IMG 20230307 WA0014

200 ಯೂನಿಟ್‌ ಉಚಿತ ವಿದ್ಯುತ್‌ ಹುಸಿ ಘೋ಼ಷಣೆ…!

Genaral STATE

200 ಯೂನಿಟ್‌ ಉಚಿತ ವಿದ್ಯುತ್‌ ಹುಸಿ ಘೋ಼ಷಣೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪವರ್‌ (ಇಲೆಕ್ಟ್ರಿಸಿಟಿ) ಜೊತೆ ʼಪವರ್‌ ಪಾಲಿಟಿಕ್ಸ್‌ʼ ಬಳಸದೆ ವಸ್ತವಾಂಶದ ಮೇಲೆ ನಿರ್ಣಯಗಳನ್ನು ಇಂಧನ ಇಲಾಖೆ ಹಿತದೃಷ್ಟಿಯಿಂದ ತೆಗೆದುಕೊಳ್ಳಬೇಕು. ಜನರಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು ಎನ್ನುವ ಹುಸಿ ಭರವಸೆಯನ್ನು ನೀಡಿ ಅವರನ್ನು ಮೋಸಗೊಳಿಸುವ ಯತ್ನ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಸೋಮವಾರ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಅವೈಜ್ಞಾನಿಕ ವಿದ್ಯುತ್‌ ನೀತಿಗಳಿಂದಾಗಿ ಈಗಾಗಲೇ ಇಂಧನ ಇಲಾಖೆ ನಷ್ಟದಲ್ಲಿದೆ. ಯಾರಿಗೋ ಲಾಭ ಮಾಡುವ ಉದ್ದೇಶದಿಂದ ವಿದ್ಯುತ್‌ ಇಲಾಖೆಯಲ್ಲಿ ರಾಜಕೀಯ ಪವರ್‌ ಬಳಸಿರುವುದನ್ನು ನಾವು ನೋಡಿದ್ದೇವೆ. ಇದರ ದುರುಪಯೋಗ ತಡೆಯಲು ನಮ್ಮ ಸರಕಾರ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
“ಈಗಾಗಲೇ ನಾವು ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಲ್ಲಿ 40 ಯೂನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುತಿದ್ದೇವೆ. ಗೃಹ ಬಳಕೆಯ ವಿದ್ಯುತ್‌ ಪ್ರಮಾಣ 50 ರಿಂದ 70 ಯೂನಿಟ್‌ ಮಾತ್ರ ಇರುತ್ತದೆ. ಇದರಲ್ಲಿ ಬಹುತೇಕ ಉಚಿತ ವಿದ್ಯುತ್‌ ನ್ನು ನಾವು ಈಗಾಗಲೇ ನೀಡುತ್ತಿದ್ದೇವೆ. 200 ಅಥವಾ 300 ಯೂನಿಟ್‌ ವಿದ್ಯುತ್‌ ಎಲ್ಲಿಯೂ ಕೂಡ ಬಳಕೆ ಆಗಲ್ಲ. ನಾವು 200 ಯೂನಿಟ್‌ ಉಚಿತ ನೀಡುತ್ತೇವೆ ಎನ್ನುವುದೇ ದೊಡ್ಡ ಮೋಸ ಎಂದು ಮುಖ್ಯಮಂತ್ರಿ ವಿವರಿಸಿದರು. 200 ಯೂನಿಟ್‌ ಫ್ರೀ ಕೊಡುತ್ತೇವೆ ಎಂದರೆ ಅರ್ಥ ಏನು? ಇದು ಜನರನ್ನು ಮೋಸಗೊಳಿಸುವ ಯತ್ನ ಎಂದು ಅಭಿಪ್ರಾಯಪಟ್ಟರು.

IMG 20230307 WA0018


ಪವರ್‌ ಜೊತೆಗೆ ಪವರ್‌ ಪಾಲಿಟಿಕ್ಸ್‌ ಬಳಸಬಾರದು. ವಾಸ್ತವ ಅಂಶದ ಮೇಲೆ ಮತ್ತು ಇಲಾಖೆಯ ದಕ್ಷತೆಯ ಹಿತದೃಷ್ಟಿಯಿಂದ ನಾವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು” ಎಂದು ಮುಖ್ಯಮಂತ್ರಿ ಸಲಹೆ ನೀಡಿದರು.
200 ಯೂನಿಟ್‌ ಒಂದು ಮನೆಗೆ ಖರ್ಚಾಗುವುದಿಲ್ಲ. ಈ ಅಂಶಗಳು ಜನರ ಮಧ್ಯೆ ಚರ್ಚೆ ಆಗಬೇಕು. ವಿದ್ಯುತ್‌ ಇಲಾಖೆಯಲ್ಲಿ ಏಕೆ ಕೊರತೆ ಆಗುತ್ತಿದೆ,. ಎಷ್ಟು ಸಹಾಯಧನವನ್ನು ರಾಜ್ಯ ಸರಕಾರ ಕೊಡಬಹುದು ಹಾಗು ಎಷ್ಟನ್ನು ನಾವು ನಿಭಾಯಿಸಬಹುದು ಎಂಬುದರ ಆಧಾರದ ಮೇಲೆ ನಾವು ಕೆಲಸ ಮಾಡಬೇಕಾಗಿದೆ.
ರಾಜ್ಯ ಸರಕಾರ ಸುಮಾರು 16000 ಕೋಟಿ ರೂ. ಸಬ್ಸಿಡಿಯನ್ನು ನೀಡುತ್ತಿದೆ. ಆದಾಗ್ಯೂ ಕೂಡ ಎಸ್ಕಾಂಗಳು ಸಾಲದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾದ ಪರಿಸ್ಥಿತಿ ಉದ್ಬವಿಸಿದೆ. ಕೆಲವು ಗ್ರಾಹಕರಿಂದ ವಿದ್ಯುತ್‌ ಸರಬರಾಜು ಶುಲ್ಕದ ಬಾಕಿ ಪಾವತಿ ಆಗದ ಕಾರಣದಿಂದಾಗಿ ಉತ್ಪಾದನೆ ಮತ್ತು ಆದಾಯದಲ್ಲಿ ಅಂತರ ಉಂಟಾಗಿದೆ. ಇದನ್ನು ಸರಿದೂಗಿಸಲು ರಾಜ್ಯ ಸರಕಾರ 9000 ಕೋಟಿ ರೂ. ವಿಶೇಷ ಅನುದಾನವನ್ನು ಇಂಧನ ಇಲಾಖೆಗೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
9000 ಸಾವಿರ ಕೋಟಿ ಜೊತೆಗೆ ಇನ್ನಷ್ಟು ಹಣವನ್ನು ನಮ್ಮ ಸರಕಾರ ಇಂಧನ ಇಲಾಖೆಗೆ ನೀಡಲಿದೆ ಎಂದು ಭರವಸೆ ನೀಡಿದರು.
ಬೇಸಿಗೆಯಲ್ಲಿ ವಿದ್ಯುಚ್ಚಕ್ತಿ ನಿರ್ವಹಣೆ , ಅದಕ್ಕೆ ಬೇಕಾದ ಯೋಜನೆ ಮಾಡಲಾಗುತ್ತಿದೆ. ವಿದ್ಯುಚ್ಚಕ್ತಿ ಉತ್ಪಾದನೆ ಜೊತೆಗೆ ಹೆಚ್ಚುವರಿ ಉತ್ಪಾದನೆಯನ್ನು ಮಾರಾಟ ಮಾಡಿ ರಾಜ್ಯ ಸರಕಾರ 2000 ಕೋಟಿ ರೂ. ವಹಿವಾಟು ಮಾಡಿದೆ ಎಂದು ತಿಳಿಸಿದರು.
ಈ ಹಿಂದೆ ಕಲ್ಲಿದ್ದಲ್ಲುನ್ನು ಆಮದು ಮಾಡಲಾಗುತ್ತಿತ್ತು. ಆದರೆ ಅದನ್ನು ನಮ್ಮ ಕಲ್ಲಿದ್ದಲು ಜೊತೆ ಮಿಕ್ಸ್‌ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚು ಧಾರಣೆಯ ಕಲ್ಲಿದ್ದಲು ಖರೀದಿಸಿರುವುದರಿಂದಾಗಿ ನಷ್ಟ ಉಂಟಾಗುತ್ತಿತ್ತು. ಹಾಗೆಯೇ ಕಲ್ಲಿದ್ದಲು ತೊಳೆಯಲು ಸಾವಿರಾರು ಕೋಟಿ ರೂ. ಖರ್ಚು ಮಾಡಲಾಗುತ್ತಿತ್ತು. ವಿದ್ಯುತ್‌ ಉತ್ಪಾದನೆ ಮತ್ತು ವಿತರಣೆಯ ನಷ್ಥದ ಲೆಕ್ಕಾಚಾರ ಕೂಡ ಆಗಬೇಕಾಗಿದೆ. ಇದನ್ನು ವೈಜ್ಞಾನಿಕವಾಗಿ ಮಾಡಬೇಕಾದ ಅವಕಶ್ಯತೆ ಇದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

IMG 20230307 WA0018 1


ಗುರುಚರಣ್‌ ಸಮಿತಿ ಶಿಫಾರಸು ಅನುಷ್ಠಾನ: ವಿದ್ಯುತ್‌ ಉತ್ಪಾದನೆ, ವಿತರಣೆ ಮತ್ತು ಪೂರೈಕೆಯಲ್ಲಿ ನಷ್ಟ ಉಂಟಾಗುತ್ತಿದೆ. ಈ ಮೂರು ವಲಯದಲ್ಲಿ ನಾವು ದಕ್ಷತೆಯನ್ನು ತಂದು ನಷ್ಟವನ್ನು ಕಡಿಮೆ ಮಾಡಬೇಕಾಗಿದೆ. ಹಲವಾರು ಸುಧಾರಣೆಗಳನ್ನು ಇಲಾಖೆಯಲ್ಲಿ ತರಲು ಗುರುಚರಣ್‌ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಸಮಿತಿ ನೀಡಿರುವ ಶಿಫಾರಸ್ಸುಗಳನ್ನು ಜಾರಿಗೆ ತರಲು ಕ್ರಮವಹಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಸ್ಕಾಡಾವನ್ನು ಬಹಳ ಯಶಸ್ವಿಯಾಗಿ ಇಂಧನ ಬಳಸಿಕೊಂಡಿದೆ. ಸ್ಕಾಡಾ ಇರುವುದರಿಂದಾಗಿ ದೊಡ್ಡ ಜಾಲದ ವಿದ್ಯುತ್‌ ವಿತರಣೆಯ ಸಂಪೂರ್ಣ ಮಾಹಿತಿ ಲಭ್ಯವಾಗುತ್ತಿದೆ. ಸ್ಕಾಡಾ ಅನುಷ್ಠಾನದಲ್ಲಿ ನಾವು ಯಶಸ್ವಿಯಾಗಿ ಮಾಡಿದ್ದೇವೆ. ಇದೀಗ ಸ್ಕಾಡಾ 2 ಯೋಜನೆಗೆ ಅನುಮತಿಯನ್ನು ನೀಡಲಾಗಿದೆ. ಇದರ ಉನ್ನತೀಕರಣದಿಂದ ದಕ್ಷತೆ ಜಾಸ್ತಿಯಾಗುತ್ತಿದೆ ಎಂದರು.
ಇದರ ಜೊತೆಗೆ ನವೀಕರಿಸಬಹುದಾದ ಇಂಧನವನ್ನು ಬಳಕೆಮಾಡಿ, ನಮ್ಮ ಪಂಪ್‌ ಸ್ಟೊರೇಜ್‌ ವ್ಯವಸ್ಥೆಗೆ ನಾವು ಕೈಹಾಕಿದ್ದೇವೆ. ಶರಾವತಿಯಲ್ಲಿ ಈ ಯೋಜನೆ ಅನುಷ್ಠಾನಕ್ಕೆ ನಾವು ಮುಂದಾಗಿದ್ದು, ನವೀಕರಿಸಬಹುದಾದ ಇಂಧನವನ್ನು ಬಳಸಲು ಪಂಪ್‌ ಸ್ಟೊರೇಜ್‌ ಅವಶ್ಯಕತೆ ಇದೆ. ಅದನ್ನು ನಾವು ಮಾಡುತ್ತೇವೆ. ಸ್ಟೊರೇಜ್‌ ಗೆ ಸೋಲಾರ್‌ ಬ್ಯಾಟರಿ ಬೇಕಾಗಿದ್ದು, ಇದನ್ನು ಪೂರೈಸಲು ಸರಕಾರ ಮುಂದಾಗಿದೆ ಎಂದು ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ತಿಳಿಸಿದರು.
“ನವೀಕರಿಸಬಹುದಾದ ಇಂಧನ ಸೇರಿ ನಾವು ಸುಮಾರು ಸುಮಾರು 30000 ಮ್ಯಾಗ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದೇವೆ. ಆದರೆ ಗರಿಷ್ಟ ವಿದ್ಯುತ್‌ ಬೇಡಿಕೆ ಸಮಯದಲ್ಲಿ ಇದು ಸಾದ್ಯವಾಗುತ್ತಿಲ್ಲ. ಹೀಗಾಗಿ ನಾವು ಸಾಂಪ್ರದಾಯಿಕ ಇಂಧನದ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ. ವಿದ್ಯುತ್‌ ಸಂಗ್ರಹ ಸಾದ್ಯವಾಗುತ್ತಿಲ್ಲ. ಆದ್ದರಿಂದ ವಿದ್ಯುತ್‌ ಉತ್ಪಾದನೆ, ವಿತರಣೆ ಮತ್ತು ಪೂರೈಕೆಯನ್ನು ಸರಿದೂಗಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಇದಕ್ಕೆ ವಿಶೇಷ ಆಡಳಿತ ನಿರ್ವಹಣೆ ಕೌಶಲ್ಯದ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಇಂಧನ ಇಲಾಖೆ ನೌಕರರ ವೇತನ ಪರಿಷ್ಕರಣೆ ಭರವಸೆ
ಇಂಧನ ಇಲಾಖೆ ನೌಕರರ ವೇತನ ಪರಿಷ್ಕರಣೆಯನ್ನು ಕುರಿತು ಆರ್ಥಿಕ ಇಲಾಖೆ ಮತ್ತು ಇಂಧನ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ . ಆದಷ್ಟೂ ಶೀಘ್ರ ಪರಿಷ್ಕರಣೆ ಮಾಡಿ ಬಹಳ ವರ್ಷದ ಬೇಡಿಕೆಯನ್ನು ನಮ್ಮ ಸರಕಾರ ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.
ಹೊಸ ಕಟ್ಟಡಗಳ ಉದ್ಘಾಟನೆ ಜೊತೆಗೆ ಸಲಕರಣೆಗಳ ಸಾಗಾಣಿಕೆಗೆ ಬೆಸ್ಕಾಂ ಖರೀದಿಸಿರುವ 25 ಹೊಸ ಲಾರಿಗಳಿಗೆ ಮುಖ್ಯಮಂತ್ರಿಯವರು ಹಸಿರು ನಿಶಾನೆ ತೋರಿದರು.