IMG 20211116 WA0011

JD(S) – ಬದ್ಧತೆಯಿಂದ ಪಕ್ಷ ಕಟ್ಟಿ, ಪದಾಧಿಕಾರಿಗಳಿಗೆ ಖಡಕ್ ಪಾಠ…!

POLATICAL STATE

*ಬದ್ಧತೆಯಿಂದ ಪಕ್ಷ ಕಟ್ಟಿ, ಪದಾಧಿಕಾರಿಗಳಿಗೆ ಖಡಕ್ ಪಾಠ ಮಾಡಿದ ಹೆಚ್ ಡಿಕೆ*

ಬೆಂಗಳೂರು ನಗರ ಪಕ್ಷ ಸಂಘಟನೆ ಕಾರ್ಯಗಾರ ಜನತಾ ಸಂಗಮದಲ್ಲಿ ಮಾಜಿ ಮುಖ್ಯಮಂತ್ರಿಗಳ ಸಮಾಲೋಚನೆ
***
ಬೆಂಗಳೂರು: ಮುಂಬರುವ ಬಿಬಿಎಂಪಿ ಚುನಾವಣೆ ಹಾಗೂ 2023ರ ವಿಧಾನಸಭೆ ಚುನಾವಣೆಗೆ ಬೆಂಗಳೂರು ನಗರ ನಮ್ಮ ಪಕ್ಷಕ್ಕೆ ಬಹಳ ಮುಖ್ಯ. ಪ್ರತಿಯೊಬ್ಬ ಮುಖಂಡರು, ಕಾರ್ಯಕರ್ತರು ತಮ್ಮೆಲ್ಲ ಶಕ್ತಿಯನ್ನು ಬಳಸಿ ಪಕ್ಷವನ್ನು ಕಟ್ಟಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ತಾಕೀತು ಮಾಡಿದರು.

ಬೆಂಗಳೂರಿನ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜನತಾ ಪರ್ವ 1.O ದ ಎರಡನೇ ಹಂತದ ಕಾರ್ಯಗಾರ ‘ಜನತಾ ಸಂಗಮ’ದ ಏಳನೇ ದಿನ ಬೆಂಗಳೂರು ನಗರದ 28 ವಿಧಾನಸಭೆ ಕ್ಷೇತ್ರಗಳ ಪದಾಧಿಕಾರಿಗಳು, ಪಾಲಿಕೆ ಸದಸ್ಯರು ಹಾಗೂ ಆಯ್ದ ಮುಖಂಡರ ಜತೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಅವರು ಸಮಾಲೋಚನೆ ನಡೆಸಿದರು.

ಪಕ್ಷವನ್ನು ನಾವು ಹಣ ತೆತ್ತು ಕಟ್ಟಲು ಸಾಧ್ಯವಿಲ್ಲ. ನಮ್ಮ ಸ್ವಂತ ಶ್ರಮದ ಮೇಲೆ ಬದ್ಧತೆಯಿಂದ ಕಟ್ಟಬೇಕು. ಯಾರೇ ಆಗಲಿ, ನನ್ನ ಜತೆ ಮುಕ್ತವಾಗಿ ಚರ್ಚೆ ಮಾಡಬಹುದು. ಭೇಟಿಯಾಗಿ ಮಾತುಕತೆ ನಡೆಸಬಹುದು. ಎಲ್ಲರಿಗೂ ಮುಕ್ತ ಸ್ವಾಗತವಿದೆ ಎಂದು ಮುಖಂಡರಿಗೆ ಕುಮಾರಸ್ವಾಮಿ ಅವರು ಹೇಳಿದರು.

ಸ್ವತಂತ್ರ ಸರಕಾರಕ್ಕೆ ಬಿಬಿಎಂಪಿ ಮುಖ್ಯ:

ಪಕ್ಷ ಸಂಘಟನೆ ಹಾಗೂ ಬಿಜೆಪಿ ಕಾಂಗ್ರೆಸ್ ನಡುವೆ ಸರಕಾರ ಮಾಡಿದಾಗ ಅನುಭವಿಸಿದ ವೇದನೆಯನ್ನು ಎಳೆ ಎಳೆಯಾಗಿ ಸಭೆಯಲ್ಲಿ ಬಿಡಿಸಿಟ್ಟ ಅವರು, 2023ರಲ್ಲಿ ಜೆಡಿಎಸ್ ಸ್ವತಂತ್ರ ಸರಕಾರ ನಡೆಸಬೇಕಾದರೆ ಬಿಬಿಎಂಪಿ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲೇಬೇಕು ಎಂದು ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.

ಈಗಾಗಲೇ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪಂಚರತ್ನ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದೇನೆ. ಬೆಂಗಳೂರು ನಗರ ಅಭಿವೃದ್ಧಿಗೆ ಪ್ರತ್ಯೇಕ ಕಾರ್ಯಕ್ರಮ ರೂಪಿಸಲಾಗುವುದು. ಇದುವರೆಗೆ ದೇವೇಗೌಡರು ಮುಖ್ಯಮಂತ್ರಿ, ಪ್ರಧಾನಿ ಆಗಿದ್ದಾಗ ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ ಜಾರಿ ಮಾಡಿದ ಯೋಜನೆಗಳನ್ನು ನಗರದ ಜನರಿಗೆ ತಿಳಿಸಬೇಕು ಎಂದು ಕುಮಾರಸ್ವಾಮಿ ಅವರು ಪದಾಧಿಕಾರಿಗಳಿಗೆ ಸೂಚಿಸಿದರು.

ಕ್ಷೇತ್ರವಾರು ಸಮಾಲೋಚನೆ:

ನಗರದ ಒಟ್ಟು 28 ವಿಧಾನಸಭೆ ಕ್ಷೇತ್ರಗಳ ಪದಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ಮಾಜಿ ಮುಖ್ಯಮಂತ್ರಿಗಳು, ಮುಖ್ಯವಾಗಿ ಸಮಸ್ಯೆಗಳ ಬಗ್ಗೆ ಹೆಚ್ಚು ಒತ್ತು ನೀಡಿ ಅವನ್ನು ಸಭೆಯಲ್ಲಿಯೇ ಬಗೆಹರಿಸಿದರು.

ಗ್ರಾಮೀಣ ಪ್ರದೇಶಕ್ಕೂ ನಗರ ಪ್ರದೇಶಕ್ಕೂ ಪಕ್ಷ ಕಟ್ಟುವಿಕೆಯಲ್ಲಿ ಪ್ರತ್ಯೇಕ ಸವಾಲುಗಳಿವೆ ಎನ್ನುತ್ತಲೇ, ನಗರದ ವಿವಿಧ ಸ್ತರಗಳಲ್ಲಿ ಪಕ್ಷ ಸಂಘಟಿಸುವ ಪಾಠವನ್ನು ನಾಯಕರಿಗೆ ಮಾಡಿದರು ಹೆಚ್’ಡಿಕೆ.

ಅಲ್ಲದೆ, ಕಾಲಮಿತಿಯನ್ನು ನಿಗದಿ ಮಾಡಿ ಪದಾಧಿಕಾರಿಗಳಿಗೆ ಕೆಲ ಮಹತ್ವದ ಗುರಿಗಳನ್ನು ನಿಗದಿ ಮಾಡಿದ ಕುಮಾರಸ್ವಾಮಿ ಅವರು, ಪಕ್ಷದ ಸಂಘಟನೆ ವಿಷಯದಲ್ಲಿ ನೆಪಗಳಿಗೆ ಅವಕಾಶ ಇಲ್ಲ. ಎಲ್ಲರೂ ಒಗ್ಗಟ್ಟಿನಿಂದ ಪರಸ್ಪರ ಸಹಕಾರದಿಂದ ಸಂಘಟನೆ ಮಾಡಬೇಕು ಎಂದು ಅವರು ಹೇಳಿದರು.

ವೇದಿಕೆಯ ಮೇಲೆ ಮಾಜಿ ಪ್ರಧಾನಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಪದಾಧಿಕಾರಿಗಳ ಅಭಿಪ್ರಾಯಗಳನ್ನು ಆಲಿಸಿದರು. ವಿಧಾನ ಪರಿಷತ್ ಸದಸ್ಯರಾದ ತಿಪ್ಪೇಸ್ವಾಮಿ, ರಮೇಶ್ ಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಸರವಣ, ಜೆಡಿಎಸ್ ನಗರ ಅಧ್ಯಕ್ಷ ಆರ್.ಪ್ರಕಾಶ್, ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್ ಮುಂತಾದವರು ಹಾಜರಿದ್ದರು.