*ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕು*
*ಸಮಾಜದ ಪರಿವರ್ತನೆಗೆ ಬಸವಣ್ಣನ ವಿಚಾರಗಳು ಅತ್ಯಗತ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ*
ಹುಣಸೂರು : ಏಪ್ರಿಲ್ – 20: ಸಮಾಜದ ಪರಿವರ್ತನೆಗೆ ಬಸವಣ್ಣನ ವಿಚಾರಗಳು ಅತ್ಯಗತ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ತಾಲ್ಲೂಕು ಕುರುಬರ ಅಭಿವೃದ್ಧಿ ಸಮಿತಿ ಇವರ ವತಿಯಿಂದ ಹುಣಸೂರಿನ ಕನಕ ಭವನದಲ್ಲಿ ಆಯೋಜಿಸಲಾಗಿದ್ದಶ್ರೀ ಗಣಪತಿ ದೇವಸ್ಥಾನ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವಸ್ಥಾನವನ್ನು ಉದ್ಘಾಟನೆ ಮಾಡಿ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯದಿಂದ ವಂಚಿತರಾದವರ ಪರವಾಗಿ ನಾನು ರಾಜಕಾರಣ ಮಾಡುತ್ತೇನೆ. ನನ್ನ ಇಡೀ ರಾಜಕೀಯ ಜೀವನದ 42 ವರ್ಷಗಳಿಂದಲೂ ಜನರು ಬೆಂಬಲಿಸುತ್ತಾ ಬಂದಿದ್ದಾರೆ ಎಂದರು.
*2028 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇಗೆಲ್ಲುತ್ತದೆ*
ನಮ್ಮ ಸರ್ಕಾರ ಜನಪರವಾದ ಕೆಲಸ ಮಾಡಿದ್ದು, 2028ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
*ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕು*
ನಾಡನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡಬೇಕಾದರೆ ಬಸವಣ್ಣ, ಅಂಬೇಡ್ಕರ್, ಗಾಂಧೀಜಿ ಅವರ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
*ಎಲ್ಲರಿಗೂ ಸಮಾನ ಅವಕಾಶಗಳು, ಜಾತಿ ವರ್ಗ ರಹಿತವಾದ ಸಮಾಜ ನಿರ್ಮಾಣ ಸರ್ಕಾರದ ಉದ್ದೇಶ*
ಎಲ್ಲರಿಗೂ ಸಮಾನ ಅವಕಾಶಗಳು, ಜಾತಿ ವರ್ಗ ರಹಿತವಾದ ಸಮಾಜ ನಿರ್ಮಾಣವಾಗಬೇಕೆನ್ನುವುದು ನಮ್ಮ ಸರ್ಕಾರದ ಉದ್ದೇಶ. ಇತಿಹಾಸ ತಿಳಿಯದವರು ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್ ಹೇಳಿದ್ದರು. ಮೌಢ್ಯಗಳಿಂದ ದೂರವಿದ್ದು, ಜಾತಿ, ವರ್ಗಗಳನ್ನು ಬಿಟ್ಟಾಗ ಬಸವಣ್ಣನವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
*ಕಾಯಕ ಮತ್ತು ದಾಸೋಹ ಅರಿತು ಬಾಳಬೇಕು*
ಕಾಯಕ ಮತ್ತು ದಾಸೋಹ ತತ್ವಗಳನ್ನು ನಮಗೆ ನೀಡಿರುವ ಬಸವಣ್ಣನವರ ಮಾತುಗಳನ್ನು ಅರಿತು ಪಾಲಿಸಬೇಕು ಎಂದರು.
*ಬಸವಣ್ಣನವರು ಶ್ರೇಷ್ಠ ಮಾನವತಾವಾದಿ*
ಬಸವಣ್ಣನವರು ಸಮಾಜದ ಜಾತಿವ್ಯವಸ್ಥೆ ಮತ್ತು ಅಸಮಾನತೆಗಳನ್ನು ಹೋಗಲಾಡಿಸಲು ಹೋರಾಡಿದ ಸಮಾಜ ಸುಧಾರಕರು. ಮೌಢ್ಯಗಳಿಂದ ದೂರವಿರುವ , ಜಾತಿ ಮತ್ತು ವರ್ಗರಹಿತ ಸಮಾಜ ನಿರ್ಮಾಣವನ್ನು ಅವರು ಬಯಸಿದ್ದರು. ಬಸವಣ್ಣನವರು ಮೇಲ್ಜಾತಿಗೆ ಸೇರಿದವರಾದರೂ, ಸಮಾಜದ ಕಟ್ಟಕಡೆಯ ಅಸ್ಪೃಶ್ಯತೆಯ ಜಾತಿಯಲ್ಲಿ ಹುಟ್ಟಿದವನು ಎಂದು ಹೇಳಿಕೊಳ್ಳುತ್ತಿದ್ದರು. ಬಸವಾದಿ ಶರಣರು ಸಮಾಜ ಪರಿವರ್ತನೆಗೆ ಪೂರ್ಣ ಪ್ರಮಾಣದಲ್ಲಿ ಸಫಲರಾಗಲಿಲ್ಲ. ಬಸವ ವಿಚಾರಗಳು ಹಿಂದೆಯೂ, ಇಂದಿಗೂ, ಭವಿಷ್ಯದಲ್ಲಿಯೂ ಪ್ರಸ್ತುತವಾಗಿದೆ. ಮನುಷ್ಯ ಸಮಾಜ ನಿರ್ಮಾಣ ಮಾಡಲು ಬಯಸಿದ ಬಸವಣ್ಣನವರು ಒಬ್ಬ ಮಾನವತಾವಾದಿ ಎಂದರು.
ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಸಾಮಾಜಿಕ ನ್ಯಾಯವನ್ನು ಬಸವಣ್ಣನವರು ಪ್ರತಿಪಾದಿಸುತ್ತಿದ್ದರುಮತ್ತು ಇವುಗಳನ್ನೇ ನಮ್ಮ ಸಂವಿಧಾನವೂ ಪ್ರತಿಪಾದಿಸುತ್ತವೆ ಎಂದು ವಿವರಿಸಿದರು.
