IMG 20230312 WA0002

ಬೆಂಗಳೂರು:ಜನೋಪಯೋಗಿ ಶಾಸಕರಿಗೆ ನಿಮ್ಮ ಆಶೀರ್ವಾದ ಇರಲಿ….!

DISTRICT NEWS ಬೆಂಗಳೂರು

ಜನೋಪಯೋಗಿ ಶಾಸಕರಿಗೆ ನಿಮ್ಮ ಆಶೀರ್ವಾದ ಇರಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಬೆಂಗಳೂರು: ಕೃಷ್ಣಪ್ಪ ಅವರು ನಿಮ್ಮ ಜೊತೆಗೆ ಇದ್ದು, ನಿಮ್ಮ ಶ್ರೇಯೋಭಿವೃದ್ಧಿಗೆ ನಿರಂತರವಾಗಿ ಕಂಕಣಬದ್ದವಾಗಿ ಕೆಲಸ ಮಾಡುವ ಜನೋಪಯೋಗಿ ಶಾಸಕ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಇಂದು ಉತ್ತರಹಳ್ಳಿಯ ಊರು ಹಬ್ಬದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು.

ಕೃಷ್ಣಪ್ಪ ಅವರು ಜನಪ್ರಿಯ ಶಾಸಕರು ಅಂತ ನಾನು ಹೇಳಿಲ್ಲ. ಯಾಕೆ ಅಂತ ಕೇಳಿದರೆ, ಏನು ಕೆಲಸ ಮಾಡದೇ ಜನಪ್ರಿಯ ಶಾಸಕರು ಅಂತ ಹೇಳಿಕೊಂಡು ಮೇಲೆ ಹೋದವರು ತುಂಬ ಜನರು ಇದ್ದಾರೆ. ಜನರಿಗೆ ಉಪಯೋಗ ಆಗುವ ಕೆಲಸ ಮಾಡುವ ಶಾಸಕ ಕೃಷ್ಣಪ್ಪರು. ಜನರ ಕಷ್ಟಗಳನ್ನು, ಸಮಸ್ಯೆಗಳನ್ನು ತಿಳಿದುಕೊಂಡು ಬಗೆಹರಿಸುವ ಶಾಸಕರು. ಸದಾ ಕ್ರಿಯಾಶೀಲವಾಗಿ ನಿಮ್ಮ ಹಿತರಕ್ಷಣೆ ಮಾಡುವ ಶಾಸಕ. ಅದಕ್ಕೆ ಜನೋಪಯೋಗಿ ಶಾಸಕ ಎಂದು ಹೇಳಿದ್ದೇನೆ ಎಂದರು.

IMG 20230312 WA0001

ರಸ್ತೆ, ರಾಜಕಾಲುವೆ, ಹಳ್ಳಿಗಳ ಅಭಿವೃದ್ಧಿಗೆ ನನಗೆ ಗೊತ್ತಿಲ್ಲದ ಹಾಗೇ ಅನುದಾನ ತೆಗೆದುಕೊಂಡು ಹೋಗಿ ಕೆಲಸ ಮಾಡಿದ್ದಾರೆ. ಅದಕ್ಕಾಗಿ ನನಗೆ ಕೃಷ್ಣಣ್ಣ ಎಂದರೆ ಪ್ರೀತಿ. ಪ್ರೀತಿ ವಿಶ್ವಾಸದಿಂದ ಈ ಕ್ಷೇತ್ರದ ಜನರಿಗೊಸ್ಕರ ಯಾವ ರೀತಿ ಕೆಲಸ ಮಾಡಬೇಕು ಎನ್ನುವುದಕ್ಕೆ ಕೃಷ್ಣಪ್ಪ ಅವರು ಸಾಕ್ಷಿ. ಅವರ ಕುಟುಂಬಕ್ಕೆ ದೊಡ್ಡ ಇತಿಹಾಸ ಇದೆ. ಅವರ ಅಣ್ಣನವರು ಈ ಭಾಗದ ಶಾಸಕರು, ಸಂಸದರಾಗಿ ಕೆಲಸ ಮಾಡಿದ್ದಾರೆ. ಇವರು 25/30 ವರ್ಷ ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡಿ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಈ ಭಾಗದ ಜನರ ಹಾಗೂ ರಾಜ್ಯದ ಜನರ ಮನಸ್ಸು ಗೆದ್ದಿರುವ ಕೃಷ್ಣಪ್ಪನವರನ್ನು ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದೇವೆ. ಊರ ಹಬ್ಬ ಅಂದರೆ ಬೆಂಗಳೂರಿಗರಿಗೆ ಗೊತ್ತಾಗುವುದಿಲ್ಲ. ದಕ್ಷಿಣ ಕ್ಷೇತ್ರದಲ್ಲಿ ಹಳ್ಳಿಯ ಸೊಗಡು, ಶಹರದ ವೈಭವ ಇಲ್ಲಿದೆ‌. ಅಲ್ಲದೇ ಬೆಂಗಳೂರಿಗೆ ಹೆಚ್ಚು ಆದಾಯ ಕೊಡುವ ಕ್ಷೇತ್ರದಲ್ಲಿ ದಕ್ಷಿಣದ ಕ್ಷೇತ್ರವು ಒಂದು ಎಂದು ಹೇಳಿದರು.

ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ಕೊಡಲಾಗಿದೆ. ರಾಜಕಾಲುವೆ ಅಭಿವೃದ್ಧಿಗೆ 2 ಸಾವಿರ ಕೋಟಿ ಕೊಟ್ಟಿದ್ದೇವೆ. ನಮ್ಮ ಕ್ಲಿನಿಕ್ ಆಸ್ಪತ್ರೆಗಳನ್ನು ಮಾಡಿದ್ದೇವೆ. ಬೆಂಗಳೂರು ದಕ್ಷಿಣ ಕ್ಷೇತ್ರ ಹೆಚ್ಚು ಬೆಳೆಯುತ್ತಿದೆ. ಒಳ್ಳೆಯ ಜನರು, ಒಳ್ಳೆಯ ದೇವಸ್ಥಾನ ಇಲ್ಲಿವೆ. ಒಳ್ಳೆಯ ಶಾಸಕರನ್ನು ನೀವು ಪಡೆದಿದ್ದಿರಿ. ಮುಂದಿನ ಬಾರಿಯೂ ಕೃಷ್ಣಪ್ಪರನ್ನು ಆಯ್ಕೆ ಮಾಡಿ. ನಾನು ಮುಂದಿನ ವರ್ಷದ ಊರು ಹಬ್ಬಕ್ಕೆ ಬರುತ್ತೇನೆ ಎಂದರು. ನೀವು ಸಂಪೂರ್ಣ ಆಶೀರ್ವಾದ ಮಾಡಲಿ, ನಮ್ಮ ನಾಡು ಸುಭಿಕ್ಷು ನಾಡು ಆಗಲಿ ಎಂದರು.