IMG 20240408 WA0016

Bjp : ಯಡಿಯೂರಪ್ಪ ಬಂಧನಕ್ಕೆ ಕೈ ಸರ್ಕಾರ ಪ್ಲಾನ್….?

POLATICAL STATE

ಇದು ಹಗೆತನದ ರಾಜಕೀಯವಲ್ಲವೇ?- ಸಿಎಂಗೆ

ಸಿ.ಟಿ.ರವಿ, ರವಿಕುಮಾರ್, ಛಲವಾದಿ ಪ್ರಶ್ನೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿಚಾರದಲ್ಲಿ ರಾಜ್ಯ ಸರಕಾರವು ಹಗೆತನದ ರಾಜಕೀಯ ಮಾಡುತ್ತಿದೆ. ಇದು ಹಗೆತನದ ರಾಜಕಾರಣ ಅಲ್ಲವೇ ಎಂದು ಮುಖ್ಯಮಂತ್ರಿಯವರು ಉತ್ತರ ಕೊಡಬೇಕು ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಹಗೆತನದ ರಾಜಕೀಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಯವರು ಭಾಷಣದಲ್ಲಿ ಹೇಳಿದ್ದರು. ಆದರೆ, ಇದೀಗ ಹಗೆತನದ ರಾಜಕಾರಣ ಮಾಡಿದ್ದು, ರಾಜ್ಯದ ಜನರು ಇದನ್ನು ಪ್ರಶ್ನೆ ಮಾಡಲಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿ 4 ತಿಂಗಳ ಕಾಲ ನೀವೆಲ್ಲಿ ಮಲಗಿದ್ದಿರಿ ಎಂದೂ ಜನರು ಕೇಳುವಂತಾಗಿದೆ. ಆರಂಭದಲ್ಲಿ ಈ ಕೇಸಿನಲ್ಲಿ ಹುರುಳಿಲ್ಲ ಎಂದು ಗೃಹ ಸಚಿವರು ಹೇಳಿದ್ದರಲ್ಲವೇ ಎಂದು ಕೇಳಿದ್ದಾರೆ.

ರಾಹುಲ್ ಗಾಂಧಿಯವರು ಕೋರ್ಟಿಗೆ ಬಂದ ಕಾರಣ ಬಿಜೆಪಿಯವರನ್ನು ಕೋರ್ಟಿಗೆ ತಂದು ನಿಲ್ಲಿಸಬೇಕೆಂಬ ಕಾಂಗ್ರೆಸ್ ಪಕ್ಷದ ದುರುದ್ದೇಶವು ಈಗ ಜಗಜ್ಜಾಹೀರಾಗಿದೆ. ಅದನ್ನು ಬಿಜೆಪಿಯ ನಾವೆಲ್ಲರೂ ಖಂಡಿಸುತ್ತೇವೆ ಎಂದು ತಿಳಿಸಿದ್ದಾರೆ.

ನಮ್ಮ ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಚಾರದಲ್ಲಿ ಕೋರ್ಟಿನಿಂದ ಬಂದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ, ಇದು ಒಂದು ರಾಜಕೀಯ ಷಡ್ಯಂತ್ರದ ಅಥವಾ ರಾಜಕೀಯ ಪ್ರೇರಿತ ವಿಚಾರ ಎಂದು ಟೀಕಿಸಿದ್ದಾರೆ.

ಫೆಬ್ರವರಿ 2ರಂದು ಘಟನೆ ನಡೆದಿದೆ ಎಂದು ಮಾರ್ಚ್‍ನಲ್ಲಿ ಕೇಸ್ ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ. ಆಗ, ಯಡಿಯೂರಪ್ಪನವರು ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡುವುದಾಗಿ ತಿಳಿಸಿದ್ದರು. ನಂತರ ಪೊಲೀಸಿನವರು ಬರುವ ಅವಶ್ಯಕತೆ ಇಲ್ಲ ಎಂದಿದ್ದರು. ಮನೆಯಲ್ಲಿ ಹೇಳಿಕೆಯನ್ನೂ ಪಡೆದಿದ್ದರು ಎಂದಿದ್ದಾರೆ.

ಸತ್ಯ- ಸತ್ವ ರಹಿತ ಕೇಸು..

ಈ ಕೇಸಿನಲ್ಲಿ ಸತ್ಯ- ಸತ್ವ ಇಲ್ಲವೆಂದು ಸಾಬೀತಾಗಿದೆ. ಅದಾದ ಬಳಿಕ ಮಾನ್ಯ ಗೃಹಸಚಿವರು, ಕೇಸು ದಾಖಲಿಸಿದವರು ಮಾನಸಿಕ ಅಸ್ವಸ್ಥೆ ಇದ್ದಾರೆ. ಐಎಎಸ್, ಐಪಿಎಸ್ ಹಾಗೂ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸು ದಾಖಲಿಸಿದ್ದಾರೆ. ಆದ್ದರಿಂದ ಆ ಕೇಸಿಗೆ ಮಹತ್ವ ಇಲ್ಲ ಎಂಬ ಮಾತನ್ನು ಹೇಳಿದ್ದರು ಎಂದು ಅವರು ಗಮನ ಸೆಳೆದಿದ್ದಾರೆ.

ಸರಕಾರವೇ ಒಮ್ಮೆ ಹೇಳಿದ್ದರಿಂದ ಈ ಕೇಸಿಗೆ ಮಹತ್ವ ಇಲ್ಲ. ಅದಾದ ಬಳಿಕ ಯಡಿಯೂರಪ್ಪನವರು ಹೇಳಿಕೆ ಕೊಡಲು ಬರುವುದಾಗಿ ಅನೇಕ ಬಾರಿ ಹೇಳಿದರೂ ಪೊಲೀಸರು, ಯಾವುದೇ ಅವಶ್ಯಕತೆ ಇಲ್ಲ; ಧ್ವನಿ ಸ್ಯಾಂಪಲ್ ಕೊಡಿ ಸಾಕು ಎಂದಿದ್ದರು ಎಂದು ವಿವರಿಸಿದ್ದಾರೆ. ಬಳಿಕ ಏಪ್ರಿಲ್‍ನಲ್ಲಿ ಧ್ವನಿ ಸ್ಯಾಂಪಲನ್ನೂ ಪಡೆದಿದ್ದರು ಎಂದಿದ್ದಾರೆ.

ಕೇಸಿನ ಬಿ ರಿಪೋರ್ಟ್ ನಿರೀಕ್ಷೆಯಲ್ಲಿತ್ತು. ಆದರೆ, ಕಳೆದೆರಡು ಮೂರು ದಿನಗಳಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಳೆದ ವಾರ ಕೋರ್ಟ್ ಮೆಟ್ಟಿಲು ಹತ್ತುವ ಪರಿಸ್ಥಿತಿ ಬಂದಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಮ್ಮ ಪಕ್ಷದ ವಿರುದ್ಧ ಶೇ 40 ಕಮೀಷನ್ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್ ಆಪಾದನೆ ಮಾಡಿದ್ದಲ್ಲದೇ ಪೋಸ್ಟರ್ ಅಂಟಿಸಿದ್ದರು. ಅದನ್ನು ಪ್ರಶ್ನಿಸಿ ನಮ್ಮ ಕಾರ್ಯಕರ್ತರು ಕೋರ್ಟಿಗೆ ಹೋಗಿದ್ದರು. ತನಿಖೆಗಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಕರೆಸಿದ್ದರು. ಇದರಲ್ಲಿ ಎಐಸಿಸಿ ಹಿಂದಿನ ಅಧ್ಯಕ್ಷ, ಈಗಿನ ಸಂಸದ ರಾಹುಲ್ ಗಾಂಧಿಯವರ ಹೆಸರೂ ಇತ್ತು ಎಂದು ವಿವರಿಸಿದ್ದಾರೆ.

ರಾಹುಲ್ ಗಾಂಧಿಯವರು ಇಲ್ಲಿ ಬಂದು ಕೋರ್ಟ್ ಕಟೆಕಟೆಯಲ್ಲಿ ನಿಂತು ವಾಪಸ್ ಹೋದ ಬಳಿಕ ಇವರೆಲ್ಲರೂ ಬಿಜೆಪಿ ಮೇಲೆ ಮುಯ್ಯಿಗೆ ಮುಯ್ಯಿ- ಹಗೆತನ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಸುರ್ಜೇವಾಲಾ ಅವರ ಆದೇಶದಡಿ ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿ ಈ ಷಡ್ಯಂತ್ರ ಮಾಡಿದ್ದಾಗಿ ಆರೋಪಿಸಿದ್ದಾರೆ.

ಒಂದೇ ದಿನ ಕಾಂಗ್ರೆಸ್ಸಿಗೆ ಅರ್ಜೆನ್ಸಿ..
ಕೇಸು ಕೊಟ್ಟವರು ತೀರಿಕೊಂಡಿದ್ದಾರೆ. ಕೇಸು ಕೊಟ್ಟ ಮಹಿಳೆಯ ಮಗನ ದೂರು ಪಡೆದು ತಕ್ಷಣಕ್ಕೆ ಕೋರ್ಟಿಗೆ ಹೋದ ಪೊಲೀಸರು ಹೀಗೆ ಮಾಡಿದ್ದಾರೆ. ಯಡಿಯೂರಪ್ಪನವರು ದೆಹಲಿಯಲ್ಲಿ ಇದ್ದು, ಎರಡು ದಿನಗಳಲ್ಲಿ ಬರುವುದಾಗಿ ಹೇಳಿದ್ದರೂ ಅರ್ಜೆನ್ಸಿ ಮಾಡಿದ್ದಾರೆ. 4 ತಿಂಗಳು ಇಲ್ಲದ ಅರ್ಜೆನ್ಸಿ ಕಾಂಗ್ರೆಸ್ಸಿಗೆ ಇವತ್ತು ಒಂದೇ ದಿನ ಬಂದಿದೆ; ಇವತ್ತು ಜಾಮೀನುರಹಿತ ವಾರಂಟ್ ಪಡೆದು ಅರೆಸ್ಟ್ ಮಾಡಲು ಹೋಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದು ಖಂಡನಾರ್ಹ ವಿಚಾರ. ಕಾಂಗ್ರೆಸ್ ಪಕ್ಷ ಹಗೆತನದ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

(

Leave a Reply

Your email address will not be published. Required fields are marked *