IMG 20211118 WA0028

ಕಾಂಗ್ರೆಸ್ ಅಧಿಕಾರದ ಕನಸು ಭಗ್ನ…!

POLATICAL STATE

*ಕಾಂಗ್ರೆಸ್ ಅಧಿಕಾರದ ಕನಸು ಭಗ್ನ*
ಮುಖ್ಯಮಂತ್ರಿ ‌ಬಸವರಾಜ ಬೊಮ್ಮಾಯಿ

ಕೊಪ್ಪಳ, ನವೆಂಬರ್ 18-
ನಮ್ಮ ಸರ್ಕಾರ ನೂರು ದಿನಗಳ ಯಶಸ್ವಿ ಆಡಳಿತ ನೀಡಿದೆ. ಇದರಿಂದ ಕಾಂಗ್ರೆಸ್ಸಿನ ಅಧಿಕಾರದ ಕನಸು ಭಗ್ನವಾಗಿದೆ. ಆದ್ದರಿಂದ ನಮ್ಮ ಮೇಲೆ ಕೆಸರೆರಚುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಸರು ಎರಚುವವರ ಕೈಗೇ ಮೊದಲು ಮೆತ್ತಿಕೊಳ್ಳುವುದೆಂದು ಅವರಿಗೆ ಅರಿವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು.
ಅವರು ಇಂದು ಕೊಪ್ಪಳದಲ್ಲಿ ಜನಸ್ವರಾಜ್ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಂಗ್ರೆಸ್ ನವರು ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಅವ್ಯವಹಾರ ಅವರ ಕಾಲದಲ್ಲಿಯೇ ನಡೆದಿದೆ. ಇದನ್ನು ಅವರ ಪಕ್ಷದ ರಾಷ್ಟ್ರೀಯ ವಕ್ತಾರರೇ ತಿಳಿಸಿದ್ದಾರೆ. 2016, 2017 ಹಾಗೂ 2018ರ ಪ್ರಕರಣಗಳನ್ನು ಅವರೇ ಉಲ್ಲೇಖಿಸುತ್ತಾರೆ. ಈ ಸಂದರ್ಭದಲ್ಲಿ ಅಧಿಕಾರದಲ್ಲಿದ್ದವರು ಯಾರು? ಆರೋಪಿಯನ್ನು ವಿಚಾರಣೆ ಮಾಡದೆ ಬಿಡುಗಡೆ ಮಾಡಿದವರು ಯಾರು? ಎಂದು ಪ್ರಶ್ನಿಸಿದರು.

ನಮ್ಮ ಸರ್ಕಾರ ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಿ, ವಿಚಾರಣೆ ನಡೆಸಿ, ಇನ್ನೂ ಮೂರು ಪ್ರಕರಣಗಳನ್ನು ದಾಖಲಿಸಿದೆ. ಕೇಂದ್ರ ಸರ್ಕಾರದ ತನಿಖಾ ಸಂಸ್ಥೆಗಳಿಂದ ತನಿಖೆ ನಡೆಸುತ್ತಿರುವುದು ನಮ್ಮ ಸರ್ಕಾರ. ಆರೋಪಿಯನ್ನು ಬಂಧಿಸಿದವರನ್ನೇ ನೀವು ಪ್ರಶ್ನೆ ಮಾಡುತ್ತಿದ್ದೀರಿ. ಹಾಗಾದರೆ, ಆತನನ್ನು ಬಿಡುಗಡೆ ಮಾಡಿದ ನಿಮಗೇನು ಮಾಡಬೇಕು ಎಂದು ಕಾಂಗ್ರೆಸ್ ನವರನ್ನು ಪ್ರಶ್ನಿಸಿದರು.

ನಮ್ಮ ನೀತಿ, ನಿಯತ್ತು ಸ್ಪಷ್ಟವಾಗಿದೆ. ತಪ್ಪು ಮಾಡಿದವರಿಗೆ ಯಾವುದೇ ಮುಲಾಜಿಲ್ಲದೆ ಶಿಕ್ಷೆ ವಿಧಿಸಲು ಕೆಲಸ ಮಾಡುತ್ತೇವೆ. ಆತನಿಗೆ ಯಾರ ಸ್ನೇಹವಿತ್ತು. ಹಗಲು ರಾತ್ರಿ ಅವನ ಜೊತೆಗೆ ಯಾರು ಇರುತ್ತಿದ್ದರು, ಎಲ್ಲವೂ ತನಿಖೆಯಿಂದ ಬಯಲಾಗುವುದು ಎಂದು ಬೊಮ್ಮಾಯಿ ಅವರು ಬಿಟ್ ಕಾಯಿನ್ ವಿಚಾರದಲ್ಲಿ ನಾವು ರಾಜಿ ಆಗುವುದಿಲ್ಲ ಎಂಬ ಸಂದೇಶ ನೀಡಿದರು.

ನಮ್ಮ ಲಕ್ಷ್ಯ, ರಾಜ್ಯದ ಅಭಿವೃದ್ಧಿ, ನೀರಾವರಿ ಒದಗಿಸುವುದು, ಬಡಜನರ ಸೇವೆ ಮಾಡುವುದು, ಜನಪರ ಕಾರ್ಯಕ್ರಮ ರೂಪಿಸುವುದು, ಉತ್ತರ ಕರ್ನಾಟಕದ ಅಭಿವೃದ್ಧಿ ಮಾಡುವುದು. ನನ್ನ ಹಾಗೂ ಪಕ್ಷದ ಉತ್ತರ ದಾಯಿತ್ವ, ನಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮಾಲೀಕರಿಗೆ ಇದೆ ಎಂದು ಅವರು ಸ್ಪಷ್ಟಪಡಿಸಿದರು.

ಸಮಾವೇಶದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್, ಸಚಿವರಾದ ಮುರುಗೇಶ ನಿರಾಣಿ, ಹಾಲಪ್ಪ ಆಚಾರ್, ಸಂಸದ ಪ್ರತಾಪ ಸಿಂಹ ಮತ್ತು ಇತರರು ಉಪಸ್ಥಿತರಿದ್ದರು.