IMG 20211021 WA0034

ಹಾನಗಲ್: ಚುನಾವಣೆಯಲ್ಲಿ ಅನೈತಿಕ ಮಾರ್ಗ, ಹಣದ ಹೊಳೆ ಹರಿಸುವ ಆಲೋಚನೆ ಇಲ್ಲ….!

POLATICAL STATE

*ಜೈಲಿಗೆ ಕಳುಹಿಸುತ್ತೇನೆಂದು ಎಲ್ಲೂ ಹೇಳಿಲ್ಲ, ಅಧಿಕಾರ ದುರ್ಬಳಕೆ ಬಗ್ಗೆ ಹೇಳಿದ್ದೇನೆ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್*

*ಚುನಾವಣೆಯಲ್ಲಿ ಅನೈತಿಕ ಮಾರ್ಗ, ಹಣದ ಹೊಳೆ ಹರಿಸುವ ಆಲೋಚನೆ ಇಲ್ಲ*

ಹಾನಗಲ್, ಅ 21:-  ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾನು ಏನು ಹೇಳಿದ್ದೇನೆ ಎಂದು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಹಕಾರ ಕ್ಷೇತ್ರದಲ್ಲಿ ‘ಸರ್ವರಿಗೂ ಸಮಬಾಳು’ ಎಂಬ ಪರಿಕಲ್ಪನೆಯಿದೆ. ಆದರೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕೋಮುಲ್ ಹಾಗೂ ಡಿಸಿಸಿ ಬ್ಯಾಂಕ್ ಅನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಡಿಸಿಸಿ ಬ್ಯಾಂಕ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ನಾಯಕರೇ ಆದ ಕೆ.ಎಚ್.ಮುನಿಯಪ್ಪ ಹೇಳಿದ್ದರು. ಆಗಿನ ಸಿಎಂ ಸಿದ್ದರಾಮಯ್ಯನವರಿಗೆ ಅವರೇ ಈ ಬಗ್ಗೆ ಪತ್ರ ನೀಡಿದ್ದರು. ಆಗ ಮುಖ್ಯಮಂತ್ರಿಗಳಾಗಿದ್ದವರು ತನಿಖೆಗೆ ಆದೇಶ ನೀಡಬಹುದಿತ್ತು ಎಂದರು.

ಸಹಕಾರ ಸಚಿವ ಎಸ್.ಟಿ.ಸೋಮೇಶೇಖರ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗ ತನಿಖೆಗೆ ಆದೇಶಿಸಿದ್ದಾರೆ. ಆದ್ದರಿಂದ ತಪ್ಪಿತಸ್ಥರು ಶಿಕ್ಷೆ ಅನುಭವಿಸುತ್ತಾರೆ ಎಂದು ಹೇಳಿದ್ದೇನೆ. ಆದರೆ ರಮೇಶ್ ಕುಮಾರ್ ಅವರನ್ನು ಜೈಲಿಗೆ ಕಳುಹಿಸುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ ಅವರೇ ರಿಂಗ್ ಮಾಸ್ಟರ್ ಆಗಿದ್ದು, ರಾಜಕೀಯ ಲಾಭಕ್ಕಾಗಿ ಎರಡೂ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಅನೇಕ ಹಿರಿಯರಿಗೆ ಮುಖ್ಯಮಂತ್ರಿಗಳು ಚುನಾವಣೆಯ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶೇ.2 ರಷ್ಟು ಬಿಜೆಪಿಗೆ ಮತಬ್ಯಾಂಕ್ ಇದ್ದು, ಅದನ್ನು ಶೇ.50 ಕ್ಕೆ ಏರಿಸಲಾಗಿದೆ. ಎಂಟಿಬಿ ನಾಗರಾಜ್ ಕೂಡ ಅನುಭವಿಗಳಾಗಿದ್ದಾರೆ. ಸಚಿವ ಸಂಪುಟದ ಸದಸ್ಯರಿಗೆ ಚುನಾವಣೆಯ ಹೊಣೆ ನೀಡಲಾಗಿದೆ. ಜನರ ಮನಸ್ಸು ಗೆಲ್ಲುವ ಕೆಲಸ, ಹಾನಗಲ್ ನ ಜನರಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅನೈತಿಕ ಮಾರ್ಗ, ಹಣದ ಹೊಳೆ ಹರಿಸುವ ಆಲೋಚನೆ ನಮಗಿಲ್ಲ. ಕಾಂಗ್ರೆಸ್ ಆಡಳಿತವಿದ್ದಾಗ ಆ ರೀತಿ ಮಾಡಿದ್ದು, ಅವರ ಅನುಭವವನ್ನು ಅವರೇ ಹಂಚಿಕೊಳ್ಳುತ್ತಿದ್ದಾರೆ ಎಂದರು.IMG 20211021 WA0035

ಹಾನಗಲ್ ನ ಜನರು ಪ್ರತಿ ನಾಯಕರ ಮಾತು ಗಮನಿಸುತ್ತಿದ್ದಾರೆ. ವೈಯಕ್ತಿಕ ನಿಂದನೆ, ಏಕವಚನ ಪ್ರಯೋಗವನ್ನು ನೋಡುತ್ತಿದ್ದಾರೆ. ಪ್ರಧಾನಿಗಳನ್ನು ಕೂಡ ಏಕವಚನದಲ್ಲಿ ಕರೆಯಲಾಗುತ್ತಿದೆ. ಗ್ರಾಮೀಣ ಜನರು ಸ್ವಾಭಿಮಾನಿಗಳಾಗಿದ್ದು, ಅವರು ಬಿಜೆಪಿ ಅಭ್ಯರ್ಥಿಗೆ ಬೆಂಬಲಿಸಲಿದ್ದಾರೆ. ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಮಾಜಿ ಶಾಸಕರ ಬಳಗಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಭಾವನಾತ್ಮಕ ಸಂಬಂಧವಾಗಿದೆ. ಬಿಜೆಪಿ ಸುಲಭವಾಗಿ ಗೆಲ್ಲಲಿದೆ ಎಂದರು.

ವಿಧಾನಸಭೆ ಅಧಿವೇಶನದಲ್ಲಿ ವಿರೋಧ ಪಕ್ಷದವರು ಕೋವಿಡ್ ಚರ್ಚೆಗೆ ಉತ್ತರ ಕೇಳದೆ ಪಲಾಯನ ಮಾಡಿದರು. ಅವರೆಲ್ಲ ಸುಳ್ಳು ಆಪಾದನೆ ಮಾಡುತ್ತಿರುವುದನ್ನು ನಾನು ಕಡತಕ್ಕೆ ಕಳುಹಿಸಿಕೊಟ್ಟಿದ್ದೇನೆ. ಸರ್ಕಾರ ಯಾವುದನ್ನೂ ಮುಚ್ಚಿಡುತ್ತಿಲ್ಲ. ಅತ್ಯಂತ ಪಾರದರ್ಶಕ, ಪ್ರಾಮಾಣಿಕತೆಯಿಂದ ಕೋವಿಡ್ ನಿರ್ವಹಣೆಯನ್ನು ಸರ್ಕಾರ ಮಾಡಿದೆ. ಈ ವಿಚಾರದಲ್ಲಿ ಕಾಂಗ್ರೆಸ್ಸಿಗರು ಕೆಸರೆರೆಚಾಟ ಮಾಡಬಾರದು ಎಂದರು.

 

6.20 ಕೋಟಿ ಲಸಿಕೆಯನ್ನು ರಾಜ್ಯದಲ್ಲಿ ನೀಡಲಾಗಿದೆ. ಇಂದು ಬೆಳಗ್ಗೆ ಭಾರತದಲ್ಲಿ 100 ಕೋಟಿ ಲಸಿಕೆ ನೀಡಲಾಗಿದೆ. ಇದು ಇಡೀ ಜಗತ್ತಿನಲ್ಲೇ ಪ್ರಥಮ ದಾಖಲೆಯಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಲಸಿಕೆ ನೀಡಿರುವುದರಿಂದ ಸೋಂಕು ಹರಡುವಿಕೆ ಕಡಿಮೆಯಾಗಲಿದೆ. ಎರಡನೇ ಡೋಸ್ ಕೂಡ ಶೀಘ್ರ ನೀಡಲಾಗುವುದು. ಲಸಿಕೆ ಅಭಿಯಾನಕ್ಕೆ ಸಹಕರಿಸಿದ ಎಲ್ಲ ಆರೋಗ್ಯ ಸಿಬ್ಬಂದಿ, ನಾಗರಿಕರು ಹಾಗೂ ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ಧನ್ಯವಾದಗಳು ಎಂದು ಹೇಳಿದರು.