IMG 20221013 WA0007

Tumkur: ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ…!

DISTRICT NEWS ತುಮಕೂರು

ಪತ್ರಕರ್ತರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ

ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವೈದ್ಯರ ನಡೆ ಖಂಡಿಸಿ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಎದುರು ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಕೊರಟಗೆರೆ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಅಪಘಾತಕ್ಕೊಳಗಾದ ರೋಗಿಯೊಬ್ಬರಿಗೆ ಚಿಕಿತ್ಸೆ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಕಾರಣದ ಸಂಬಂಧ ಪತ್ರಕರ್ತರು ಆಸ್ಪತ್ರೆಗೆ ತೆರಳಿ ವರದಿ ಮಾಡಲು ವಿಡಿಯೋ ಮಾಡುತ್ತಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರಾದ ಡಾ. ನವೀನ್ ಎಂಬುವರು ವರದಿಗಾರರ ಮೇಲೆ ಹಲ್ಲೆ ನಡೆಸಿ ನೈಜ ಪತ್ರಕರ್ತರು ಕಾರ್ಯನಿರ್ವಹಿಸಲು ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ ಎಂದು ಆರೋಪಿಸಿ ಹಾಗೂ ಪತ್ರಕರ್ತರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸಿದ ವೈದ್ಯರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾರ್ಯನಿರ್ದ ಪತ್ರಕರ್ತರ ಸಂಘದ ವತಿಯಿಂದ ಧರಣಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಹಾಗೂ ಡಿ.ಹೆಚ್. ಓ ಗೆ ಮನವಿ ಸಲ್ಲಿಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ ಪತ್ರಕರ್ತರು ವೈದ್ಯ ಡಾ. ನವೀನ್ ಹಾಗೂ ಸುಳ್ಳು ಪ್ರಕರಣ ದಾಖಲಿಸಿದ ಪಿ.ಎಸ್.ಐ. ನಾಗರಾಜು ಅಮಾನತ್ತು ಆಗಬೇಕು ಹಾಗೂ ಅವರನ್ನು ಬಂಧಿಸಬೇಕೆಂದು ಆಗ್ರಹಿಸಿದರು.

IMG 20221013 WA0006

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ. ಪುರುಷೋತ್ತಮ್ ಅಪಘಾತಕ್ಕೊಳಗಾಗಿ ಸರಿಯಾಗಿ ಚಿಕಿತ್ಸೆ ಸಿಗದೆ ವ್ಯಕ್ತಿಗಳು ಪರದಾಡುತ್ತಿದ್ದ ವೇಳೆ ಸರಿಯಾಗಿ ಚಿಕಿತ್ಸೆ ನೀಡಿದ ಕೊರಟಗೆರೆ ಪತ್ರಕರ್ತರ ಮೇಲೆ ಡಾಕ್ಟರ್ ನವೀನ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಆಸ್ಪತ್ರೆಯಿಂದ ಹೊರದಬ್ಬಿರುತ್ತಾರೆ. ಇನ್ನೂ ಮುಂದುವರೆದು ಪತ್ರಕರ್ತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸಿ ಪತ್ರಕರ್ತರು ನಿರ್ಭೀತಿಯಿಂದ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿರುತ್ತಾರೆ. ಆದ್ದರಿಂದ ಪತ್ರಿಕಾ ಸ್ವಾತಂತ್ರ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯ ಪ್ರವೇಶಿಸಿ ಕಾರ್ಯನಿರತ ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ವೈದ್ಯರಾದ ಡಾಕ್ಟರ್ ನವೀನ್ ಹಾಗೂ ಸಿಬ್ಬಂದಿ ವರ್ಗ ಮತ್ತು ಪ್ರಕರಣದ ಬಗ್ಗೆ ಯಾವುದೇ ವಿಚಾರಣೆ ನಡೆಸದೆ ಎಫ್ಐಆರ್ ದಾಖಲಿಸಿದ ಪಿಎಸ್ಐ ನಾಗರಾಜುರವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಇದೇ ವೇಳೆ ಮಾತನಾಡಿದ ಪ್ರಗತಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕ ಜಿ.ಗುರುಪ್ರಸಾದ್ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಪತ್ರಿಕಾ ರಂಗವನ್ನು ದಮನ ಮಾಡುವ ನೀತಿಯನ್ನು ಸರ್ಕಾರಿ ಅಧಿಕಾರಿಗಳು ಅನುಸರಿಸುತ್ತಿದ್ದು ಪ್ರಜಾಪ್ರಭುತ್ವವನ್ನು ರಕ್ಷಿಸುವ ಪತ್ರಕರ್ತರಿಗೆ ಈ ರೀತಿಯಾದ ಸ್ಥಿತಿ ಒದಗಿರುವುದು ದುರದೃಷ್ಟಕರ ಪತ್ರಕರ್ತರಿಗೆ ರಕ್ಷಣೆ ನೀಡಿ ಎಂದು ಕೇಳುವ ಸ್ಥಿತಿ ಉಂಟಾಗಿರುವುದು ಅತ್ಯಂತ ಬೇಸರದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ತುಮಕೂರು ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಟಿ ಇ ರಘುರಾಮ್ ಮಾತನಾಡಿ ಪತ್ರಕರ್ತರ ಮೇಲೆ ಹಲ್ಲೆ ನಡೆಸಿರುವ ಡಾ.ನವೀನ್ ಬಂಧಿಸಿ ಅಮಾನತ್ ನಲ್ಲಿ ಇಡಬೇಕೆಂದು ಹಾಗೂ ಪಿಎಸ್ಐ ನಾಗರಾಜ್ ಅಮಾನತ್ ಮಾಡಬೇಕೆಂದು ಒತ್ತಾಯಿಸಿದರು.

ಇನ್ನು ಇದೆ ವೇಳೆ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಈ ಬಗ್ಗೆ ಪರಿಶೀಲನೆ ನಡೆಸಿ ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ತಿಳಿಸಿದರು.

ಈ ಹೋರಾಟ ಸಂದರ್ಭದಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ, ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಎನ್.ಡಿ. ರಂಗರಾಜು, ಹಿರಿಯ ಪತ್ರಕರ್ತರಾದ ಪುರುಷೋತ್ತಮ್, ಸಿ ಎನ್ ರಾಜು, ರಾಷ್ಟ್ರೀಯ ಮಂಡಳಿ ಸದಸ್ಯರಾದ ಶಾಂತರಾಜು, ರಾಜ್ಯ ಸಮಿತಿ ಸದಸ್ಯರಾದ ಸಿದ್ದಲಿಂಗ ಸ್ವಾಮಿ,ಸಂಘದ ಜಿಲ್ಲಾ ನಿರ್ದೇಶಕರುಗಳಾದ ತೋ.ಸಿ.ಕೃಷ್ಣಮೂರ್ತಿ, ಪರಮೇಶ್, ಮಲ್ಲಿಕಾರ್ಜುನ ಸ್ವಾಮಿ, ಮಂಜುನಾಥ್ ನಾಯಕ್, ಯಶಸ್. ಕೆ. ಪದ್ಮನಾಥ್, ಚಿಕ್ಕಣ್ಣ, ಬೈರೇಶ್, ಪ್ರಗತಿ ನಾಗರಾಜು, ಸಿ ಜಯಣ್ಣ, ಜಿಲ್ಲಾ ಕಾರ್ಯದರ್ಶಿಗಳಾದ ಸಿರಾ ದಶರಥ,ಸತೀಶ್ ಹಾರೋಗೆರೆ, ಹಿರಿಯ ಪತ್ರಕರ್ತ ಕುಚ್ಚಂಗಿ ಪ್ರಸನ್ನ , ತುರುವೇಕೆರೆ ತಾಲೂಕು ಅಧ್ಯಕ್ಷರಾದ,ಮಲ್ಲಿಕಾರ್ಜುನ್ ದುಂಡ ಕುಣಿಗಲ್ ತಾಲೂಕು ಅಧ್ಯಕ್ಷರಾದ ರಂಗನಾಥ್ , ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷರಾದ ಯೋಗೀಶ್, ಸಿರಾ ತಾಲೂಕು ಘಟಕದ ಅಧ್ಯಕ್ಷರಾದ ಜಯಪಾಲ್ , ಮಧುಗಿರಿ ತಾಲೂಕಿನ ಪದಾಧಿಕಾರಿಗಳಾದ ಕಣಿಮಯ್ಯ, ಪತ್ರಕರ್ತರಾದ ಹರೀಶ್ ಆಚಾರ್ಯ, ಟಿವಿ9 ಮಹೇಶ್,ರಘು, ಪತ್ರಿಕಾ ಛಾಯಾಗ್ರಕರಾದ ರೇಣುಕಾ ಪ್ರಸಾದ್, ಸುರೇಶ್, ಜೆಪಿ, ನೃಪತುಂಗ, ಮಂಜುನಾಥ್ ಗೌಡ, ಪ್ರಗತಿ ಗುರುಪ್ರಸಾದ್, ಜಟ್ಟಿ ಅಗ್ರಹಾರ ನಾಗರಾಜು,ಹಾಗೂ ವಿಶೇಷವಾಗಿ ಕೊರಟಗೆರೆ, ತಾಲೂಕು ಘಟಕದ ಎಲ್ಲಾ ಪತ್ರಕರ್ತ ಬಂಧುಗಳು,ತಾಲೂಕು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರುಗಳು, ತುಮಕೂರು ನಗರದ ಎಲ್ಲಾ ಪತ್ರಕರ್ತರು ಹಾಗೂ ಎಲೆಕ್ಟ್ರಾನಿಕ್ಸ್ ಮಾಧ್ಯಮದವರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ. ಲಕ್ಷ್ಮಿಪತಿ ದೊಡ್ಡ ಯಲ್ಕೂರು