳ ಇತಿಹಾಸದಲ್ಲಿ, ವಿಧಾನಸೌಧ ಸ್ಥಾಪನೆಯಾಗಿ ಕಾರ್ಯಾರಂಭ ಮಾಡಿದ ದಿನದಿಂದ ಇವತ್ತಿನವರೆಗೆ ಲೋಕಸಭಾ ಸಭಾಧ್ಯಕ್ಷರು ವಿಧಾನಮಂಡಲದ ಜಂಟಿ ಅಧಿವೇಶನ ಕುರಿತು ಭಾಷಣ ಮಾಡಿಲ್ಲ.

ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೇರಿಕೆ ಖಂಡಿಸಿ ನಾವು ಸೈಕಲ್, ಎತ್ತಿನಗಾಡಿ, ಟಾಂಗಾ ಸವಾರಿಯಲ್ಲಿ ಅಧಿವೇಶನಕ್ಕೆ ಆಗಮಿಸುವ ಮೂಲಕ ಪ್ರತಿಭಟನೆ ನಡೆಸಿದ್ದೇವೆ.
ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಆಸ್ಪತ್ರೆ ಬಿಲ್, ದಿನಸಿ ಪದಾರ್ಥ, ಬಸ್ ದರ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳು ಹಾಗೂ ಸೇವೆಗಳ ಬೆಲೆ ಗಗನಕ್ಕೇರಿ, ಜನಸಾಮಾನ್ಯರು ಪರದಾಡುವಂತಾಗಿದೆ.
ಒಂದು ಮಧ್ಯಮ ವರ್ಗದ ಕುಟುಂಬದ ಜೀವನ ನಿರ್ವಹಣೆಯ ವೆಚ್ಚ ಇಂದು ದುಪ್ಪಟ್ಟಾಗಿದೆ, ಆದರೆ ಸಂಬಳ, ಪಿಂಚಣಿ, ಕೂಲಿ ಇವೆಲ್ಲವೂ ಹಿಂದಿನಷ್ಟೇ ಇದೆ. ಹೀಗಾದರೆ ಸಾಮಾನ್ಯ ಜನ ಬದುಕುವುದು ಹೇಗೆ?

ದೇಹದಲ್ಲಿ ರಕ್ತಕ್ಕೆಷ್ಟು ಮಹತ್ವದ ಪಾತ್ರವಿದೆಯೋ, ಜನರ ಬದುಕಿನಲ್ಲಿ ಡೀಸೆಲ್ ಗೂ ಅಷ್ಟೇ ಮಹತ್ವವಿದೆ. ಹಿಂದೆ ಯು.ಪಿ.ಎ ಸರ್ಕಾರವಿದ್ದಾಗ ಡೀಸೆಲ್ ದರ ರೂ. 47 ಇತ್ತು, ಇಂದು ರೂ. 96 ಆಗಿದೆ. ಡೀಸೆಲ್ ಬೆಲೆಯೇರಿಕೆ ಇಂದ ಉಳಿದೆಲ್ಲಾ ವಸ್ತುಗಳ ಬೆಲೆ ಹೆಚ್ಚಳವಾಗುತ್ತದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಬಾರದು ಎಂಬ ಕಾರಣಕ್ಕೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಡೀಸೆಲ್ ಬೆಲೆ ರೂ. 50 ರ ಗಡಿ ದಾಟದಂತೆ ನೋಡಿಕೊಂಡಿದ್ದರು. ನರೇಂದ್ರ ಮೋದಿ ಸರ್ಕಾರ ಡೀಸೆಲ್ ಮೇಲಿನ ಅಬಕಾರಿ ಸುಂಕ ಹೆಚ್ಚಿಸಿದ್ದೇ ಇಂದಿನ ಬೆಲೆಯೇರಿಕೆ ನೇರ ಕಾರಣ.

ಅಚ್ಚೇ ದಿನದ ಆಸೆ ತೋರಿಸಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರು ಜನರ ಜೇಬಿಗೆ ಕೈ ಹಾಕಿ, ದರೋಡೆಗಿಳಿದಿದ್ದಾರೆ. ಇದರಿಂದ ಜನ ತಮ್ಮ ಮನೆಯಲ್ಲಿದ್ದ ಬಂಗಾರವನ್ನೆಲ್ಲಾ ಅಡವಿಟ್ಟು ಜೀವನ ಸಾಗಿಸುವಂತಾಗಿದೆ.
ಕೊರೊನಾ ಆರಂಭವಾದ ನಂತರ ಸುಮಾರು ರೂ. 4 ಲಕ್ಷದ 17 ಸಾವಿರ ಕೋಟಿ ಬೆಲೆಬಾಳುವ 1500 ಮೆಟ್ರಿಕ್ ಟನ್ ಬಂಗಾರವನ್ನು ಮುತ್ತೂಟ್ ಮತ್ತು ಮಣಪ್ಪುರಂನಲ್ಲಿ ಅಡವಿಟ್ಟಿದ್ದಾರೆ. ಇಂತಹಾ ಸ್ಥಿತಿಗೆ ದೇಶವನ್ನು ಮೋದಿ ಸರ್ಕಾರ ತಂದು ನಿಲ್ಲಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಕಾರ್ಪೊರೇಟ್ ಉದ್ದಿಮೆಗಳ ಮೇಲೆ ತೆರಿಗೆ ಹೆಚ್ಚು ಮಾಡಬೇಕಿತ್ತು. ಆದರೆ ಮೋದಿ ಸರ್ಕಾರ ಬಂಡವಾಳಶಾಹಿಗಳು, ಉದ್ದಿಮೆದಾರರು, ಕಾರ್ಪೊರೇಟ್ ಕಂಪನಿಗಳ ಪರವಾಗಿದ್ದಾರೆ.

ಕಾಂಗ್ರೆಸ್ ಪಕ್ಷ ಬಡವರು, ಮಹಿಳೆಯರು, ಆಟೋ, ಕ್ಯಾಬ್ ಚಾಲಕರು, ದಿನಗೂಲಿ ನೌಕರರು, ಕಾರ್ಮಿಕರ ಪರವಾಗಿ ಇದೆ. ಈ ಕಾರಣಕ್ಕಾಗಿಯೇ ನಾವು ಇಂದು ಜನರ ದನಿಯಾಗಿ ಹೋರಾಟಕ್ಕಿಳಿದಿದ್ದೇವೆ. ಸರ್ಕಾರದ ವಿರುದ್ಧ ಮಾತನಾಡುವವರ ಮೇಲೆ ಸುಳ್ಳು ಕ್ರಿಮಿನಲ್ ಕೇಸ್, ದೇಶದ್ರೋಹದ ಆರೋಪ ಹೊರಿಸಿ ಬಂಧಿಸುತ್ತಾರೆ.
ಬಿಜೆಪಿ ಸರ್ಕಾರದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳಿಗಾಗಲೀ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಲೀ ಬೆಲೆಯೇ ಇಲ್ಲ. ಇಂಥಾ ಕ್ರೂರ ಸರ್ಕಾರವನ್ನು ನನ್ನ 45 ವರ್ಷಗಳ ರಾಜಕೀಯ ಜೀವನದಲ್ಲೇ ನೋಡಿರಲಿಲ್ಲ. ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವೊಂದರಲ್ಲೇ ಕೇಂದ್ರ ಸರ್ಕಾರ ರೂ. 23 ಲಕ್ಷ ಕೋಟಿ ತೆರಿಗೆ ಹಣ ಸಂಗ್ರಹಿಸಿದೆ. ಇದನ್ನು ಕ್ರಿಮಿನಲ್ ಲೂಟ್ ಅಂದರೆ ತಪ್ಪೇನಿದೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೈತ ಹೋರಾಟವನ್ನು “ಪ್ರಾಯೋಜಿತ ಚಳವಳಿ” ಎಂದು ಕರೆದು ಇಡೀ ರೈತ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ. ಹೋರಾಟವನ್ನೇ ಮಾಡದೆ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದವರಿಗೆ ಹೋರಾಟದ ಬೆಲೆ ಗೊತ್ತೇ?
ಪಕ್ಕದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು 3 ರೂಪಾಯಿ ಕಡಿತ ಮಾಡಿದರು. ರಾಜ್ಯ ಸರ್ಕಾರಕ್ಕೆ ನಿಜವಾಗಿ ಬಡವರ, ರೈತರ ಮೇಲೆ ಕಾಳಜಿ ಇದ್ದರೆ ಪೆಟ್ರೋಲ್, ಡೀಸೆಲ್ ಮೇಲೆ ರೂ. 10 ತೆರಿಗೆ ಕಡಿತ ಮಾಡಲಿ.

ಈ ಸರ್ಕಾರದ ಜೊತೆ ಅಧಿವೇಶನದಲ್ಲಿ ಎಷ್ಟೇ ಗುದ್ದಾಡಿದರೂ ಇವರು ಯಾವುದಕ್ಕೂ ತಲೆಕೆಡಿಸಿಕೊಳ್ಳದಷ್ಟು ಭಂಡಗೆಟ್ಟಿದ್ದಾರೆ. ನಮ್ಮ ಪಕ್ಷವೇ ಇಂದು ಅಧಿಕಾರದಲ್ಲಿ ಇದ್ದಿದ್ದರೆ ಕನಿಷ್ಟ 10 ರೂಪಾಯಿ ತೆರಿಗೆ ಕಡಿತ ಮಾಡುತ್ತಿದ್ದೆ. ಅಕ್ಟೋಬರ್ 2ರ ಗಾಂಧಿಜಯಂತಿಯಂದು ಬೆಲೆಯೇರಿಕೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆಯನ್ನು ಆರಂಭಿಸಿ, ಬೆಲೆ ಇಳಿಕೆಯಾಗುವವರೆಗೂ ಮುಂದುವರೆಸಿಕೊಂಡು ಹೋಗುತ್ತೇವೆ.