IMG 20230606 WA0004

JD(S): ಕಾಂಗ್ರೆಸ್ ಆಕಾಶದಲ್ಲಿ ಇದೆ, ನಾವು ನೆಲದಲ್ಲಿ ಇದ್ದೇವೆ ಬಿಡಿ…!

POLATICAL STATE

ಕಾಂಗ್ರೆಸ್ ಆಕಾಶದಲ್ಲಿ ಇದೆ, ನಾವು ನೆಲದಲ್ಲಿ ಇದ್ದೇವೆ ಬಿಡಿ ಎಂದ ಹೆಚ್.ಡಿ.ಕುಮಾರಸ್ವಾಮಿ

ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗುತ್ತದೆ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ಗೆಲುವಿನ ಅಮಲಿನಲ್ಲಿ ಆಕಾಶದಲ್ಲಿ ಇದೆ. ನಾವು ನೆಲದಲ್ಲಿ ಇದ್ದೇವೆ. ನಾವು ಆಕಾಶಕ್ಕೆ ಏರಲು ಆಗುತ್ತಾ..? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ಕೊಟ್ಟರು.

ಬೆಂಗಳೂರಿನಲ್ಲಿ ಇಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರನ್ನು ಭೇಟಿಯಾಗಲು ಬಂದಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಡಾ. ಫಾರೂಖ್ ಅಬ್ದುಲ್ಲಾ ಅವರನ್ನು ಬೀಳ್ಕೊಟ್ಟ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು.

IMG 20230607 WA0056

ಎಲ್ಲರೂ ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೇ ಮಾತನಾಡುತ್ತಿದ್ದಾರೆ. ಎಲ್ಲಿಗೆ ಬರುತ್ತೆ ಎಂದು ನೋಡೋಣ. ನಾವು ಕಾಂಗ್ರೆಸ್ ಜೊತೆ ರಾಜಕೀಯದಲ್ಲಿ ಭಾಗಿಯಾಗಲು ಆಗುತ್ತಾ? ಕಾಂಗ್ರೆಸ್ ನವರು ನಮ್ಮನ್ನು ಲೆಕ್ಕಕ್ಕೂ ಇಟ್ಟಿಲ್ಲ. ಕಾಂಗ್ರೆಸ್‌ ನವರು ಆಕಾಶದ ಮೇಲೆ ಇದ್ದಾರೆ, ನಾವು ಭೂಮಿ ಮೇಲೆ ಇದ್ದೇವೆ. ಅಂತಹವರ ಜೊತೆ ನಾವು ಚರ್ಚೆ ಮಾಡಲು ಆಗುತ್ತಾ? ಎಂದರು ಮಾಜಿ ಮುಖ್ಯಮಂತ್ರಿಗಳು.

ಜನ ಅವರಿಗೆ ಸಂಪೂರ್ಣ ಆಶೀರ್ವಾದ ಮಾಡಿದ್ದಾರೆ. ಅವರನ್ನು ಮತ್ತೆ ಜನ ಆಕಾಶದಿಂದ ಕೆಳಗೆ ಇಳಿಸಬೇಕು ಅಲ್ವಾ? ಅವರು ಭೂಮಿಗೆ ಬರುವ ತನಕ ನಾವು ಕಾಯಬೇಕು ತಾನೇ. ನಾವು ಆಕಾಶಕ್ಕೆ ಏರಲು ಆಗುತ್ತಾ..? ಭೂಮಿಯಲ್ಲಿ ಇದ್ದೇವೆ. ನೋಡೋಣ ಕಾಯೋಣ ಎಂದು ಕುಮಾರಸ್ವಾಮಿ ಅವರು ಮಾರ್ಮಿಕವಾಗಿ ಹೇಳಿದರು.

ಗ್ಯಾರಂಟಿಗಳ ಅಸಲಿ ಬಣ್ಣ ಬಯಲಾಗುತ್ತದೆ:

ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಸಚಿವ ಚೆಲುವರಾಯಸ್ವಾಮಿ ಅವರ ವಿಡಿಯೋ ವೈರಲ್ ಆಗಿರುವ ಬಗ್ಗೆ ಗಮನ ಸೆಳೆದಾಗ ಮಾಜಿ ಮುಖ್ಯಮಂತ್ರಿ ಅವರು ಹೇಳಿದ್ದಿಷ್ಟು;

ಚುನಾವಣೆಗಾಗಿ ಜನರ ಮತ ಪಡೆಯಲು ಅಂತಹ ಸಂದರ್ಭದಲ್ಲಿ ಚೀಪ್ ಗಿಮಿಕ್ ಸರ್ವೆ ಸಾಮಾನ್ಯ ಎಂದು ಅವರು ಹೇಳಿದ್ದಾರೆ. ಆ ವಿಡಿಯೋ ನಾನು ನೋಡಿದ್ದೇನೆ, ಕೇಳಿಸಿಕೊಂಡಿದ್ದೇನೆ. ಸತ್ಯಾಂಶಗಳು ಒಂದೊಂದೇ ಹೊರಗೆ ಬರುತ್ತಿವೆ. ವೋಟ್ ಪಡೆಯಲು ನಾಡಿನ ಜನತೆಯನ್ನು ಯಾವ ರೀತಿ ದಾರಿ ತಪ್ಪಿಸಿದ್ದೇವೆ ಎಂದು ಅವರೇ ಹೇಳಿಕೊಂಡಿದ್ದಾರೆ. ಕೊನೆಪಕ್ಷ ಹೀಗೆ ಸತ್ಯ ಒಪ್ಪಿಕೊಳ್ಳುವ ಮೂಲಕ ತಮ್ಮ ಅಸಲಿ ಸಾಚಾತನ ತೋರಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದರು.

ರಾಜ್ಯದ ಪರಿಸ್ಥಿತಿ ಹೇಗಿದೆ ಎಂಬುದನ್ನು ಉಪ ಮುಖ್ಯಮಂತ್ರಿ ಅವರು ಕಣ್ಣಿಗೆ ಕಟ್ಟಿದಂತೆ ಹೇಳಿದ್ದಾರೆ. ಇವತ್ತು ಜಲಮಂಡಳಿ ನೌಕರರಿಗೆ ಸಂಬಳ ಕೊಡು ದುಡ್ಡು ಇಲ್ಲ. ಖಜಾನೆ ಖಾಲಿಯಾಗಿದೆ ಎಂದು ಹೇಳಿದ್ದಾರೆ. ಈಗಾಗಲೇ ಸರಕಾರ ಹೇಳಿದ್ದಾರೆ ವಿದ್ಯುತ್ ದರ ಹೆಚ್ಚಿಸಿದೆ. ಈಗ ನೀರಿನ ದರವನ್ನು ಹೆಚ್ಚಳ ಮಾಡುವುದಕ್ಕೆ ಅವರು ಪರೋಕ್ಷ ಸುಳಿವು ನೀಡಿದ್ದಾರೆ. ಅಲ್ಲಿಗೆ ಈ ಸರಕಾರದ ನಿಜ ಬಣ್ಣ ಏನು ಎನ್ನುವುದು ಜನರಿಗೆ ಅರ್ಥವಾಗುತ್ತಿದೆ. ಒಂದು ಕೈಯ್ಯಲ್ಲಿ ಕೊಡೋದು, ಎರಡು ಕೈಯ್ಯಲ್ಲಿ ಕಿತ್ತುಕೊಳ್ಳೋದು. ಇದು ಈ ಸರಕಾರದ ಸಾಮಾಜಿಕ ನ್ಯಾಯ ಎಂದು ಅವರು ಕಿಡಿಕಾರಿದರು.

ಕಾಂಗ್ರೆಸ್ ಒಂದು ಕಡೆ ಗ್ಯಾರಂಟಿ ಎನ್ನುವುದು ಎಲ್ಲರಿಗೂ ಉಚಿತ ಖಚಿತ ಎಂದು ಹೇಳುತ್ತಿದ್ದರು. ಈಗ ಅದರ ಜತೆಗೆ ದರ ಏರಿಕೆಯೂ ಖಚಿತ ಆಗಿದೆ. ಈಗ ಬೆಲೆ ಏರಿಕೆಯೂ ನಿಶ್ಚಿತ ಎಂದು ಹೇಳುತ್ತಿದ್ದಾರೆ. ಬೆಲೆ ಏರಿಕೆ ಗ್ಯಾರಂಟಿಯೇ ಜನರಿಗೆ ಗಟ್ಟಿ. ಜನರಿಗೆ ಇನ್ನು ಯಾವ ಯಾವ ಕೊಡುಗೆ ಕೊಡುತ್ತಾರೆ ಎಂದು ಸ್ವಲ್ಪ ದಿನ ಕಾದು ನೋಡೋಣ ಎಂದರು ಮಾಜಿ ಮುಖ್ಯಮಂತ್ರಿಗಳು.

ಕಾಂತರಾಜು ವರದಿ ಬಗ್ಗೆ:

ಕಾಂತರಾಜು ವರದಿಯನ್ನು ಸ್ವೀಕಾರ ಮಾಡುವ ಬಗ್ಗೆ ಮುಖ್ಯಮಂತ್ರಿಗಳ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರ ನೀಡಿದ ಕುಮಾರಸ್ವಾಮಿ ಅವರು, ಆ ವರದಿ ಬರಲಿ, ಅದರಲ್ಲಿ ಏನೂ ಗುಮ್ಮ ಇದೆ ಎಂದು ನೋಡೋಣ ಎಂದರು.

ಆ ವರದಿಯನ್ನು ಯಾವ ರೀತಿ ಬರೆಸಿಕೊಂಡಿದ್ದಾರೆ, ಹೇಗೆ ಬರೆಸಿದ್ದಾರೆ ಎಂಜುವುದನ್ನು ನೋಡೋಣ. ವಾಸ್ತವಾಂಶ ಏನೂ ಇದೆ ಗಮನಿಸೋಣ, ವರದಿ ಮಂಡನೆ ಮಾಡುತ್ತೇವೆ ಎಂದು ಹೇಳಿದ್ದಾರೆ ಅವರು. ಅದಕ್ಕೆ ನಮ್ಮ ಸ್ವಾಗತ ಇದೆ ಎಂದರು ಅವರು.