IMG 20210215 WA0010

ಜನೌಷಧಿ ಅಂಗಡಿಗಳಲ್ಲಿ ಆಯುರ್ವೇದ ಔಷಧಗಳ ಲಭ್ಯತೆಗೂ ಶೀಘ್ರವೇ ಕ್ರಮ…!

STATE Genaral

ರಾಜ್ಯದಲ್ಲಿ ಇನ್ನೂ ಎರಡು ಜನೌಷಧಿ ವಿತರಣಾ ಕೇಂದ್ರ – ಸದಾನಂದ ಗೌಡ
ಜನೌಷಧಿ ಅಂಗಡಿಗಳಲ್ಲಿ ಆಯುರ್ವೇದ ಔಷಧಗಳ ಲಭ್ಯತೆಗೂ ಶೀಘ್ರವೇ ಕ್ರಮ
ಬೆಂಗಳೂರು, ಫೆಬ್ರುವರಿ 15- ರಾಜ್ಯದ ಜನೌಷಧಿ ಅಂಗಡಿಗಳಿಗೆ ಔಷಧ ಪೂರೈಕೆಯನ್ನು ಇನ್ನಷ್ಟು ತ್ವರಿತಗೊಳಿಸಲು ಇನ್ನೂ ಎರಡು ವಿತರಣಾ ಕೇಂದ್ರಗಳಿಗೆ ಅನುಮತಿ ನೀಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ ವಿ ಸದಾನಂದ ಗೌಡ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸಚಿವರು ಜನೌಷಧಿ ಅಂಗಡಿಕಾರರೊಂದಿಗೆ ಸಭೆ ನಡೆಸಿ ಅವರ ಕುಂದು-ಕೊರತೆ, ಬೇಡಿಕೆಯನ್ನು ಆಲಿಸಿದರು. ರಾಜ್ಯದಲ್ಲಿ ಜನೌಷಧಿ ಸರಬರಾಜು ಮತ್ತು ಮಾರಾಟದ ವ್ಯವಸ್ಥೆ ಬಲಪಡಿಸಲು ಹಾಗೂ ಜನೌಷಧಿ ಬಳಕೆಯನ್ನು ಜನಪ್ರಿಯಗೊಳಿಸುವ ಬಗ್ಗೆ ಮುಕ್ತಚರ್ಚೆ ನಡೆಸಿದರು.
ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಜನೌಷಧಿ ವಿತರಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯ ಸಹಕಾರಿ ಮಾರುಕಟ್ಟೆ ಒಕ್ಕೂಟಕ್ಕೆ ಹುಬ್ಬಳ್ಳಿಯಲ್ಲಿ ಜನೌಷಧ ವಿತರಣಾ ಕೇಂದ್ರ ಆರಂಭಿಸಲು ಲೈಸನ್ಸ್ ನೀಡಲಾಗಿದ್ದು ಅದು ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಹಾಗೆಯೇ ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗದಲ್ಲಿ ವಿತರಣಾ ಕೇಂದ್ರಗಳನ್ನು ಆರಂಭಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ಹೇಳಿದರು.

IMG 20210215 WA0009
ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧ ಪೂರೈಸಬೇಕು ಎಂಬುದು ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಕಳಕಳಿ. ಮೋದಿಯವರ ಸರ್ಕಾರ ಬಂದಾಗಿನಿಂದ ದೇಶಾದ್ಯಂತ 7,000ಕ್ಕಿಂತ ಹೆಚ್ಚು ಜನೌಷಧ ಕೇಂದ್ರಗಳನ್ನು (ಅಂಗಡಿಗಳನ್ನು) ಆರಂಭಿಸಲಾಗಿದೆ. ರಾಜ್ಯದಲ್ಲಿ ಇದುವರೆಗೆ 849 ಜನೌಷಧಿ ಅಂಗಡಿಗಳನ್ನು ತೆರೆಯಲಾಗಿದ್ದು ಈ ವರ್ಷ 125 ಕೋಟಿ ರೂಪಾಯಿ ಮಿಕ್ಕಿ ವಹಿವಾಟು ನಡೆಯಲಿದೆ. ನಾಡಿನ ಮೂಲಮೂಲೆಯಲ್ಲಿಯೂ ಜನೌಷಧವನ್ನು ಜನಪ್ರಿಯಗೊಳಿಸಬೇಕಿದೆ. ಸರ್ಕಾರಿ ಆಸ್ಪತ್ರೆ ಇರುವಲ್ಲೆಲ್ಲ ಜನೌಷಧಿ ಕೇಂದ್ರ ಇರಬೇಕು ಎಂಬುದು ನಮ್ಮ ಉದ್ದೇಶ. ಕನಿಷ್ಠಪಕ್ಷ ಸರ್ಕಾರಿ ವೈದ್ಯರಾದರೂ ಬ್ರಾಂಡೆಡ್ ಔಷಧಗಳ ಬದಲಿಗೆ ಜನೌಷಧಿಯನ್ನೇ ಬರೆದುಕೊಡುವಂತಾಗಬೇಕು. ಇದರಿಂದ ಬಡವರಿಗೆ ದೊಡ್ಡಮಟ್ಟದಲ್ಲಿ ಹಣದ ಉಳಿತಾಯವಾಗುತ್ತದೆ. ಇದರಲ್ಲಿ ರಾಜ್ಯ ಸರ್ಕಾರಗಳ ಸಹಕಾರ ಬಹುಮುಖ್ಯ. ಇವೆಲ್ಲ ವಿಷಯಗಳ ಬಗ್ಗೆ ರಾಜ್ಯ ಆರೋಗ್ಯ ಸಚಿವರುಗಳು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರವೇ ಸಭೆ ನಡೆಸಲಾಗುವುದು ಎಂದು ಅವರು ಹೇಳಿದರು.
ಜನೌಷಧ ಅಂಗಡಿಗಳಲ್ಲಿ ಕೈಗೆಟಕುವ ದರಗಳಲ್ಲಿ ಆಯುರ್ವೇದ ಔಷಧಗಳನ್ನು ಲಭ್ಯವಾಗಿಸುವ ಬಗ್ಗೆ ಈಗಾಗಲೇ ತೀರ್ಮಾನಿಸಲಾಗಿದೆ. ಆರಂಭಿಕವಾಗಿ ಸುಮಾರು 250 ನಮೂನೆಯ ಔಷಧಗಳನ್ನು ಗುರುತಿಸಲಾಗಿದೆ. ಆದರೆ ಜನೌಷಧಿ ಕೇಂದ್ರಗಳಲ್ಲಿ ಜಾನುವಾರು ಔಷಧಗಳನ್ನು ಕೂಡಾ ಪೂರೈಸಬೇಕೆಂಬ ಬೇಡಿಕೆ ಬಗ್ಗೆ ಮುಂಬರುವ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.
ಕೊವಿಡ್ ವೇಳೆಯಲ್ಲಿಯೂ ಜನೌಷಧ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸಿ ದಾಖಲೆವಹಿವಾಟು ನಡೆಸಿವೆ. ಜನೌಷಧಿ ಅಂಗಡಿಕಾರರಾದ ತಾವುಗಳು ಜೀವದ ಹಂಗುತೊರೆದು ಕಾರ್ಯನಿರ್ವಹಿಸಿದ್ದೀರಿ. ಸರ್ಕಾರವು ತಮ್ಮ ಸೇವೆಯನ್ನು ಗುರುತಿಸಿದೆ ಮತ್ತು ತಮ್ಮ ಬಗ್ಗೆ ಗೌರವಾದರಗಳನ್ನು ಇಟ್ಟುಕೊಂಡಿದೆ ಎಂದು ಸಚಿವರು ಹೇಳಿದರು.

IMG 20210215 WA0011
ಕೊರೊನಾದಿಂದ ಮೃತಪಟ್ಟ ಜನೌಷಧ ಅಂಗಡಿಕಾರರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಕೊರೊನಾ ಲಸಿಕಾ ಅಭಿಯಾನದಲ್ಲಿ ಜನೌಷಧ ಅಂಗಡಿಕಾರರನ್ನು ಆಧ್ಯತೆ ಮೇರೆಗೆ ಪರಿಗಣಿಸಬೇಕು. ಜನೌಷಧ ಅಂಗಡಿಕಾರರ ಮೇಲೆ ದೌರ್ಜನ್ಯದ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದು ಇದರಿಂದ ಸರ್ಕಾರ ರಕ್ಷಣೆ ನೀಡಬೇಕು ಇವೇ ಮುಂತಾದ ಬೇಡಿಕೆಗಳನ್ನು ಜನೌಷಧಿ ಅಂಗಡಿಕಾರರು ಮುಂದಿಟ್ಟರು.
ಜನೌಷಧ ಮಾರಾಟಗಾರರ ಬಹುತೇಕ ಅಹವಾಲುಗಳಿಗೆ ಸಚಿವರು ಸಕರಾತ್ಮಕವಾಗಿ ಸ್ಪಂದಿಸಿದರು. ಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆಯ ಅಧಿಕಾರಿಗಳಾದ ಡಾ. ಅನಿಲಾ ಬಿ, ಶ್ರೀ ಕೆ ಅಜಯ ರೆಡ್ಡಿ, ಶ್ರೀ ಅಲ್ಲು ಹರಿಕೃಷ್ಣ ಮುಂತಾದವರು ಪಾಲ್ಗೊಂಡರು.
ರಾಮಮಂದಿರ ನಿಧಿ ಸಮರ್ಪಣೆ: ಇದಕ್ಕೂ ಮೋದಲು ಬಿಬಿಎಂಪಿ ನೌಕರರು ಹಮ್ಮಿಕೊಂಡಿದ್ದ ಶ್ರೀರಾಮಮಂದಿರ ನಿಧಿ ಸಮರ್ಪಣಾ ಕಾರ್ಯಕ್ರಮದಲ್ಲಿ ಸಚಿವರು ಪಾಲ್ಗೊಂಡರು. ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹ ಶ್ರೀ ತಿಪ್ಪೇಸ್ವಾಮಿ, ಪಾಲಿಕೆ ಆಡಳಿತಾಧಿಕಾರಿ ಶ್ರೀ ಗೌರವ ಗುಪ್ತ, ಆಯುಕ್ತ ಶ್ರೀ ಮಂಜುನಾಥ ಪ್ರಸಾದ್, ಮಾಜಿ ಉಪಮಹಾಪೌರ ಶ್ರೀ ಎಸ್ ಹರೀಶ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ನೌಕರರ ಸಂಘದ ಅಧ್ಯಕ್ಷ ಶ್ರೀ ಅಮೃತರಾಜ್ ಅವರು 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು ಶ್ರೀರಾಮ ಮಂದಿರ ನಿರ್ಮಾಣದ ಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ದೊಡ್ಡದೊಡ್ಡ ಉದ್ದಿಮೆದಾರರು ಮುಂದೆ ಬಂದಿದ್ದಾರೆ, ಆದರೆ ದೇಶದ ಶ್ರದ್ಧಾಳುಗಳೆಲ್ಲರೂ ಇದರಲ್ಲಿ ಭಾಗಿಯಾಗಬೇಕು ಎಂಬುದು ಮಂದಿರ ನಿರ್ಮಾಣ ಟ್ರಸ್ಟಿನ ಇಚ್ಛೆ. ಇದಕ್ಕೆ ಶ್ರೀಸಾಮಾನ್ಯರಿಂದ ಅಭೂತಪೂರ್ವ ಸ್ಪಂದನೆ ದೊರೆಯುತ್ತಿದೆ ಎಂದರು.
ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಬೆಂಗಳೂರು ನಗರದಲ್ಲಿ ಜನರಿಂದ ನಿರೀಕ್ಷೆಮೀರಿ ದೇಣಿಗೆ ಸಂಗ್ರಹವಾಗುತ್ತಿದೆ. ಈ ಅಭಿಯಾನದ ಅಡಿ ಇಲ್ಲಿ18 ಲಕ್ಷ ಕುಟುಂಬಗಳನ್ನು ತಲುಪುವ ನಿರೀಕ್ಷೆ ಮಾಡಿದ್ದೆವು. ಆದರೆ ಈಗಾಗಲೇ 23 ಲಕ್ಷ ಕುಟುಂಬಗಳು ಮಂದಿರ ನಿಧಿ ಸಮರ್ಪಿಸಿವೆ ಎಂದು ಅವರು ಹೇಳಿದರು.