IMG 20210511 195539

ಸೇವೆಗೆ ಸಿದ್ಧವಾಗಿರುವ ನೂತನ ಆಕ್ಸಿಜನ್ ಬಸ್…!

Genaral STATE
  • ಮುಖ್ಯಮಂತ್ರಿ ಬಿಎಸ್ ವೈ ರಿಂದ  ನೂತನ ಆಕ್ಸಿಜನ್ ಬಸ್ ವೀಕ್ಷಣೆ.
  • ರಾಜ್ಯಾದ್ಯಂತ ಬಸ್ ಗಳನ್ಬು ವಿಸ್ತರಿಸಲು ಚಿಂತನೆ

ಬೆಂಗಳೂರು:   ಕೋವಿಡ್ ಪಿಡುಗು ಅಧಿಕವಾಗಿ ಸಾರ್ವಜನಿಕರು ಆಕ್ಸಿಜನ್ ಗಾಗಿ ಪರಿತಪಿಸುವುದನ್ನು ತಪ್ಪಿಸಲು ಖಾಸಗಿ ಸ್ವಯಂ ಸೇವಾ ಸಂಸ್ಥೆಯ ಸಹಭಾಗಿತ್ವದಲ್ಲಿ ಬಿ.ಎಂ.ಟಿ.ಸಿ. ಸಂಸ್ಥೆಯು ಪ್ರಾಯೋಗಿಕವಾಗಿ ಮೊಬೈಲ್ ಆಕ್ಸಿಜನ್ ಘಟಕವನ್ನು ಪ್ರಾರಂಭಿಸಲು ಮುಂದಾಗಿದೆ ಎಂದು ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರಾದ ಶ್ರೀ ಲಕ್ಷ್ಮಣ ಸವದಿಯವರು ತಿಳಿಸಿದ್ದಾರೆ.IMG 20210511 195531

ಪ್ರಸ್ತುತ ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ಕೋವಿಡ್ ರೋಗಿಗಳ ದಟ್ಟಣೆ ಹೆಚ್ಚಾಗಿದೆ. ಇದರಿಂದಾಗಿ ಹೊಸ ರೋಗಿಗಳು ಆಸ್ಪತ್ರೆಗೆ ಬಂದಾಗ ಅವರಿಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ನೀಡುವುದು ವಿಳಂಬವಾಗಿ ತೀವ್ರ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಬಸ್ಸಿನಲ್ಲಿಯೇ ತುರ್ತು ಆಕ್ಸಿಜನ್ ಸೌಲಭ್ಯ ಒದಗಿಸಲು ಈ ನೂತನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದು ಶ್ರೀ ಸವದಿಯವರು ವಿವರಿಸಿದ್ದಾರೆ.

ಆಕ್ಸಿಜನ್ ಪೂರೈಸುವ ಈ ವಿಶೇಷ ಬಸ್ಸನ್ನು ಸರ್ಕಾರಿ ಆಸ್ಪತ್ರೆಯ (ಕೆ.ಸಿ. ಜನರಲ್ ಆಸ್ಪತ್ರೆ ಅಥವಾ ವಿಕ್ಟೋರಿಯಾ ಆಸ್ಪತ್ರೆ) ಆವರಣದಲ್ಲಿ ನಿಲ್ಲಿಸಲಾಗುವುದು ಹೊರಗಿನಿಂದ ಕೋವಿಡ್ ಪೀಡಿತರು ಬಂದಾಗ ತಕ್ಷಣಕ್ಕೆ ಆಸ್ಪತ್ರೆಯ ಒಳಗೆ ಆಕ್ಸಿಜನ್ ಸಿಗದಿದ್ದರೆ ಆತಂಕ ಪಡದೇ ಈ ಆಕ್ಸಿಜನ್ ಮೊಬೈಲ್ ಬಸ್ಸಿನಲ್ಲಿಯೇ ತುರ್ತಾಗಿ ವಿಶ್ರಮಿಸಿ ಅಗತ್ಯ ಆಕ್ಸಿಜನ್ ಪಡೆದುಕೊಳ್ಳಲು ಸಾಧ್ಯವಾಗುವಂತೆ ವೈದ್ಯಕೀಯ ಉಪಕರಣಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಸದ್ಯಕ್ಕೆ ಪ್ರಾಯೋಗಿಕವಾಗಿ ಒಂದು ಬಿ.ಎಂ.ಟಿ.ಸಿ. ಬಸ್ ನ್ನು ಇದಕ್ಕಾಗಿ ಒದಗಿಸಲಾಗಿದೆ.

ಫೌಂಡೇಶನ್ ಇಂಡಿಯಾ ಎಂಬ ಸ್ವಯಂಸೇವಾ ಸಂಸ್ಥೆಯವರು ಈ ಬಸ್ಸಿನಲ್ಲಿ ಆಕ್ಸಿಜನ್ ಸರಬರಾಜು ಮಾಡಿ ಸೇವೆ ನೀಡಲು ಎಲ್ಲಾ ಅಗತ್ಯ ಉಪಕರಣಗಳನ್ನು ಅಳವಡಿಸುತ್ತಿದ್ದಾರೆ. ಏಕಕಾಲಕ್ಕೆ ಒಟ್ಟು ಆರು ಮಂದಿ ರೋಗಿಗಳಿಗೆ ಈ ಬಸ್ಸಿನಲ್ಲಿ ಆಕ್ಸಿಜನ್ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೋವಿಡ್ ನಂತಹ ಅಪಾಯಕಾರಿ ರೋಗದಿಂದ ತತ್ತರಿಸುತ್ತಾ ಆಕ್ಸಿಜನ್ ಗಾಗಿ ಪ್ರಯಾಸ ಪಡುವವರಿಗೆ ಇದು ಸಂಜೀವಿನಿ ಆಗಬಲ್ಲದು ಎಂದು ಸವದಿಯವರು ಸ್ಪಷ್ಟಪಡಿಸಿದ್ದಾರೆ.

ಚಾಲಕರು ಮತ್ತು ಸಿಬ್ಬಂದಿಗಳಿಗೆ ಸೋಂಕು ಹರಡದಂತೆ ವಿಶೇಷ ವಿನ್ಯಾಸದೊಂದಿಗೆ ‘ಆಕ್ಸಿಜನ್ ಆನ್ ವ್ಹೀಲ್ಸ್’ ಬಸ್ಸನ್ನು ಸಜ್ಜುಗೊಳಿಸಲಾಗಿದೆಯಲ್ಲದೇ, ಸ್ಯಾನಿಟೈಸರ್, ಮಾಸ್ಕ್ ಗಳನ್ನು ಇದರಲ್ಲಿ ಒದಗಿಸಲಾಗುವುದು. ಪ್ರತಿ ರೋಗಿಗಳೂ ಸಾಮಾನ್ಯವಾಗಿ 2ರಿಂದ 4 ಗಂಟೆಯ ಅವಧಿಯಲ್ಲಿ ಈ ಸೌಲಭ್ಯ ದಿಂದ ತಮಗೆ ಬೇಕಾದ ಅಗತ್ಯ ಪ್ರಮಾಣದ ಆಕ್ಸಿಜನ್ ಪಡೆದುಕೊಳ್ಳಬಹುದಾಗಿದೆ.

ಬೆಂಗಳೂರಿನಲ್ಲಿ ನಾಳೆಯಿಂದ ( ಗುರುವಾರ) ಪ್ರಾರಂಭಿಸಲಾಗುವ ಈ ವಿಶೇಷ ‘ಆಕ್ಸಿಜನ್ ಬಸ್ ಸೌಲಭ್ಯ’ ಯಶಸ್ವಿಯಾದರೆ ಮುಂದೆ ಇನ್ನಷ್ಟು ‘ಆಕ್ಸಿಜನ್ ಬಸ್ ಸೌಲಭ್ಯ’ ನೀಡಲು ಸಾರಿಗೆ ನಿಗಮಗಳಿಂದ ಪ್ರಯತ್ನಿಸಲಾಗುವುದು ಎಂದು ಶ್ರೀ ಸವದಿಯವರು ತಿಳಿಸಿದ್ದಾರೆ.

ಈ ರೀತಿಯ ಮೊಬೈಲ್ ಆಕ್ಸಿಜನ್ ಬಸ್ ಪ್ರಯೋಗವು ಇಡೀ ದೇಶದಲ್ಲಿಯೇ ಒಂದು ವಿನೂತನ ಯತ್ನವಾಗಿದೆ. ಇದನ್ನು ಸಾಕಾರಗೊಳಿಸುವಲ್ಲಿ ಶ್ರಮಿಸಿದ ಫೌಂಡೇಶನ್ ಇಂಡಿಯಾ ಸಂಸ್ಥೆಯ ಶ್ರೀ ಸಂಜಯ್ ಗುಪ್ತ ಅವರಿಗೆ ಶ್ರೀ ಸವದಿಯವರು ಕೃತಜ್ಞತೆ ಸಲ್ಲಿಸಿದ್ದಾರೆ.