IMG 20200727 WA0086

ರಾಜ್ಯ ಅಭಿವೃದ್ಧಿಯಲ್ಲಿ ನವಶಕೆ ಆರಂಭ….!

STATE Genaral

ರಾಜ್ಯ ಅಭಿವೃದ್ಧಿಯಲ್ಲಿ ನವಶಕೆ ಆರಂಭ
ಬಿಎಸ್’ವೈ ನಾಯಕತ್ವ ಕೊಂಡಾಡಿದ ಡಿಸಿಎಂ
****

ರಾಮನಗರ: ರಾಜ್ಯವು ರಾಜಕೀಯ ಶೂನ್ಯತೆ ಮತ್ತು ನಾಯಕತ್ವದ ಕೊರತೆ ಎದುರಿಸುತ್ತಿದ್ದ ಸಂಕಷ್ಟ ಕಾಲದಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಕಠಿಣ ಸವಾಲುಗಳ ನಡುವೆಯೂ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸಿದ ಪ್ರಬಲ ನಾಯಕ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಕೊಂಡಾಡಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ರಾಜ್ಯಮಟ್ಟದ ಸರಳ ವರ್ಚುಯಲ್ ಫ್ಲಾಟ್’ಫಾರಂ ಸಮಾರಂಭದಲ್ಲಿ ರಾಮನಗರದಿಂದಲೇ ಮಾತನಾಡಿದ ಅವರು, 50 ವರ್ಷಗಳಿಗೂ ಹೆಚ್ಚಿನ ರಾಜಕೀಯ ಅನುಭವ ಹಾಗೂ ಜನಪರ ಕೆಲಸ ಮಾಡಿರುವ ಯಡಿಯೂರಪ್ಪ ಅವರು, ನಮಗೆಲ್ಲರಿಗೂ ಸಮರ್ಪಕ ಮಾರ್ಗದರ್ಶನ ನೀಡುವ ಮೂಲಕ ರಾಜ್ಯಕ್ಕೆ ಅತ್ಯುತ್ತಮವಾದ ಸ್ಥಿರ ಸರಕಾರ ನೀಡಿದ್ದಾರೆ. ಇದಕ್ಕಾಗಿ ನಾನು ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ನುಡಿದರು.

2018ರಲ್ಲಿ ಯಾರಿಗೂ ಬಹಮತ ಸಿಗದಿದ್ದಾಗ ರಾಜ್ಯದಲ್ಲಿ ಒಂದು ರೀತಿಯ ರಾಜಕೀಯ ಶೂನ್ಯತೆ, ಅಭಿವೃದ್ಧಿಹೀನ ವಾತಾವರಣ ಉಂಟಾಗಿತ್ತು. ಬಳಿಕ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಮಹಾ ಪ್ರವಾಹ ಉಂಟಾಯಿತು. ಇದೆಲ್ಲವನ್ನು ಸಮರ್ಥವಾಗಿ ಎದುರಿಸಿ ಮುಖ್ಯಮಂತ್ರಿಗಳು, ಬಳಿಕ ಎದುರಾದ ಉಪ ಚುನಾವಣೆಯನ್ನು ಅಷ್ಟೇ ಸಮರ್ಥವಾಗಿ ಎದುರಿಸಿದರು. ಅದರ ಪ್ರತಿಫಲವಾಗಿ 15 ಕ್ಷೇತ್ರಗಳ ಪೈಕಿ 12 ಕಡೆ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದರು. ಜನರು ಸ್ಥಿರ ಸರಕಾರವನ್ನು ಅಪೇಕ್ಷಿಸಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿತ್ತು. ಅದರಂತೆ ಯಡಿಯೂರಪ್ಪ ಅವರು ಸ್ಥಿರ ಮತ್ತು ಅಭಿವೃದ್ಧಿಪರ ಸರಕಾರವನ್ನು ನೀಡಿದ್ದಾರೆಂದು ಡಿಸಿಎಂ ಒತ್ತಿ ಹೇಳಿದರು.

ನಾಲ್ಕು ಸವಾಲುಗಳು:
ಸರಕಾರ ಅಧಿಕಾರಕ್ಕೆ ಬರುವ ಹೊತ್ತಿಗೆ ರಾಜ್ಯವು ಅನಾವೃಷ್ಟಿಗೆ ಸಿಲಕಿತ್ತು. ಅದಾದ ಮೇಲೆ ಪ್ರವಾಹ, ತದನಂತರ ಉಪ ಚುನಾವಣೆ, ಅದಾದ ಮೇಲೆ ಕೋವಿಡ್‌ ನಮ್ಮ ಮೇಲೆ ಬಂದೆರಗಿತು. ಎದುರಾದ ಸವಾಲುಗಳನ್ನು ಸವಾಲಿನಂತೆಯೇ ಸ್ವೀಕರಿಸಿ ನಮ್ಮ ಸರಕಾರವು ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎದುರಿಸಿದೆ. ವಿಕೋಪ ಬಂದಾಗ ಸುಮಾರು 50,000ಕ್ಕೂ ಹೆಚ್ಚು ನೆರೆಪೀಡಿತರನ್ನು ರಕ್ಷಿಸಲಾಯಿತು. ಯುವಕರೂ ನಾಚುವಂತೆ ಬಿಎಸ್’ವೈ ಅವರು ಇಡೀ ಉತ್ತರ ಕರ್ನಾಟಕವನ್ನು ಸುತ್ತು ಹಾಕಿದ್ದನ್ನು ಯಾರೂ ಮೆರಯಲು ಸಾಧ್ಯವಿಲ್ಲ. ರಾಷ್ಟ್ರೀಯ ವಿಪತ್ತು ಕಾಯ್ದೆ ಅಡಿಯಲ್ಲಿ ಸುಮಾರು 2.7 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ತಲಾ 10,000 ರೂಪಾಯಿದಂತೆ 207 ಕೋಟಿ ರೂ. ಹಂಚಿಕೆ ಮಾಡಲಾಯಿತು. ಹಾನಿಗೀಡಾಗಿದ್ದ 1.25 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಮರು ನಿರ್ಮಾಣಕ್ಕೆ 911 ಕೋಟಿ ರೂ. ವೆಚ್ಚ ಮಾಡಲಾಯಿತು. ಸಂಪೂರ್ಣವಾಗಿ ಕುಸಿದಿದ್ದ ಮನೆಗಳ ಮರು ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಮಂಜೂರು ಮಾಡಲಾಯಿತು. ಇಡೀ ದೇಶದಲ್ಲಿಯೇ ನೆರೆಪೀಡಿತರಿಗೆ ಮನೆ ಕಟ್ಟಿಕೊಳ್ಳಲು ಇಷ್ಟು ದೊಡ್ಡ ಮೊತ್ತದ ಪರಿಹಾರವನ್ನು ನೀಡಿದ ಏಕೈಕ ಸರಕಾರ ನಮ್ಮದು ಎಂದು ಹೇಳಲು ಹೆಮ್ಮೆಯಾಗುತ್ತದೆ. ಅದಕ್ಕಾಗಿ ನಾನು ಮುಖ್ಯಮಂತ್ರಿಗಳನ್ನು ಮತ್ತೊಮ್ಮೆ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಡಾ. ಅಶ್ವತ್ಥನಾರಾಯಣ ನುಡಿದರು.

ಕೋವಿಡ್‌ ಸವಾಲು:
ಅನಿರೀಕ್ಷಿತವಾಗಿ ಬಂದೆರಗಿದ ಕೋವಿಡ್‌ ಸವಾಲನ್ನೂ ಸರಕಾರವು ಪ್ರಬಲವಾಗಿ ಎದುರಿಸಿದೆ. ಹಗಲು ರಾತ್ರಿಯೆನ್ನದೇ ಮುಖ್ಯಮಂತ್ರಿಗಳಾದಿಯಾಗಿ ಎಲ್ಲರೂ ಕೆಲಸ ಮಾಡಿದ್ದೇವೆ. ಲಾಕ್‌ʼಡೌನ್‌ ನಂಥ ಕಠಿಣ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲಾಗಿದೆ. ಯಾರಿಗೂ ಚಿಕಿತ್ಸೆ, ಔಷಧಿ, ಆಸ್ಪತ್ರೆ ಕೊರತೆ ಆಗದಂತೆ ನೋಡಿಕೊಳ್ಳಲಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಅನೇಕ ಪಾಠಗಳನ್ನು ಕಲಿತು ಜನರ ಜೀವ ಉಳಿಸುವುದರ ಜತೆಗೆ, ಅವರ ಜೀವನೋಪಾಯಕ್ಕೂ ಧಕ್ಕೆಯಾಗದಂತೆ ನೋಡಿಕೊಳ್ಳಲಾಗಿದೆ. ಮುಖ್ಯಮಂತ್ರಿಗಳ ಉತ್ತಮ ಮಾರ್ಗದರ್ಶನದಿಂದ ಇದೆಲ್ಲ ಸಾಧ್ಯವಾಗಿದೆ ಎಂದು ಉಪ ಮುಖ್ಯಮಂತ್ರಿ ಹೇಳಿದರು.

ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ:
1974ರ ಭೂ ಸುಧಾರಣಾ ಕಾಯ್ದೆಗೆ ಯಡಿಯೂರಪ್ಪ ಸರಕಾರದ ಅತಿ ಪ್ರಮುಖ ಸಾಧನೆಗಳಲ್ಲಿ ಒಂದು ಎಂದು ಹೇಳಿದ ಡಿಸಿಎಂ, ಇಡೀ ದೇಶದಲ್ಲೇ ಒಂದು ಕಾಯ್ದೆ ಇದ್ದರೆ, ನಮ್ಮ ರಾಜ್ಯದಲ್ಲಿಯೇ ಬೇರೆ ರೀತಿಯ ಕಾಯ್ದೆ ಇತ್ತು. ಇದು ಕೈಗಾರಿಕೆಯೂ ಸೇರಿದಂತೆ ಎಲ್ಲ ರೀತಿಯ ಅಭಿವೃದ್ಧಿಗೂ ಕಂಟಕವಾಗಿತ್ತು. ಹೀಗಾಗಿ ಅನೇಕ ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಆ ಕಾಯ್ದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿದ್ದು ಅತ್ಯಂತ ಮಹತ್ವದ ಸಾಧನೆ. ಇಂಥ ಕಾಯ್ದೆ ತರಬೇಕಾದರೆ ಅಪಾರ ಇಚ್ಚಾಶಕ್ತಿ ಬೇಕಾಗುತ್ತದೆ. ಅದನ್ನು ಯಡಿಯೂರಪ್ಪ ಅವರು ಸಾಧಿಸಿ ತೋರಿಸಿದ್ದಾರೆ ಎಂದು ಡಿಸಿಎಂ ಹೇಳಿದರು.

ಪದವಿ, ಸ್ನಾತಕೋತ್ತರ ಕೇಂದ್ರಕ್ಕೆ ಶಂಕುಸ್ಥಾಪನೆ:
ರಾಮನಗರ ಜಿಲ್ಲೆ ಮತ್ತು ಅದರ ಸುತ್ತಮುತ್ತಲ ಭಾಗದ ವಿದ್ಯಾರ್ಥಿಗಳ ಪಾಲಿನ ಬಹದಿನಗಳ ನಿರೀಕ್ಷೆಯಾಗಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಕ್ಕೆ ರಾಮನಗರದಲ್ಲಿ ಮುಖ್ಯಮಂತ್ರಿ ಪರವಾಗಿ ಉಪ ಮುಖ್ಯಮಂತ್ರಿ ಭೂಮಿಪೂಜೆ ನೆರವೇರಿಸಿದರು. 50 ಕೋಟಿ ರೂ. ವೆಚ್ಚದಲ್ಲಿ ಇಲ್ಲಿ ಸುಸಜ್ಜಿತ ಕ್ಯಾಂಪಸ್‌ ನಿರ್ಮಾಣ ಮಾಡಲಾಗುವುದು. ಒಂದು ವರ್ಷದೊಳಗೆ ಕಾಮಗಾರಿ ಪೂರ್ಣವಾಗಲಿದೆ ಎಂದು ಅವರು ಹೇಳಿದರು.

ಅಭಿವೃದ್ಧಿಯ ಮೂಲವೇ ಶಿಕ್ಷಣದಲ್ಲಿದೆ. ಹೀಗಾಗಿ ಈ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗುವುದು. ಇದರ ಜತೆಗೆ ಜಿಲ್ಲೆಯ ಎಲ್ಲ ಭಾಗಗಳಲ್ಲೂ ನನೆಗುದಿಗೆ ಬಿದ್ದಿರುವ ಶೈಕ್ಷಣಿಕ ಯೋಜನೆಗಳನ್ನು ಆದಷ್ಟು ಬೇಗ ಮುಗಿಸಲಾಗುವುದು ಹಾಗೂ ಅಗತ್ಯವಾದ ಹೊಸ ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಪ್ರಕಟಿಸಿದರು.

***