IMG 20230329 WA0043

Karnataka:ಒಂದೇ ಹಂತದ ಚುನಾವಣೆಗೆ ಜೆಡಿಎಸ್ ಸ್ವಾಗತ…!

POLATICAL STATE

ಒಂದೇ ಹಂತದ ಚುನಾವಣೆಗೆ ಜೆಡಿಎಸ್ ಸ್ವಾಗತ

ಚೆಕ್ ಪೋಸ್ಟ್ ತಪಾಸಣೆ ನೆಪದಲ್ಲಿ ರೈತರು, ಸಾಮಾನ್ಯರಿಗೆ ಕಿರುಕುಳ ಆಗಬಾರದು: ಹೆಚ್.ಡಿ.ಕುಮಾರಸ್ವಾಮಿ

*

ಬೆಂಗಳೂರು: ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರಕ್ಕೆ ಜೆಡಿಎಸ್ ಪಕ್ಷದ ಸ್ವಾಗತ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಇವತ್ತು ರಾಜ್ಯದ ಚುನಾವಣಾ ದಿನಾಂಕ ಘೋಷಣೆಯಾಗಿದೆ. ಇದೊಂದು ರಾಜಕೀಯ ಪ್ರಕ್ರಿಯೆ ಅಷ್ಟೇ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ 5 ವರ್ಷಗಳಿಗೆ ಒಮ್ಮೆ ನಡೆಯುವ ಪ್ರಕ್ರಿಯೆ ಎಂದರು.

ಕಳೆದ ಒಂದು ವಾರದಿಂದ ಆಯೋಗದಿಂದ ಚುನಾವಣಾ ದಿನಾಂಕ ಪ್ರಕಟವಾಗುವ‌ ನಿರೀಕ್ಷೆ ಇತ್ತು, ಅದು ಈಗ ಘೋಷಣೆ ಆಗಿದೆ. ಎಲ್ಲರೂ ಚುನಾವಣೆಯ ಪಾವಿತ್ರ್ಯತೆ, ಪಾರದರ್ಶಕತೆ ಕಾಪಾಡುವುದರ ಎಲ್ಲಾ ಪಕ್ಷಗಳು ಹೇಳಿವೆ. ಆದರೆ, ಕಳೆದ ಹಲವು ದಿನಗಳಿಂದ ಹಲವು ಪಕ್ಷಗಳು ಮತದಾರರಿಗೆ ಆಮಿಷ ಒಡ್ಡುತ್ತಿವೆ. ಸಂಬಂಧಪಟ್ಟವರು ಅವರನ್ನು ಹಿಡಿಯುವ ಕೆಲಸ ಮಾಡಿದ್ದಾರೆ. ಇದರಲ್ಲಿ ರಾಷ್ಟ್ರೀಯ ಪಕ್ಷಗಳು ದೊಡ್ಡ ಮಟ್ಟದಲ್ಲಿ ವಾಚ್, ತವಾ‌, ಕುಕ್ಕರ್, ಸೇರಿ ಹಂಚಿದ್ದಾರೆ ಎಂದು ದೂರಿದರು ಅವರು.

ಇಷ್ಟು ಪ್ರಮಾಣದಲ್ಲಿ ವಸ್ತುಗಳನ್ನು ವಶಕ್ಕೆ ಪಡೆದ ಮೇಲೆಯೂ ಅದಕ್ಕೆ ಸಂಬಂಧಿಸಿದ ವ್ಯಕ್ತಿಗಳು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಈ ವ್ಯವಸ್ಥೆಯಲ್ಲಿ ಅವಕಾಶ ಇದೆ! ಇದೇ ನನಗೆ ಅಚ್ಚರಿ ಉಂಟು ಮಾಡುತ್ತಿದೆ. ಭ್ರಷ್ಟಾಚಾರ ಮುಕ್ತ ಅನ್ನೋದು‌ ಹೇಳೋದು ಸುಲಭ, ಆಚರಣೆ ಕಷ್ಟ ಎನ್ನುವುದು ಇದರಿಂದ ಅರ್ಥ ಆಗುತ್ತದೆ ಎಂದರು ಕುಮಾರಸ್ವಾಮಿ ಅವರು.

IMG 20230329 WA0042

ಈ ವಿಚಾರದಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಎಲ್ಲಾ ಕಡೆ ಚೆಕ್ ಪೋಸ್ಟ್ ಹಾಕಲಾಗಿದೆ. ಅದು ಒಳ್ಳೆಯ ಬೆಳವಣಿಗೆ. ಆದರೆ, ಕೆಲವು ಬಾರಿ‌ ಸಾರ್ವಜನಿಕರು ಸ್ವಂತ ಕೆಲಸಗಳಿಗೆ ಹಣ ತೆಗೆದುಕೊಂಡು ಹೋಗ್ತಾರೆ. ಅಂಥವರನ್ನು ಹಿಡಿದು ಹಣದ ದಾಖಲೆ ಕೇಳಿದರೆ‌ ಹೇಗೆ? ಅದನ್ನು ಆಯೋಗ ಮಾಡಬಾರದು. ರೈತರು, ಆಸ್ಪತ್ರೆಗಳಿಗೆ ಹೋಗುವವರಿಗೆ ತೊಂದರೆ ಕೊಡಬಾರದು ಎನ್ನುವುದು ನನ್ನ ಕಳಕಳಿ ಎಂದು ಅವರು ಹೇಳಿದರು.

ಇಂತಹ ವಿಷಯಗಳಲ್ಲಿ ಚುನಾವಣಾ ಆಯೋಗ ನೋಡಿ ತೀರ್ಮಾನ ಮಾಡಬೇಕು. ಜನ ಸಾಮಾನ್ಯರಿಗೆ ತೊಂದರೆ‌ ಆಗಬಾರದು. ಪ್ರಧಾ‌ನಿ‌ ಅವರು ನೋಡಿದರೆ ಯುದ್ಧೋಪಾದಿಯಲ್ಲಿ ಭ್ರಷ್ಟಾಚಾರ ನಿಂತಿದೆ‌‌ ಅಂತಾರೆ. ಎಲ್ಲಿ ನಿಂತಿದೆ? ಅಮಾಯಕರು‌ ಬಲಿಯಾಗಬಾರದು ಎಂದರು ಅವರು.

ಜೆಡಿಎಸ್ ಸಿದ್ಧತೆ ಪೂರ್ಣ:

ಸುದ್ದಿಗೋಷ್ಠಿ

ಚುನಾವಣೆಗೆ ಜೆಡಿಎಸ್ ಪಕ್ಷದ ಸಿದ್ಧತೆ 50-60% ತಯಾರಿ ಮುಗಿದಿದೆ. ಇನ್ನೆರಡು ದಿನದಲ್ಲಿ ಎರಡನೇ ಪಟ್ಟಿಯೂ ಹೊರಬರಲಿದೆ. ನಾಮಪತ್ರ‌ ಪ್ರಕ್ರಿಯೆಗೆ ನಮ್ಮ ಅಭ್ಯರ್ಥಿಗಳು ಸಿದ್ಧರಿದ್ದಾರೆ. 123 ಕ್ಷೇತ್ರಗಳಲ್ಲಿ ಗೆಲ್ಲುವ ನಮ್ಮ ಗುರಿ‌‌ ಈಡೇರುತ್ತದೆ ಎನ್ನುವ ಅಚಲ ನಂಬಿಕೆ ನನಗಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.

ಚನ್ನಪಟ್ಟಣದಲ್ಲಿ ಮಾತ್ರ ಸ್ಪರ್ಧೆ:

ಮಂಡ್ಯದಲ್ಲಿ ನಾನು ಸ್ಪರ್ಧೆ ಮಾಡುವ ಅಗತ್ಯ ಇಲ್ಲ. ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಲು ಪಕ್ಷದಲ್ಲಿ ನಿರ್ಧಾರ ಆಗಿದೆ. ಆದರೆ, ಮಂಡ್ಯಕ್ಕೆ ಬರುವಂತೆ ಕೆಲವರು ಕೇಳಿದ್ದು ನಿಜ. ಆದರೆ, ಚನ್ನಪಟ್ಟಣದ ಕಾರ್ಯಕರ್ತರಿಗೆ ಅದರಿಂದ ಬೇರೆ ಸಂದೇಶ ಹೋಗುತ್ತದೆ. ಹಾಗೆ ಆಗುವುದು ಬೇಡ. ಹೀಗಾಗಿ ನಾನು ಒಂದೇ ಕಡೆ ಸ್ಪರ್ಧೆ ಮಾಡುತ್ತೇನೆ. ಈ ಸ್ಪಷ್ಟನೆ ಇದೆ ನಮಗೆ ಎಂದು ಅವರು ತಿಳಿಸಿದರು.

ಇವಿಎಂ ಮೇಲಿನ ಅನುಮಾನ ನಿವಾರಣೆ ಆಗಲಿ:

ರಾಜ್ಯದಲ್ಲಿ ಹೊಸ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸುವ ಬಗ್ಗೆ ಚುನಾವಣಾ ಆಯೋಗ ಹೇಳಿದೆ. ಈ ಬಗ್ಗೆ ಏನು ಹೇಳುತ್ತೀರಿ ಎನ್ನುವ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು; ಮತಯಂತ್ರಗಳ ಬಗ್ಗೆ ಇರುವ ಅನುಮಾನ ನಿವಾರಣೆಯಾಗಬೇಕು. ಜನಸಾಮಾನ್ಯರಲ್ಲಿ ಇರುವ ಅನುಮಾನ‌ ನಿವಾರಿಸಬೇಕು.

ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ, ಯಶವಂತಪುರ ಕ್ಷೇತ್ರದ ಅಭ್ಯರ್ಥಿ ಜವರಾಯಿ ಗೌಡ, ಹಿರಿಯ ಮುಖಂಡರಾದ ಶ್ರೀಕಾಂತ್ ಮುಂತಾದವರು ಉಪಸ್ಥಿತರಿದ್ದರು.