IMG 20211210 WA0053

ಯುವಶಕ್ತಿಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ…!

Genaral STATE

*ಯುವಶಕ್ತಿಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ: ಗೌರವಾನ್ವಿತ ರಾಜ್ಯಪಾಲ ಶ್ರೀ ಥಾವರ್ ಚಂದ್ ಗೆಹ್ಲೋಟ್*

*ಬೆಂಗಳೂರು ಡಿಸೆಂಬರ್ 10 (ಕರ್ನಾಟಕ ವಾರ್ತೆ):* ನಮ್ಮ ದೇಶ ಯುವ ರಾಷ್ಟ್ರ. ಇಂದಿನ ಯುವ ಸಮಾಜದ ಆದ್ಯತೆ ಬೇರೆಯವರಿಗಿಂತ ಭಿನ್ನವಾಗಿ ಯೋಚಿಸುವುದು, ಎಲ್ಲರಿಗಿಂತಲೂ ಕ್ಷಿಪ್ರ ವೇಗದಲ್ಲಿ ಸಾಧನೆ ಮಾಡುವುದು ಆಗಿರುತ್ತದೆ. . ಇಲ್ಲಿನ ಯುವ ಉದ್ಯಮಿಗಳು ದೇಶವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ಯಬಹುದಾಗಿದ್ದು, ಯುವಶಕ್ತಿಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಇಂದು ರಾಜಭವನದ ಬಾಂಕ್ವೆಟ್ ಸಭಾಂಗಣದಲ್ಲಿ ಯಂಗ್ ಪ್ರೆಸಿಡೆಂಟ್ ಆರ್ಗನೈಸೇಶನ್(ವೈಪಿಓ) ವತಿಯಿಂದ ಆಯೋಜಿಸಲಾಗಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದೇಶ ಸದೃಢ ರಾಷ್ಟ್ರವನ್ನಾಗಿಸಲು ಯುವಜನತೆಯಿಂದ ಮಾತ್ರ ಸಾಧ್ಯ. ಇಂದಿನ ಯುವಜನತೆಯೇ ನಮ್ಮ ದೇಶದ ಭವಿಷ್ಯ. ಹಾಗಾಗಿ, ಯುವಜನತೆಯಲ್ಲಿ ನಾವೆಲ್ಲರೂ ಶಕ್ತಿ ತುಂಬಬೇಕು, ಯುವಶಕ್ತಿ ಜಾಗೃತವಾದರೆ ಮಾತ್ರ ನಮ್ಮ ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ. ಉತ್ತಮ ಶಿಕ್ಷಣ ಪಡೆದು ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಜವಾಬ್ದಾರಿ ಯವಜನತೆ ಮೇಲಿದೆ. ಸಂವಹನಾ, ವೃತ್ತಿ ಕೌಶಲ್ಯ, ಆತ್ಮವಿಶ್ವಾಸ, ತಾಳ್ಮೆ ರೂಢಿಸಿಕೊಳ್ಳುವುದರ ಜೊತೆಗೆ ಭಾರತದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಕ್ಷಿಪ್ರ ವೇಗದಲ್ಲಿ ಸಾಧನೆ ಮಾಡಲು ಮುಂದಾಗಬೇಕು. ಉದ್ಯೋಗ ಅರಸುವ ಬದಲು ಯುವಪೀಳಿಗೆ ಉದ್ಯೋಗದಾತರಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

IMG 20211210 WA0055

ಭಾರತವನ್ನು ವಿಶ್ವ ಗುರು ಮತ್ತು ಚಿನ್ನದ ಹಕ್ಕಿ ಎಂದು ಕರೆಯಲಾಗುತಿತ್ತು. ಏಕೆಂದರೆ ಪ್ರಾಚೀನ ಭಾರತದ ಶಿಕ್ಷಣ ವ್ಯವಸ್ಥೆ, ಜ್ಞಾನ ಮತ್ತು ವಿಜ್ಞಾನ, ಆರ್ಥಿಕತೆ, ಉದ್ಯಮ ವ್ಯವಸ್ಥೆಯು ಬಹಳ ಸಮೃದ್ಧವಾಗಿತ್ತು. ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕಾರಾಚಾರ್ಯ, ಧನ್ವಂತರಿ, ಭಾರದ್ವಾಜ, ಆತ್ರೇಯ, ಸುಶ್ರುತ ಮೊದಲಾದ ಮಹಾನ್ ವಿದ್ವಾಂಸರು ಈ ಪುಣ್ಯಭೂಮಿಯಲ್ಲಿ ಜನಿಸಿದವರು, ಅವರ ಕಾರ್ಯಗಳಿಂದಾಗಿ ದೇಶವು ಪ್ರಸಿದ್ಧವಾಗಿದೆ. ಸ್ವಾತಂತ್ರ್ಯದ ಈ 75 ವರ್ಷದಲ್ಲಿ ಭಾರತ ಪ್ರತಿಯೊಂದು ಕ್ಷೇತ್ರದಲ್ಲೂ ಉತ್ತಮ ಅಭಿವೃದ್ಧಿ ಕಂಡಿದೆ. ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟ್ರಾರ್ಟ್ ಅಪ್ ಸೇರಿದಂತೆ ಇತರೆ ಯೋಜನೆಗಳ ಮೂಲಕ ಬಲಿಷ್ಠ ಭಾರತವನ್ನು ನಿರ್ಮಿಸಲು ಪ್ರಯತ್ನಿಸಿದೆ ಮತ್ತು ಈ ಮೂಲಕ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಕೆಲಸವನ್ನು ಮಾಡಲಾಗಿದೆ ಎಂದು ಹೇಳಿದರು.

ಯುವಜನತೆ ಸಕರಾತ್ಮಕ ಆಲೋಚನೆಯಿಂದಾಗಿ ಉದ್ಯೋಗ ಪಡೆಯುವುದರ ಜೊತೆಗೆ ಉದ್ಯೋಗ ಸೃಷ್ಟಿಸುವ ಗುರಿ ಹೊಂದಬೇಕು. ಕೇಂದ್ರ ಸರಕಾರವು ಉದ್ಯಮಶೀಲತೆಗೆ ಹೆಚ್ಚಿನ ಬೆಂಬಲವನ್ನು ನೀಡುತ್ತಿದೆ. ಭಾರತದಲ್ಲಿ ಉದ್ಯಮಶೀಲತೆಯನ್ನು ಹೆಚ್ಚಿಸುವ ಸಲುವಾಗಿ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಆರಂಭಿಸಿದ್ದು, ಅನೇಕ ಉದ್ಯಮಿಗಳಿಗೆ ಸಹಕಾರಿಯಾಗಿದೆ. ಕೇವಲ ಉತ್ಪಾದನಾ ಕ್ಷೇತ್ರವಷ್ಟೇ ಅಲ್ಲ ಇತರ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ಭಾರತ ದೇಶ ಜಲ, ವನ ಸೇರಿದಂತೆ ನೈಸರ್ಗಿಕ ಮತ್ತು ಮೂಲ ಸಂಪನ್ಮೂಲದಲ್ಲಿ ಶ್ರೀಮಂತವಾಗಿರುವ ನಮ್ಮ ದೇಶದಲ್ಲಿ ವಿಫುಲ ಅವಕಾಶಗಳಿವೆ. ಬಂಡವಾಳ ಹೂಡಲು ಉತ್ತಮ ವಾತಾವರಣವಿದೆ. ಇಂತಹ ರಾಷ್ಟ್ರ ಮತ್ತಷ್ಟು ಅಭಿವೃದ್ಧಿ ಕಾಣಲು ಉತ್ಪಾದನೆ ಆದ್ಯತೆ ನೀಡಬೇಕು ಎಂದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ವಿಕಾಸ, ಬಡವರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿದರು. ಅವರ ಹಾದಿಯಲ್ಲೇ ನಾವೆಲ್ಲರೂ ನಡೆಯಬೇಕು ಎಂದ ಅವರು, ಈಗಾಗಲೇ ಕೇಂದ್ರ ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ಉದ್ಯಮವನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ. ಜಾಗತಿಕ ಟೆಕ್ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲಂತಹ ಸಾಮರ್ಥ್ಯ ಭಾರತದಲ್ಲಿ ವಿನ್ಯಾಸಗೊಳಿಸಲಾಗಿರುವ ತಂತ್ರಜ್ಞಾನಕ್ಕಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರು ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಭ್ರಷ್ಟಚಾರ ನಿಗ್ರಹ ಮಾಡಲು ಮುಂದಾಗಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸಾರ್ವಜನಿಕ ಕೆಲಸಗಳನ್ನು ತ್ವರಿತವಾಗಿ ಹಾಗೂ ಭ್ರಷ್ಟರಹಿತವಾಗಿ ಮಾಡುವುುದು ಡಿಜಿಟಲ್ ಇಂಡಿಯಾದ ಉದ್ದೇಶವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯವು ಜ್ಞಾನ ಮತ್ತು ವಿಜ್ಞಾನ ಸಂಶೋಧನೆ, ನಾವೀನ್ಯತೆಗಳ ಮತ್ತು ಸಾಫ್ಟ್‌ವೇರ್‌ನ ಅತಿದೊಡ್ಡ ಕೇಂದ್ರವಾಗಿದೆ. ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕೇಂದ್ರವಾಗಿ ಹೊರಹೊಮ್ಮಿದೆ. ಇದು ಹೆಚ್ಚಿನ ಸಂಖ್ಯೆಯ ಐಟಿ ಕಂಪನಿಗಳನ್ನು ಹೊಂದಿದೆ. ದೇಶದ ಅಭಿವೃದ್ಧಿಯಲ್ಲಿ ಕರ್ನಾಟಕವೂ ತನ್ನದೇ ಆದ ಕೊಡುಗೆ ನೀಡಿದ್ದು, ಇಲ್ಲಿನ ಉದ್ಯಮಿಗಳ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವೈಪಿಒ ಅಧ್ಯಕ್ಷರಾದ ತುಲಸ್ಯಾನ್, ಶ್ರೀ ಅಮಿತ್ ಚಾವ್ಲಾ ಮತ್ತು ತ್ರಿಷ್ಟಾ ರಾಮಮೂರ್ತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.