IMG 20210902 WA0004

BJP: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ..!

Genaral STATE

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ- ಅರುಣ್ ಸಿಂಗ್

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ತಾತ್ಕಾಲಿಕ. ಅದು ಮುಂದಿನ ದಿನಗಳಲ್ಲಿ ಕಡಿಮೆ ಆಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿಗಳೂ ಆದ ಶ್ರೀ ಅರುಣ್ ಸಿಂಗ್ ಅವರು ವಿಶ್ವಾಸದಿಂದ ನುಡಿದರು.
ಮಲ್ಲೇಶ್ವರದ “ಹವ್ಯಕರ ಭವನ”ದಲ್ಲಿ ಇಂದು ನಡೆದ ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಜಿಲ್ಲೆಯ ಪದಾಧಿಕಾರಿಗಳ ಸಭೆಯ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ತೈಲ ಬೆಲೆ ಹೆಚ್ಚಳದ ಜೊತೆಜೊತೆಗೇ ಹಣದುಬ್ಬರದ ಪರಿಸ್ಥಿತಿಯನ್ನೂ ಗಮನಿಸಿ. ಯುಪಿಎ ಆಡಳಿತದಲ್ಲಿ ಹಣದುಬ್ಬರವು ಶೇ 15ರಿಂದ 20ರಷ್ಟಿತ್ತು. ಆದರೆ, ಈಗ ಶ್ರೀ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಹಣದುಬ್ಬರ ಮತ್ತು ಬೆಲೆ ಏರಿಕೆಯು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಕಳೆದ ಎರಡ್ಮೂರು ವóರ್ಷಗಳಿಂದ ಅದು ಶೇ 2ರಿಂದ 3ರಷ್ಟಿದೆ ಎಂದು ತಿಳಿಸಿದರು.
ಕೇವಲ 100 ದಿನಗಳಲ್ಲಿ ಹಣದುಬ್ಬರವನ್ನು ನಿಯಂತ್ರಿಸಲಾಗುವುದು ಎಂದು ಯುಪಿಎ ಸರಕಾರದ ಹಣಕಾಸು ಸಚಿವರಾದ ಚಿದಂಬರಂ ಹಿಂದೊಮ್ಮೆ ಹೇಳಿದ್ದರು ಆದರೆ, ಅದು ಏರುತ್ತಲೇ ಹೋಯಿತು. ಬೆಲೆ ಏರಿಕೆ ನಿಯಂತ್ರಣ ಮಾಡಲಾಗಲಿಲ್ಲ ಎಂದು ವಿವರಿಸಿದರು.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟಿದೆ ಎಂದರಲ್ಲದೆ, ಡಬಲ್ ಇಂಜಿನ್ ಸರಕಾರ ಕೇಂದ್ರ- ರಾಜ್ಯದಲ್ಲಿದೆ. ಭಾರತ್ ಮಾಲಾದಡಿ ರಸ್ತೆಗಳ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಕ್ಕೆ ಆದ್ಯತೆ ಕೊಡಲಾಗುತ್ತಿದೆ ಎಂದು ತಿಳಿಸಿದರು.

ಕರ್ನಾಟಕಕ್ಕೆ ಶ್ರೀ ನರೇಂದ್ರ ಮೋದಿ ಅವರ ಪೂರ್ಣ ಆಶೀರ್ವಾದವಿದೆ. ಗರಿಷ್ಠ ಅನುದಾನ ನೀಡಲಾಗುತ್ತಿದೆ. ಶ್ರೀ ಬಸವರಾಜ ಬೊಮ್ಮಾಯಿ ಸರಕಾರವೂ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಪ್ರತಿ ಮನೆಗೆ ನಳ್ಳಿ ನೀರು ಒದಗಿಸುವ ಕೆಲಸ ಸಾಗುತ್ತಿದೆ. ರೈತರ ಖಾತೆಗೆ ಆರು ಸಾವಿರ ರೂಪಾಯಿ ಸಂದಾಯ ಮಾಡುತ್ತಿದ್ದೇವೆ. ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ಎಲ್ಲ ಅಭಿವೃದ್ಧಿ ಕಾರ್ಯಗಳಿಗೆ ಹಣ ಬೇಕಿದೆ. ಸರಕಾರಕ್ಕೆ ಬರುವ ತೆರಿಗೆ ಭ್ರಷ್ಟಾಚಾರರಹಿತವಾಗಿ ಬಳಕೆಯಾಗುತ್ತಿದೆ ಎಂದು ನುಡಿದರು.
ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ಪಕ್ಷವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಭಾಗದಲ್ಲಿ ಗರಿಷ್ಠ ಶಾಸಕರನ್ನು ಗೆಲ್ಲಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಬಡವರು, ರೈತರು, ಮಹಿಳೆಯರು ಮತ್ತು ಜನಸಾಮಾನ್ಯರಿಗಾಗಿ ಶ್ರೀ ನರೇಂದ್ರ ಮೋದಿ ಅವರು ಜಾರಿಗೊಳಿಸಿದ ವಿವಿಧ ಯೋಜನೆಗಳ ಬಗ್ಗೆ ತಿಳಿಸಬೇಕು ಮತ್ತು ಸಂಘಟನೆಯನ್ನು ಇನ್ನಷ್ಟು ಬಲಪಡಿಸಬೇಕೆಂದು ಮೈಸೂರು, ಹಾಸನ ಪ್ರವಾಸದ ವೇಳೆ ತಿಳಿಸಿದ್ದಾಗಿ ಹೇಳಿದರು. ರಾಜ್ಯದಲ್ಲಿ ಶ್ರೀ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರಕಾರವು ಅನುಷ್ಠಾನಕ್ಕೆ ತಂದಿರುವ ಸ್ಕಾಲರ್‍ಶಿಪ್, ನೀರಾವರಿ, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮತ್ತಿತರ ಜನಪರ ಯೋಜನೆಗಳ ಕುರಿತು ಮಾಹಿತಿ ಕೊಡಲು ಸೂಚಿಸಿದ್ದಾಗಿ ಹೇಳಿದರು.
ದಲ್ಲಾಳಿಗಳ ಯೋಚನೆ ದಲ್ಲಾಳಿಗಳಂತೆ ಇರುತ್ತದೆ. ಅದೇ ಮಾದರಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ಟೀಕೆ ಇದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.
ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ಶ್ರೀ ನಳಿನ್‍ಕುಮಾರ್ ಕಟೀಲ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಅರುಣ್ ಕುಮಾರ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಮತ್ತು ಕೇಂದ್ರದ ಮಾಜಿ ಸಚಿವರಾದ ಶ್ರೀ ಡಿ.ವಿ. ಸದಾನಂದಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರಾದ ಶ್ರೀ ಎನ್.ಆರ್. ರಮೇಶ್ ಮತ್ತು ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಶ್ರೀ ಬಿ. ನಾರಾಯಣ ಗೌಡ, ಪಕ್ಷದ ಆಹ್ವಾನಿತ ಪದಾಧಿಕಾರಿಗಳು, ಮುಖಂಡರು         ಭಾಗವಹಿಸಿದ್ದರು.