IMG 20210915 WA0010

ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನನಿಲ್ದಾಣ ಹಾಗೂ ಹ್ಯಾಲಿಪ್ಯಾಡ್ ನಿರ್ಮಾಣ…!

Genaral STATE

*ರಾಜ್ಯದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ವಿಮಾನನಿಲ್ದಾಣ ಹಾಗೂ ಹ್ಯಾಲಿಪ್ಯಾಡ್ ನಿರ್ಮಾಣ*

* ಸಚಿವ ಮುರುಗೇಶ್ ನಿರಾಣಿ ಘೋಷಣೆ
* ಶೀಘ್ರದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಆರಂಭ
* ಕಾರವಾರ ಬಂದರಿಗೆ ವಿಶ್ವದರ್ಜೆಯ ಮೂಲಭೂತ ‌ಸೌಕರ್ಯ
* ಕೈಗಾರಿಕೆಗಳ ಬೆಳವಣಿಗೆಗೆ ಮೊದಲ ಪ್ರಾಶಸ್ತ್ಯ
* ಉದ್ಯಮಿಗಳಿಗೆ ‘ ರತ್ನಗಂಬಳಿ’
* ಕೈಗಾರಿಕಾ ಬೆಳವಣಿಗೆಯಲ್ಲಿ ದೇಶದಲ್ಲೇ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಗುರಿ

ಬೆಂಗಳೂರು, ಸೆ, 15-ಸುಲಲಿತ ವ್ಯಾಪಾರೋದ್ಯಮಕ್ಕೆ ನೆರವಾಗುವಂತೆ ರಾಜ್ಯದ ಆಯ್ದ ಜಿಲ್ಲಾ ಕೇಂದ್ರಗಳಲ್ಲಿ ವಿಮಾನ ನಿಲ್ದಾಣಗಳನ್ನು ಪ್ರಾರಂಭಿಸುವ ಚಿಂತನೆ ಮಾಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಮುರುಗೇಶ್ ನಿರಾಣಿ ತಿಳಿಸಿದರು.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‍ಕೆಸಿಸಿಐ)ಯು ಕೆ.ಜಿ. ರಸ್ತೆಯಲ್ಲಿರುವ ಸರ್ ಎಂವಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ನಾನಾ ಪ್ರತಿಷ್ಠಿತ ಉದ್ಯಮದಾರರಿಗೆ `ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಿ ಮಂಗಳವಾರ ಅವರು ಮಾತನಾಡಿದರು.

ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವ ಸಂಬಂಧ ಕೇಂದ್ರ ಸರಕಾರದೊಂದಿಗೆ ಮಾತುಕತೆ ನಡೆಸಿ, ಇದಕ್ಕೆ ಅಗತ್ಯವಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ನಡೆಸಲು ಮುಂದಾಗುತ್ತೇವೆ. ವಿಮಾನ ನಿಲ್ದಾಣದಂತೆ ಅಗತ್ಯವಿರುವ ಕಡೆ ಹೆಲಿಪ್ಯಾಡ್‍ಗಳನ್ನು ಕೂಡ ನಿರ್ಮಿಸಲಾಗುವುದು. ಇದರಿಂದ ರಾಜ್ಯಕ್ಕೆ ದೊಡ್ಡ ಮಟ್ಟದಲ್ಲಿ ಉದ್ದಿಮೆದಾರರು ಬಂಡವಾಳ ಹೂಡಲು ಆಗಮಿಸುತ್ತಾರೆ. ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ನಮ್ಮ ಸರಕಾರ ಉದ್ದಿಮೆದಾರರಿಗೆ ಎಲ್ಲಾ ರೀತಿಯ ನೆರವು ನೀಡಲಿದೆ. ಹೊಸ ಉದ್ಯಮ ಆರಂಭಿಸಲು ಬರುವವರಿಗೆ ರತ್ನಗಂಬಳಿ ಹಾಕಿ ಬರಮಾಡಿಕೊಳ್ಳುತ್ತೇವೆ ಎಂದ ಸಚಿವರು, ಹಾಸನ ಜಿಲ್ಲೆಯಲ್ಲಿರುವ ಡ್ರೈ ಪೋರ್ಟ್ ಅನ್ನು ಅಭಿವೃದ್ಧಿ ಪಡಿಸುವ ಮೂಲಕ ಉದ್ಯಮ ನಡೆಸಲು ಅನುಕೂಲ ಕಲ್ಪಿಸಲಾಗುವುದು. ಇದಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡಲು ಸರಕಾರ ಸಿದ್ಧವಿದೆ ಎಂದು ನುಡಿದರು.

ಇದೇ ರೀತಿ ಕಾರವಾರದಲ್ಲಿರುವ ಬಂದರನ್ನು ಅಭಿವೃದ್ಧಿಪಡಿಸಲಾಗುವುದು. ಇದಕ್ಕೂ ಸಹ ಅಗತ್ಯ ವಿರುವ ಆರ್ಥಿಕ ನೆರವು ಕೊಟ್ಟು ವಿಶ್ವದರ್ಜೆಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶ ಹೊಂದಲಾಗಿದೆ. ಬಂದರುಗಳಲ್ಲಿ ಹೆಚ್ಚಿನ ಸೌಲಭ್ಯಗಳಿದ್ದರೆ ಆಮದು ಮತ್ತು ರಫ್ತಿಗೆ ಅನುಕೂಲವಾಗಲಿದೆ. ಇದರಿಂದ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ತಿಳಿಸಿದರು.

ತಮ್ಮ ಅಧಿಕಾರಾವಧಿಯಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ನೀಲನಕ್ಷೆಯನ್ನು ಸಿದ್ಧಪಡಸಲಾಗುವುದು. ರಾಜ್ಯದಲ್ಲಿರುವ ರೋಗಗ್ರಸ್ತ ಕೈಗಾರಿಕೆಗಳನ್ನು ಮುಚ್ಚದೆ, ಲಾಭದತ್ತ ಕೊಂಡೊಯ್ಯಲು ಯೋಜನೆ ರೂಪಿಸಿದ್ದೇವೆ. ರಾಜ್ಯವನ್ನು ದೇಶದಲ್ಲೇ ಕೈಗಾರಿಕಾ ಕ್ಷೇತ್ರದಲ್ಲಿ ಮುಂಚೂಣಿಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು.IMG 20210915 WA0011

ಉದ್ಯಮಿಗಳು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಅಲೆಯುವುದನ್ನು ತಪ್ಪಿಸಲು ಮೊದಲ ಬಾರಿಗೆ ಕೈಗಾರಿಕಾ ಅದಾಲತ್ ಅನ್ನು ಪ್ರಾರಂಭಿಸುತ್ತಿದ್ದೇವೆ. ಇದು ಬೆಗಳೂರಿನಿಂದ ಆರಂಭವಾಗಲಿದ್ದು, ಮೈಸೂರು, ಕಲಬುರ್ಗಿ, ಮಂಗಳೂರು ಸೇರಿದಂತೆ 5 ಸ್ಥಳಗಳಲ್ಲಿ ನಡೆಯಲಿದೆ.

ಉದ್ಯಮಿಗಳಿಗೆ ತಕ್ಷಣ ಉದ್ಯಮ ಆರಂಭಿಸಲು ಅನುಕೂಲವಾಗುವಂತೆ ಮತ್ತು ಲ್ಯಾಂಡ್ ಬ್ಯಾಂಕ್ ಕಲ್ಪನೆಯನ್ನು ಪುನರಾರಂಭಿಸುತ್ತೇವೆ. ಕೈಗಾರಿಕೆಗಳು ಕೆಐಎಡಿಬಿಯಿಂದ ಪಡೆದಿರುವ ಜಮೀನನ್ನು ಕೈಗಾರಿಕೆಗಳಿಗೆ ಬಳಸಬೇಕು. ಒಂದು ವೇಳೆ ಅನ್ಯ ಉದ್ದೇಶಗಳಿಗೆ ಬಳಸಿದರೆ ಅಂತಹ ಭೂಮಿಯನ್ನು ಹಿಂಪಡೆಯಲಾಗುವುದು ಎಂದು ಇದೇ ವೇಳೆ ಸಚಿವರು ಎಚ್ಚರಿಕೆ ನೀಡಿದರು.

ಉದಯೋನ್ಮುಖ ಉದ್ಯಮಿಗಳಿಗೆ ವಿಚಾರ ಸಂಕಿರಣ ಮತ್ತು ಕಾರ್ಯಾಗಾರಗಳನ್ನು ನಡೆಸುವ ಮೂಲಕ ಯುವಕರಿಗೆ ತರಬೇತಿ ನೀಡಿ ಉದ್ಯೋಗಾಕಾಂಕ್ಷಿಗಳ ಬದಲಿಗೆ ಉದ್ಯೋಗ ಸೃಷ್ಟಿಸುವವರನ್ನಾಗಿ ಮಾಡುವ ಗುರಿಯನ್ನು ಹೊಂದಲಾಗಿದೆ.ಈ ಮೂಲಕ ಪ್ರತಿಭಾವಂತ ಯುವಕರಿಗೆ ಉದ್ಯಮಿಯಾಗಿ ಉದ್ಯೋಗ ನೀಡಿ ಎಂಬ ಯೋಜನೆ ಆರಂಭಿಸುವುದರಿಂದ ನಿರುದ್ಯೋಗ ಹೋಗಲಾಡಿಸಬಹುದು ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರನ್ನು ಸ್ಮರಿಸಿದ ಸಚಿವರು, ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅವರ ಕೊಡುಗೆ ಅಪಾರವಾಗಿದೆ. ಅವರಂತಹ ಶ್ರೇಷ್ಠ ಮೇರು ವ್ಯಕ್ತಿಯ ಹುಟ್ಟುಹಬ್ಬದ ದಿನದಂದು ಆಚರಿಸುವ ಎಂಜಿನಿಯರ್ಸ್ ದಿನ ಆಚರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

ರಫ್ತು ಶ್ರೇಷ್ಠತೆ ಪ್ರಶಸ್ತಿಗಳನ್ನು ನೀಡುವ ಮೂಲಕ ರಫ್ತುದಾರರನ್ನು ಗೌರವಿಸಿದ್ದಕ್ಕಾಗಿ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗಳ ಒಕ್ಕೂಟವನ್ನು (ಎಫ್‍ಕೆಸಿಸಿಐ) ಅಭಿನಂದಿಸುತ್ತೇನೆ. ರಾಜ್ಯದ ಉದ್ದಗಲಕ್ಕೂ ರಫ್ತು ಪ್ರಮಾಣ ಹೆಚ್ಚಾಗುತ್ತಿವೆ. ಜಾಗತಿಕ ರಫ್ತು ಮಾರುಕಟ್ಟೆಯಲ್ಲಿ ಕರ್ನಾಟಕ ಉತ್ಕೃಷ್ಟವಾದ ಅವಕಾಶಗಳಿವೆ. ಅದಕ್ಕಾಗಿ ಕೌಶಲ್ಯ ಮತ್ತು ಸಾಮಥ್ರ್ಯವನ್ನು ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಅತ್ಯುತ್ತಮ ಉದ್ದಿಮೆದಾರರಿಗೆ `ರಫ್ತು ಶ್ರೇಷ್ಠತಾ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ. ಸುಂದರ್, ಪದಾಧಿಕಾರಿಗಳಾದ ಡಾ. ಐ.ಎಸ್. ಪ್ರಸಾದ್, ಬಿ.ವಿ. ಗೋಪಾಲ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.