IMG 20230415 WA0012

Karnataka:130 ಸ್ಥಾನಗಳಲ್ಲಿ ಬಿಜೆಪಿ ಮುಂದಿರಲಿದೆ….!

POLATICAL STATE

*130 ಸ್ಥಾನಗಳಲ್ಲಿ ಬಿಜೆಪಿ ಮುಂದಿರಲಿದೆ *: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*

ಹಾವೇರಿ, ಏಪ್ರಿಲ್ 15: ಈವರೆಗೆ ನಡೆದಿರುವ ಸಮೀಕ್ಷೆಗಳಲ್ಲಿ ಬಿಜೆಪಿಗೆ ಜಯ ದೊರೆಯಲಿದೆ ಎಂದು ವರದಿಗಳು ತಿಳಿಸಿದ್ದು, ಮೇ 10 ನೇ ತಾರೀಖು ನಡೆಯುವ ಮತದಾನದಂದು 130 ಸ್ಥಾನಗಳಲ್ಲಿ ಬಿಜೆಪಿ ಮುಂದಿರಲಿದೆ ಎಂದು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಿಗ್ಗಾಂವ – ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರಡಗಿ, ಹುರುಳಿಕೊಪ್ಪಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.

ಕಾಂಗ್ರೆಸ್ ನಿಂದ ಹಲವಾರು ಜನ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಬಾರಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿವೆ. ನಮ್ಮ ಕೆಲಸ ಮಾತಾಡಬೇಕು. ನಮ್ಮ ಕೆಲಸ ನೋಡಿ ಜನ ಮತ ಕೊಡಬೇಕಿದೆ ಎಂದರು. ವಿರೋಧ ಪಕ್ಷದವರು ಮನ ಬಂದಂತೆ ಮಾತನಾಡುತ್ತಾರೆ. ಯಾರು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದರು. ಮಾಜಿ ಶಾಸಕ ಮಂಜುನಾಥ್ ಕುನ್ನೂರು ಅವರು 2000 ಇಸವಿಯಲ್ಲಿ ಮಂಜೂರು ಮಾಡಿದ್ದನ್ನು ಈಗ ತಿಳಿಸುತ್ತಾರೆ ಎಂದರು. ಕೆಲವರು ಹೊರಗಿನ ತಾಲೂಕಿನಿಂದ ಚುನಾವಣೆಗೆ ಬರುತ್ತಾರೆ. ಚುನಾವಣೆ ಆದ ಮೇಲೆ ಅವರು ಬರಲ್ಲ, ಕಷ್ಟ ಸುಖ ಕೇಳುವುದಿಲ್ಲ.
ಹಾಲಿನಲ್ಲಿ ಉಪ್ಪು ಹಾಕೋಕೆ ಬರುತ್ತಾರೆ. ಇಂಥವರ ಮಾತು ಕೇಳಬೇಡಿ ಎಂದರು.

ಏಪ್ರಿಲ್ 19 ರಂದು ಎಲ್ಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಕೆ
ಜನರ ಆಶೀರ್ವಾದದಿಂದ ಇಂದು ನಾಮಪತ್ರ ಸಲ್ಲಿಸಿದ್ದು, ಎಪ್ರಿಲ್ 19 ನೇ ತಾರೀಖು ಬೃಹತ್ ಸಂಖ್ಯೆಯಲ್ಲಿ ಸೇರಬೇಕು. ಅಂದು ನಿಮ್ಮೆಲ್ಲರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗುವುದು ಎಂದರು.

ಸುಭದ್ರ ಸರ್ಕಾರ
ಕಳೆದ ಬಾರಿ ಬಿಜೆಪಿಗೆ 104 ಸ್ಥಾನ ಬಂದಿತ್ತು. ಆದರೆ ಕಾಂಗ್ರೆಸ್- ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಂಡರು. ಬಳಿಕ ಲೋಕಸಭಾ ಚುನಾವಣೆಯಲ್ಲಿ ಜನಾದೇಶ ಯಾರ ಕಡೆ ಇದೆ ಎಂದು ತೋರಿಸಿದರು. ಬಳಿಕ ಒಂದು ಸುಭದ್ರ ಸರಕಾರ ರಚನೆ ಮಾಡಲಾಯಿತು ಎಂದರು.
ಕೋವಿಡ್ ಪರಿಸ್ಥಿತಿಯಲ್ಲಿ ಸವಣೂರು ಕೂಡಾ ತತ್ತರಿಸಿತ್ತು. ಅಂದು ಉಚಿತ ರೇಷನ್,ಹಾಗೂ ಲಸಿಕೆ ನೀಡಲಾಯಿತು ಎಂದು ವಿವರಿಸಿದರು.

16 ಗಂಟೆ ಕೆಲಸ
ದಿನವೊಂದರಲ್ಲಿ 16 ತಾಸು ಕೆಲಸ ಮಾಡಿದ್ದು, ಕೇವಲ ಐದು ತಾಸು ನಿದ್ದೆ ಮಾಡಿರುವುದಾಗಿ ತಿಳಿಸಿದ ಅವರು ಪ್ರವಾಹ ಬಂದಾಗ ಎಲ್ಲಾ ಜಿಲ್ಲೆಗಳಲ್ಲಿ ಓಡಾಡಿ ದೊಡ್ಡ ಪ್ರಮಾಣದ ಸಹಾಯ ಶಿಗ್ಗಾವಿ – ಸವಣೂರು ತಾಲೂಕಿನಲ್ಲಿ ನಮ್ಮ ಸರ್ಕಾರದಿಂದ ಮಾಡಲಾಗಿದೆ ಎಂದರು.

ಆರ್ಥಿಕ ಸುಧಾರಣೆ
ಆರ್ಥಿಕ ಸುಧಾರಣೆ ಮಾಡುವುದರೊಂದಿಗೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ.
ಮೊದಲ ಸಚಿವ ಸಂಪುಟದಲ್ಲಿಯೇ ರೈತ ವಿದ್ಯಾನಿಧಿ ಜಾರಿಗೆ ತರಲಾಯಿತು. ಈ ವರ್ಷ ಎಲ್ಲಾ ರೈತ ಬಾಂಧವರಿಗೆ ಜೀವವಿಮೆ, ಆರೋಗ್ಯ ವಿಮೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ನೀಡಲಾಗಿದೆ.
3 ಲಕ್ಷದಿಂದ 5 ಲಕ್ಷ ಶೂನ್ಯ ಬಡ್ಡಿದರದಲ್ಲಿ ಸಾಲ ಕೊಡುವ ಯೋಜನೆ, ರೈತರಿಗೆ ಬೀಜ ಗೊಬ್ಬರಕ್ಕಾಗಿ 10 ಸಾವಿರ ರೂ, ರೈತ ಸಮ್ಮಾನ್ ಯೋಜನೆಯಡಿ ನೀಡಲಾಗಿದೆ. ನಾಲ್ಕು ವರ್ಷಗಳ ಲ್ಲಿ 16 ಸಾವಿರ ಕೋಟಿ ರೂ.ಗಳನ್ನು 54 ಲಕ್ಷ ರೈತರಿಗೆ ನೀಡಲಾಗಿದೆ. ಪಿ.ಯುಸಿ ಹಾಗೂ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದರು.

ಸಮಗ್ರ ಅಭಿವೃದ್ಧಿ
ಶಿಗ್ಗಾಂವಿ -ಸವಣೂರು ಭಾಗದಲ್ಲಿ 100 ಕ್ಕಿಂತಲೂ ಹೆಚ್ಚು ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಿದ್ದು, ಸವಣೂರಿನಲ್ಲಿ 67 ಕೋಟಿ ರೂ.ಗಳನ್ನು ವೆಚ್ಚ ಮಾಡಿ ಆಯುರ್ವೇದ ಕಾಲೇಜು ನಿರ್ಮಾಣ ಮಾಡಲಾಗುತ್ತಿದೆ. 30 ಕೋಟಿ ವೆಚ್ಚದಲ್ಲಿ ಐಟಿಐ ನಿರ್ಮಾಣ, 100 ಕೋಟಿ ಗಿಂತ ಹೆಚ್ಚು ವೆಚ್ಚದಲ್ಲಿ ತಾಯಿ – ಮಗು ಆಸ್ಪತ್ರೆ, ಮುಂತಾದ ಕಾರ್ಯಗಳನ್ನು ಸವಣೂರು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಲಾಗಿದೆ ಎಂದರು. ಉಳಿದೆಲ್ಲಾ ಕ್ಷೇತ್ರಗಳಿಗಿಂತ ಅತ್ಯುತ್ತಮ ಸಂಪರ್ಕ ರಸ್ತೆಗಳು, ಎಲ್ಲಾ ಸಮುದಾಯಗಳಿಗೆ ನ್ಯಾಯ ನೀಡುವ ಕೆಲಸವನ್ನು ಮಾಡಲಾಗಿದೆ ಎಂದರು.

ಮೀಸಲಾತಿ ಹೆಚ್ಚಳ
ಕುರಿಗಾಹಿಗಳಿಗೆ ವಿಶೇಷ ಯೋಜನೆ, ಕುರಿಗಾಹಿ ಸಂಘಗಳಿಗೆ ಹಣ ಬಿಡುಗಡೆಯಾಗಲಿದ್ದು, ಕುರಿಗಳನ್ನು ಕೊಳ್ಳಬಹುದಾಗಿದೆ. ಪರಿಶಿಷ್ಟ ರ ಮೀಸಲಾತಿ ಹೆಚ್ಚಳ ಮಾಡಿ ನ್ಯಾಯ ನೀಡಲಾಗಿದೆ. ರೈತಾಪಿ ವರ್ಗಕ್ಕೆ ಮೀಸಲಾತಿ ಹೆಚ್ವಿಸಿ ಅವರ ಬಹುದಿನಗಳ ಬೇಡಿಕೆ ಈಡೇರಿಸಲಾಗಿದೆ ಎಂದರು.

ಬೇಧಭಾವವಿಲ್ಲದೆ ಅಭಿವೃದ್ಧಿ
ಸವಣೂರಿನಲ್ಲಿ ಎಲ್ಲಾ ಅಲ್ಪಸಂಖ್ಯಾತರ ಅಂದರೆ ದರ್ಗಾ, ಬಸದಿಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಿದೆ. ತಾಲ್ಲೂಕಿನ ಪ್ರಮುಖ 500 ದೇವಾಲಯಗಳಿಗೆ ಅನುದಾನ ಕಳೆದ 15 ವರ್ಷಗಳಲ್ಲಿ ಒದಗಿಸಲಾಗಿದೆ. ಮೂಲಭೂತ ಸೌಕರ್ಯ, ಸಂಸ್ಥೆಗಳ ನಿರ್ಮಾಣ, ಮುಂತಾದ ಕಾರ್ಯಕ್ರಗಳನ್ನು ಮಾಡಲಾಗಿದೆ. ಬಾಡಾದಲ್ಲಿ ಕನಕದಾಸರ ಅರಮನೆ ಅಭಿವೃದ್ಧಿ, ಶಿಶುನಾಳ ಶರೀಫರ ಜನ್ಮಸ್ಥಳದ ಅಭಿವೃದ್ಧಿ, ಸವಣೂರು ನವಾಬರ ಅರಮನೆಯ ಅಭಿವೃದ್ಧಿಯನ್ನು ಬೇಧಭಾವವಿಲ್ಲದೆ ಮಾಡಲಾಗಿದೆ ಎಂದರು. ಪ್ರತಿ ಊರಿನಲ್ಲಿ ಫೋಟೋ ಸಮೇತ ಅಭಿವೃದ್ಧಿ ಕಾರ್ಯಗಳ ಪಟ್ಟಿ ಮಾಡಿ ಹಂಚುವಂತೆ ಸೂಚಿಸಲಾಗಿದೆ ಎಂದರು. ಅಭಿವೃದ್ಧಿಯ ಹೆಸರಿನಲ್ಲಿ ಜನ ನಮಗೆ ಮತ ನೀಡಬೇಕಿದೆ ಎಂದರು.

ಶಿಗ್ಗಾವಿ – ಸವಣೂರಿನ ಶಕ್ತಿ ಪ್ರದರ್ಶಿಸಿ
19 ನೇ ತಾರೀಖು ಬಹಳ ದೊಡ್ಡ ಸಂಖ್ಯೆಯಲ್ಲಿ ಜನ ಬರಬೇಕು. ದೊಡ್ಡ ಪ್ರಮಾಣದಲ್ಲಿ ಜನ ಬಂದು ಅಂದಿನ ಕಾರ್ಯಕ್ರಮ ಯಶಸ್ವಿಗೊಳಿಸಿ, ಶಿಗ್ಗಾವಿ – ಸವಣೂರಿನ ಶಕ್ತಿ ಅಂದು ತೋರಿಸಬೇಕು ಎಂದರು.