IMG 20210916 WA0074

ಅಜಾತಶತ್ರು ಆಸ್ಕರ್ ಅವರಿಗೆ‌ ಅಶ್ರುತರ್ಪಣದ ವಿದಾಯ….!

Genaral STATE

ಅಜಾತಶತ್ರು ಆಸ್ಕರ್ ಅವರಿಗೆ‌ ಅಶ್ರುತರ್ಪಣದ ವಿದಾಯ

ಬೆಂಗಳೂರು: ಸೆ 16 : ಕಾಂಗ್ರೆಸ್ ನಿಷ್ಠಾವಂತ ನಾಯಕ, ಸರಳ, ಸಜ್ಜನ ವ್ಯಕ್ತಿತ್ವದ, ಅಜಾತಶತ್ರು, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರಿಗೆ ದಿಲ್ಲಿಯಿಂದ ಕರ್ನಾಟಕದ ಹಳ್ಳಿವರೆಗಿನ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಜನಸಾಮಾನ್ಯರು, ಕುಟುಂಬ ಸದಸ್ಯರು ಭಾರವಾದ ಹೃದಯದೊಡನೆ ಗುರುವಾರ ಅಂತಿಮ ವಿದಾಯ ಹೇಳಿದರು.

ಹಾಲಿ ರಾಜ್ಯಸಭೆ ಸದಸ್ಯರೂ ಆಗಿದ್ದ ಆಸ್ಕರ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಸುಮಾರು ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಪಕ್ಷಕ್ಕೆ ದುಡಿದಿದ್ದ, ಸರಳ ನಡೆ-ನುಡಿಯಿಂದ ಜನಾನುರಾಗಿಯಾಗಿದ್ದ ಆಸ್ಕರ್ ಅವರ ಪಾರ್ಥೀವ ಶರೀರ ಹೊಸೂರು ರಸ್ತೆಯ ಸೇಂಟ್ ಪ್ಯಾಟ್ರಿಕ್ ಸ್ಮಶಾನದ ಮಣ್ಣಿನಲ್ಲಿ ಗುರುವಾರ ಇಳಿಹೊತ್ತಿನಲ್ಲಿ ಲೀನವಾಯಿತು.

ಇದಕ್ಕೆ ಮೊದಲು ಕೆಪಿಸಿಸಿ ಕಚೇರಿ, ಸೇಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಕಾಂಗ್ರೆಸ್ ದಿಗ್ಗಜರಿಂದ ಹಿಡಿದು ಜನ ಸಾಮಾನ್ಯರವರೆಗೂ ಅನೇಕರು ಅಂತಿಮ ದರ್ಶನ ಪಡೆದು, ಭಾವಪೂರ್ಣ ನಮನ ಸಲ್ಲಿಸಿದರು.

IMG 20210916 WA0026

ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಎಸ್.ಆರ್. ಪಾಟೀಲ್, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ, ಅಬ್ದುಲ್ ರೆಹಮಾನ್ ಖಾನ್ ಮತ್ತಿತರ ಮುಖಂಡರು ಆಸ್ಕರ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಕ್ರಿಶ್ಚಿಯನ್ ಸಂಪ್ರದಾಯದಂತೆ ಅರ್ಚ್ ಬಿಷಪ್, ಪಾದ್ರಿಗಳು ಅಗಲಿದ ಚೇತನಕ್ಕೆ ಪ್ರಾರ್ಥನೆ ಮತ್ತಿತರ ವಿಧಿ-ವಿಧಾನಗಳನ್ನು ನೆರವೇರಿಸಿದರು. ಆತ್ಮಕ್ಕೆ ಚಿರಶಾಂತಿ ಕೋರಿದರು.

ಆಸ್ಕರ್ ಅವರ ಅಗಲಿಕೆ ಕಾರಣ ಸೋಮವಾರದಿಂದ ಕಾಂಗ್ರೆಸ್ ಕುಟುಂಬದಲ್ಲಿ ಸೂತಕದ ಛಾಯೆ ಆವರಿಸಿತ್ತು.

ನಿನ್ನೆ ಸಂಜೆ ಮಂಗಳೂರಿಂದ ತಂದು ಬೆಂಗಳೂರಿನ ಹೆಬ್ಬಾಳದ ಆಸ್ಟರ್ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದ್ದ ಆಸ್ಕರ್ ಅವರ ಪಾರ್ಥೀವ ಶರೀರವನ್ನು ಇಂದು ಬೆಳಗ್ಗೆ 10.45 ಕ್ಕೆ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಗೆ ತರಲಾಯಿತು. ಮಧ್ಯಾಹ್ನ 12.45 ರವರೆಗೂ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಕುಟುಂಬ ಸದಸ್ಯರು, ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು.

IMG 20210916 WA0078

ದಿಲ್ಲಿ, ರಾಜ್ಯದ ಪ್ರಮುಖ ಮುಖಂಡರ ಜತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸಲೀಂ ಅಹ್ಮದ್, ಧೃವನಾರಾಯಣ್, ರಾಮಲಿಂಗಾರೆಡ್ಡಿ, ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ, ಮಾಜಿ ಸಚಿವರಾದ ಎಚ್.ಕೆ. ಪಾಟೀಲ್, ಎಂಬಿ. ಪಾಟೀಲ್ ಕೆ.ಜೆ.ಜಾರ್ಜ್, ಪರಮೇಶ್ವರ, ಆರ್.ವಿ. ದೇಶಪಾಂಡೆ, ರಮೇಶ್ ಕುಮಾರ್, ಹೆಚ್.ಎಂ ರೇವಣ್ಣ, ಅಲ್ಲಂ ವೀರಭದ್ರಪ್ಪ ಅವರು ಸೇರಿದಂತೆ ಕರ್ನಾಟಜ, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಂಜಾಬ್ ಸೇರಿದಂತೆ ಬೇರೆ ರಾಜ್ಯಗಳ ಕಾಂಗ್ರೆಸ್ ನಾಯಕರು, ಸಂಸದರು, ಕಾರ್ಯಕರ್ತರು ಅಂತಿಮ ನಮನ ಸಲ್ಲಿಸಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮಧ್ಯಾಹ್ನ 2.30 ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್ ನಾಯಕ ರಾಹುಲ್ ಅವರ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರು ಆಸ್ಕರ್ ಅವರ ರೆಸ್ಟ್ ಹೌಸ್ ಅಪಾರ್ಟ್ ಮೆಂಟ್ ನ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ರಾಹುಲ್ ಗಾಂಧಿ ಅವರು ಆಸ್ಕರ್ ಪತ್ನಿ, ಪುತ್ರ, ಪುತ್ರಿ, ಮೊಮ್ಮಕ್ಕಳ ಜತೆ ಸೌಜನ್ಯದ ಮಾತುಕತೆ ನಡೆಸಿದರು.

ನಂತರ 3.45ಕ್ಕೆ ಸೇಂಟ್ ಜೋಸೆಫ್ ಕಾಲೇಜು ಬಳಿ ಇರುವ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್ ನಲ್ಲಿ ಆಸ್ಕರ್ ಅವರ ಪಾರ್ಥೀವ ಶರೀರಕ್ಕೆ ಕ್ರೈಸ್ತ ಸಂಪ್ರದಾಯದಂತೆ ಪ್ರಾರ್ಥನೆ ಸಲ್ಲಿಸಲಾಯಿತು. ಸಂಜೆ 5.40 ಕ್ಕೆ ಚರ್ಚ್ ಆವರಣದಲ್ಲಿ ಪಾರ್ಥೀವ ಶರೀರವನ್ನು ಇರಿಸಿ, ಸಕಲ ಸರ್ಕಾರಿ ಗೌರವಗಳನ್ನು ಅರ್ಪಿಸಲಾಯಿತು. ಮೃತರ ಗೌರವಾರ್ಥ ಗಾಳಿಯಲ್ಲಿ ಮೂರು ಸುತ್ತು ಕುಶಾಲತೋಪುಗಳನ್ನು ಹಾರಿಸಲಾಯಿತು. ಈ ಸಮಯದಲ್ಲೂ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯದ ಮತ್ತಿತರ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

IMG 20210916 WA0077

ನಂತರ ಸಂಜೆ 6.45 ಕ್ಕೆ ಹೊಸೂರು ರಸ್ತೆಯ ಸೇಂಟ್ ಪ್ಯಾಟ್ರಿಕ್ ಸ್ಮಶಾನದಲ್ಲಿ ಕ್ರೈಸ್ತ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಸುಮಾರು ಎರಡು ತಿಂಗಳ ಸುದೀರ್ಘ ಚಿಕಿತ್ಸೆ ನಡುವೆಯೂ ಮೂರು ದಿನಗಳ ಹಿಂದೆ ಮಂಗಳೂರಿನ ಎನಪೋಯ್ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥೀವ ಶರೀರವನ್ನು ಉಡುಪಿಯ ಹುಟ್ಟೂರಿನಿಂದ ಮಂಗಳೂರು ಮೂಲಕ ಬೆಂಗಳೂರಿಗೆ ಏರ್ ಲಿಫ್ಟ್ ಮಾಡಿಸಿ, ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಹಿಡಿದು ಅಂತಿಮ ಸಂಸ್ಕಾರ ಆಗುವವರೆಗೂ ಪ್ರತಿಯೊಂದು ಹಂತದಲ್ಲಿಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಸ್ಥೆ, ಮುತುವರ್ಜಿ ವಹಿಸಿದ್ದರು.