ಸರ್ಕಾರಿ ಗೌರವಗಳೊಂದಿಗೆ ವಿ.ಎನ್. ರೆಡ್ಡಿ ಅಂತ್ಯಕ್ರಿಯೆ
ತುಮಕೂರು(ಕ.ವಾ.)ಅ.28: ಸೋಮವಾರ ನಿಧನರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಾವಗಡ ತಾಲ್ಲೂಕು ವೆಂಕಟಾಪುರ ಗ್ರಾಮದ ವಿ.ಎನ್. ರೆಡ್ಡಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಜಿಲ್ಲೆಯ ಇತಿಹಾಸದಲ್ಲಿ ಸ್ವಾತಂತ್ರ್ಯ ಹೋರಾಟದ ಚಳುವಳಿಯಲ್ಲಿ ಅನೇಕರ ತ್ಯಾಗ, ಶೌರ್ಯ ಮತ್ತು ದೇಶಭಕ್ತಿ ಅಡಗಿದೆ. ಇಂದಿಗೂ ನಮ್ಮ ಜಿಲ್ಲೆಯಲ್ಲಿ ಕೆಲವು ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಾದ ವಿ.ಎನ್. ರೆಡ್ಡಿ ಅವರು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಅಮೂಲ್ಯ ಜೀವನವನ್ನು ದೇಶದ ಸೇವೆಗೆ ಮೀಸಲಿಟ್ಟಿದ್ದರು. ಅವರ ಹೋರಾಟ, ತ್ಯಾಗ ಮತ್ತು ದೇಶಭಕ್ತಿಯು ಇಂದಿನ ಪೀಳಿಗೆಗೆ ಮಾದರಿಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಬಲಿದಾನದಿಂದಲೇ ನಾವು ಇಂದು ಸ್ವತಂತ್ರ ಭಾರತದಲ್ಲಿ ಬದುಕುತ್ತಿದ್ದೇವೆ. ಇಂತಹ ಮಹಾನ್ ವ್ಯಕ್ತಿಗಳ ಸೇವೆ ಮತ್ತು ಬದ್ಧತೆ ಶಾಶ್ವತವಾಗಿ ಸ್ಮರಣೀಯವಾಗಿರಬೇಕು ಎಂದು ಹೇಳಿದರು.
ಮಹಾತ್ಮ ಗಾಂಧೀಜಿ ಅವರ ಜೀವನಮೌಲ್ಯಗಳನ್ನು ಅಳವಡಿಸಿಕೊಂಡು ಪಾವಗಡ ತಾಲೂಕಿನ ಗಾಂಧಿ ಎಂದೇ ಖ್ಯಾತರಾಗಿದ್ದ ವಿ.ಎನ್. ರೆಡ್ಡಿ ಅವರು, ಗಾಂಧೀಜಿ ನೀಡಿದ “ನಮ್ಮ ನಡೆ-ಹಳ್ಳಿಯ ಕಡೆಗೆ” ಎಂಬ ಕರೆಗೆ ಸ್ಪಂದಿಸಿ ಗ್ರಾಮಾಭಿವೃದ್ಧಿಗಾಗಿ ಜೀವಮಾನವನ್ನೇ ಸಮರ್ಪಿಸಿದ್ದರು. ಸುಮಾರು 30 ವರ್ಷಗಳ ಕಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಹಾಗೂ ನಂತರದ 10 ವರ್ಷಗಳ ಕಾಲ ತಾಲೂಕು ಮಂಡಲ ಬೋರ್ಡ್ ಅಧ್ಯಕ್ಷ ಮತ್ತು ಸದಸ್ಯರಾಗಿ ಸೇವೆ ಸಲ್ಲಿಸಿದ ಅವರು ಬರಗಾಲ ನಿರ್ವಹಣೆ, ಗ್ರಾಮೀಣ ಮೂಲಸೌಕರ್ಯ ಹಾಗೂ ಜನಜಾಗೃತಿ ಚಟುವಟಿಕೆಗಳಲ್ಲಿ ಅವರು ತೊಡಗಿಸಿಕೊಂಡು ನಿಜವಾದ ಜನಸೇವಕನಾಗಿ ಹೆಸರು ಪಡೆದಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೆಂಕಟರಮಣಪ್ಪ, ಮಧುಗಿರಿ ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ, ಡಿವೈಎಸ್ಪಿ ಮಂಜುನಾಥ್, ತಹಶೀಲ್ದಾರ್ ರವಿ ವೈ. ಸೇರಿದಂತೆ ಮತ್ತಿತರರು ಹಾಜರಿದ್ದರು.
