IMG 20220402 WA0022

ಅಪರಾಧ, ಅಪರಾಧಿಗಳೊಂದಿಗೆ ರಾಜಿ ಇಲ್ಲದೆ ಕರ್ತವ್ಯ ನಿರ್ವಹಿಸಲು ಸಿಎಂ ಕರೆ

Genaral STATE

ಅಪರಾಧ, ಅಪರಾಧಿಗಳೊಂದಿಗೆ ರಾಜಿ ಇಲ್ಲದೆ ಕರ್ತವ್ಯ ನಿರ್ವಹಿಸಲು ಸಿಎಂ ಕರೆ

ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ. ಘೋಷಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಏಪ್ರಿಲ್ 02: ಪೊಲೀಸ್ ಕಲ್ಯಾಣ ನಿಧಿಗೆ 5 ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದರು.

ಅವರು ಇಂದು ಕೋರಮಂಗಲದ ಪೊಲೀಸ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಪ್ರಗತಿಪರ ಸಮಾಜ , ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ಪೊಲೀಸರ ನಿಷ್ಠೆ, ದಕ್ಷತೆಯಿಂದ ಸಾಧ್ಯವಿದೆ. ಅಪರಾಧ, ಅಪರಾಧಿಗಳೊಂದಿಗೆ ರಾಜಿನಿಲ್ಲದೆ ಕೆಲಸ ಮಾಡಿದರೆ ಅಪರಾಧ ತನ್ನಿಂದ ತಾನೇ ಕಡಿಮೆಯಾಗುತ್ತದೆ. ರಾಜ್ಯ ಸರ್ಕಾರ ಕ್ಕೆ ನಿಮ್ಮ ಸೇವೆಗಳ ಬಗ್ಗೆ ಹೆಮ್ಮೆ ಇದೆ ರಾಷ್ಟ್ರದಲ್ಲಿ ಕರ್ನಾಟಕ ಪೊಲೀಸ್ ನಂಬರ 1 ಸ್ಥಾನಕ್ಕೆ ಏರಲಿ ಎಂದರು.

IMG 20220402 WA0018

ಅಂತ:ಕಾರಣ, ಮಾನವೀಯತೆ ಬಹಳ ಮುಖ್ಯ
ನಾಡಿನ, ಜನರ ರಕ್ಷಣೆ, ಸಮಾಜದಲ್ಲಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವುದು ಇಲಾಖೆಯ ಪ್ರಮುಖ ಕರ್ತವ್ಯ. ಇಲಾಖೆಯಲ್ಲಿ ಶಿಸ್ತು, ದಕ್ಷತೆ, ನಿಷ್ಠೆ ಬಹಳ ಮುಖ್ಯ. ದೇಶದಲ್ಲಿ ಕರ್ನಾಟಕ ಪೊಲೀಸ್ ಉನ್ನತ ಸ್ಥಾನದಲ್ಲಿದೆ. ಚುನಾವಣೆ ಸಂದರ್ಭಗಳಲ್ಲಿ ಬೇರೆ ರಾಜ್ಯಗಳಿಂದ ಪೊಲೀಸ್ ತುಕಡಿ ಕರೆಸುವಾಗ ಕರ್ನಾಟಕಕ್ಕೆ ಆದ್ಯತೆ ನೀಡುತ್ತಾರೆ. ನಿಷ್ಪಕ್ಷಪಾತ, ಮಾನವೀಯತೆ, ಅಂತ:ಕಾರಣ ಹಾಗೂ ನಿಸ್ಪೃಹ ಕರ್ತವ್ಯಕ್ಕೆ ನಮ್ಮ ಪೊಲೀಸ್ ಹೆಸರುವಾಸಿ. ಸಮಾಜದ ಸ್ವಾಸ್ಥ್ಯ, ಶಾಂತಿ ಕಾಪಾಡಲು ತಮ್ಮ ಅಂತ:ಕಾರಣ, ಮಾನವೀಯತೆ ಬಹಳ ಮುಖ್ಯ. ನ್ಯಾಯನಿಷ್ಠುರವಾಗಿ ಕೆಲಸ ಮಾಡಬೇಕು. ಫೋರೆನ್ಸಿಕ್ ಪ್ರಯೋಗಾಲಯ ಅಪರಾಧಿಗಳ ಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ. ಕೋರ್ಟುಗಳು ಅದರ ವರದಿಗೆ ಮಹತ್ವ ನೀಡುತ್ತದೆ. ಬೆಂಗಳೂರಿನಲ್ಲಿ ನಾರ್ಕೋಟಿಕ್ಸ್, ಸೈಬರ್ ಹಾಗೂ ಫೋರೆನ್ಸಿಕ್ ಲ್ಯಾಬ್ ವುಳ್ಳ ಠಾಣೆಗಳನ್ನು ತೆರೆಯಲಾಗಿದೆ.
ಹುಬ್ಬಳ್ಳಿ ಬಳ್ಳಾರಿಯಲ್ಲಿಯೂ ಠಾಣೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ. ಶಿವಮೊಗ್ಗ ಮುಂತಾದ ಕಡೆಗಳಲ್ಲಿಯೂ ಫೋರೆನ್ಸಿಕ್ ಪ್ರಯೋಗಾಲಯಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.

ಇಂಟೆಲಿಜೆನ್ಸ್ ಸಧೃಢತೆಗೆ ಕ್ರಮ
ಪೊಲೀಸರ ಬುದ್ಧಿವಂತಿಕೆಯೂ ಮುಖ್ಯ. ಹೊಸ ತರಬೇತಿ ವ್ಯವಸ್ಥೆ ಮತ್ತು ಸಿಬ್ಬಂದಿ ಹೆಚ್ಚಿಸುವ ಮೂಲಕ ಇಂಟೆಲಿಜೆನ್ಸ್ ನ್ನು ಇನ್ನಷ್ಟು ಸಧೃಢ ಮಾಡಲು ಕ್ರಮ ವಹಿಸಲಾಗಿದೆ ಎಂದರು.
ಕಲ್ಯಾಣ ಕಾರ್ಯಕ್ರಮ
ಪೊಲೀಸರ ಕಾರ್ಯದಲ್ಲಿ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ. ಪೊಲೀಸ್ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ.ಆರೋಗ್ಯ, ಸೇವೆ, ಬಂದೋಬಸ್ತಿಗೆ ಭತ್ಯೆ, ಬಡ್ತಿಗಳನ್ನು ನೀಡಿದೆ. ಪೊಲೀಸ್ ಗೃಹ ಯೋಜನೆ ಯಡಿ 10 ಸಾವಿರಕ್ಕೂ ಹೆಚ್ಚು ಮನೆಗಳ ನಿರ್ಮಾಣಕ್ಕೆ ಅನುಮೋದನೆ ಹಾಗೂ ಅನುದಾನ ನೀಡಿದೆ. ಪೊಲೀಸರ ಆರೋಗ್ಯ ಕ್ಕಾಗಿ 100 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಪೊಲೀಸರ ದಕ್ಷತೆಗೆ ಅನುಗುಣವಾಗಿ ಅವರ ಕಲ್ಯಾಣ ಕಾರ್ಯಕ್ರಮಗಳಿಗೆ ವೇಗವಾಗಿ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸಿದೆ.

ಆಧುನೀಕರಣ
ಆಧುನೀಕರಣಕ್ಕೆ ಕೇಂದ್ರ ಸರ್ಕಾರ ನೀಡುವ ಅನುದಾನವನ್ನು ಕರ್ನಾಟಕ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ. ಸೈಬರ್ ಅಪರಾಧ ಮತ್ತು ನಾರ್ಕೋಟಿಕ್ಸ್ ತಡೆಯಲು ದೊಡ್ಡ ಪ್ರಮಾಣದಲ್ಲಿ ಆಧುನೀಕರಣ ಮಾಡುವ ಅವಶ್ಯಕತೆ ಇದೆ. Crime leads the law ಎನ್ನುವುದನ್ನು ಬದಲಾಯಿಸಿ ಕಾನೂನು ಅಪರಾಧಕ್ಕೆ ಮುಂಚಿತವಾಗಿ ರೂಪುಗೊಳ್ಳುವಂತೆ ಆಗಬೇಕು.ಅದಕ್ಕಾಗಿ ಸಿಬ್ಬಂದಿಗಳ ತರಬೇತಿ, ಆಧುನಿಕ ತಂತ್ರಜ್ಞಾನ ಬಳಕೆಯ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಕರ್ನಾಟಕ ಪೊಲೀಸ್ ಕೈಗೊಂಡಿದೆ.

ಆರ್ಥಿಕ ಅಪರಾಧಗಳನ್ನು ಪತ್ತೆಹಚ್ಚಲು ಎಸ್.ಎಂ.ಎಸ್ ಮೂಲಕವೇ ಪ್ರಕರಣ ದಾಖಲಿಸಿ ಖಾತೆಗಳನ್ನು ಮುಟ್ಟುಗೋಲು ಹಾಕುವ ಕ್ರಮ ಕೈಗೊಂಡಿದೆ. ಕಳ್ಳತನ ನಿಲ್ಲಿಸಲು ಕರ್ನಾಟಕ ಪೊಲೀಸರಿಗೆ ಸಾಧ್ಯವಾಗಿದೆ.

IMG 20220402 WA0024

ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿರಲಿ
ಮಾದಕವಸ್ತು ಮಾರಾಟದ ವಿರುದ್ಧ ಸಮರ ಸಾರಿರುವ ಕರ್ನಾಟಕ ಪೊಲೀಸ್ ಅತಿ ಹೆಚ್ಚು ಡ್ರಗ್ಸ್ ನ್ನು ವಶಪಡಿಸಿಕೊಳ್ಳಲಾಗಿದೆ.ದೊಡ್ಡ ಪ್ರಮಾಣದಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ನೂತನ ಕಾನೂನಿನ ಅನ್ವಯ ಅಪರಾಧಿಗಳನ್ನು ಶಿಕ್ಷೆಗೆ ಗುರಿಪಡಿಸಲಾಗಿದೆ. ಡ್ರಗ್ಸ್ ವಿರುದ್ದದ ಸಮರ ನಿರಂತರವಾಗಿ ನಡೆಯಬೇಕು. ಸಂಪೂರ್ಣವಾಗಿ ನಿಷೇಧ ವಾಗುವವರೆಗೂ ಪ್ರಯತ್ನ ಜಾರಿಯಲ್ಲಿರಬೇಕು. ಶಾಲಾ, ಕಾಲೇಜು, ಯುವಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಬೇಕು.
ಸೈಬರ್ ಅಪರಾಧಗಳನ್ನು ಕಂಡುಹಿಡಿಯಲು ಪೊಲೀಸರಿಗೆ ವಿಶೇಷ ತರಬೇತಿ ನೀಡಬೇಕು.

ಕೋವಿಡ್ ಸಂದರ್ಭದಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದು ಕೆಲಸ ಮಾಡಿರುವುದು ಶ್ಲಾಘನೀಯ ಮತ್ತು ದಾಖಲಾರ್ಹ ಎಂದು ಅಭಿನಂದನೆ ಸಲ್ಲಿಸಿದರು.