IMG 20200806 214955

ಸೆಪ್ಟಂಬರ್ ನಲ್ಲಿ ವಿಧಾನಸಭಾ ಅಧಿವೇಶನ….?

STATE Genaral

ಸೆಪ್ಟೆಂಬರ್ 23 ರೊಳಗೆ ರಾಜ್ಯ ವಿಧಾನಸಭಾ ಅಧಿವೇಶನ : ಸಭಾಧ್ಯಕ್ಷರಿಂದ ಸದನದಲ್ಲಿನ ವ್ಯವಸ್ಥೆಗಳ ಪರಿಶೀಲನೆ

ಬೆಂಗಳೂರು, ಆಗಸ್ಟ್ 6 (ಕರ್ನಾಟಕ ವಾರ್ತೆ) :

ಕಳೆದ ಮಾರ್ಚ್‍ನಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವು ನಡೆದಿದ್ದು, ಸಂವಿಧಾನಬದ್ದವಾಗಿ ಆರು ತಿಂಗಳ ಒಳಗೆ ಅಂದರೆ ಸೆಪ್ಟೆಂಬರ್ 23 ರೊಳಗೆ, ಮತ್ತೊಮ್ಮೆ ಸಮಾವೇಶಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸದನದಲ್ಲಿ ರಾಜ್ಯ ಸಚಿವ ಸಂಪುಟದ ಸದಸ್ಯರು ಮತ್ತು ಸದನದ ಸದಸ್ಯರು, ಸದನದಲ್ಲಿ ಹಾಜರಿರುವ ಅಧಿಕಾರಿಗಳು ಹಾಗೂ ಮಾಧ್ಯಮದವರ ಆರೋಗ್ಯಕ್ಕೆ ಕೋವಿಡ್-19 ರ ಸೋಂಕು ತಗುಲದಂತೆ ಕ್ರಮ ವಹಿಸುವುದು ಹೇಗೆ ? ಎಂಬುದರ ಕುರಿತು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಸದನದಲ್ಲಿನ ವ್ಯವಸ್ಥೆಗಳನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಕೋವಿಡ್-19 ರ ಉಪಟಳ ಎಲ್ಲೆಡೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನ ಸಭಾ ಅಧಿವೇಶನವನ್ನು ನಡೆಸುವುದು ಹೇಗೆ ? ಎಂಬ ಬಗ್ಗೆ  ವಿವಿಧ ಸ್ತರಗಳಲ್ಲಿ ವಿಸ್ತøತ ಚರ್ಚೆಗಳು ನಡೆಯುತ್ತಿವೆ.  ರಾಜ್ಯದ ರಾಜಧಾನಿಯ ವಿಧಾನ ಸೌಧ ಹೊರತುಪಡಿಸಿ ಬೇರೆಲ್ಲಾದರೂ ಅಧಿವೇಶನ ನಡೆಸಲು ಸೂಕ್ತ ಸ್ಥಳ ಇದೆಯೇ ? ಎಂಬ ಬಗ್ಗೆಯೂ  ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ವಿಧಾನ ಸೌಧದ ಮೊದಲನೇಯ ಮಹಡಿಯಲ್ಲಿರುವ ವಿಧಾನ ಸಭಾ ಸಭಾಂಗಣದಲ್ಲಿ ಪ್ರಸ್ತುತ ಇರುವ ಆಸನ ವ್ಯವಸ್ಥೆಗಳ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗಾಜಿನ ಕವಚಗಳನ್ನು ಅಳವಡಿಸಿದರೆ ಹೇಗೆ ? ಸದನಕ್ಕೆ ಆಗಮಿಸುವ  ಮುಖ್ಯಮಂತ್ರಿಗಳೂ ಒಳಗೊಂಡಂತೆ ಅವರ ಸಂಪುಟದ ಎಲ್ಲಾ ಸದಸ್ಯರು, ಪ್ರತಿಪಕ್ಷ ನಾಯಕರೂ ಒಳಗೊಂಡಂತೆ ಸದನದ ಎಲ್ಲಾ ಸದಸ್ಯರೂ ಅಧಿವೇಶನವು ನಡೆಯುವ ದಿನಗಳಂದು ಕಡ್ಡಾಯವಾಗಿ ಮುಖಗವಸು ಒದಗಿಸುವುದು ಹಾಗೂ ಮುಖ ರಕ್ಷಕಗಳನ್ನು ಧರಿಸಿಬರಬೇಕೆಂದು ವಿನಂತಿಸುವುದರ ಬಗ್ಗೆ ಅಧಿಕಾರಿಗಳು ತಮಗೆ ಸಲಹೆ ನೀಡಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪರಿಶೀಲನೆ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಲೋಕಸಭೆ ಮತ್ತು ರಾಜ್ಯ ಸಭೆ ಹಾಗೂ ಇತರೆ ರಾಜ್ಯಗಳಲ್ಲಿನ ವಿಧಾನ ಸಭೆ ಮತ್ತು ವಿಧಾನ ಪರಿಷತ್ತು ಸಮಾವೇಶಗೊಳ್ಳಲು ಹೇಗೆ ಸಿದ್ದತೆಗಳನ್ನು ನಡೆಸುತ್ತಿವೆ ? ಎಂಬುದರ ಬಗ್ಗೆಯೂ ಮಾಹಿತಿ ಕಲೆ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದರು.

ಮುಂದಿನ ವಾರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿ ಸ್ಥಳ ನಿಷ್ಕರ್ಷೆ ಮಾಡುವುದಾಗಿಯೂ ಸಭಾಧ್ಯಕ್ಷರು ತಿಳಿಸಿದರು.