IMG 20211227 WA0019

ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ…

Genaral STATE

ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ : ಸಿಎಂ

ಬೆಂಗಳೂರು, ಡಿಸೆಂಬರ್ 27 :

ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜನ ಕೃಷಿ ಭವನದ 2 ನೇ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕದಲ್ಲಿ ಹವಾಮಾನ ಆಧಾರಿತ ಹತ್ತು ಕೃಷಿ ವಲಯಗಳು ಇವೆ. ವರ್ಷಪೂರ್ತಿ ಒಂದಿಲ್ಲೊಂದು ಬೆಳೆ ತೆಗೆಯುವ ಹವಾಮಾನ ನಮ್ಮ ರಾಜ್ಯದಲ್ಲಿದೆ. ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಬೇಕು. ರೈತರು ಹೈನುಗಾರಿಕೆ, ಪಶುಸಂಗೋಪನೆ ಸೇರಿದಂತೆ ಉಪಕಸುಬುಗಳನ್ನು ಮಾಡುವ ಮೂಲಕ ರೈತರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

IMG 20211227 WA0018

ಸ್ವತಂತ್ರ ಚಿಂತನೆ ಮೂಲಕ ಕೃಷಿ ಅಭಿವೃದ್ಧಿ ಯೋಜನೆ :
ಕೃಷಿಕ ಸಮಾಜ ಕೃಷಿ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡಿದೆ. ಕೃಷಿ ಇಲಾಖೆಯ ಭಾಗವಾಗಿ ಕೆಲಸ ಮಾಡುವ ಜೊತೆಗೆ ಕೃಷಿಕ ಸಮಾಜ, ಸ್ವತಂತ್ರ ಚಿಂತನೆ ಮೂಲಕ ರೂಪಿಸಿದ ರೈತಪರ ಯೋಜನೆಗಳನ್ನು ಸರ್ಕಾರ ಅನುಷ್ಠಾನಗೊಳಿಸಲಿದೆ. ಬೀಜ, ಗೊಬ್ಬರ, ಮಣ್ಣಿನ ಗುಣಮಟ್ಟ, ಮಾರುಕಟ್ಟೆ, ಸಂಗ್ರಹಣೆಗೆ ಸಂಬಂಧಿಸಿದ ಕೃಷಿಯಲ್ಲಿನ ಆಧುನಿಕ ಸವಾಲುಗಳಿಗೆ ಉತ್ತರಿಸುವ ಯೋಜನೆಗಳನ್ನು ರೂಪಿಸಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ರೈತನು ತಾನು ಬೆಳೆದು, ಕಟಾವು ಮಾಡಿ, ಸಂಗ್ರಹಣೆ ಮಾಡಿದ ಬೆಳೆಗೆ ಸ್ಪರ್ಧಾತ್ಮಕವಾದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಪಡೆಯುವವರೆಗೆ ರೈತರ ಕರ್ತವ್ಯ ಇರುತ್ತದೆ. ಈಗ ಸುಗ್ಗಿ ನಂತರ ಕೃಷಿ ಚಟುವಟಿಕೆಯಲ್ಲೂ ಕೂಡ ಕೃಷಿಕ ಹೆಚ್ಚಿನ ಆಸಕ್ತಿಯನ್ನು ವಹಿಸಬೇಕಾಗಿದೆ. ಗೋದಾಮು, ಶೈತ್ಯಾಗಾರಗಳು, ಮಾರುಕಟ್ಟೆ ಸಂಪರ್ಕ, ಆನ್‍ಲೈನ್ ಮಾರುಕಟ್ಟೆಗಳ ಮೂಲಕ ರೈತ ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡುವ ಪ್ರಕ್ರಿಯೆಯಲ್ಲಿ ಕೃಷಿಕ ಸಮಾಜ ಮಹತ್ವದ ಪಾತ್ರ ವಹಿಸುತ್ತದೆ. ಕೃಷಿಕ ಸಮಾಜದ ಈ ಜವಾಬ್ದಾರಿಗೆ ಸರ್ಕಾರ ಎಲ್ಲ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ಭರವಸೆ ನೀಡಿದರು.

ನೈಸರ್ಗಿಕ ಕೃಷಿಗೆ ಪ್ರೋತ್ಸಾಹ :
ಕೃಷಿಕನ ಆದಾಯ ಹೆಚ್ಚಿಸಲು ಸೆಕೆಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆಗೆ ತೀರ್ಮಾನಿಸಲಾಗಿದೆ. ನೈಸರ್ಗಿಕ ಕೃಷಿಗೆ ಪ್ರೋತ್ಸಾಹಿಸಲು ಹೆಚ್ಚಿನ ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಮೀಸಲಿಡಲಾಗುವುದು. ಕೃಷಿ ವಲಯದಲ್ಲಿ ಶೇ.1 ಬೆಳವಣಿಗೆಯಾದರೆ, ಕೈಗಾರಿಕಾ ವಲಯದಲ್ಲಿ ಶೇ.4 ರಷ್ಟು ಹಾಗೂ ಸೇವಾ ಕ್ಷೇತ್ರದಲ್ಲಿ ಶೇ.10 ರಷ್ಟು ಬೆಳವಣಿಗೆಯಾಗುತ್ತದೆ.ಆದ್ದರಿಂದ ಕೃಷಿ ಕ್ಷೇತ್ರದ ಅಭಿವೃದ್ಧಿ ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತಿಳಿಸಿದರು.