IMG 20220501 WA0004

ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಳಬೇಕು….!

Genaral STATE


ರಾಜಕಾರಣಿಗಳಷ್ಟೇ ಅಲ್ಲ ಅಧಿಕಾರಿಗಳೂ ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠ ಬೆಳೆಸಿಕೊಳ್ಳಬೇಕು: ಕಿರಣ್‌ ಬೇಡಿ

  • ಜಿ ಸುರಾನಾ ಲೀಡರ್‌ಶಿಪ್‌ ಅವಾರ್ಡ್‌ 2022 ಸ್ವೀಕಾರ

ಬೆಂಗಳೂರು ಮೇ 1: ಜನರ ಸಮಸ್ಯೆಗಳ ಪರಿಹಾರಕ್ಕೆ ಕೇವಲ ರಾಜಕಾರಣಿಗಳಷ್ಟೇ ಅಲ್ಲ ಪ್ರಮುಖ ಅಧಿಕಾರಿಗಳೂ ಕೂಡಾ ಜನರೊಂದಿಗೆ ಬೆರೆಯುವ ಪರಿಪಾಠವನ್ನು ಬೆಳೆಸಿಕೊಳ್ಳಬೇಕು. ಇದರಿಂದ ಜನರ ಹಲವಾರು ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲು ಸಾಧ್ಯ ಎಂದು ನಿವೃತ್ತ ಐಪಿಎಸ್‌ ಅಧಿಕಾರಿ ಮತ್ತು ಪಾಂಡಿಚೆರಿಯ ಮಾಜಿ ಲೆಪ್ಟಿನೆಂಟ್‌ ಗೌರ್ನರ್‌ ಕಿರಣ್‌ ಬೇಡಿ ಅಭಿಪ್ರಾಯಪಟ್ಟರು.

ಇಂದು ಬೆಂಗಳೂರಿನಲ್ಲಿ ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಲಾಗಿದ್ದ 3ನೇ ಆವೃತ್ತಿಯ ಸಿಜಿಎಸ್‌ ಕಾನ್‌ ಕ್ಲೇವ್‌ ನಲ್ಲಿ ದೇಶ ಮತ್ತು ಸಮುದಾಯಕ್ಕಾಗಿ ಉತ್ತಮ ಸೇವೆ ಸಲ್ಲಿಸಿದ ಗಣ್ಯರಿಗೆ ನೀಡಲಾದ, ಜಿಸಿ ಸುರಾನಾ ಲೀಡರ್‌ಶಿಪ್‌ ಅವಾರ್ಡ್‌ 2022 ನ್ನು ಸ್ವೀಕರಿಸಿ ಮಾತನಾಡಿದರು. ಸರಕಾರದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳು ತಮ್ಮ ನಾಯಕತ್ವದ ಸರಿಯಾದ ಉಪಯೋಗ ಮಾಡಿಕೊಳ್ಳುವುದು ಬಹಳ ಅಗತ್ಯ. ನಾನು ಐಪಿಎಸ್‌ ಅಧಿಕಾರಿಯಾಗಿ ಕೆಲಸ ಪ್ರಾರಂಭಿಸಿದ ಸಂಧರ್ಭದಲ್ಲಿ ಅಧಿಕಾರಿಗಳ ಮಧ್ಯೆ ಸಂವಹನವೇ ಇರುತ್ತಿರಲಿಲ್ಲ. ಇದು ಪಾಂಡಿಚೆರಿಯಲ್ಲೂ ಕಂಡುಬಂದಿತು. ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ನನ್ನ ಆಡಳಿತದಲ್ಲಿ ೬ “ಪಿ” ಗಳನ್ನು ಅಳವಡಿಸಿಕೊಂಡೆ. ಜನರಲ್ಲಿ ನಮ್ಮ ಆಡಳಿತದ ಬಗ್ಗೆ ನಂಬಿಕೆ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅಲ್ಲದೆ, ಅಧಿಕಾರಿಗಳು ಮತ್ತು ಪ್ರತಿ ಇಲಾಖೆಯ ಪ್ರಮುಖರು ಜನರ ಮಧ್ಯೆ ಬೆರೆಯುವ ಹಾಗೂ ಅಭಿವೃದ್ದಿ ಕಾರ್ಯಗಳನ್ನು ಸ್ವತಃ ಪರಿಶೀಲಿಸುವ ಪರಿಪಾಠವನ್ನು ಬೆಳೆಸಲಾಯಿತು. ಇದರಿಂದ ಅಭಿವೃದ್ದಿ ಕೆಲಸಗಳು ಬಹಳ ವೇಗ ಪಡೆದುಕೊಂಡವು. ಯಾರೋ ಗುರುತಿಸಲಿ ಎನ್ನುವ ಮನೋಭಾವನೆಯಿಂದ ಕೆಲಸಗಳನ್ನು ಮಾಡಬಾರದು, ನಮ್ಮ ಕೆಲಸಗಳೇ ನಮ್ಮನ್ನು ಗುರುತಿಸುವಂತಾಗಬೇಕು. ಶಿಕ್ಷಣ ನೀಡಿರುವ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡುವಂತೆ ಕರೆ ನೀಡಿದರು.

IMG 20220501 WA0003

ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವಥ್‌ ನಾರಾಯಣ ಮಾತನಾಡಿ, ಇಂದು ಶೈಕ್ಷಣಿಕ ಅಂಕಗಳು ಮಾತ್ರಾ ಉದ್ಯೋಗ ಪಡೆಯುವ ಮಾನದಂಡ ಅಲ್ಲ. ಕ್ರೀಡೆ, ವ್ಯಕ್ತಿತ್ವ ಬೆಳವಣಿಗೆ ಮತ್ತು ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ನೂತನ ರಾಷ್ಟ್ರಿಯ ಶಿಕ್ಷಣ ನೀತಿಯಿಂದ ನಮ್ಮ ಶೈಕ್ಷಣಿಕ ಪರಿಕ್ಷಾ ಪದ್ದತಿಯ ಮಾನದಂಡಗಳೇ ಬದಲಾಗಿವೆ. ಮೊದಲೆಲ್ಲಾ ಪುಸ್ತಕಗಳನ್ನು ಬಾಯಿಪಾಠ ಮಾಡಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬಹುದಿತ್ತು. ಆದರೆ, ಈಗ ವಿಷಯವನ್ನು ಸಮರ್ಥವಾಗಿ ತಿಳಿದುಕೊಂಡರೆ ಮಾತ್ರ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡವುದು ಸಾಧ್ಯ. ಬೆಂಗಳೂರು ಎಲ್ಲಾ ಕ್ಷೇತ್ರಗಳಲ್ಲೂ ಬಹಳ ಕ್ಷಿಪ್ರವಾಗಿ ಬೆಳೆಯುತ್ತಿದೆ. ಎಲ್ಲಾ ರಂಗಗಳಲ್ಲೂ ಕೂಡಾ ವಿಫುಲ ಅವಕಾಶಗಳು ಇವೆ. ಸುರಾನಾ ಶೈಕ್ಷಣಿಕ ಸಂಸ್ಥೆಗಳು ನಗರದ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಸುರಾನಾ ಕಾಲೇಜು ಸ್ವಾಯತ್ತ ಸ್ಥಾನಮಾನ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲವನ್ನೂ ಪ್ರಾರಂಭಿಸಲಿ. ಇದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪದ್ಮಶ್ರೀ ಪುರಸ್ಕೃತ ಡಾ. ರಮಣರಾವ್‌ ಮಾತನಾಡಿ, ಮೈಕ್ರೋಲ್ಯಾಬ್ಸ್‌ ಸಂಸ್ಥೆಯ ವತಿಯಿಂದ ಸುರಾನಾ ಕುಟುಂಬ ದೇಶದ ಆರೋಗ್ಯ ಕ್ಷೇತ್ರಕ್ಕೆ ಬಹಳ ಕೊಡುಗೆ ನೀಡಿದೆ. ನಾನು ಪ್ರತಿ ಭಾನುವಾರ ನಡೆಸುತ್ತಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಉಚಿತವಾಗಿ ಮಾತ್ರೆಗಳನ್ನು ನೀಡಿ ಸಹಕರಿಸುತ್ತಿದ್ದನ್ನ ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಸುರಾನಾ ಕಾಲೇಜಿನ ಹಿರಿಯ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು. ಸುರಾನಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಮೈಕ್ರೋಲ್ಯಾಬ್ಸ್‌ ನ ಎಂ.ಡಿ ದಿಲೀಪ್‌ ಸುರಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಫೋಟೊ ಕ್ಯಾಪ್ಶನ್: ಸುರಾನಾ ಕಾಲೇಜಿನ ವತಿಯಿಂದ ಆಯೋಜಿಸಿದ್ದ 3ನೇ ಆವೃತ್ತಿಯ ಸಿಜಿಎಸ್‌ ಕಾನ್‌ ಕ್ಲೇವ್‌ ನಲ್ಲಿ ನಿವೃತ್ತ ಐಪಿಎಸ್‌ ಅಧಿಕಾರಿ ಮತ್ತು ಪಾಂಡಿಚೆರಿಯ ಮಾಜಿ ಲೆಪ್ಟಿನೆಂಟ್‌ ಗೌರ್ನರ್‌ ಕಿರಣ್‌ ಬೇಡಿ, ಸಮರ್ಥನಂ ಸಂಸ್ಥೆಯ ಡಾ. ಜಿ.ಕೆ ಮಹಾಂತೇಶ್‌, ಶಿಕ್ಷಣ ತಜ್ಞ ಡಾ. ಹೆಚ್. ಆರ್‌ ಅಪ್ಪನ್ನಯ್ಯ, ಪದ್ಮಶ್ರೀ ಪುರಸ್ಕೃತ ಡಾ. ಬಿ ರಮಣರಾವ್‌ ಅವರಿಗೆ ಜಿಸಿ ಸುರಾನಾ ಲೀಡರ್‌ಶಿಪ್‌ ಅವಾರ್ಡ್‌ 2022 ನೀಡಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಸಚಿವರಾದ ಡಾ. ಸಿ ಎನ್‌ ಅಶ್ವಥ್‌ ನಾರಾಯಣ, ಸುರಾನಾ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ಅರ್ಚನಾ ಸುರಾನಾ, ಮೈಕ್ರೋಲ್ಯಾಬ್ಸ್‌ ನ ಎಂ.ಡಿ ದಿಲೀಪ್‌ ಸುರಾನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.