IMG 20211007 225004

ಸೆಕ್ಯೂಲರ್ ಮತ ವಿಭಜನೆ ಮಾಡಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ: ಹೆಚ್ಡಿಕೆ

POLATICAL STATE

ಸೆಕ್ಯೂಲರ್ ಮತ ವಿಭಜನೆ ಮಾಡಲು ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿಲ್ಲ: ಹೆಚ್ಡಿಕೆ

*ಸಿಂಧಗಿಯಲ್ಲಿ ಚುನಾವಣಾ ಭಾಷಣ; ಕಾಂಗ್ರೆಸ್-ಬಿಜೆಪಿ ವಿರುದ್ಧ ವಾಗ್ದಾಳಿ*
*ಸಿಂಧಗಿ ಜೆಡಿಎಸ್ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ನಾಮಪತ್ರ ಸಲ್ಲಿಕೆ
***
ಸಿಂಧಗಿ: ಉಪ ಚುನಾವಣೆಯಲ್ಲಿ ಸಿಂಧಗಿ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಕಾರಣಕ್ಕೆ ಅಪಪ್ರಚಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕೋಮುವಾದಿ ಮತ್ತು ಜನವಿರೋಧಿ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಈ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನತೆಗೆ ಕರೆ ನೀಡಿದರು.

ಪಟ್ಟಣದಲ್ಲಿಂದು ಪಕ್ಷದ ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಅವರು ನಾಮಪತ್ರ ಸಲ್ಲಿಕೆ ಮಾಡಿದ ನಂತರ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು; “ಪ್ರತಿ ಹಂತದಲ್ಲಿಯೂ ನಮ್ಮ ಪಕ್ಷವು ಮುಸ್ಲೀಮರಿಗೆ ರಕ್ಷಣೆ ನೀಡಿದೆ. ದಲಿತ ಹಿಂದುಳಿದ ವರ್ಗದ ಜನರಿಗೆ ದನಿಯಾಗಿದೆ. ಎಲ್ಲ ವರ್ಗದ ಜನರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ಅದರೂ ಇತರೆ ಪಕ್ಷಗಳು ನಮ್ಮನ್ನು ಟೀಕಿಸುತ್ತಿವೆ” ಎಂದರು.

ಸುಶಿಕ್ಷಿತೆಯಾದ ಮುಸ್ಲಿಂ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿದ ಕಾರಣಕ್ಕೆ ಕಾಂಗ್ರೆಸ್ ನಮ್ಮನ್ನು ದೂರುತ್ತಿದೆ. ಜೆಡಿಎಸ್ ಪಕ್ಷ ಬಿಜೆಪಿಯ ಬಿ ಟೀಮ್ ಎಂದು ದುಷ್ಪ್ರಚಾರ ಮಾಡುತ್ತಿದೆ. ಅಲ್ಲದೆ, ಜೆಡಿಎಸ್ ಅಲ್ಪಸಂಖ್ಯಾತರನ್ನು ತುಷ್ಠೀಕರಣ ಮಾಡುತ್ತಿದೆ ಎಂದು ಬಿಜೆಪಿ ದೂರುತ್ತಿದೆ. ನಮ್ಮ ಪಕ್ಷವು ಸಮಾಜದ ಎಲ್ಲ ವರ್ಗದ ಜನರನ್ನೂ ಪ್ರತಿನಿಧಿಸುತ್ತದೆ. ನೀವೆಲ್ಲರೂ ಆ ಎರಡೂ ಪಕ್ಷಗಳಿಗೆ ಚುನಾವಣೆಯಲ್ಲಿ ಉತ್ತರ ಕೊಡಬೇಕೆಂದು ಅವರು ಹೇಳಿದರು.

*ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ:*

ಕಾಂಗ್ರೆಸ್ ಅಪಪ್ರಚಾರ ಮಾಡದೇ ಇದ್ದಿದ್ದರೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ 70ರಿಂದ 80 ಕ್ಷೇತ್ರಗಳಿಗೂ ಹೆಚ್ಚು ಕಡೆ ಗೆಲ್ಲುತ್ತಿತ್ತು. ರಾಜೂಗೌಡ ಪಾಟೀಲರಂಥ ಉತ್ತಮ ಅಭ್ಯರ್ಥಿ ದೇವರ ಹಿಪ್ಪರಗಿಯಲ್ಲಿ ಕೇವಲ 2,000 ಮತಗಳ ಅಂತರದಿಂದ ಸೋಲುತ್ತಿರಲಿಲ್ಲ. ಹೀಗೆ ಬಿಜೆಪಿ ಅಧಿಕಾರಕ್ಕೆ ಬರಲು ಒಳಗೊಳಗೇ ಕಾಂಗ್ರೆಸ್ ನೀಡಿದ ಕುಮ್ಮಕ್ಕನ್ನು ಮುಸ್ಲೀಮರಷ್ಟೇ ಅಲ್ಲದೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಹೆಚ್ಡಿಕೆ ಹೇಳಿದರು.

ನಾನು ಸಿಂಧಗಿ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗೆ ಟಿಕೆಟ್ ಕೊಟ್ಟಿದ್ದು ಜಾತ್ಯತೀತ ಮತಗಳನ್ನು ಒಡೆಯುವ ಉದ್ದೇಶದಿಂದ ಅಲ್ಲ ಎಂದ ಕುಮಾರಸ್ವಾಮಿ ಅವರು; ಸಾಲ ಮನ್ನಾ ಮಾಡುತ್ತೇನೆ ಎಂದಾಗ ಹೆಜ್ಜೆ ಹೆಜ್ಜೆಗೂ ಅಡ್ಡಿಪಡಿಸಿದ ಕಾಂಗ್ರೆಸ್ ಪಕ್ಷ ಐದು ವರ್ಷಗಳ ಆಡಳಿತದಲ್ಲಿ ತಂದಿದ್ದ ʼಭಾಗ್ಯʼಗಳಿಗೆ ಹಣ ಕೊರತೆ ಆಗಬಾರದೆಂದು ಹಠ ಹಿಡಿದಿತ್ತು. ಆದರೂ ನಾನು ಯಾವುದಕ್ಕೂ ಜಗ್ಗದೇ ಕೇವಲ ಒಂದು ವರ್ಷದ ನಾಲ್ಕು ತಿಂಗಳ ಅಧಿಕಾರಾವಧಿಯಲ್ಲಿ 25,000 ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದರು.IMG 20211007 WA0045

*ಸಿಂಧಗಿ ಕ್ಷೇತ್ರವೊಂದಕ್ಕೇ 120 ಕೋಟಿ ರೂ.*

ಸಾಲ ಮನ್ನಾ ಕಾರ್ಯಕ್ರಮದಿಂದ ಸಿಂಧಗಿ ಕ್ಷೇತ್ರವೊಂದರಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಾಡಿದ್ದ 6,000 ಕುಟುಂಬಗಳು ಋಣಮುಕ್ತಗೊಂಡು ಬ್ಯಾಂಕುಗಳಿಗೆ 49 ಕೋಟಿ ರೂ. ಜಮೆ ಆಯಿತು. ಅದೇ ರೀತಿ ಸಹಕಾರಿ ಬ್ಯಾಂಕುಗಳಲ್ಲಿ ಸಾಲ ಮಾಡಿಕೊಂಡಿದ್ದ 15,000 ಕುಟುಂಬಗಳ ಋಣಮುಕ್ತಕ್ಕೆ 71 ಕೋಟಿ ರೂ. ಬಿಡುಗಡೆ ಮಾಡಲಾಯಿತು. ಒಟ್ಟು 120 ಕೋಟಿ ರೂ. ಹಣ ಸಿಂಧಗಿ ಕ್ಷೇತ್ರ ಒಂದಕ್ಕೇ ಬಂದಿದೆ. ಅಲ್ಲದೇ, ಈ ಕ್ಷೇತ್ರದ ಅಭಿವೃದ್ಧಿಗೆ 1,000 ಕೋಟಿಗಿಂತ ಹೆಚ್ಚಿನ ಹಣ ನೀಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಜ್ಯದಲ್ಲಿ ತೋಟಗಾರಿಕೆ ಕಾಲೇಜುಗಳು ಇರುವುದು ಎರಡೇ. ಅದರಲ್ಲಿ ಒಂದು ಸಿಂಧಗಿಯಲ್ಲಿದೆ. ದಿವಂಗತ ಮನಗೂಳಿ ಅವರ ಒತ್ತಾಸೆಯ ಮೇರೆಗೆ ನಾನು ಮುಖ್ಯಮಂತ್ರಿಯಾಗಿದ್ದಾಗ ಈ ಕಾಲೇಜನ್ನು ಮಂಜೂರು ಮಾಡಿದ್ದೆ. ಅದೇ ರೀತಿ ಅಲಮೇಲು ಪಟ್ಟಣವನ್ನು ತಾಲೂಕ ಕೇಂದ್ರ ಮಾಡಿ ಈ ಭಾಗದ ಜನರ ಆಶೋತ್ತರ ಈಡೇರಿಸಿದ್ದೇನೆ ಎಂದು ಅವರು ನುಡಿದರು.

*ಮನಗೂಳಿ ನೆನಪು ಮಾಡಿಕೊಂಡ ಹೆಚ್ಡಿಕೆ:*

ಎಂಸಿ ಮನಗೂಳಿ ಅವರು ನಿಧನರಾದಾಗ ನಾನು ಮತ್ತು ನನ್ನ ಸಹೋದರ ಹೆಚ್.ಡಿ.ರೇವಣ್ಣ ಹೆಲಿಕಾಪ್ಟರ್ ಮಾಡಿಕೊಂಡು ಬಂದು ಅವರ ಅಂತಿಮ ದರ್ಶನ ಪಡೆದಿದ್ದೆವು. ಮನಗೂಳಿ ಅವರು ತಮ್ಮ ಕೊನೆ ಉಸಿರಿನವರೆಗೂ ಜೆಡಿಎಸ್ ನಿಷ್ಠಾವಂತ ಕಾರ್ಯಕರ್ತರಾಗಿಯೇ ಇದ್ದರು. ದಶಕಗಳ ಕಾಲದಿಂದ ಅವರಿಗೂ ಮತ್ತು ದೇವೇಗೌಡರ ನಡುವೆ ಅವಿನಾಭಾವ ಒಡನಾಟ ಇತ್ತು. ಅಣ್ಣ ತಮ್ಮಂದಿರ ಸಂಬಂಧವನ್ನು ಅವರಲ್ಲಿ ನಾನು ಕಂಡಿದ್ದೆ ಎಂದು ಕುಮಾರಸ್ವಾಮಿ ಅವರು ಸ್ಮರಿಸಿಕೊಂಡರು.

ದೇವೇಗೌಡರು 1994ರಲ್ಲಿ ಮುಖ್ಯಮಂತ್ರಿಯಾದಾಗ ಮನಗೂಳಿ ಅವರು ಶಾಸಕರಾದರು. ಕಳೆದ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಹಿಂದೆ ಎರಡ್ಮೂರು ಚುನಾವಣೆಗಳಲ್ಲಿ ಅವರು ಸೋತಿದ್ದರು. ಕಳೆದ ಚುನಾವಣೆಯಲ್ಲಿ ಅವರ ಇಬ್ಬರ ಮಕ್ಕಳಲ್ಲಿ ಚುನಾವಣೆಗೆ ನಿಲ್ಲಲು ಪೈಪೋಟಿ ಶುರುವಾಯಿತು. ಅಂದು ಆ ಇಬ್ಬರು ಮಕ್ಕಳಿಗೆ ಒಂದು ಮಾತು ಹೇಳಿದ್ದೆ. ಮನಗೂಳಿ ಅವರು ಎಲ್ಲರಿಂದ ಗೌರವಿಸಲ್ಪಡುವ ವ್ಯಕ್ತಿ. ರಾಜಕೀಯ ಜೀವನದಲ್ಲಿ ಅನೇಕ ಪೆಟ್ಟುಗಳನ್ನು ತಿಂದಿದ್ದಾರೆ. ಅವರ ಮಕ್ಕಳಾಗಿ ನಿಮ್ಮ ನಡುವೆ ಭಿನ್ನಾಭಿಪ್ರಾಯ ಬರುವುದು ಸರಿಯಲ್ಲ. ರಾಮ ಲಕ್ಷ್ಮಣರಂತೆ ಒಟ್ಟಾಗಿ ಕೆಲಸ ಮಾಡಿ ಮನಗೂಳಿ ಅವರನ್ನು ಕೊನೆ ಬಾರಿ ಆಯ್ಕೆಯಾಗಲು ದುಡಿಯುವಂತೆ ಸಲಹೆ ಮಾಡಿದ್ದೆ ಎಂದು ಮನಗೂಳಿ ಕುಟುಂಬದ ಜತೆಗಿನ ನಂಟು ನೆನೆದು ಭಾವುಕರಾದರು ಹೆಚ್ಡಿಕೆ.

ಕಳೆದ ಚುನಾವಣೆ ಪ್ರಚಾರಕ್ಕೆ ಬಂದಿದ್ದ ನಾನು, ಮನಗೂಳಿ ಕಾಕಾ ಅವರನ್ನು ಗೆಲ್ಲಿಸಿದರೆ ಅವರನ್ನು ಸರಕಾರ ಬಂದರೆ ಮಂತ್ರಿ ಮಾಡುವುದಾಗಿ ಜನರಿಗೆ ಹೇಳಿದ್ದೆ. ಆದರೆ, ಬಹಮತ ಬಾರದೇ ಬೇರೆ ದಾರಿ ಇಲ್ಲದೇ ಕಾಂಗ್ರೆಸ್ ಜತೆ ಸಮ್ಮಿಶ್ರ ಸರಕಾರ ರಚನೆ ಮಾಡಬೇಕಾಯಿತು. ನಾನು ಕೊಟ್ಟ ಮಾತಿಗೆ ತಪ್ಪದೇ ಮನಗೂಳಿ ಅವರಿಗೆ ಸಚಿವ ಸ್ಥಾನ ನೀಡಿದೆ. ಅವರ ನಿಷ್ಠೆ ಅವರಿಗೆ ಆ ಸ್ಥಾನ ತಂದುಕೊಟ್ಟಿತು ಎಂದರು ಅವರು.

ಈ ಸಿಂಧಗಿ ಕ್ಷೇತ್ರಕ್ಕೆ ನಾನಾಗಲಿ, ದೇವೇಗೌಡರಾಗಲಿ ಮಾಡಿರುವ ಕೆಲಸಗಳು ಬೇರಾವ ಮುಖ್ಯಮಂತ್ರಿಗಳೂ ಮಾಡಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಒಮ್ಮೆಲೆ ನಾಲ್ಕು ಹೆಲಿಕಾಪ್ಟರ್ʼಗಳು ಸಿಂಧಗಿಯಲ್ಲಿ ಇಳಿದದ್ದನ್ನು ಯಾರು ಮರೆಯುವಂತಿಲ್ಲ. ಅದು ಗೌಡರು ಈ ಕ್ಷೇತ್ರದ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದು ಐತಿಹಾಸಿಕ ಘಟನೆಯಾಗಿ ಉಳಿದಿದೆ. ಉತ್ತರ ಕರ್ನಾಟಕದ ಭಾಗ್ಯದ ಬಾಗಿಲು ತೆರೆದ ಕೃಷ್ಣಾ ನದಿ ನೀರು ಬಳಕೆ ಯೋಜನೆಗೆ ಗೌಡರು 15,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದರು. ಇದೆಲ್ಲವನ್ನು ಕ್ಷೇತ್ರದ ಜನರು ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿಗಳು ಮನವಿ ಮಾಡಿದರು.

*ಪಂಚರತ್ನ ಕಾರ್ಯಕ್ರಮ:*

ಇದೇ ವೇಳೆ 2023 ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಈ ವೇದಿಕೆಯಿಂದಲೇ ಮುನ್ನುಡಿ ಬರೆದ ಕುಮಾರಸ್ವಾಮಿ ಅವರು; ಈಗಾಗಲೇ ತಾವು ರೂಪಿಸಿರುವ ಜನತಾ ಪರ್ವ 1.O, ಮಿಷನ್ 123 ಹಿನ್ನೆಲೆಯಲ್ಲಿ ರೂಪಿಸಿರುವ ಪಂಚರತ್ನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಈ ಚುನಾವಣೆ ನನ್ನ ಪಾಲಿಗೆ 2023ರ ಚುನಾವಣೆಯ ಸೆಮಿಫೈನಲ್. ಸಿಂಧಗಿ ಮತ್ತು ಹಾನಗಲ್ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಿದಬ್ಬರೂ ಗೆಲ್ಲಬೇಕು. ಆ ಜವಾಬ್ದಾರಿ ಎರಡೂ ಕ್ಷೇತ್ರಗಳ ಜನರ ಮೇಲಿದೆ ಎಂದು ಅವರು ಹೇಳಿದರು.

ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಸಂಸದ ಪ್ರಜ್ವಲ್ ರೇವಣ್ಣ, ರಾಜೂಗೌಡ ಪಾಟೀಲ್, ಬಿ.ಡಿ.ಪಾಟೀಲ್ ಮುಂತಾದವರು ಸಭೆಯಲ್ಲಿ ಮಾತನಾಡಿದರು. ಅಭ್ಯರ್ಥಿ ನಾಜಿಯಾ ಶಕೀಲಾ ಅಂಗಡಿ ಪರವಾಗಿ ಎಲ್ಲ ಮುಖಂಡರು ಮತ ಯಾಚನೆ ಮಾಡಿದರು.