ಬೆಂಗಳೂರು.ಸೆಪ್ಟೆಂಬರ್ 9 : ಐಸಿಎಆರ್ – ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಯ 59 ನೇ ಸ್ಥಾಪನಾ ದಿನವನ್ನು ಇಂದು ಬೆಂಗಳೂರಿನ ಹೆಸರಘಟ್ಟ ದ ಕೇಂದ್ರ ಕಚೇರಿಯಲ್ಲಿ ಆಚರಿಸಲಾಯಿತು
ICAR-IIHR ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ ಸಂಸ್ಥೆಯ ಕಳೆದ ಒಂದು ವರ್ಷದ ಪ್ರಮುಖ ಸಾಧನೆಗಳನ್ನು ಪ್ರಸ್ತುತಪಡಿಸಿದರು. ಹಣ್ಣುಗಳು, ತರಕಾರಿಗಳು, ಹೂವುಗಳು, ಔಷಧೀಯ ಸಸ್ಯಗಳು ಮತ್ತು ಅಣಬೆಗಳನ್ನು ಒಳಗೊಂಡ 54 ತೋಟಗಾರಿಕಾ ಬೆಳೆಗಳ ಮೇಲೆ ಸಂಶೋಧನೆ ನಡೆಸುತ್ತಿದೆ ಎಂದು ತಿಳಿಸಿದರು.
ಕಳೆದ ವರ್ಷದಲ್ಲಿ ಸಂಸ್ಥೆಯ ವಿಜ್ಞಾನಿಗಳಿಂದ ಅಭಿವೃದ್ಧಿಪಡಿಸಿದ 30 ತಳಿಗಳನ್ನು ಕೇಂದ್ರ ತಳಿ ಬಿಡುಗಡೆ ಸಮಿತಿ (CVRC) ರಾಷ್ಟ್ರ ಮಟ್ಟದ ಬೆಳೆಗಾಗಿ ಅನುಮೋದಿಸಿದೆ ಮತ್ತು 6 ತಳಿಗಳನ್ನು ರಾಜ್ಯ ತಳಿ ಬಿಡುಗಡೆ ಸಮಿತಿ (SVRC) ಕರ್ನಾಟಕದಲ್ಲಿ ಬೆಳೆಸಲು ಅನುಮೋದಿಸಿದೆ,ಇದಲ್ಲದೆ, 7 ತಳಿಗಳು ಮತ್ತು 3 ತಂತ್ರಜ್ಞಾನಗಳು ಸಂಸ್ಥಾ ತಂತ್ರಜ್ಞಾನ ನಿರ್ವಹಣಾ ಸಮಿತಿಯಿಂದ (ITMC) ರೈತರು ಮತ್ತು ಹಿತಾಸಕ್ತರ ಪ್ರಯೋಜನಕ್ಕಾಗಿ ಗುರುತಿಸಲ್ಪಟ್ಟಿವೆ ಎಂದು ಹೇಳಿದರು. ಡಾ. ಬೆಹೆರಾ ಅವರು ತೋಟಗಾರಿಕಾ ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸ್ನಾತಕೋತ್ತರ ಶಿಕ್ಷಣದಲ್ಲಿ IIHR ನೀಡುತ್ತಿರುವ ಕೊಡುಗೆ ಕುರಿತು ಕೂಡ ಪ್ರಸ್ತಾಪಿಸಿದರು.
ಮುಖ್ಯ ಅತಿಥಿ ಡಾ. ಸಂಜಯ್ ಕುಮಾರ್ ಅವರು ಹಿಂದಿನ ಮತ್ತು ಪ್ರಸ್ತುತ ಸಿಬ್ಬಂದಿಯ ಪರಿಶ್ರಮವನ್ನು ಮೆಚ್ಚಿ, ಕೃಷಿ ಜಿಡಿಪಿಯ 33% ರಷ್ಟು ತೋಟಗಾರಿಕೆಯ ಕೊಡುಗೆಯಲ್ಲಿ ಸಂಸ್ಥೆಯ ಪಾತ್ರವನ್ನು ಶ್ಲಾಘಿಸಿದರು. ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆಗೊಳಿಸುವಿಕೆಯ ಅಗತ್ಯ, ಮೌಲ್ಯ ಶೃಂಖಲೆಗಳ ಬಲಪಡಿಸುವಿಕೆ, ಮತ್ತು ತೋಟಗಾರಿಕೆಯ ಗಂಭೀರ ಸಮಸ್ಯೆಗಳಿಗೆ ಮೂಲಭೂತ ಸಂಶೋಧನೆಗಳ ಅಗತ್ಯವನ್ನು ಒತ್ತಿ ಹೇಳಿದರು. ಭವಿಷ್ಯದಲ್ಲಿ ತೋಟಗಾರಿಕೆ ಔಷಧೀಯ ಪೌಷ್ಟಿಕ ಉತ್ಪನ್ನಗಳ ಅಭಿವೃದ್ಧಿ, ಕೃಷಿ ಪ್ರವಾಸೋದ್ಯಮ, ಹಾಗೂ “ಸಮುದ್ರದಿಂದ – ಬಾಹ್ಯಾಕಾಶದವರೆಗೆ” ತನ್ನ ಪಾತ್ರವನ್ನು ವಿಸ್ತರಿಸಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ IIHR ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಇತರ ರೈತರಿಗೆ ಮಾದರಿಯಾದ ಹತ್ತು ಪ್ರಗತಿಪರ ರೈತರನ್ನು ಗೌರವಿಸಲಾಯಿತು. ಅಲ್ಲದೆ, IIHR ಸಿಬ್ಬಂದಿಗಳಿಗೆ ಶೈಕ್ಷಣಿಕ, ಆಡಳಿತ, ಬೋಧನೆ ಮತ್ತು ಕ್ರೀಡೆಗಳಲ್ಲಿ ಸಾಧನೆಗಳಿಗಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದ ಸಮೀಪದ ಶಾಲೆಗಳ ವಿದ್ಯಾರ್ಥಿಗಳು ಕಾರ್ಯಕ್ರಮಗಳಲ್ಲಿ ಪ್ರಶಸ್ತಿ ಪಡೆದರು. ಸಂಸ್ಥೆಯ ಅನೇಕ ಪ್ರಕಟಣೆಗಳನ್ನು ಬಿಡುಗಡೆ ಮಾಡಲಾಯಿತು ಮತ್ತು IIHR ಹಾಗೂ ಬೆಂಗಳೂರಿನ ಇತರ ICAR ಸಂಸ್ಥೆಗಳ ತಂತ್ರಜ್ಞಾನ ಮತ್ತು ತಳಿಗಳ ಪ್ರದರ್ಶನವನ್ನು ಆಯೋಜಿಸಲಾಯಿತು.
ಈ ಸಮಾರಂಭಕ್ಕೆ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿ (ASRB), ನವದೆಹಲಿಯ ಅಧ್ಯಕ್ಷರಾದ ಡಾ. ಸಂಜಯ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಡಾ. ವಿ. ವೆಂಕಟಸುಬ್ರಮಣಿಯನ್ (ನಿರ್ದೇಶಕ, ICAR-ATARI, ಬೆಂಗಳೂರು), ಡಾ. ಬಿ.ಆರ್. ಗುಲಾಟಿ (ನಿರ್ದೇಶಕ, ICAR-NIVEDI, ಬೆಂಗಳೂರು), ಡಾ. ಎ. ಸಾಹೂ (ನಿರ್ದೇಶಕ, ICAR-NIANP, ಬೆಂಗಳೂರು) ಮತ್ತು ಡಾ. ಪಲ್ಲಭ್ ಚೌಧುರಿ (ಸಂಯುಕ್ತ ನಿರ್ದೇಶಕ, ICAR-IVRI ಪ್ರಾದೇಶಿಕ ಕೇಂದ್ರ, ಬೆಂಗಳೂರು) ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.
