IMG 20210806 232831

ನವದೆಹಲಿ: ಅನ್ನದಾತರ ಅಳಲು ಆಲಿಸಿದ ಸಂಸದ ಡಿ.ಕೆ. ಸುರೇಶ್

NATIONAL National - ಕನ್ನಡ

*ವರ್ಷದಿಂದ ಪ್ರತಿಭಟನೆ ನಡೆಸುತ್ತಿರುವ ಅನ್ನದಾತರ ಅಳಲು ಆಲಿಸಿದ ಸಂಸದ ಡಿ.ಕೆ. ಸುರೇಶ್*

ನವದೆಹಲಿ:ಕೇಂದ್ರ ಸರಕಾರದ ರೈತ ವಿರೋಧಿ ನೀತಿ, ಕರಾಳ ಕಾಯ್ದೆಗಳನ್ನು ವಿರೋಧಿಸಿ ಕಳೆದೊಂದು ವರ್ಷದಿಂದ ಹರಿಯಾಣ, ದೆಹಲಿ ಗಡಿಭಾಗದ ಕುಂದಲಿಯಲ್ಲಿ ಸುದೀರ್ಘ ಪ್ರತಿಭಟನೆ ನಡೆಸುತ್ತಿರುವ ರೈತರು ಹಾಗೂ ರೈತ ಮುಖಂಡರನ್ನು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಸದಸ್ಯ ಡಿ.ಕೆ. ಸುರೇಶ್ ಅವರು ಶುಕ್ರವಾರ ಭೇಟಿ ಮಾಡಿ, ಅವರ ಯೋಗಕ್ಷೇಮ ವಿಚಾರಿಸಿದರು.

ಈ ಸಮಯದಲ್ಲಿ ಪ್ರತಿಭಟನಾನಿರತ ರೈತರು ತಮ್ಮ ಸಮಸ್ಯೆ, ದುಃಖ-ದುಮ್ಮಾನಗಳನ್ನು ಸಂಸದರಾದ ಸುರೇಶ್ ಅವರ ಬಳಿ ತೋಡಿಕೊಂಡರು.

ಈ ವೇಳೆ ಸುರೇಶ್ ಅವರಿಗೆ ರೈತರೊಬ್ಬರು, ಕೇಂದ್ರ ಸರ್ಕಾರ ಹೇಗೆ ಎಪಿಎಂಸಿ ಮಾರುಕಟ್ಟೆ ವ್ಯವಸ್ಥೆಯನ್ನು ದಮನ ಮಾಡಿ, ಕಾರ್ಪೊರೇಟ್ ಕಂಪನಿಗಳಿಗೆ ನೆರವಾಗಲು ಷಡ್ಯಂತ್ರ ರೂಪಿಸುತ್ತಿದೆ ಎಂದು ವಿವರಿಸಿದರು.

‘ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳಲ್ಲಿ ಅತ್ಯತ್ತಮ ಮಂಡಿ ಮಾರುಕಟ್ಟೆ ವ್ಯವಸ್ಥೆ ಇದೆ. ನೀವು ಯಾವುದೇ ಹಳ್ಳಿಗೆ ಹೋದರೂ, ಅಲ್ಲಿನ ರೈತರು ತಮ್ಮ ಉತ್ಪನ್ನಗಳನ್ನು ಮಾರಲು ಮೂರುವರೆ ಕಿ.ಮೀ.ಗಿಂತ ಹೆಚ್ಚು ದೂರ ಕ್ರಮಿಸುವ ಅಗತ್ಯವಿಲ್ಲ. ಇನ್ನು ಈ ಎ.ಪಿ.ಎಂ.ಸಿ. ಮಾರುಕಟ್ಟೆಯಲ್ಲಿ ಸಂಗ್ರಹಿಸುವ ಕಮಿಷನ್ ಹಣವನ್ನು ಮಾರುಕಟ್ಟೆ ವ್ಯವಸ್ಥೆ ನಿರ್ವಹಣೆ ಜತೆಗೆ ಮಕ್ಕಳ ಶಿಕ್ಷಣಕ್ಕೂ ಬಳಸಲಾಗುತ್ತದೆ. ಈ ಮಾರುಕಟ್ಟೆ ವ್ಯವಸ್ಥೆ ಅಧ್ಯಯನ ಮಾಡಲು ಕೇವಲ ನಮ್ಮ ದೇಶದವರು ಮಾತ್ರವಲ್ಲ, ಅನ್ಯ ದೇಶಗಳಿಂದಲೂ ಆಗಮಿಸುತ್ತಾರೆ.

ಈ ವ್ಯವಸ್ಥೆಯನ್ನು ಸರ್ವನಾಶ ಮಾಡಲು ಷಡ್ಯಂತ್ರ ನಡೆಯುತ್ತಿದೆ. ಖಾಸಗಿಯವರು ಕೃಷಿ ಉತ್ಪನ್ನಗಳನ್ನು ಖರೀದಿಸಿ ದಾಸ್ತಾನು ಮಾಡಿಕೊಂಡು, ಕಾಳಸಂತೆಯಲ್ಲಿ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಇದರಿಂದ ಒಳದಂಧೆಗೆ ರಹದಾರಿ ಮಾಡಿಕೊಟ್ಟಂತಾಗಲಿದೆ’ ಎಂದು ರೈತರು ವಿವರಿಸಿದರು.

ತಮ್ಮ ಸಮಸ್ಯೆ ಕೇಳಲು ಆಗಮಿಸಿದ ಸಂಸದ ಸುರೇಶ್ ಅವರನ್ನು ಅಭಿನಂದಿಸಿದರು.