IMG 20220620 WA0047

Modi: ಪ್ರಧಾನಮಂತ್ರಿಗಳಿಂದ 33 ಸಾವಿರ ಕೋಟಿ ರೂ.ಗಳ ಯೋಜಗಳಿಗೆ ಚಾಲನೆ…!

Genaral STATE

ಕೊಮ್ಮಘಟ್ಟದಲ್ಲಿ ಪ್ರಧಾನಮಂತ್ರಿಗಳಿಂದ 33 ಸಾವಿರ ಕೋಟಿ ರೂ.ಗಳ ಯೋಜಗಳಿಗೆ ಚಾಲನೆ

ಯೋಜನೆಗಳ ಪೂರ್ಣಗೊಂಡಾಗ ಕರ್ನಾಕಟದ ಜಿಡಿಪಿ ಶೇ 2 ರಷ್ಟು ಹೆಚ್ಚಳ:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜೂನ್ 20: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಚಾಲನೆ ನೀಡಿರುವ 33 ಸಾವಿರ ಕೋಟಿ ವೆಚ್ಚದ ವಿವಿಧ ಯೋಜನೆಗಳು ಪೂರ್ಣಗೊಂಡಾಗ ಕರ್ನಾಕಟದ ಜಿಡಿಪಿ ಶೇ 2 ರಷ್ಟು ಹೆಚ್ಚಳವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಕೊಮ್ಮಘಟ್ಟದಲ್ಲಿ ಕೊಂಕಣ ರೈಲು ಮಾರ್ಗದ 100% ವಿದ್ಯುದೀಕರಣ, ಸರ್.ಎಂ.ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್, ಅರಸೀಕೆರೆ- ತುಮಕೂರು ಜೋಡಿ ರೈಲು ಮಾರ್ಗ ಹಾಗೂ ಹೊಸ ರೈಲು ಸೇವೆ, ಯಲಹಂಕ- ಪೆನುಕೊಂಡ ಜೋಡಿ ರೈಲು ಮಾರ್ಗ ಉದ್ಘಾಟನೆ ಹಾಗೂ ರೈಲು ಸೇವೆಗಳಿಗೆ ಚಾಲನೆ, ಬೆಂಗಳೂರು ಉಪ ನಗರ ಯೋಜನೆ ಹಾಗೂ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.

IMG 20220620 WA0042

ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ:
ಕರ್ನಾಟಕದ ಪ್ರಗತಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಷ್ಟು ಮಹತ್ವದ ಯೋಜನೆ ಇದಾಗಿದೆ. ನಮ್ಮೆಲ್ಲರ ಬಹಳ ದಿನಗಳ ಕನಸು ಸಬ್ ಅರ್ಬನ್ ರೈಲು ಯೋಜನೆ ನೆನೆಗುದಿಗೆ ಬಿದ್ದಿತ್ತು. ಪ್ರಧಾನಮಂತ್ರಿಗಳು ಕೇಂದ್ರದ ಸಹಾಯವನ್ನು ನೀಡಿ ಯೋಜನೆ ಇಂದು ನೆರವೇರಿದೆ. ನಾಲ್ಕು ದಿಕ್ಕಿನಲ್ಲಿ ಬೆಂಗಳೂರಿನ ವಿವಿಧ ಭಾಗಗಳನ್ನು ಸಂಪರ್ಕ ಮಾಡುವ ಅದ್ಭುತವಾದ ಯೋಜನೆ ಪ್ರಾರಂಭವಾಗಿದೆ. ಯಲಹಂಕದಿಂದ- ಹೈದರಾಬಾದ್ ವರೆಗೆ ಡಬ್ಲಿಂಗ್ ಲೈನ್, ಅರಸೀಕೆರೆಯಿಂದ ತುಮಕೂರು ನಡುವೆ ವಿದ್ಯುದೀಕರಣ, ಮಲ್ಟಿ ಮಾಡಲ್ ಲಾಜಿಸ್ಟಿಕ್ ಪಾರ್ಕ್ ತುಮಕೂರಿನ ಬಳಿ ಬರಲಿದೆ. ಐದು ರಾಜ್ಯಗಳನ್ನು ಇದು ಸಂಪರ್ಕಿಸುತ್ತದೆ. ಅತ್ಯಂತ ಮಹತ್ವದ ಯೋಜನೆಗಳಿಗೆ ಇಂದು ಚಾಲನೆ ದೊರೆತಿದೆ. ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ, ದೂರದೃಷ್ಟಿಯ ಫಲವಾಗಿ ಈ ಯೋಜನೆಗಳಾಗಿವೆ. ಹಲವಾರು ರಸ್ತೆಗಳು, ವಿಶೇಷವಾಗಿ ಬೆಂಗಳೂರಿಗೆ ಸಂಬಂಧಿಸಿದ ಎಸ್‍ಟಿಆರ್‍ಆರ್ ಇಡೀ ಬೆಂಗಳೂರನ್ನು ದಾಬಸ್‍ಪೇಟೆಯಿಂದ ಹಳೆ ಮದ್ರಾಸು ರಸ್ತೆಯವರೆಗೆ ಸಂಪರ್ಕಿಸುವ ಯೋಜನೆಯಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವಲ್ಲಿ ಈ ಯೋಜನೆ ನೆರವಾಗಲಿದೆ. ನಾಲ್ಕು ಸ್ಯಾಟಿಲೈಟ್ ಟೌನ್‍ಗಳಿಗೆ ಸಂಪರ್ಕ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

IMG 20220620 WA0013

ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ
ಇವೆಲ್ಲ ಯೋಜನೆಗಳಿಗೆ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಕಾರಣ. ಈ ದೇಶವನ್ನು ಮೋದಿಯವರು ಆಳುತ್ತಿರುವ ಸಂದರ್ಭದಲ್ಲಿ ಅವರ ದೂರದೃಷ್ಟಿಯಿಂದ ಈ ಯೋಜನೆಗಳೂ ಕೇಂದ್ರ ಸರ್ಕಾರದ ನೆರವಿನ ಸಹಾಯಹಸ್ತದಿಂದ ಜಾರಿಯಾಗಿವೆ. ಒಬ್ಬ ರಾಜಕಾರಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿರುತ್ತದೆ. ಒಬ್ಬ ಮುತ್ಸದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ದೇಶಕ್ಕೆ 75 ವರ್ಷ ಬಂದಾಗ ಅಮೃತಮಹೋತ್ಸವಕ್ಕೆ ಒಂದು ಹೊಸ ಶಕ್ತಿ ತುಂಬಿದ್ದಾರೆ. 2047 ರ ಸಂದರ್ಭದಲ್ಲಿ ಅವರು ಅಮೃತ ಕಾಲವನ್ನು ಘೋಷಿಸಿ, ವಿವಿಧ ಯೋಜನೆಗಳನ್ನು ರೂಪಸಿದ್ದಾರೆ. 2047 ರ ವೇಳೆಗೆ ಭಾರತ ಇಡೀ ವಿಶ್ವದಲ್ಲಿ ಅತ್ಯಂತ ಶ್ರೇಷ್ಠವಾದ, ನಂಬರ್ ಒನ್ ರಾಷ್ಟ್ರವಾಗುವ ನಿಟ್ಟಿನಲ್ಲಿ ಚಿಂತನೆಯಲ್ಲ, ಕಾರ್ಯಸೂಚಿ, ದಿಕ್ಸೂಚಿ ಹಾಗೂ ಗತಿಶಕ್ತಿಯನ್ನು ನೀಡಿದ್ದಾರೆ. ದೇಶವನ್ನು ಮುನ್ನಡೆಸುವ ಮೋದಿಯವರ ಮಾರ್ಗಸೂಚಿಯ ಪ್ರಕಾರ ಕರ್ನಾಟಕ ಇಂದು ಮುಂದುವರೆದಿದೆ. ಅವರದ್ದು ಕೇವಲ ದೊಡ್ಡ ಯೋಜನೆಗಳಲ್ಲ, ಮಾನವ ಸಂಪನ್ಮೂಲವನ್ನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಸ್ವಚ್ಛ ಭಾರತ, ಆಯುಷಮಾನ್ ಯೋಜನೆ, ಕಿಸಾನ್ ಸಮ್ಮಾನ್, ಪ್ರಧಾನಮಂತ್ರಿ ಆವಾಸ್ ಯೋಜನೆಗಳನ್ನು ರೂಪಿಸಿದ್ದಾರೆ. ವಿರೋಧ ಪಕ್ಷದವರು ಈ ಎಲ್ಲಾ ಯೋಜನೆಗಳ ಪ್ರಯೋಜನವೇನೆಂದು ಕೇಳುತ್ತಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪ್ರಯೋಜನವನ್ನು ರಾಜ್ಯದ 53.83 ಲಕ್ಷ ರೈತರು ಪಡೆದಿದ್ದಾರೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 34 ಲಕ್ಷ ಮನೆಗಳಿಗೆ ವಿದ್ಯುದೀಕರಣ ಮಾಡಲಾಗಿದೆ. ಜಲ್ ಜೀವನ್ ಯೋಜನೆಯಡಿ 43 ಲಕ್ಷ ಮನೆಗಳಿಗೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡಲಾಗಿದೆ. ನರೇಂದ್ರ ಮೋದಿಯವರು ಸಂಕಲ್ಪ ಮಾಡಿ ಗ್ರಾಮೀಣ ಮನೆಗಳಿಗೆ ಜಲ್ ಜೀವನ್ ಮಿಷನ್ ಯೋಜನೆ ಜಾರಿಗೆ ತಂದಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

IMG 20220620 WA0036

ಮೋದಿಯವರ ಮಾರ್ಗದರ್ಶನದಲ್ಲಿ ಕರ್ನಾಟಕ ಮುನ್ನಡೆಯುತ್ತಿದೆ
ಪಿಎಂ ಸ್ವನಿಧಿ ಯೋಜನೆ 1.45 ಲಕ್ಷ ಬೀದಿ ವ್ಯಾಪಾರಿಗಳು ಇದರಿಂದ ಪ್ರಯೋಜನೆ ಪಡೆದಿದ್ದಾರೆ. ಇಡೀ ದೇಶದಲ್ಲಿ ಮೊದಲು 1 ಕಿ.ಮೀ ಆಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ಈಗ ಪ್ರತಿದಿನ 16-17 ಕಿಮಿ ರಸ್ತೆಯಾಗುತ್ತಿವೆ. 415 ಹೊಸ ಮಾರ್ಗಗಳ 67 ವಿಮಾನನಿಲ್ದಾಣಗಳನ್ನು 8 ವರ್ಷದಲ್ಲಿ ನಿರ್ಮಾಣ, 5 ನಗರಗಳಿಗೆ ಮೆಟ್ರೋ ವಿಸ್ತರಣೆ, ಸಾಗರ್ ಮಾಲಾ ಯೋಜನೆಯಡಿ 194 ಯೋಜನೆಗಳಿಗೆ ಅನುಮೋದನೆ 596 ಹೊಸ ವೈದ್ಯಕೀಯ ಕಾಲೇಜುಗಳನ್ನು ನರೇಂದ್ರ ಮೋದಿಯವರು ನೀಡಿ ರಾಜ್ಯಕ್ಕೆ 4 ವೈದ್ಯಕೀಯ ಕಾಲೇಜುಗಳು ಬಂದಿವೆ. ಅವರ ಮಾರ್ಗದರ್ಶನದಲ್ಲಿ ಅವರ ಯೋಜನೆಗಳಿಗೆ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ಕರ್ನಾಟಕ ಮುನ್ನಡೆಯುತ್ತಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನವ ಭಾರತಕ್ಕೆ ನವ ಕರ್ನಾಟಕ

ಪ್ರಧಾನಮಂತ್ರಿಗಳ ಕನಸಾದ 5 ಟ್ರಿಲಿಯನ್ ಆರ್ಥಿಕತೆಗೆ ಕನಿಷ್ಠ 1.2 ಟ್ರಿಲಿಯನ್ ಡಾಲರ್ ಗಳನ್ನು ಕರ್ನಾಟಕದಿಂದ ಭಾರತಕ್ಕೆ ಕೊಡುಗೆ ನೀಡಬೇಕು. ಕರ್ನಾಟಕ ಅತ್ಯಂತ ಪ್ರಗತಿಪರ ರಾಜ್ಯ. ಕೃಷಿ, ಉತ್ಪಾದನಾ ತಂತ್ರಜ್ಞಾನ ವಲಯದಲ್ಲಿ ಮುಂಚೂಣಿಯಲ್ಲಿದೆ. ಅತಿ ಹೆಚ್ಚಿನ ಎಫ್‍ಡಿಐ ರಾಜ್ಯಕ್ಕೆ ಬಂದಿದೆ. ಅತಿ ಹೆಚ್ಚಿನ ಕೃಷಿ ಉತ್ಪನ್ನ ಕರ್ನಾಟಕದಲ್ಲಿ ಆಗುತ್ತಿದೆ. ರಾಜ್ಯ ಹೆದ್ದಾರಿಗಳು, 5 ಹೊಸ ವಿಮಾನ ನಿಲ್ದಾಣಗಳು, ಮೂರು ಬಂದರುಗಳು, ಇವೆಲ್ಲವನ್ನೂ ನಾವು ಕಾರ್ಯರೂಪಕ್ಕೆ ತರುತ್ತಿದ್ದೇವೆ. ಮೋದಿಯವರ ಕಲ್ಪನೆಯ ನವ ಭಾರತಕ್ಕೆ ನವ ಕರ್ನಾಟಕ ಜೊತೆ ನೀಡಲಿದೆ. ನವ ಕರ್ನಾಟಕದ ನಿರ್ಮಾಣದ ಕನಸನ್ನು ನಾವು ನನಸು ಮಾಡುತ್ತೇವೆ. ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಕಟ ಮಾತೆ ಎಂಬ ಮಾತನ್ನು ಅಕ್ಷರಶ: ನಿರೂಪಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.