IMG 20211119 WA0033

ರಾಜಕಾಲುವೆ ಒತ್ತುವರಿ ಹಿಂದೆ ಅರವಿಂದ ಲಿಂಬಾವಳಿ….!

Genaral STATE

*ರಾಜಕಾಲುವೆ ಒತ್ತುವರಿ ಹಿಂದೆ ಲಿಂಬಾವಳಿ: ಎಎಪಿ*

ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿ, ಜುನ್ನಸಂದ್ರ ಹಾಗೂ ಹಾಲನಯಕಹಳ್ಳಿ ಜನರು ಕೊಳಚೆ ನೀರಿನೊಂದಿಗೆ ಬದುಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವದಕ್ಕೆ ಶಾಸಕ ಅರವಿಂದ್‌ ಲಿಂಬಾವಳಿಯವರ ನಿರ್ಲಕ್ಷ್ಯವೇ ಕಾರಣ ಎಂದು ಮಹದೇವಪುರ ಕ್ಷೇತ್ರ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್‌ ಮೃತ್ಯುಂಜಯ, “ಜುನ್ನಸಂದ್ರದ ಗ್ರೀನ್ ವಿಲ್ಲೇ ಲೇಔಟ್ ಕಡೆಗೆ ಹೋಗುವ 40 ಅಡಿ ರಸ್ತೆಯು ಈಗ ಒಂದು ಕೊಳಚೆ ಈಜುಕೊಳವಾಗಿ ಮಾರ್ಪಟ್ಟಿದೆ. ಸುತ್ತಮುತ್ತಲಿನ ಪರಿಸರದ ಕೊಳಚೆ ಹರಿದು ಹೋಗಲು ಒಂದು ರಾಜಕಾಲುವೆ ಇದ್ದು, ಅದು ಮುಖ್ಯ ಕಾಲುವೆಯನ್ನು ಸೇರುತ್ತದೆ. ರಾಜಕಾಲುವೆಯು ರೈನ್ಬೋ ಡ್ರೈವ್ ವಿಲ್ಲೇ ಮೂಲಕ ಹಾದುಹೋಗುತ್ತದೆ. ವಿಲ್ಲಾದ ಬಿಲ್ಡರ್ ಈ ರಾಜಕಾಲುವೆಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ. ಹೀಗಾಗಿ ಈ ನೀರು ಸರಾಗವಾಗಿ ಹೋಗುತ್ತಿಲ್ಲ” ಎಂದು ತಿಳಿಸಿದರು.

IMG 20211119 WA0034

“ಕಳೆದ 7 ವರ್ಷಳಿಂದ ಮಳೆಗಾಲದಲ್ಲಿ ರಸ್ತೆಗಳಲ್ಲಿ ಕನಿಷ್ಠ ಎರಡು ಅಡಿ ನೀರು ನಿಲ್ಲುತ್ತಿದೆ. ಈ ಕಾರಣದಿಂದಾಗಿ ಮಕ್ಕಳಿಗೆ ಹೊರಗಡೆ ಆಟವಾಡಲು, ಹಿರಿಯರಿಗೆ ನಡೆದು ಹೋಗಲು ಕಷ್ಟವಾಗುತ್ತಿದೆ. ನೀರು ನಿಂತ ಪರಿಣಾಮ ಡೆಂಗ್ಯೂ, ಮಲೇರಿಯಾ ಹರಡುತ್ತಿದೆ. ಇದಕ್ಕೆಲ್ಲ ಬಿಬಿಎಂಪಿ ಹಾಗೂ ಮಾನ್ಯ ಶಾಸಕರಾದ ಆರವಿಂದ ಲಿಂಬಾವಳಿಯವರ ನಿರ್ಲಕ್ಷ್ಯವೇ ಕಾರಣ” ಎಂದು ಅಶೋಕ್‌ ಮೃತ್ಯುಂಜಯ ಹೇಳಿದರು.

ಹಾಲನಯಕನ ಹಳ್ಳಿ ಗ್ರಾಮಸ್ತರಾದ ಅಂಬರೀಷ್ ರೆಡ್ಡಿಯವರು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, “2012ರಿಂದ ಈ ಒಂದು ವಿಚಾರವಾಗಿ ಹಲವಾರು ಬಾರಿ ದೂರುಗಳನ್ನು ನೀಡಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಯಾರು ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. 2014ರಲ್ಲಿ ತಹಸಿಲ್ದಾರ್ ಹರೀಶ್ ನಾಯಕ್‌ರವರಿಗೆ ಒಂದು ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಹರೀಶ್ ನಾಯಕ್‌ರವರು ಭೇಟಿ ನೀಡದ ಕಾರಣ ಅದೇ ಪರಿಸ್ಥಿತಿ ಮುಂದುವರಿದಿದೆ. ಈ ಒಂದು ಕಾರಣದಿಂದ ಅಲ್ಲಿರುವ ಜನಸಾಮಾನ್ಯರು ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಮಾನ್ಯ ಲೋಕಾಯುಕ್ತರವರಿಗೂ ಕೂಡ ದೂರು ನೀಡಲಾಗಿತ್ತು. ಅವರು ಕೂಡ ತಹಸಿಲ್ದಾರ್ರವರ ಲೋಪದೋಷಗಳನ್ನು ಎತ್ತಿಹಿಡಿದಿದ್ದಾರೆ” ಎಂದು ವಿವರಿಸಿದರು.

IMG 20211119 WA0035

“ಈ ವಿಷಯದ ಬಗ್ಗೆ ಎಸಿ, ಡಿಸಿ, ತಹಸೀಲ್ದಾರ್ ಹಾಗೂ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಭೇಟಿಯಾಗಿ, ಅವರಿಗೆಲ್ಲ ಒತ್ತುವರಿ ತೆರವು ಮಾಡಿಸುವುದಕ್ಕೆ ಅರ್ಜಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಒತ್ತುವರಿ ಮಾಡಿರುವವರು ತುಂಬಾ ಪ್ರಭಾವಿ ವ್ಯಕ್ತಿಗಳಾಗಿದ್ದಾರೆ. ಆದ್ದರಿಂದ ಯಾವ ಅಧಿಕಾರಿಗಳು ಹಾಗೂ ಶಾಸಕರು ಸರಿಯಾದ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸ್ಮಶಾನದ ತನಕ ಈ ಕೊಳಚೆ ನೀರು ಬಂದು ಸತ್ತವರಿಗೂ ಮರಣದ ನಂತರ ಕಾಟ ಅನುಭವಿಸುವಂತಾಗಿದೆ” ಎಂದು ಅಂಬರೀಷ್ ರೆಡ್ಡಿ ಹೇಳಿದರು.

ಈ ಎಲ್ಲಾ ಸಮಸ್ಯೆಗಳ ಮಧ್ಯೆ ಕಸದ ರಾಶಿ ಕೂಡ ಬೆಳೆದಿದೆ. ಜುನ್ನಸಂದ್ರ ಗ್ರಾಮದ ಜನತೆ ಈ ಸಮಸ್ಯೆಯಿಂದ ಬೇಸತ್ತು ಹೋಗಿದ್ದಾರೆ. ನೆಮ್ಮದಿಯಿಂದ ರಸ್ತೆಯಲ್ಲಿ ನಡೆಯಲು ಸಾದ್ಯವಾಗದೇ ಆಡಳಿತ ವ್ಯವಸ್ಥೆಯ ವಿರುದ್ಧ ಅಸಮಾಧಾನ ಹೊಂದಿದ್ದಾರೆ ಎಂದು ಹೇಳಿದರು.

*ನ. 21ರಂದು ಪಾದಯಾತ್ರೆ:*

ಮಹದೇವಪುರ ಕ್ಷೇತ್ರದ ಎಎಪಿ ಅಧ್ಯಕ್ಷ ಅಶೋಕ್‌ ಮೃತ್ಯುಂಜಯ ಮಾತನಾಡಿ, “ಅಕ್ಟೋಬರ್ 16ರಂದು ಒಂದು ಪ್ರತಿಭಟನೆ ಮಾಡಿ ಶಾಸಕ ಅರವಿಂದ ಲಿಂಬಾವಳಿ ಅವರಿಗೆ 15 ದಿನಗಳ ಗಡುವನ್ನು ನೀಡಲಾಗಿತ್ತು. ಆದರೆ ಈವರೆಗೂ ಮಾನ್ಯ ಶಾಸಕರ ಕಚೇರಿಯಿಂದ ಯಾವುದೇ ಉತ್ತರ ಬರದೇ ಇರುವ ಕಾರಣ ಜುನ್ನಸಂದ್ರ ಗ್ರಾಮದಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರು 21ನೇ ನವೆಂಬರ್ ಬೆಳಗ್ಗೆ 11:30ರಿಂದ ಒಂದು ಪಾದಯಾತ್ರೆ ನಡೆಸಲಿದ್ದಾರೆ. ಜುನ್ನಸಂದ್ರ ಗ್ರೀನ್ ವಿಲ್ಲೇ ಲೇಔಟ್‌ನಿಂದ ಪ್ರಾರಂಭಿಸಿ, ಜುನ್ನಸಂದ್ರ ಅಯ್ಯಪ್ಪ ದೇವಸ್ಥಾನದ ಮುಖಾಂತರ ಜುನ್ನಸಂದ್ರ ಕೆರೆ, ಕೆಪಿಸಿಎಲ್ ಲೇಔಟ್, ಕಸವನಹಳ್ಳಿ, ಕೈಕೊಂಡರಹಳ್ಳಿ ಹತ್ತಿರ ಬಲಕ್ಕೆ ತಿರುಗಿ ವಿಪ್ರೋ ಕಾರ್ಪೊರೇಟ್ ಕಚೇರಿ ಹತ್ತಿರ ಬಲಕ್ಕೆ ತಿರುಗಿ ಗ್ರೀನ್ ವಿಲ್ಲೇ ಲೇಔಟ್‌ನಲ್ಲಿ ಮೆರವಣಿಗೆ ಅಂತ್ಯಗೊಳಿಸಲಾಗುತ್ತದೆ” ಎಂದು ತಿಳಿಸಿದರು.