IMG 20230214 WA0054

ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕ್ರಮ…?

Genaral STATE

ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕ್ರಮ, ಬಜೆಟ್‌ನಲ್ಲೇ ಘೋಷಿಸಲು ಪ್ರಾಮಾಣಿಕ ಪ್ರಯತ್ನ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌

ಆಶಾ ಕಾರ್ಯಕರ್ತೆಯರ ಎಲ್ಲಾ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಕ್ರಮ

ಬೆಂಗಳೂರು, ಫೆಬ್ರವರಿ 14, ಮಂಗಳವಾರ

ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಎಷ್ಟು ಹೆಚ್ಚಿಸಬೇಕು ಎಂದು ತೀರ್ಮಾನ ಮಾಡಿ ಬಜೆಟ್‌ನಲ್ಲೇ ಘೋಷಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.

IMG 20230214 WA0059

ಬೆಂಗಳೂರಿನ ಶಿಕ್ಷಕರ ಸದನದಲ್ಲಿ, ಆಶಾ ಕಾರ್ಯಕರ್ತೆಯರ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಂಡ ಸಚಿವ ಡಾ.ಕೆ.ಸುಧಾಕರ್, ಸಂಘದ ಮನವಿ ಸ್ವೀಕರಿಸಿ ಮಾತನಾಡಿದರು.

ನಾನು ಆರೋಗ್ಯ ಸಚಿವನಾದ ಬಳಿಕ ಪ್ರತಿ ವರ್ಷದಂತೆ ಎರಡು ಬಾರಿ ಆಶಾ ಕಾರ್ಯಕರ್ತೆಯರ ಗೌರವಧನವನ್ನು 1,000 ರೂ. ಹೆಚ್ಚಿಸಲು ಪಾತ್ರ ವಹಿಸಿದ್ದೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಂಡಿಸಿದ ತಮ್ಮ ಮೊದಲ ಬಜೆಟ್‌ನಲ್ಲಿ ಗೌರವಧನವನ್ನು 1,000 ರೂ. ಹೆಚ್ಚಿಸಿದ್ದಾರೆ. ಈ ಸಲ ಕೂಡ ಆಶಾ ಕಾರ್ಯಕರ್ತೆಯರ ಕೆಲ ಮನವಿಗಳನ್ನು ನೀಡಿದ್ದು, ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಲಾಗುವುದು ಎಂದರು.

ಆಶಾ ಕಾರ್ಯಕರ್ತೆಯರ ಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತೇನೆ. ಇತ್ತೀಚೆಗೆ ಬಜೆಟ್‌ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಯಿತು. ಈ ಚರ್ಚೆಯ ವೇಳೆ, ಆಶಾ ಕಾರ್ಯಕರ್ತೆಯರಿಗೆ ಗೌರವಧನವನ್ನು 2,000 ರೂ. ಹೆಚ್ಚಿಸಲು ಮನವಿ ಮಾಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ಮುಖ್ಯಮಂತ್ರಿಯವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.

ಆಶಾ ಕಾರ್ಯಕರ್ತೆಯರಿಗೆ 5 ಕೋಟಿ ರೂ. ಮೊತ್ತದ ಕ್ಷೇಮಾಭಿವೃದ್ಧಿ ನಿಧಿ ಇರಿಸಿ, ಕಾರ್ಯಕರ್ತೆಯರ ಆರೋಗ್ಯ ರಕ್ಷಣೆಗೆ ನೀಡಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ತಾಂತ್ರಿಕ ನ್ಯೂನತೆ ನಿವಾರಿಸಿ, ಸರಿಯಾದ ಸಮಯಕ್ಕೆ ಗೌರವಧನ ನೀಡಲು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದರು.

IMG 20230214 WA0055

ಕೋವಿಡ್‌ ಸಮಯದಲ್ಲಿ ಅನೇಕರು ವರ್ಕ್‌ ಫ್ರಂ ಹೋಮ್‌ ಮಾಡಿದ್ದಾರೆ. ಆದರೆ ಆಶಾ ಕಾರ್ಯಕರ್ತೆಯರು ವರ್ಕ್‌ ಫ್ರಂ ಸ್ಟ್ರೀಟ್‌ ಮಾಡಿದ್ದರು. 10 ವರ್ಷಗಳ ಕಾಲ ಸೇವೆ ಸಲ್ಲಿಸಿದವರು ಅಥವಾ 60 ವಯಸ್ಸಿನ ಬಳಿಕ ನಿವೃತ್ತರಾಗಲು ಬಯಸಿದರೆ, ಅವರಿಗೆ ಇಡಿಗಂಟು ನೀಡಲು ಕ್ರಮ ವಹಿಸಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಚರ್ಚಿಸಲಾಗುವುದು. ಕೇವಲ ಮಾತಿನಲ್ಲಲ್ಲ, ಕೃತಿಯ ಮೂಲಕ ಕೊಡುಗೆ ನೀಡಲಾಗುವುದು ಎಂದರು.

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಆರೋಗ್ಯ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಯ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವವಾದದ್ದು. ಅಪೌಷ್ಟಿಕತೆ ನಿವಾರಿಸುವ ಪೋಷಣ್‌ ಅಭಿಯಾನ, ಇಂದ್ರಧನುಷ್‌ ಲಸಿಕಾಕರಣ ಮೊದಲಾದ ಕಾರ್ಯಕ್ರಮಗಳನ್ನು ಆಶಾ ಕಾರ್ಯಕರ್ತೆಯರಿಂದ ಯಶಸ್ವಿಯಾಗುತ್ತಿದೆ. ಕೋವಿಡ್‌ ಲಸಿಕಾಕರಣದಲ್ಲಿ, 42 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಲಸಿಕೆ ನೀಡಲು ಶ್ರಮಿಸಿದ್ದರು. ಕೋವಿಡ್‌ ಲಸಿಕೆ ಅಭಿಯಾನದಲ್ಲಿ ಮೊದಲ ಮತ್ತು ಎರಡನೇ ಡೋಸ್‌ ಶೇ.100 ರಷ್ಟು ಆಗಿದ್ದು, ಇದರಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರವೇ ಪ್ರಮುಖವಾಗಿದೆ ಎಂದರು.

ಆಶಾ ಕಾರ್ಯಕರ್ತೆಯರ ಸೇವೆಯನ್ನು ಮೆಚ್ಚಿ ವಿಶ್ವ ಆರೋಗ್ಯ ಸಂಸ್ಥೆಯು ʼಜಾಗತಿಕ ನಾಯಕರುʼ ಎಂದು ಕರೆದಿದೆ. ಆಶಾ ಎಂದರೆ ಭರವಸೆ ಎಂದರ್ಥ. ಇಡೀ ವಿಶ್ವವೇ ನಂಬಿಕೆ, ಭರವಸೆಯ ಮೇಲೆ ನಿಂತಿದೆ. ಸರ್ಕಾರಕ್ಕೆ ಆಶಾ ಕಾರ್ಯಕರ್ತೆಯರ ಮೇಲೆ ಸಂಪೂರ್ಣ ಭರವಸೆ ಇದ್ದು, ಯಾವುದೇ ಆಶಾ ಕಾರ್ಯಕರ್ತೆಯರು ಅದನ್ನು ಹುಸಿ ಮಾಡಲಿಲ್ಲ. ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದಾರೆ ಎಂದರು.

ಕೋವಿಡ್‌ ಕಾಲದಲ್ಲಿ ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರಿಂದಾಗಿ ರಾಜ್ಯಕ್ಕೆ ಹೆಲ್ತ್‌ಗಿರಿ ಪ್ರಶಸ್ತಿ ದೊರೆತಿದೆ. ರಾಜ್ಯದಲ್ಲೀಗ ಸಾಂಸ್ಥಿಕ ಹೆರಿಗೆ ಪ್ರಮಾಣ ಶೇ.90 ಕ್ಕೂ ಹೆಚ್ಚಿದೆ. ಆದರೆ ಇದು ಶೇ.100 ಕ್ಕೆ ತಲುಪಬೇಕು. ತಾಯಂದಿರು ಹಾಗೂ ಶಿಶುಗಳ ಮರಣ ಪ್ರಮಾಣವನ್ನು ಇಳಿಕೆ ಮಾಡಬೇಕು. ಈ ವಿಚಾರದಲ್ಲಿ ಇನ್ನಷ್ಟು ಗುರಿ ಮುಟ್ಟಬೇಕಿದೆ. ನಾಗರಿಕ ಸಮಾಜದ ಅತಿ ದೊಡ್ಡ ಶತ್ರುವೇ ಅಪೌಷ್ಟಿಕತೆ. ಇದಕ್ಕೆ ಕೇವಲ ಬಡತನವೊಂದೇ ಕಾರಣವಲ್ಲ. ಎಲ್ಲಾ ಬಗೆಯ ಆಯಾಮಗಳಿಂದ ಇದನ್ನು ನೋಡಬೇಕಿದೆ ಎಂದರು.