*ಗ್ಯಾರಂಟಿಗಳ ಪ್ರಭಾವ ಜನರ ಮೇಲೆ ಇಲ್ಲ; ಹೆಚ್.ಡಿ. ಕುಮಾರಸ್ವಾಮಿ*
*ಗ್ಯಾರಂಟಿಗಳು ಜನರಿಗೆ ಇಷ್ಟವಾಗಿದ್ದರೆ ಸಿಎಂ ಐದು ದಿನ ಬಂದು ಪ್ರಚಾರ ಮಾಡುವ ಅಗತ್ಯ ಇರಲಿಲ್ಲ ಎಂದು ಟಾಂಗ್*
*ಸಚಿವರು ಇಲ್ಲದೆ ವಿಧಾನಸೌಧ ಖಾಲಿ ಬಿದ್ದಿದೆ ಎಂದು ಕಿಡಿ*
*ಗ್ಯಾರೆಂಟಿಗಳಿಗೆ ಮಾಡಿದ ಖರ್ಚಿಗಿಂತ ಸಾಲವನ್ನೇ ಹೆಚ್ಚಾಗಿ ಮಾಡಿರುವ ಸರ್ಕಾರ*
*ಬಾಗಲಕೋಟೆ 5 ಏಪ್ರಿಲ್ 2026*ರಾ ಜ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳು ಜನರಿಗೆ ಇಷ್ಟವಾಗಿದ್ದರೆ ಮುಖ್ಯಮಂತ್ರಿಗಳು ಬಂದು ಐದು ದಿನ ಬಾಗಲಕೋಟೆಯಲ್ಲಿ ಪ್ರಚಾರ ಮಾಡುವ ಅಗತ್ಯ ಬೀಳುತ್ತಿರಲಿಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ವೀರಣ್ಣ ಚರಂತಿಮಠ ಅವರ ಪರ ಪ್ರಚಾರ ನಡೆಸಲು ಬಾಗಲಕೋಟೆಗೆ ಆಗಮಿಸಿದ ಸಂದರ್ಭದಲ್ಲಿ ಸಚಿವರು ಮಾಧ್ಯಮಗಳ ಜೊತೆ ಮಾತನಾಡಿದರು.
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಯನ್ನು ಕಾಂಗ್ರೆಸ್ ಪಕ್ಷವು ಪ್ರತಿಷ್ಟೆಯಾಗಿ ತೆಗೆದುಕೊಂಡಿದೆ. ಶತಾಯಗತಾಯ ಗೆಲ್ಲಲೇಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಎಲ್ಲಾ ಸಚಿವರು ವಿಧಾನಸೌಧದಲ್ಲಿನ ಕಚೇರಿಗಳನ್ನು ಬಿಟ್ಟು ಚುನಾವಣಾ ಕಣದಲ್ಲಿ ಬೆವರು ಹರಿಸುತ್ತಿದ್ದಾರೆ. ಗ್ಯಾರೆಂಟಿಗಳಿಂದ ಜನರು ಸಂತ್ರಪ್ತರಾಗಿದಿದ್ದರೆ ಇವರೆಲ್ಲ ಇಷ್ಟೊಂದು ಸರ್ಕಸ್ ಮಾಡುವ ಅಗತ್ಯ ಏನಿತ್ತು ಎಂದು ಸಚಿವರು ಲೇವಡಿ ಮಾಡಿದರು.
ನುಡಿದಂತೆ ನಡೆದಿದ್ದೇವೆ ಎಂದು ಇವರು ಪದೇ ಪದೇ ಹೇಳುತ್ತಾರೆ. ಆದರೆ 2018ರಲ್ಲಿ ಬಾದಾಮಿಯಿಂದ ಅಲ್ಪ ಮತಗಳ ಅಂತರದಿಂದ ಗೆದ್ದ ಮುಖ್ಯಮಂತ್ರಿ, ಬದಾಮಿಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿಪಡಿಸುತ್ತೇನೆ ಎಂದು ಭರವಸೆ ನೀಡಿದ್ದರು. ಅವರು ದತ್ತು ತೆಗೆದುಕೊಳ್ಳಲಿಲ್ಲ, ಬಾದಾಮಿ ಅಭಿವೃದ್ಧಿಯನ್ನು ಮಾಡಲಿಲ್ಲ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.
ಸಾಲವನ್ನು ಪ್ರತೀ ಸರ್ಕಾರವು ಮಾಡುತ್ತದೆ. ರಾಜ ಸರ್ಕಾರವು ಸಾಲ ಮಾಡಿದೆ, ಇದೇ ರೀತಿ ಕೇಂದ್ರ ಸರ್ಕಾರವು ಸಾಲ ಮಾಡಿದೆ. ಮಾಡಿದ ಸಾಲವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಮಾಡಿರುವ ವೆಚ್ಚಕ್ಕಿಂತ ಸಾಲವನ್ನೇ ಹೆಚ್ಚು ಮಾಡಿದ್ದಾರೆ. ರಾಜ್ಯದ ಖಜಾನೆಯನ್ನು ಭರ್ತಿ ಮಾಡುತ್ತೇವೆ ಎಂದು ಗ್ಯಾರಂಟಿಗೆ ಹಣ ನೀಡಿದ್ದಾರೆ. ಇದನ್ನು ಯಾರಾದರೂ ಹಣಕಾಸು ನಿರ್ವಹಣೆ ಎಂದು ಕರೆಯಲು ಸಾಧ್ಯವೇ? ಈ ದೇಶದ ಇತಿಹಾಸದಲ್ಲಿ ಈ ರೀತಿಯ ಅಸಂಬದ್ಧ ಬಜೆಟ್ ಅನ್ನು ಯಾರೂ ನೀಡಿಲ್ಲ ಎಂದು ಕುಮಾರಸ್ವಾಮಿಯವರು ರಾಜ್ಯ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
ದೇವೇಗೌಡರ ಒಳ್ಳೆಯತನ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ಬೆಳೆದಿದೆ. 2006ರಲ್ಲಿ ದೇವೇಗೌಡರು ಕಟುವಾದ ತೀರ್ಮಾನ ಕೈಗೊಂಡಿದ್ದರೆನ ಕಾಂಗ್ರೆಸ್ ಪಕ್ಷ ಎನ್ನುವುದೇ ಇರುತ್ತಿರಲಿಲ್ಲ ಎಂದ ಕುಮಾರಸ್ವಾಮಿ ಅವರು; ಮಾತು ಎತ್ತಿದರೆ ನಾನು ಹಿಂದುಳಿದ ನಾಯಕ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಅವರು ಎಷ್ಟು ಜನ ಹಿಂದುಳಿದ ನಾಯಕರನ್ನು ಬೆಳೆಸಿದ್ದಾರೆ ಎಂಬುದನ್ನು ಹೇಳಲಿ. ಸಾಮಾಜಿಕ ನ್ಯಾಯ ಮತ್ತು ರಾಜಕೀಯ ಪಾಲುದಾರಿಕೆಯಲ್ಲಿ ಹಿಂದುಳಿದವರಿಗೆ ದೇವೇಗೌಡರು ದೊಡ್ಡ ದೊಡ್ಡ ಅವಕಾಶಗಳನ್ನೇ ನೀಡಿದ್ದಾರೆ. ಅದರಲ್ಲಿ ಸಿದ್ದರಾಮಯ್ಯನವರು ಒಬ್ಬರಾಗಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
*ಸರ್ಕಾರ ಕಾಲಹರಣ ಮಾಡುತ್ತಿದೆ:*
ರಾಜ್ಯ ಸರ್ಕಾರ ಜನರ ಕೆಲಸಗಳನ್ನು ಮಾಡುವುದು ಬಿಟ್ಟು ಕಾಲಹಣ ಮಾಡುತ್ತಿದೆ ವಿನಾ ಯಾವುದೇ ಉತ್ತಮ ಯೋಜನೆಯನ್ನು ಸಕಾಲಕ್ಕೆ ಕಾರ್ಯಗತ ಮಾಡುವ ಬಗ್ಗೆ ಚಿಂತಿಸುತ್ತಿಲ್ಲ. ಯುಕೆಪಿ ಯೋಜನೆಗೆ ಗೆಜೆಟ್ ಅಧಿಸೂಚನೆ ಯಾಕಾಗ್ತಿಲ್ಲ ಎಂಬ ಪ್ರಶ್ನೆ ನನ್ನದು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಜೊತೆ ಸಂಘರ್ಷಕ್ಕೆ ಇಳಿಯುವುದು ಸರಿಯಲ್ಲ. ಕೇಂದ್ರ ಸರ್ಕಾರವನ್ನು ವಿಶ್ವಾಸ ತೆಗೆದುಕೊಂಡು ರಾಜ್ಯಕ್ಕೆ ಹೆಚ್ಚು ಅನುಕೂಲವಾಗುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು.
ಯುಕೆಪಿ ಯೋಜನೆ ಬಗ್ಗೆ ಕೇಂದ್ರದ ಜೊತೆ ರಾಜ್ಯ ಸರ್ಕಾರ ಸರಿಯಾದ ರೀತಿಯಲ್ಲಿ ಮಾತುಕತೆ ನಡೆಸುತ್ತಿಲ್ಲ. ಈ ಯೋಜನೆ ಜಾರಿಗೆ ಕೆಲವು ಕಾನೂನು ತೊಡಕುಗಳಿವೆ, ಆ ಕಾನೂನು ತೊಡಕುಗಳನ್ನು ನಿವಾರಿಸಬೇಕಿದೆ. ಪ್ರತಿನಿತ್ಯ ಮೋದಿ ಅವರನ್ನು ನಿಂದಿಸುತ್ತ ಹೋದರೆ ಯಾರು ಚರ್ಚೆಗೆ ಬರುವುದಿಲ್ಲ. ಪಕ್ಕದ ಆಂಧ್ರ ಪ್ರದೇಶದ ನಾಯಕರು ಜಾಣರಿದ್ದಾರೆ. ಸೂಕ್ಷ್ಮವಾಗಿ ನಿಮಗೆ ಹಿಂಟ್ ಕೊಟ್ಟಿದ್ದೇನೆ ಎಂದು ಹೇಳಿದರು.
ಎತ್ತಿನಹೊಳೆ, ಮೇಕೆದಾಟು ಸೇರಿದಂತೆ ಯಾವ ಯೋಜನೆಯ ಬಗ್ಗೆಯೂ ರಾಜ್ಯ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಹೀಗಾಗಿ ಯಾವ ಯೋಜನೆಯು ಸುಲಭವಾಗಿ ಕಾರ್ಯಗತ ಆಗುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
