IMG 20230314 WA0033

ಕಾಂಗ್ರೆಸ್ :ಬಿಜೆಪಿಯಲ್ಲಿ ಯಡಿಯೂರಪ್ಪನವರಿಗಿಂತ ಸಿ.ಟಿ ರವಿಯೇ ಬಹಳ ದೊಡ್ಡವರಾಗಿದ್ದಾರೆ….!

POLATICAL STATE

ಬಿಜೆಪಿಯಲ್ಲಿ ಯಡಿಯೂರಪ್ಪನವರಿಗಿಂತ ಸಿ.ಟಿ ರವಿಯೇ ಬಹಳ ದೊಡ್ಡವರಾಗಿದ್ದಾರೆ: ಡಿ.ಕೆ. ಶಿವಕುಮಾರ್

:

ಬೆಂಗಳೂರು : ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರೇ ಹೈಕಮಾಂಡ್ ಆಗಿದ್ದು, ಅವರು ಯಡಿಯೂರಪ್ಪ ಅವರಿಗಿಂತ ಬಹಳ ದೊಡ್ಡವರಾಗಿದ್ದಾರೆ. ಹೀಗಾಗಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರ ಟಿಕೆಟ್ ವಿಚಾರವಾಗಿ ಮಾತನಾಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ವಿಜಯೇಂದ್ರಗೆ ಶಿಕಾರಿಪುರ ಟಿಕೆಟ್ ನೀಡುವ ವಿಚಾರವಾಗಿ ಸಿ.ಟಿ ರವಿ ಅವರ ಹೇಳಿಕೆ ಕುರಿತು ಮಾಧ್ಯಮಗಳು ಸದಾಶಿವನಗರ ನಿವಾಸದ ಬಳಿ ಮಂಗಳವಾರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್ ಅವರು, ‘ಇದು ಬಿಜೆಪಿಯ ಆಂತರಿಕ ವಿಚಾರ. ಬಿಜೆಪಿಯಲ್ಲಿ ಬಹಳ ಹಿಂದಿನಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡಲು ಪಿತೂರಿ ನಡೆದಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಇದರಲ್ಲಿ ಕಾಂಗ್ರೆಸ್ ಪಾತ್ರವಿಲ್ಲ. ಜನ ಯಡಿಯೂರಪ್ಪ ಅವರ ಮುಖ ನೋಡಿ ಬಿಜೆಪಿಗೆ ಮತಹಾಕಿದ್ದರು. ಆದರೆ ಯಡಿಯೂರಪ್ಪ ಅವರ ಕಣ್ಣೀರು ರಾಜ್ಯ ರಾಜಕಾರಣದ ಚಿತ್ರಣ ಬದಲಿಸಲಿದೆ. ಸಿ.ಟಿ ರವಿ ಅವರು ಹೈಕಮಾಂಡ್ ಆಗಿದ್ದು, ಅವರು ಯಡಿಯೂರಪ್ಪ ಅವರಿಗಿಂತಲೂ ದೊಡ್ಡವರಾಗಿದ್ದಾರೆ. ಇದು ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಅವರು ತೀರ್ಮಾನ ಮಾಡುತ್ತಾರೆ’ ಎಂದು ತಿಳಿಸಿದರು.

ಹಾಲಿ ಸಚಿವರು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈ ವಿಚಾರವಾಗಿ ನಾನು ಈಗ ಏನನ್ನೂ ಹೇಳುವುದಿಲ್ಲ. ಸಮಯ ಎಲ್ಲದಕ್ಕೂ ಉತ್ತರ ನೀಡಲಿದೆ. ಈ ವಿಚಾರವಾಗಿ ಮಾಧ್ಯಮಗಳಲ್ಲಿ ವರದಿ ನೋಡಿದ್ದೇನೆ. ಆದರೆ ನಾನು ಯಾವುದೇ ಸಚಿವರ ಜತೆ ಸಂಪರ್ಕ ಮಾಡಿಲ್ಲ. ಆದರೆ ಹಾಲಿ ಶಾಸಕರುಗಳು ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳುತ್ತಿದ್ದು, ಆ ಕ್ಷೇತ್ರಗಳಲ್ಲಿ ನಮ್ಮದೇ ಪಕ್ಷದ ನಾಯಕರು ಕಾರ್ಯಕರ್ತರು ಇದ್ದಾರೆ. ಹೀಗಾಗಿ ಈಗ ಪಕ್ಷಕ್ಕೆ ಅವರ ಅಗತ್ಯವಿಲ್ಲ. ನಾವು ಕೆಲವು ಕ್ಷೇತ್ರಗಳ ಬಗ್ಗೆ ಮಾತ್ರ ಈ ವಿಚಾರವಾಗಿ ಚಿಂತನೆ ಮಾಡುತ್ತಿದ್ದು, ನಾವು ಈಗಲೇ ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ’ ಎಂದರು.

ಜಾರಕಿಹೊಳಿ ಅವರ ಸಿ.ಡಿ ಬೆದರಿಕೆ ಆರೋಪದ ಬಗ್ಗೆ ಕೇಳಿದಾಗ, ‘ಈ ವಿಚಾರವಾಗಿ ಅವರೇ ಜನಸಾಮಾನ್ಯರಿಗೆ ಸ್ಪಷ್ಟನೆ ನೀಡಬೇಕು. ಬಿಜೆಪಿ ಇಂತಹ ನಾಯಕನ್ನು ಇಟ್ಟುಕೊಂಡು ಬಳಸಿಕೊಳ್ಳಲಿ. ನಾನು ಅವರ ಬಗ್ಗೆ ಮಾತನಾಡುವುದಿಲ್ಲ’ ಎಂದರು.

ಕೆ.ಎಸ್ ಈಶ್ವರಪ್ಪ ಅವರು ಆಜಾನ್ ವಿಚಾರವಾಗಿ ನೀಡಿರುವ ಹೇಳಿಕೆ ಹಾಗೂ ಇಂದು ಬಿಜೆಪಿ ಎಲ್ಲ ಮುಸಲ್ಮಾನರ ವಿರುದ್ದವಾಗಿಲ್ಲ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ತಮ್ಮ ರಾಜಕೀಯ ಅಸ್ತ್ರ ಬಳಸುತ್ತಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಅವರನ್ನು ಸರ್ಕಾರದಿಂದ ಹೊರದಬ್ಬಲಾಗಿದೆ. ಅವರು ಭ್ರಷ್ಟಾಚಾರದ ನಾಯಕರಾಗಿದ್ದು, ಅವರು ಶಿವಮೊಗ್ಗ ಹಾಗೂ ಮಲೆನಾಡಿಗೆ ತಂದಿರುವ ಕಪ್ಪುಚುಕ್ಕೆಯಿಂದ ಆ ಭಾಗ ಚೇತರಿಸಿಕೊಳ್ಳು 20-30 ವರ್ಷಗಳೇ ಬೇಕಾಗುತ್ತದೆ. ಮಾಜಿ ಸಂಸದ ಆಯನೂರು ಮಂಜುನಾಥ್ ಅವರು ಅಲ್ಲಿನ ಜನರಿಗೆ ಭ್ರಷ್ಟ ಮುಕ್ತ ಆಡಳಿತ, ವ್ಯಾಪಾರ ಸ್ನೇಹಿ ವಾತಾವರಣ ಕಲ್ಪಿಸುವ ಭರವಸೆ ನೀಡಿದ್ದಾರೆ. ಆಮೂಲಕ ಶಿವಮೊಗ್ಗದ ಪರಿಸ್ಥಿತಿ ಸರಿಯಾಗಿಲ್ಲ, ಹೀಗಾಗಿ ಯಾವುದೇ ಉದ್ಯಮಿಗಳು ಅಲ್ಲಿ ಬಂಡವಾಳ ಹೂಡಿಕೆ ಮಾಡಲು ಮುಂದೆಬರುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಮಲೆನಾಡು ಭಾಗದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದ್ದು, ಮೋದಿ ಅವರು, ಈಶ್ವರಪ್ಪನವರು ಏನೇ ಭಾಷಣ ಮಾಡಿದರೂ ಪ್ರಯೋಜನವಿಲ್ಲ’ ಎಂದು ತಿಳಿಸಿದರು.

ಸೋಮಣ್ಣ ಅವರ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಸೋಮಣ್ಣ ಅವರು ನಮ್ಮ ತಾಲೂಕಿನವರು. ಧರ್ಮ ಹಾಗೂ ತಾಲೂಕಿನ ಕೆಲಸಗಳಲ್ಲಿ ನಾವು ಒಟ್ಟಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಅವರು ನಮ್ಮ ಊರಿಗೆ ಆಗಾಗ್ಗೆ ಬರುತ್ತಿರುತ್ತಾರೆ. ನಮ್ಮಿಬ್ಬರ ನಡುವೆ ಬಾಂದವ್ಯವಿದೆ. ರಾಜಕಾರಣವೇ ಬೇರೆ, ಬಾಂದವ್ಯವೇ ಬೇರೆ. ಅವರು ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ನಾನು ಹೇಳಿಲ್ಲ.ನಾವು ನಮ್ಮ ಕೆಲಸ ಮಾಡಿಕೊಂಡು ಇದ್ದೇವೆ. ನಾವು ಬೆಳಗಾವಿ ಅಧಿವೇಶನ ಮುಗಿಸಿಕೊಂಡು ವಿಮಾನದಲ್ಲಿ ಒಟ್ಟಿಗೆ ಪ್ರಯಾಣ ಮಾಡಿದ್ದೆವು. ಆಗ ತೆಗೆದಿರುವ ಫೋಟೋ. ಅವರ ಪಕ್ಕದಲ್ಲಿ ಕೂತಿರುವುದರಲ್ಲೇನಿದೆ’ ಎಂದು ತಿಳಿಸಿದರು.

ರಾಮನಗರದಲ್ಲಿ ಡಿ.ಕೆ. ಸುರೇಶ್ ಅವರ ಸ್ಪರ್ಧೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಅವರ ಸ್ಪರ್ಧೆ ವಿಚಾರವಾಗಿ ಪ್ರಸ್ತಾವನೆ ಇದೆ. ಹೀಗಾಗಿ ಈ ಸುದ್ದಿ ನಿರಾಕರಿಸಲು ಸಾಧ್ಯವಿಲ್ಲ. ಆದರೆ ನಾವು ಈ ವಿಚಾರವಾಗಿ ಕೂತು ಚರ್ಚೆ ಮಾಡುತ್ತೇವೆ. ಈ ವಿಚಾರವಾಗಿ ಸ್ಥಳೀಯ ಕಾರ್ಯಕರ್ತರು ಮುಖಂಡರಿಂದ ನಮಗೆ ಸಣ್ಣ ಸಂದೇಶವಿದ್ದು, ಈ ಬಗ್ಗೆ ನಾನು ಸುರೇಶ್ ಅವರ ಜತೆಯಾಗಲಿ, ಕಾರ್ಯಕರ್ತರ ಜತೆಯಾಗಲಿ ಮಾತನಾಡಿಲ್ಲ. ನನಗೆ ಅನಗತ್ಯವಾಗಿ ಉಪಚುನಾವಣೆ ಮಾಡಲು ಇಚ್ಛೆ ಇಲ್ಲ. ಆದರೆ ಪಕ್ಷ ಈ ಪ್ರಸ್ತಾವನೆ ನೀಡಿದೆ. ಈ ಬಗ್ಗೆ ಎಲ್ಲರ ಜತೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ’ ಎಂದರು.

ಮೋದಲ ಪಟ್ಟಿಯಲ್ಲಿ ಸುರೇಶ್ ಅವರ ಹೇಸರು ಪ್ರಕಟವಾಗಲಿದೆಯೇ ಎಂದು ಕೇಳಿದಾಗ, ‘ಅವರು ಪಕ್ಷಷದ ಟಿಕೆಟ್ ಗೆ ಅರ್ಜಿಯನ್ನೇ ಹಾಕಿಲ್ಲ. ಹೀಗಾಗಿ ಈಗಲೇ ಈ ಬಗ್ಗೆ ತೀರ್ಮಾನವಾಗಿಲ್ಲ’ ಎಂದು ತಿಳಿಸಿದರು.

ಮೈಸೂರು ರಸ್ತೆಯಲ್ಲಿ ಟೋಲ್ ವಿಚಾರವಾಗಿ ಆಗುತ್ತಿರುವ ಗಲಾಟೆ ಕುರಿತು ಕೇಳಿದ ಪ್ರಶ್ನೆಗೆ, ‘ಅಪೂರ್ಣವಾಗಿರುವ ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ತರಾತುರಿಯಲ್ಲಿ ಉದ್ಘಾಟನೆ ಮಾಡಿರುವುದೇ ಸರಿಯಿಲ್ಲ. ಅವರು ಗುಣಮಟ್ಟದಲ್ಲಿ ಮಾಡಿಲ್ಲ. ಹೆದ್ದಾರಿಯ ಪಕ್ಕದಲ್ಲಿರುವ ಗ್ರಾಮಸ್ಥರು ಈ ಬದಿಯಿಂದ ಆ ಬದಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಮೈಸೂರಿನಿಂದ ಹೊರಟರೆ ಬೆಂಗಳೂರಿಗೆ ಬರುವವರೆಗೂ ಮೂತ್ರವಿಸರ್ಜನೆ ಸೇರಿದಂತೆ ವಿಶ್ರಾಂತಿಗೆ ಎಲ್ಲೂ ನಿಲ್ಲಿಸಲು ವ್ಯವಸ್ಥೆ ಇಲ್ಲ. ಈ ಭಾಗದಲ್ಲಿದ್ದ ವ್ಯಾಪಾರ ವಹಿವಾಟುಗಳಿಗೆ ದೊಡ್ಡ ಪೆಟ್ಟು ಬಿದ್ದಿದೆ. ಚುನಾವಣೆಗಾಗಿ ತರಾತುರಿಯಲ್ಲಿ ಬಂದು ಉದ್ಘಾಟನೆ ಮಾಡಿಲ್ಲ. ಈ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ಸುರೇಶ್ ಅವರಿಗೆ ಆಹ್ವಾನ ನೀಡದೇ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಪ್ರಧಾನಮಂತ್ರಿಗಳ ಸ್ಥಾನಮಾನದವರು ಹೆದ್ದಾರಿ ಕಾಮರಾಗಿ ಪೂರ್ಣಗೊಂಡ ನಂತರ ಉದ್ಘಾಟನೆ ಮಾಡಬೇಕಿತ್ತು. ಇದು ಜನರ ಯೋಜನೆ ಕಾರ್ಯಕ್ರಮಕ್ಕಿಂತ ರಾಜಕೀಯ ಕಾರ್ಯಕ್ರಮವಾಗಿತ್ತು’ ಎಂದರು.

ಗುತ್ತಿಗೆದಾರರಿಗೆ ಸರ್ಕಾರ ಎಲ್ಲಾ ಇಲಾಖೆಗಳಲ್ಲಿ 25 ಸಾವಿರ ಕೋಟಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಗುತ್ತಿಗೆದಾರರು ತಮ್ಮ ನೋವನ್ನು ಸರ್ಕಾರಕ್ಕೆ ಹೇಳಿಕೊಳ್ಳುತ್ತಿದ್ದಾರೆ. ಸರ್ಕಾರ ಅವರಿಗೆ ನೀಡಬೇಕಾಗಿರುವ ಬಾಕಿ ಪಾವತಿಸುವುದು ಕರ್ತವ್ಯವಾಗಿದೆ. ನಮಗೆ ಅದರಲ್ಲಿ ಅಭ್ಯಂತರವಿಲ್ಲ. ಸರ್ಕಾರ ಹೊಸ ಟೆಂಡರ್ ಕರೆದು ಮುಂಗಡ ಪಾವತಿಗಾಗಿ 25 ಸಾವಿರ ಕೋಟಿಯಷ್ಟು ಟೆಂಡರ್ ಕರೆಯುತ್ತಿದ್ದಾರೆ. ನಾನು ಈ ವಿಚಾರವಾಗಿ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ಯಾವುದೇ ಇಲಾಖೆಯಲ್ಲಿ ಹೊಸ ಟೆಂಡರ್, ಅಲ್ಪಾವಧಿಯ ಟೆಂಡರ್ ಕರೆಯಬಾರದು ಎಂದು ತಿಳಿಸುತ್ತೇವೆ. ಈ ಬಗ್ಗೆ ಲೋಕಾಯುಕ್ತ ಗಮನಕ್ಕೂ ತರುತ್ತೇವೆ. ಇವರ ಮಾತು ಕೇಳಿ ಅಧಿಕಾರಿಗಳು ಇದನ್ನು ಮಾಡಿದರೆ ಮುಂದೆ ನಿಮಗೆ ತೊಂದರೆ ಎದುರಾಗಲಿದೆ ಎಂದು ಎಚ್ಚರಿಕೆ ನೀಡುತ್ತಿದ್ದೇವೆ’ ಎಂದು ತಿಳಿಸಿದರು.

ರಾಜ್ಯ ನಾಯಕರು ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಟಿಕೆಟ್ ಲಾಭಿ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅದರಲ್ಲಿ ತಪ್ಪೇನಿಲ್ಲ. ಎಲ್ಲ ನಾಯಕರಿಗೂ ತಮ್ಮ ಸಮುದಾಯದವರು, ಸ್ನೇಹಿತರು, ಆಪ್ತರು ಟಿಕೆಟ್ ಕೊಡಿಸುವಂತೆ ಕೇಳಿರುತ್ತಾರೆ. ಹೀಗಾಗಿ ಅವರು ಲಾಭಿ ಮಾಡುವುದರಲ್ಲಿ ತಪ್ಪಿಲ್ಲ’ ಎಂದರು.

ಸರ್ಕಾರ ಆದಾಯ ಹೆಚ್ಚಳದ ವಿಚಾರವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ಅವರು ಕೇವಲ ಟೆಂಡರ್ ಕರೆಯಲಷ್ಟೇ ಗಮನಹರಿಸುತ್ತಿದ್ದಾರೆ. ನಾನು ಬಳ್ಳಾರಿ ಸಚಿವನಾಗಿದ್ದೆ. ಗಣಿ ವಿಚಾರವಾಗಿ ಸಾವಿರಾರು ಎಕರೆ ನೀಡಿದ್ದು, ಅವರಿಗೆ ಗಣಿಗಾರಿಕೆ ಮಾಡಲು ಅನುಮತಿ ನೀಡಿಲ್ಲ. ಗಣಿಗಾರಿಕೆಗೆ ಹರಾಜು ಕೂಗಿ ವರ್ಷಗಳೇ ಆದರೂ ಗಣಿಗಾರಿಕೆಗೆ ಅವಕಾಶ ನೀಡಿಲ್ಲ. ಅಲ್ಲಿ ಗಣಿಗಾರಿಕೆ ಮಾಡಿದರಲ್ಲವೇ ಸರ್ಕಾರಕ್ಕೆ ಆದಾಯ ಬರುವುದು. ಅದರ ಜತೆಗೆ ಬಳ್ಳಾರಿಯಲ್ಲಿ ನಿರುದ್ಯೋಗ ಸಮಸ್ಯೆ ಇದ್ದು, ಇದರಿಂದ ಉದ್ಯೋಗ ಸೃಷ್ಟಿಯಾಗಲಿದೆ. ಇದರಿಂದ ಲಾರಿ ಮಾಲೀಕರ ಸಂಕಷ್ಟ ದೂರವಾಗುತ್ತದೆ. ಗುತ್ತಿಗೆ ನೀಡಿರುವ ಗಣಿ ಭೂಮಿಯಲ್ಲಿ ಗಣಿಗಾರಿಕೆ ಮಾಡಲು ಅನುಮತಿ ನೀಡಲು ಏನು ಸಮಸ್ಯೆ? ಸರ್ಕಾರದ ಬೊಕ್ಕಸಕ್ಕೆ ಹಣಬರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಇದು ಸರ್ಕಾರದ ಅತ್ಯಂತ ದೊಡ್ಡ ವೈಫಲ್ಯ’ ಎಂದು ಟೀಕಿಸಿದರು.