Mangalore Uniteds Samarth in action against Mysore Warriors scaled

ಕ್ರಿಕೆಟ್:ಮಹಾರಾಜ ಟ್ರೋಫಿಯ-ಮಂಗಳೂರಿಗೆ ಜಯ

SPORTS

ಮೈಸೂರು ಮಳೆಯಲ್ಲಿ ಮಂಗಳೂರಿಗೆ ಜಯ

ಮೈಸೂರು, ಆಗಸ್ಟ್‌, 08, 2022: ನಿರಂತರವಾಗಿ ಸುರಿದ ಮಳೆಯಿಂದಾಗಿ ಮೈಸೂರು ವಾರಿಯರ್ಸ್‌ ಮತ್ತು ಮಂಗಳೂರು ಯುನೈಟೆಡ್‌ ನಡುವಿನ ಮಹಾರಾಜ ಟ್ರೋಫಿಯ ಪಂದ್ಯವನ್ನು ವಿಜೆಡಿ ನಿಯಮಕ್ಕೆ ಅಳವಡಿಸಲಾಯಿತು. ಈ ನಿಯಮದಂತೆ ಮಂಗಳೂರು ಯುನೈಟೆಡ್‌ ತಂಡವು 8 ರನ್‌ನಿಂದ ಜಯ ಗಳಿಸಿದೆ.
ಮಳೆಯಿಂದಾಗಿ ಮೈಸೂರು ವಾರಿಯರ್ಸ್‌ ಇನ್ನಿಂಗ್ಸ್‌ 16.3 ಓವರ್‌ಗಳಿಗೆ ಸೀಮಿತಗೊಂಡಿತ್ತು. ಕರುಣ್‌ ನಾಯರ್‌ ಪಡೆ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿತ್ತು. ಮಳೆ ನಿಂತ ಬಳಿಕ ವಿಜೆಡಿ ನಿಯಮಾನುಸಾರ ಮಂಗಳೂರು ಯುನೈಟೆಡ್‌ಗೆ 14 ಓವರ್‌ಗಳಲ್ಲಿ 114 ರನ್‌ ಗುರಿ ನೀಡಲಾಯಿತು. ಮಂಗಳೂರು ಯುನೈಟೆಡ್‌ 7.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 63 ರನ್‌ ಗಳಿಸಿತ್ತು. ಮತ್ತೆ ಮಳೆ ಸುರಿದ ಕಾರಣ ಪಂದ್ಯವನ್ನು ವಿಜೆಡಿ ನಿಯಮಕ್ಕೆ ಅಳವಡಿಲಸಲಾಗಿ ಮಂಗಳೂರು ಯುನೈಟೆಡ್‌ 8 ರನ್‌ ಅಂತರದಲ್ಲಿ ಜಯ ಗಳಿಸಿತು. ಇದು ಮಂಗಳೂರಿಗೆ ಎರಡನೇ ಜಯ.
ಮಂಗಳೂರು ಯುನೈಟೆಡ್‌ ಪರ ನಾಯಕ ಸಮರ್ಥ ಆರ್‌. (31) ಮತ್ತು ಅಭಿನವ್‌ ಮನೋಹರ್‌ (14) ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದ್ದರು.
ಮಿಂಚಿದ ನಿಹಾಲ್‌ ಉಳ್ಳಾಲ್‌:
ಟಾಸ್‌ ಗೆದ್ದ ಮಂಗಳೂರು ಯುನೈಟೆಡ್‌ ಫೀಲ್ಡಿಂಗ್‌ ಆಯ್ದುಕೊಂಡಿತು. ನಾಯಕ ಕರುಣ್‌ ನಾಯರ್‌ ಕೇವಲ 5 ರನ್‌ ಗಳಿಸಿ ಪೆವಿಲಿಯನ್‌ಗೆ ಸಾಗಿದ್ದು ಮೈಸೂರು ವಾರಿಯರ್ಸ್‌ಗೆ ದೊಡ್ಡ ಆಘಾತವನ್ನೇ ಉಂಟು ಮಾಡಿತು. ಅನುಭವಿ ಬೌಲರ್‌ ಎಚ್‌.ಎಸ್‌. ಶರತ್‌ ಎಸೆತದಲ್ಲಿ ಅಮಿತ್‌ ವರ್ಮಾಗೆ ಕ್ಯಾಚಿತ್ತಾಗ ಮೈಸೂರು ವಾರಿಯರ್ಸ್‌ ಪಾಳಯದಲ್ಲಿ ಮೌನ ಆವರಿಸಿತ್ತು. ಅದೇ ರೀತಿಯಲ್ಲಿ ರೋಹಿತ್‌ ಕುಮಾರ್‌ ಎಸೆತದಲ್ಲಿ ನಾಗ ಭರತ್‌ ಕೇವಲ 9 ರನ್‌ ಗಳಿಸಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶಿಸಿದ ನಿಹಾಲ್‌ ಉಳ್ಳಾಲ್‌, 44 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಕೇವಲ 28 ಎಸೆತಗಳನ್ನು ಎದುರಿಸಿದ ನಿಹಾಲ್‌, 4 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಆದರೆ ಮೆಕ್‌ನೈಲ್‌ ನೊರೊನ್ಹಾ ಎಸೆತದಲ್ಲಿ ಅಭಿನವ್‌ ಮನೋಹರ್‌ಗೆ ಕ್ಯಾಚಿತ್ತಾಗ ತಂಡದ ಮೊತ್ತ 74. ಮೊದಲ ಪಂದ್ಯದಲ್ಲಿ ಅರ್ಧ ಶತಕ ಗಳಿಸಿ ಜಯದ ರೂವಾರಿ ಎನಿಸಿದ್ದ ಶ್ರೇಯಸ್‌ ಗೋಪಾಲ್‌ ಅವರ ಆಟ ಮಂಗಳೂರು ಯುನೈಟೆಡ್‌ ಮುಂದೆ ನಡೆಯಲಿಲ್ಲ. ಅವರು ಕೂಡ 5 ರನ್‌ ಗಳಿಸಿ ರೋಹಿತ್‌ ಕುಮಾರ್‌ ಎಸೆತದಲ್ಲಿ ಅಭಿನವ್‌ ಮನೋಹರ್‌ಗೆ ಕ್ಯಾಚಿತ್ತಾಗ ಮೈಸೂರು ವಾರಿಯರ್ಸ್‌ನ ಬೃಹತ್‌ ಮೊತ್ತದ ಕನಸು ದೂರವಾಗಿತ್ತು.
ಮಳೆಯಿಂದಾಗಿ ಪಂದ್ಯಕ್ಕೆ ಅಡ್ಡಿಯಾದ ಕಾರಣ ಮೈಸೂರಿನ ಇನ್ನಿಂಗ್ಸ್‌ 16.3 ಓವರ್‌ಗೆ ಕೊನೆಗೊಂಡಿತು. ಮೈಸೂರು ವಾರಿಯರ್ಸ್‌ 5 ವಿಕೆಟ್‌ ನಷ್ಟಕ್ಕೆ 112 ರನ್‌ ಗಳಿಸಿತ್ತು. ವಿಜೆಡಿ ನಿಯಮಾನುಸಾರ ಮಂಗಳೂರು ಯುನೈಟೆಡ್‌ಗೆ 14 ಓವರ್‌ಗಳಲ್ಲಿ 114 ರನ್‌ಗಳ ಗುರಿ ನೀಡಲಾಯಿತು.

ಸಂಕ್ಷಿಪ್ತ ಸ್ಕೋರ್‌:
ಮೈಸೂರು ವಾರಿಯರ್ಸ್‌: 16.3 ಓವರ್‌ಗಳಲ್ಲಿ 5 ವಿಕೆಟ್‌ಗೆ 112 ರನ್‌. (ನಿಹಾಲ್‌ ಉಳ್ಳಾಲ್‌ 44, ಪವನ್‌ ದೇಶಪಾಂಡೆ 14, ಶಿವರಾಜ್‌ 19, ಶುಭಾಂಗ್‌ ಹೆಗ್ಡೆ 10 ಶರತ್‌ 12ಕ್ಕೆ 1. ರೋಹಿತ್‌ ಕುಮಾರ್‌ 32ಕ್ಕೆ 2.
ಮಂಗಳೂರು ಯುನೈಟೆಡ್‌: 7.5 ಓವರ್‌ಗಳಲ್ಲಿ 2 ವಿಕೆಟ್‌ಗೆ 62ರನ್‌ . (ಸಮರ್ಥ್‌ ಆರ್‌. 31, ಅಭಿನವ್‌ ಮನೋಹರ್‌ 14, ಶುಭಾಂಗ್‌ ಹೆಗ್ಡೆ 12ಕ್ಕೆ 1.)