IMG 20221229 WA0026

ಬೆಳಗಾವಿ:ವಿಧಾನ ಪರಿಷತ್ತಿನ ಕಾರ್ಯಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ…!

Genaral STATE

ವಿಧಾನ ಪರಿಷತ್ತಿನ ಕಾರ್ಯಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

9 ದಿನಗಳಲ್ಲಿ 45 ಗಂಟೆಗಳ ಕಾರ್ಯಕಲಾಪ, 6 ವಿಧೇಯಕ, 1 ತಿದ್ದುಪಡಿ ವಿಧೇಯಕ ಹಾಗೂ ಪರಿಷತ್‌ನಲ್ಲಿ ಮಂಡಿಸಿದ 02 ವಿಧೇಯಕಗಳ ಅಂಗೀಕಾರ

ಬೆಳಗಾವಿ ಸುವರ್ಣ ಸೌಧ.ಡಿ.29(ಕರ್ನಾಟಕ ವಾರ್ತೆ): ಬೆಳಗಾವಿ ಸುವರ್ಣ ಸೌಧದಲ್ಲಿ ಡಿ.19 ರಿಂದ ಡಿ.29 ರವರೆಗೆ ಜರುಗಿದ ಚಳಿಗಾಲದ ಅಧಿವೇಶನಕ್ಕೆ ತಾತ್ಕಾಲಿಕ ತೆರೆ ಬಿದ್ದಿದೆ. ವಿಧಾನ ಪರಿಷತ್ತಿನ ಕಾರ್ಯಕಲಾಪವನ್ನು ಸಭಾಪತಿ ಬಸವರಾಜ ಎಸ್ ಹೊರಟ್ಟಿ ಅನಿರ್ಧಿಷ್ಟಾವಧಿಗೆ ಮುಂದೂಡಿದ್ದಾರೆ.
ಅಧಿವೇಶನವನ್ನು ಡಿ.30 ವರೆಗೆ ಕರೆಯಲಾಗಿತ್ತು. ಆದರೆ ಒಂದು ದಿನದ ಅಧಿವೇಶನವನ್ನು ಮೊಟಕುಗೊಳಿಸಿ 9 ದಿನಗಳ ಕಾಲ ಅಧಿವೇಶನ ಜರುಗಿತು. ವಿಧಾನ ಪರಿಷತ್ತಿನಲ್ಲಿ 9 ದಿನಗಳಲ್ಲಿ 45 ಗಂಟೆಗಳ ಕಾಲ ಚರ್ಚೆ ನಡೆಸಲಾಯಿತು. ವಿಧಾನ ಸಭೆಯಿಂದ ಅಂಗೀಕೃತವಾದ 6, ತಿದ್ದುಪಡಿಯೊಂದಿಗೆ ಅಂಗೀಕೃತವಾದ 01 ಹಾಗೂ ವಿಧಾನ ಪರಿಷತ್ತಿನಲ್ಲಿ ಮಂಡಿಸಿದ 02 ವಿಧೇಯಕಗಳನ್ನು ಪರಿಷತ್ತಿನಲ್ಲಿ ಅಂಗೀಕರಿಸಲಾಯಿತು.
ಈ ಬಾರಿಯ ವಿಧಾನ ಪರಿಷತ್ ಕಲಾಪ ಹಲವು ವೈಶಿಷ್ಟ್ಯಗಳಿಗೆ ಸಾಕ್ಷಿಯಾಯಿತು. ಪರಿಷತ್ ಕಲಾಪದಲ್ಲಿ ಬೆಳಗಾವಿ ವಿಚಾರವಾಗಿ ಮಹಾರಾಷ್ಟ್ರ ಸರ್ಕಾರದ ಧೋರಣೆ ಖಂಡಿಸಿ ಓಕ್ಕೊರಲಿನಿಂದ ಖಂಡನಾ ನಿರ್ಯಣ ಕೈಗೊಳ್ಳಲಾಯಿತು. ರಾಜ್ಯ ಗಡಿ ವಿಚಾರವಾಗಿ ಸರ್ವ ಪಕ್ಷಗಳು ಒಂದಾಗಿದ್ದು ರಾಷ್ಟ್ರ ಮಟ್ಟದಲ್ಲಿ ಸೊಜಿಗವಾಗಿ ಕಂಡುಬಂದಿತು. ರಾಷ್ಟ್ರ ಮಟ್ಟದ ಮುಖ್ಯ ಸುದ್ದಿವಾಹಿನಿಗಳು ಈ ಸಂಗತಿಯನ್ನು ಬಿತ್ತರಿಸಿದವು.
ಡಿ.19 ರಂದು ಪರಿಷತ್ತಿನಲ್ಲಿ ನಿಧನರಾದ ಗಣ್ಯರುಗಳಿಗೆ ಸಂತಾಪವನ್ನು ವ್ಯಕ್ತಪಡಿಸಲಾಯಿತು.

IMG 20221229 WA0027


ಡಿ.20 ರಂದು ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಕಳೆದ ಅಧಿವೇಶನದ ವರದಿ ಹಾಗೂ ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಮಂಡಿಸಿದರು. ಡಿ.21ರಂದು ಶಾಸಕ ಬಸವರಾಜ ಎಸ್ ಹೊರಟ್ಟಿ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಭಾಪತಿ ಚುನಾವಣೆ ಕಾರ್ಯಕಲಾಪ ಮುಗಿಯುವ ಹೊರಗೆ ಹಂಗಾಮಿ ಸಭಾಪತಿ ರಘುನಾಥ್ ‌ರಾವ್ ಮಲ್ಕಾಪೂರೆ‌ ಸದನದ ಕಾರ್ಯಕಲಾಪ ನಿರ್ವಹಿಸಿದರು.ಡಿ.23 ರಂದು ವಿಧಾನ ಪರಿಷತ್ತಿನ ಉಪ ಸಭಾಪತಿ ಸ್ಥಾನದ ಚುನಾವಣೆಯಲ್ಲಿ ಶಾಸಕ ಪ್ರಾಣೇಶ್‌ ಎಂ.ಕೆ. ಉಪ ಸಭಾಪತಿಯಾಗಿ ಚುನಾಯಿತರಾದರು.

ಪರಿಷತ್ತಿನಲ್ಲಿ ಒಟ್ಟು 1419 ಪ್ರಶ್ನೆಗಳನ್ನು ಶಾಸಕರಿಂದ ಸ್ವೀಕರಿಸಲಾಯಿತು.ಇದರಲ್ಲಿ 150 ಪ್ರಶ್ನೆಗಳನ್ನು ಚುಕ್ಕೆ ಗುರುತಿನ ಪ್ರಶ್ನೆಗಳನ್ನಾಗಿ ಅಂಗೀಕರಿಸಿ, ಅವುಗಳ ಪೈಕಿ 115 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಿಸಲಾಯಿತು.ಲಿಖಿತ ಮೂಲಕ ಉತ್ತರಿಸುವ ಒಟ್ಟು 1269 ಪ್ರಶ್ನೆಗಳ ಪೈಕಿ 963 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು. ಡಿ.30 ಕಾರ್ಯಕಲಾಪ ಮೊಟಕು ಗೊಳಿಸಿದ್ದರಿಂದ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಗಳ ನಿಯಮ 37 (ಎ)ರ ರೀತ್ಯಾ ಡಿ.30 ಉತ್ತರಿಸಬೇಕಾಗಿದ್ದ 15 ಪ್ರಶ್ನೆಗಳ ಪೈಕಿ 08 ಪ್ರಶ್ನೆಗಳಿಗೆ ಹಾಗೂ ಲಿಖಿತ ಮೂಲಕ ಉತ್ತರಿಸುವ 102 ಪ್ರಶ್ನೆಗಳ ಪೈಕಿ 29 ಪ್ರಶ್ನೆಗಳಿಗೆ ಸದನದಲ್ಲಿ ಉತ್ತರಗಳನ್ನು ಮಂಡಿಸಲಾಯಿತು.

ಕರ್ನಾಟಕ ವಿಧಾನ ಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ 2021-22ನೇ ಸಾಲಿನ 6ನೇ ವರದಿ, ಅಧೀನ ಶಾಸನ ರಚನಾ ಸಮಿತಿಯ 2021-22ನೇ ಸಾಲಿನ 52ನೇ ವರದಿ ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ 2021-22ನೇ ಸಾಲಿನ 4ನೇ ವರದಿ, ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ 2021- 22ನೇ ಸಾಲಿನ 37ನೇ ವರದಿ, ಸಾರ್ವಜನಿಕ ಲೆಕ್ಕಪತ್ರಗಳ 2021-22ನೇ ಸಾಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯ ಕವಚ-108ಕ್ಕೆ ಸಂಬಂಧಿಸಿದ 8ನೇ ವರದಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಸಂಬಂಧಿಸಿದ “ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ” 9ನೇ ವರದಿ ಮತ್ತು ವಿಧಾನ ಪರಿಷತ್ತಿನ ಅರ್ಜಿಗಳ ಸಮಿತಿಯು 02 ಅರ್ಜಿಗಳನ್ನು ಹಾಗೂ 29ನೇ ವರದಿಯನ್ನು ಮತ್ತು ಖಾಸಗಿ ವಿಧೇಯಕಗಳು ಹಾಗೂ ನಿರ್ಣಯಗಳ ಸಮಿತಿಯ ಮೊದಲನೇ ವರದಿಯನ್ನು ಪರಿಷತ್ತಿನಲ್ಲಿ ಮಂಡಿಸಲಾಯಿತು.

ಭಾರತ ಲೆಕ್ಕನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರು ನೀಡಿರುವ ಮುಖ್ಯಮಂತ್ರಿಗಳ ನಗರೋತ್ತಾನ ಯೋಜನೆ (ಫೇಸ್‌-3) (2022ನೇ ವರ್ಷದ ವರದಿ ಸಂಖ್ಯೆ-6), 2021-22ನೇ ಸಾಲಿನ ಧನವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು (ಸಂಪುಟ I ಮತ್ತು II), 2022-23ನೇ ಸಾಲಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿ ಹಾಗೂ 2022-23ನೇ ಸಾಲಿನ ಪೂರಕ ಅಂದಾಜುಗಳ (ಎರಡನೇ ಕಂತು) ವರದಿಯನ್ನು ಮಂಡಿಸಲಾಯಿತು.

ಸಭಾಪತಿ ಬಸವರಾಜ ಎಸ್ ಹೊರಟ್ಟಿ ಮುಖ್ಯಮಂತ್ರಿ, ಸಭಾನಾಯಕರು ಹಾಗೂ ವಿರೋಧ ಪಕ್ಷದ ನಾಯಕ, ಮಂತ್ರಿ ವರ್ಗದವರಿಗೆ, ಸರ್ಕಾರದ ಮುಖ್ಯ ಸಚೇತಕರಿಗೆ, ವಿರೋಧ ಪಕ್ಷದ ಮುಖ್ಯ ಸಚೇತಕರಿಗೆ, ಪತ್ರಿಕಾ ಹಾಗೂ ದೃಶ್ಯ ಮಾಧ್ಯಮ ವರದಿಗಾರರಿಗೆ, ವಿಧಾನ ಪರಿಷತ್ತಿನ, ಸರ್ಕಾರದ ಅಧಿಕಾರಿ‌ ನೌಕರ ವೃಂದದವರಿಗೆ ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಸಹಕರಿಸಿದ್ದಕ್ಕೆ ಧನ್ಯವಾದ ಸಲ್ಲಿಸಿದರು.