ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ತೀವ್ರಗೊಂಡ ಹೋರಾಟ
ಹತ್ತಿಕ್ಕಲು ಹೋಗದಿರಿ; ಸದನ ಮುಗಿದ ನಂತರವೂ ನಮ್ಮ ಹೋರಾಟ
ಬಿಜೆಪಿಯಿಂದ ವಿಧಾನಸೌಧ ಮುತ್ತಿಗೆ ಪ್ರಯತ್ನ
ಬೆಂಗಳೂರು: ಭ್ರಷ್ಟ ಸಚಿವ ನಾಗೇಂದ್ರರ ರಾಜೀನಾಮೆ ವಿಚಾರದಲ್ಲಿ ಸರಕಾರದ ಮೊಂಡುತನವನ್ನು ವಿರೋಧಿಸಿ ಹಾಗೂ ತಕ್ಷಣವೇ ರಾಜೀನಾಮೆ ಪಡೆಯಲು ಆಗ್ರಹಿಸಿ ಇಂದು ಬಿಜೆಪಿ ವತಿಯಿಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಖಂಡರು ಮತ್ತು ಕಾರ್ಯಕರ್ತರು ಮುಂದಾದರು.
ಗೂಂಡಾ ಸಂಸ್ಕೃತಿಯ ಸಿಎಂ- ವಿಜಯೇಂದ್ರ ಟೀಕೆ
ಭ್ರಷ್ಟ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯದೇ ವಿಪಕ್ಷಗಳನ್ನೇ ಟೀಕಿಸುವ ಮುಖ್ಯಮಂತ್ರಿಗಳೇ ಗೂಂಡಾ ಸಂಸ್ಕøತಿ ಉಳ್ಳವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಬಿಜೆಪಿ ವತಿಯಿಂದ ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಖಂಡರು ಮತ್ತು ಕಾರ್ಯಕರ್ತರು ಮುಂದಾದರು. ಈ ಸಂದರ್ಭದಲ್ಲಿ ಮುಖಂಡರು ಮತ್ತು ಹಲವಾರು ಕಾರ್ಯಕರ್ತರನ್ನು ಬಂಧಿಸಲಾಯಿತು. ಮುಖ್ಯಮಂತ್ರಿಗಳು ಯಾವ ರೀತಿ ಗೂಂಡಾಗಿರಿ ಮಾಡಿದ್ದಾರೆಂದು ರಾಜ್ಯದ ಜನರಿಗೆ ಮತ್ತು ಬೆಂಗಳೂರಿನ ಜನತೆಗೆ ಗೊತ್ತಿದೆ ಎಂದು ವಿಜಯೇಂದ್ರ ಅವರು ಇದೇವೇಳೆ ಮಾಧ್ಯಮಗಳಿಗೆ ತಿಳಿಸಿದರು.
ನಮ್ಮ ಹೋರಾಟ ಹತ್ತಿಕ್ಕಲು ಹೋಗದಿರಿ; ಸದನ ಮುಗಿದ ನಂತರವೂ ನಮ್ಮ ಹೋರಾಟ ಮುಂದುವರೆಯುತ್ತ್ತದೆ ಎಂದು ತಿಳಿಸಿದರು. ಬಿಜೆಪಿ ಮತ್ತು ಜೆಡಿಎಸ್ ವತಿಯಿಂದ ದಲಿತರ ಪರವಾಗಿ ಮತ್ತು ಧ್ವನಿ ಇಲ್ಲದವರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಮ್ಮ ಹೋರಾಟ ಇಲ್ಲಿಗೇ ನಿಲ್ಲದು ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳು ನಮ್ಮನ್ನು ಗೂಂಡಾಗಳೆಂದು ಕರೆದಿದ್ದಾರೆ. ಡಿ.ಕೆ.ಶಿವಕುಮಾರ್ ಅವರೇ, ನೀವು ಗೂಂಡಾಗಳು ಎಂದು ಟೀಕಿಸಿದರು.
ಇದು ನಾಗೇಂದ್ರ ಒಬ್ಬರ ಪ್ರಶ್ನೆಯಲ್ಲ; ದಲಿತರ ಹಣ ಕೊಳ್ಳೆ ಹೊಡೆದ ಸಚಿವರನ್ನು ದಲಿತರ ಹೆಸರು ಹೇಳಿಕೊಂಡು ರಕ್ಷಣೆ ಮಾಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಭ್ರಷ್ಟಾಚಾರ ಮಾಡುವುದು ಎಷ್ಟು ಅಪರಾಧವೋ ಭ್ರಷ್ಟರನ್ನು ಬೆಂಬಲಿಸುವುದು ಮಹಾ ಅಪರಾಧ ಎಂದು ಆರೋಪಿಸಿದರು. ಕಾಂಗ್ರೆಸ್ಸಿಗೆ ನಾಗೇಂದ್ರ ವಿಚಾರದಲ್ಲಿ ಭಯವೇಕೆ ಎಂದು ಅವರು ಪ್ರಶ್ನಿಸಿದರು. ಬಿಜೆಪಿ ವತಿಯಿಂದ ಹೋರಾಟ ಮುಂದುವರೆಯಲಿದೆ. ಸದನದಲ್ಲಿ ನಾವು ಈಗಾಗಲೇ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಸದನದ ಹೊರಗಡೆಯೂ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ವಜಾ ಮಾಡಲು ವಿಳಂಬ ಯಾಕೆ- ಆರ್.ಅಶೋಕ್
ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ಮಾಧ್ಯಮಗಳ ಜೊತೆ ಮಾತನಾಡಿ, ನಾಗೇಂದ್ರರ ವಿರುದ್ಧ ಸ್ಪಷ್ಟ ಆರೋಪಗಳಿದ್ದರೂ ಸಾಕ್ಷ್ಯಾಧಾರವಿದ್ದರೂ ಅವರನ್ನು ವಜಾ ಮಾಡದೇ ವಿಳಂಬ ಮಾಡುವುದೇಕೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ದಲಿತರ ಹಣ ನುಂಗಿದ್ದಾರೆ- ಛಲವಾದಿ ನಾರಾಯಣಸ್ವಾಮಿ
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಇದು ದಲಿತರ ಹಣ ನುಂಗಿದ ಸರಕಾರ. ಇವರು ಆರೋಪಿಯನ್ನೇ ಸಚಿವರನ್ನಾಗಿ ಮಾಡಿದ್ದು ಸರಿಯಲ್ಲ ಎಂದು ಟೀಕಿಸಿದರು. ಕೂಡಲೇ ನಾಗೇಂದ್ರರ ರಾಜೀನಾಮೆ ಪಡೆಯುವಂತೆ ಆಗ್ರಹಿಸಿದರು. ಸದನದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್, ಅವರ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
. ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಮ್ ಜೆ. ಗೌಡ, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ, ಬಿಬಿಎಂಪಿ ಮಾಜಿ ಸದಸ್ಯರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.
