IMG 20240407 WA0018 scaled

Karnataka : ಮೈ ಟ್ಯಾಕ್ಸ್ ಮೈ ರೈಟ್ – ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು….?

Genaral National - ಕನ್ನಡ STATE

ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು….?

ನಿರ್ಮಲಾ ಸೀತಾರಾಮನ್ ಪ್ರಶ್ನೆ

ಬೆಂಗಳೂರು: ‘ಮೈ ಟ್ಯಾಕ್ಸ್ ಮೈ ರೈಟ್’ ಎಂದು ಬೆಂಗಳೂರಿಗರು ಬೆಂಗಳೂರಿನ ಅಭಿವೃದ್ಧಿಗೆ ತೆರಿಗೆ ಹಣ ವಾಪಸ್ ಕೇಳಲಾರಂಭಿಸಿದರೆ ಕಲ್ಯಾಣ ಕರ್ನಾಟಕದ ಪರಿಸ್ಥಿತಿ ಏನಾದೀತು? ಎಂದು ಕೇಂದ್ರ ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಪ್ರಶ್ನಿಸಿದರು.

ಬಿಜೆಪಿ ರಾಜ್ಯ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ “ಜಿ.ಎಂ. ರಿಜಾಯ್ಸ್”ನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು. ನಾವು ದೇಶದ ಹಿತದಲ್ಲಿ ತೆರಿಗೆ ಕಟ್ಟುತ್ತೇವೆ ಎಂಬುದನ್ನು ನೆನಪಿನಲ್ಲಿ ಇಡಬೇಕು. ಮೈ ಟ್ಯಾಕ್ಸ್ ಮೈ ರೈಟ್ ಕುರಿತು ತಪ್ಪು ಅರ್ಥದಲ್ಲಿ ಮಾತನಾಡಿದರೆ, ಅದು ದೇಶದ ಹಿತ ಆಗಲಾರದು ಎಂದು ವಿಶ್ಲೇಷಿಸಿದರು. ಜಿಡಿಪಿಗೆ ಹೋಲಿಸಿದರೆ ನಮ್ಮ ದೇಶದ ವಿದೇಶಿ ಸಾಲ ಪ್ರಮಾಣ ಕಡಿಮೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.

ಬರ ಸಂಬಂಧಿಸಿದ ವಿಚಾರ ಕೃಷಿ ಇಲಾಖೆಯಡಿ ಬರುತ್ತದೆ. ಕರ್ನಾಟಕ, ಆಂಧ್ರ, ಮಹಾರಾಷ್ಟ್ರದ ಬರಗಾಲ ಪರಿಸ್ಥಿತಿ ಸೇರಿ ವಿವಿಧ ಪ್ರಕೃತಿ ವಿಕೋಪಕ್ಕೆ ವಿಚಾರಗಳಿಗೆ ಸಂಬಂಧಿಸಿ ಉನ್ನತಾಧಿಕಾರ ಸಮಿತಿ ಸಭೆ ನಡೆಯಬೇಕಿದೆ. ಆದರೆ, ಅದಕ್ಕಾಗಿ ಚುನಾವಣಾ ಆಯೋಗದ ಅನುಮತಿ ಬೇಕಿದೆ ಎಂದೂ ತಿಳಿಸಿದರು. 223 ತಾಲ್ಲೂಕುಗಳಲ್ಲಿ ಬರಗಾಲ ಇದೆ. ತ್ವರಿತವಾಗಿ ಹಣ ಕೊಟ್ಟಿಲ್ಲವೇಕೆ ಎಂಬ ಪ್ರಶ್ನೆಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಿಲ್ಲ ಎಂದರು

ರಾಜ್ಯ ಸರಕಾರವು ಬರ ಪರಿಹಾರವನ್ನು ಕೂಡಲೇ ಕೊಡಬೇಕಿತ್ತು. ಎನ್‍ಡಿಆರ್‍ಎಫ್‍ನಡಿ ಪರಿಹಾರ, ವಿಶೇಷ ಪರಿಹಾರ, ಮಧ್ಯಂತರ ಪರಿಹಾರಕ್ಕೆ ಅವಕಾಶವಿಲ್ಲ. ಪರಿಹಾರ ಕೊಡಲು ಎಸ್‍ಡಿಆರ್‍ಎಫ್‍ನಡಿ ಹಣ ಇರುತ್ತದೆ. ಎಸ್‍ಡಿಆರ್‍ಎಫ್‍ನಡಿ 697 ಕೋಟಿ ಹಣ ಅನುದಾನವಾಗಿ ಕೇಂದ್ರದ ಭಾಗ ಇದ್ದು, ಅದನ್ನು ಮುಂಚಿತವಾಗಿಯೇ ಕೊಡಲಾಗಿದೆ ಎಂದು ವಿವರಿಸಿದರು.

IMG 20240407 WA0019
ಕೇಂದ್ರ ತಂಡ ಬಂದ ಬಳಿಕ ಸಮೀಕ್ಷೆ ನಡೆಸಿ ವರದಿ ಕೊಟ್ಟಿದೆ. ಕರ್ನಾಟಕದ ಪ್ರತಿಯೊಂದು ಕೋರಿಕೆಯನ್ನೂ ಮೋದಿಯವರು ಮನ್ನಿಸಿದ್ದಾರೆ. ಆದ್ದರಿಂದ ಈ ವಿಚಾರ ಬಿಜೆಪಿ ವಿರುದ್ಧ ಜನಮತಕ್ಕೆ ಕಾರಣ ಆಗಲಾರದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬೆಳೆ ವಿಮೆ ಈಗಾಗಲೇ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಹಣಕಾಸು ಆಯೋಗವು ಹೇಳದಿದ್ದರೂ 50 ವರ್ಷಗಳ 8,035 ಕೋಟಿಯಷ್ಟು ಬಡ್ಡಿರಹಿತ ಅನುದಾನವನ್ನು ನೀಡಿದೆ. ಅದು ವಿಶೇಷ ಅನುದಾನ ಎಂದು ವಿವರ ನೀಡಿದರು.

ಗ್ಯಾರಂಟಿಗಳಿಗೆ 60 ಸಾವಿರ ಕೋಟಿ ಬೇಕು. ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದರು. ಅಭಿವೃದ್ಧಿ ಕಾರ್ಯ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದನ್ನು ನೆನಪಿಸಿದರು.

ಮುಖ್ಯಮಂತ್ರಿಗಳ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು 58 ಸಾವಿರ ಕೋಟಿಯನ್ನು ಗ್ಯಾರಂಟಿಗಳಿಗಾಗಿ ವ್ಯಯಿಸಿದ್ದಾಗಿ ಹೇಳಿ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿದ್ದನ್ನು ತಿಳಿಸಿದ್ದರು.

ಹಿಮಾಚಲ ಪ್ರದೇಶ ಮತ್ತಿತರ ಕಡೆ ಕಾಂಗ್ರೆಸ್ಸಿನವರು ಗ್ಯಾರಂಟಿ ಭರವಸೆ ನೀಡಿದ್ದರು. ಹಿಮಾಚಲ ಪ್ರದೇಶದಲ್ಲಿ ಒಪಿಎಸ್- ಎನ್‍ಪಿಎಸ್ ಕುರಿತ ಸಂವಾದದ ವೇಳೆ ಒಪಿಎಸ್ ಜಾರಿ ತರುವುದಾಗಿ ಹೇಳಿದ್ದರು. ಅದರೆ, ಅದು ಈಡೇರಲಿಲ್ಲ ಎಂದು ಟೀಕಿಸಿದರು. ಪೂರ್ವತಯಾರಿ ಇಲ್ಲದೆ ಇಂಥ ಘೋಷಣೆ ಮಾಡಿದ್ದೀರಾ ಎಂದು ಕೇಳಿದರು. ಕಾಂಗ್ರೆಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದು ಎಂದು ವಿಶ್ಲೇಷಿಸಿದರು.IMG 20240407 WA0021

ಬೆಂಗಳೂರಿನ ಸಮಸ್ಯೆ ಆತಂಕಕಾರಿ: ಬೆಂಗಳೂರು ನೀರಿನ ಸಮಸ್ಯೆ ಎದುರಿಸುತ್ತಿದೆ. ಇಲ್ಲಿ ಕಾಲರಾ ಹರಡುತ್ತಿದೆ. ಇದು ಕಳವಳಕಾರಿ ಎಂದು ತಿಳಿಸಿದರು. ಕಲುಷಿತ ನೀರು ಜನರನ್ನು ತಲುಪುತ್ತಿದೆ. ಇದು ಆತಂಕಕಾರಿ ಎಂದು ಹೇಳಿದರು.

ಮೇ 2023ರಲ್ಲಿ ವಿವಿಧ ನಿಗಮಗಳ ಅಡಿಯಲ್ಲಿ ನೀರಿಗೆ ಸಂಬಂಧಿಸಿದ 20 ಸಾವಿರ ಕೋಟಿಯ ಯೋಜನೆಗಳನ್ನು ಆರಂಭಿಸಿದ್ದು, ಅವು ಸ್ಥಗಿತವಾಗಿವೆ. ಮನೆಮನೆಗೆ ನಳ್ಳಿನೀರು ನೀಡುವ ಜಲಜೀವನ್ ಮಿಷನ್ ಯೋಜನೆಯೂ ಸ್ಥಗಿತವಾಗಿದೆ.

ಕರ್ನಾಟಕ ಸರಕಾರವು ನಿರ್ಮಾಣ ಹಂತದ ಕಾರ್ಮಿಕರ ಸ್ಕಾಲರ್‍ಶಿಪ್ ಕೂಡ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಭಯೋತ್ಪಾದನೆ ಚಟುವಟಿಕೆ ಹೆಚ್ಚಾಗಿದೆ. ಪಾಕಿಸ್ತಾನ ಪರ ಘೋಷಣೆ ಕೂಗಲಾಗುತ್ತಿದೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. 2008ರಲ್ಲಿ ನಡೆದ ಬಾಂಬ್ ಸ್ಫೋಟದ ವೇಳೆ ಕಾಂಗ್ರೆಸ್‍ನಿಂದ ಹಿಂದೂ ಭಯೋತ್ಪಾದನೆ ಎಂಬ ಹೇಳಿಕೆ ಬಂದಿತ್ತು. ಈ ಬಾರಿ ಸಾಕ್ಷಿಯ ಹೆಸರನ್ನು ಬಹಿರಂಗಪಡಿಸಿದ್ದಾರೆ. ಇದು ಅತ್ಯಂತ ಆತಂಕಕಾರಿ ಎಂದು ತಿಳಿಸಿದರು. ಸಾಕ್ಷಿಯ ಬದುಕಿಗೆ ಇದು ಸಮಸ್ಯೆ ತರಬಲ್ಲದು ಎಂದು ನೋವಿನಿಂದ ನುಡಿದರು. ಕಾಂಗ್ರೆಸ್ ಪಕ್ಷದ ತುಷ್ಟೀಕರಣ ನೀತಿಯನ್ನು ಅವರು ಖಂಡಿಸಿದರು.

ಬೆಂಗಳೂರಿನಲ್ಲಿ ಜಾನುವಾರುಗಳ ಆಸ್ಪತ್ರೆಗೆ ದಾನವಾಗಿ ಕೊಟ್ಟ ಜಾಗವನ್ನು ಅಲ್ಪಸಂಖ್ಯಾತರಿಗೆ ಕೊಡಲು ಮುಂದಾದುದನ್ನು ಅವರು ಟೀಕಿಸಿದರು. ಮಹಿಳಾ ಸುರಕ್ಷತೆ ಬಗ್ಗೆ ಕಳವಳ ಸೂಚಿಸಿದ ಅವರು, ಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಹಿಳಾ ವಿರೋಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಬೆಳಗಾವಿಯಲ್ಲಿ ಮಹಿಳೆ ಮೇಲಿನ ದೌರ್ಜನ್ಯದ ಕುರಿತು ಹೈಕೋರ್ಟ್ ಕಳವಳ ವ್ಯಕ್ತಪಡಿಸಿದ್ದನ್ನು ಗಮನಕ್ಕೆ ತಂದರು. ಅತ್ಯಾಚಾರ ಪ್ರಮಾಣ ಶೇ 72ರಷ್ಟು ಹೆಚ್ಚಾದ ಕುರಿತು ಆತಂಕ ಸೂಚಿಸಿದರು.

ದೇಶದ ಬಗೆಗಿನ ದೂರದೃಷ್ಟಿ ಪ್ರಣಾಳಿಕೆಯಲ್ಲಿ ಇರಬೇಕಿತ್ತು. ದೇಶವನ್ನು 5 ವರ್ಷಗಳಲ್ಲಿ ಹೇಗೆ ಅಭಿವೃದ್ಧಿ ಪಡಿಸುತ್ತೇವೆ ಎಂದು ಇಂಡಿ, ಕಾಂಗ್ರೆಸ್ ತಿಳಿಸಿಲ್ಲ. 13 ಪಕ್ಷದವರೂ ಪ್ರಧಾನಿ ಆಗಲು ಬಯಸುತ್ತಾರೆ. ಆದರೆ, ನಮ್ಮ ಪ್ರಧಾನಿಯವರು ಸಬ್‍ಕಾ ಪ್ರಯಾಸ್ ಮೇ ಬಿಜೆಪಿಗೆ 370 ಸೀಟು ಮತ್ತು ಎನ್‍ಡಿಎಗೆ 400 ಸೀಟು ಎಂದಿದ್ದಾರೆ. ಅಲ್ಲದೆ, ದೂರದೃಷ್ಟಿಯ ಯೋಜನೆಗಳನ್ನೂ ತಿಳಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯ ಅವರು ಪತ್ರಿಕಾಗೋಷ್ಠಿಯಲ್ಲಿದ್ದರು.