ಕೃಷಿಕರ ಜ್ಞಾನ-ಕೌಶಲ್ಯಾಭಿವೃದ್ಧಿಗೆ ಆಧುನಿಕ ತರಬೇತಿ ಸೌಲಭ್ಯ
ಕೃಷಿಕರ ಜ್ಞಾನ ಸೌಧ ಉದ್ಘಾಟನೆ
ಬೆಂಗಳೂರು: ಜಿಕೆವಿಕೆ ಆವರಣದಲ್ಲಿ ನಿರ್ಮಿಸಲಾಗಿರುವ ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶನಾಲಯದ ನೂತನ ‘ಕೃಷಿಕರ ಜ್ಞಾನ ಸೌಧ’ ಕಟ್ಟಡವನ್ನು ಕೃಷಿ ಸಚಿವ ಪಿ.ಎಂ. ನರೇಂದ್ರಸ್ವಾಮಿ ಉದ್ಘಾಟಿಸಿದರು.
ಕೃಷಿಕರ ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಗೆ ಈ ಸೌಧ ಪ್ರಮುಖವಾಗಿ ನೆರವಾಗಲಿದೆ ಎಂದು ಸಚಿವರು ತಿಳಿಸಿದರು. ಕೃಷಿಕರಿಗೆ ಗುಣಮಟ್ಟದ ತರಬೇತಿ ನೀಡಲು ನೂತನ ಕಟ್ಟಡದಲ್ಲಿ ಆಧುನಿಕ ಡಿಜಿಟಲ್ ಸಂವಹನ ಸಾಧನಗಳನ್ನು ಅಳವಡಿಸಲಾಗಿದೆ ಎಂದರು.
ಕಟ್ಟಡದಲ್ಲಿ ನಾಲ್ಕು ವಿನ್ಯಾಸಗಳ ತರಬೇತಿ ಸಭಾಂಗಣಗಳು, ಕೃಷಿ ದೂರ ಶಿಕ್ಷಣ ಕೇಂದ್ರ, ಇಗ್ನೊ ಸಹಯೋಗದ ಅಧ್ಯಯನ ಕೇಂದ್ರ, ಕೃಷಿ ಮಾಹಿತಿ ಘಟಕ ಹಾಗೂ ‘ಸಮೇತಿ ಘಟಕ’ ಸೇರಿದಂತೆ ಹಲವು ಸೌಲಭ್ಯಗಳಿವೆ. ಕೃಷಿಕರಿಗಾಗಿ ಫಾರ್ಮರ್ಸ್ ಲಾಂಜ್, ಕೆಫೆಟೇರಿಯಾ ಮತ್ತು ಗ್ರಂಥಾಲಯ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಇದರ ಜೊತೆಗೆ ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರದ ಮೂಲಕ ಗುಣಮಟ್ಟದ ಬಿತ್ತನೆ ಬೀಜ, ನರ್ಸರಿ ಸಸಿಗಳು, ಜೈವಿಕ ಗೊಬ್ಬರಗಳು ಹಾಗೂ ಕೃಷಿ ಪ್ರಕಟಣೆಗಳ ಲಭ್ಯತೆಯನ್ನೂ ಒದಗಿಸಲಾಗಿದೆ. ಕೃಷಿ ವಿಜ್ಞಾನಗಳ ವಸ್ತು ಪ್ರದರ್ಶನಾಲಯ ಮತ್ತು ಆಧುನಿಕ ಬೇಕರಿ ತರಬೇತಿ ಕೇಂದ್ರವೂ ಇಲ್ಲಿ ಕಾರ್ಯನಿರ್ವಹಿಸಲಿವೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ವಹಿಸಿದ್ದರು. ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ನಿವೃತ್ತ ವಿಸ್ತರಣಾ ನಿರ್ದೇಶಕರು ಉಪಸ್ಥಿತರಿದ್ದರು.
