IMG 20211227 WA0007

JD(S) : ಕಲಿಸುವ ಗುರುವು ಬೀದಿಯಲ್ಲಿ ನಿಂತಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವೇ…?

Genaral STATE

ಕಲಿಸುವ ಗುರುವು ಬೀದಿಯಲ್ಲಿ ನಿಂತಿದ್ದಾಗ ಭಾರತ ವಿಶ್ವಗುರು ಆಗಲು ಸಾಧ್ಯವೇ?
ಅತಿಥಿ ಉಪನ್ಯಾಸಕರ ಬಿಕ್ಕಟ್ಟು; ಸಿಎಂ ಕ್ರಮಕ್ಕೆ ಹೆಚ್.ಡಿ.ಕುಮಾರಸ್ವಾಮಿ ಆಗ್ರಹ


ಬೆಂಗಳೂರು: ಅತಿಥಿ ಉಪನ್ಯಾಸಕರಲ್ಲಿ 9,881 ಮಂದಿ ಉದ್ಯೋಗಕ್ಕೆ ಕುತ್ತು ಉಂಟಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಕ್ರಮ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು; ಮುಖ್ಯಮಂತ್ರಿಗಳು ಕೂಡಲೇ ಮಧ್ಯಪ್ರವೇಶಿಸಿ ಈ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಆಗ್ರಹಪಡಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳ ಟ್ವೀಟ್ʼನ ಪೂರ್ಣಪಾಠ ಇಲ್ಲಿದೆ;

ಸರಕಾರಕ್ಕೆ ಆರು ತಿಂಗಳು ತುಂಬಿದ ಮೇಲೆ ಸಾಧನೆಗಳ ಪುಸ್ತಕವೂ ಹೊರಬಂತು, ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್‌ʼನಲ್ಲಿ ಅದ್ಧೂರಿ ಕಾರ್ಯಕ್ರಮವೂ ನಡೆಯಿತು. ಬಣ್ಣಬಣ್ಣದ ಜಾಹೀರಾತುಗಳ ಮೂಲಕ ಮಾಡದ ಕೆಲಸಗಳ ಬಗ್ಗೆ ಕೊಚ್ಚಿಕೊಂಡಿದ್ದೂ ಆಯಿತು. ಸ್ವ-ಗುಣಗಾನ ಇನ್ನೂ ನಿಂತಿಲ್ಲ.

ಆದರೆ, 9,881 ಅತಿಥಿ ಉಪನ್ಯಾಸಕರು ಬೀದಿಗೆ ಬಿದ್ದಿದ್ದಾರೆ. ಒಳ್ಳೆಯದು ಮಾಡಿ ಎಂದು ಅಲವತ್ತುಕೊಂಡರೆ, ಏಕಾಎಕಿ ಅರ್ಧಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರನ್ನು ಮನೆಗೆ ಅಟ್ಟುವುದು ಯಾವ ಸೀಮೆಯ ಆಡಳಿತ?

ಭಾರತ ವಿಶ್ವಗುರು ಆಗಬೇಕು ಎನ್ನುತ್ತೀರಿ, ರಾಷ್ಟ್ರೀಯ ಶಿಕ್ಷಣದ ಮೂಲಕ ಭಾರತ ಜ್ಞಾನದ ಕಾಶಿ ಆಗಬೇಕು ಎನ್ನುತ್ತೀರಿ, ಕರ್ನಾಟಕವು ಭಾರತದ ಶೈಕ್ಷಣಿಕ ರಾಜಧಾನಿ ಆಗಬೇಕು ಎನ್ನುತ್ತೀರಿ. 9,881 ಅತಿಥಿ ಉಪನ್ಯಾಸಕರನ್ನು ಕಿತ್ತೊಗೆಯುವ ಮೂಲಕ ಇದನ್ನು ಸಾಧನೆ ಮಾಡಲಾಗುತ್ತದಾ?

ದೇಶ ಕಟ್ಟುವುದರಲ್ಲಿ ಶಿಕ್ಷಣವೇ ನಿರ್ಣಾಯಕ. ಆ ಶಿಕ್ಷಣ ವ್ಯವಸ್ಥೆಗೆ ಗುರುವೇ ನಾಯಕ. ಆದರೆ ಇಂದು ಕಲಿಸುವ ಗುರುವು ದಿಕ್ಕಿಲ್ಲದೆ ಬೀದಿಯಲ್ಲಿ ನಿಂತಿದ್ದಾನೆ. ಸರಕಾರ ಹೇಳುವುದು ಒಂದು, ಮಾಡುವುದು ಇನ್ನೊಂದು.

ಸರಕಾರಿ ಉನ್ನತ ಶಿಕ್ಷಣ ವ್ಯವಸ್ಥೆಯ ಕತ್ತು ಹಿಸುಕಿ, ವ್ಯವಸ್ಥಿತವಾಗಿ ಖಾಸಗಿ ವಲಯವನ್ನು ಬಲಪಡಿಸುವ, ಮಕ್ಕಳು-ಪೋಷಕರನ್ನು ಖಾಸಗಿಯವರ ಗುಲಾಮರನ್ನಾಗಿಸುವ ಹುನ್ನಾರ ಇದರ ಹಿಂದೆ ಇದೆಯಾ? ಎನ್ನುವ ಅನುಮಾನ ಬರುತ್ತಿದೆ.

ಅತಿಥಿ ಉಪನ್ಯಾಸಕರ ಆಯ್ಕೆಯಲ್ಲಿ ಶೈಕ್ಷಣಿಕ ಅರ್ಹತೆ, ಹಿರಿತನ ಆಧರಿಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಹಾಗಾದರೆ, ಇವೆರಡೂ ಅರ್ಹತೆಗಳು ಇಲ್ಲದಿದ್ದ ಇವರನ್ನು ಇಷ್ಟು ದಿನ ಅತ್ಯಂತ ಕನಿಷ್ಠ ಸಂಬಳಕ್ಕೆ ದುಡಿಸಿಕೊಂಡಿದ್ದು ಯಾಕೆ? ಅದಕ್ಕೆ ಕಾನೂನಿನಲ್ಲಿ ಅವಕಾಶ ಇತ್ತಾ?

ಆರೇ ತಿಂಗಳಲ್ಲಿ ಅಭಿವೃದ್ಧಿ ಹರಿಕಾರರಾಗುವುದು ಎಂದರೆ ಇದೇನಾ? ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಎಂದರೆ ನಿರುದ್ಯೋಗ ಸೃಷ್ಟಿಯಾ? ಸರಕಾರ ಇರುವುದು ಸಬೂಬು ಹೇಳುವುದಕ್ಕಲ್ಲ, ಕಾರಣ ಹೇಳಿ ಪಲಾಯನ ಮಾಡುವುದಕ್ಕಲ್ಲ. ನ್ಯಾಯ ಕೊಡುವ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಮ ವಹಿಸಬೇಕು ಎಂದು ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.