IMG 20240316 WA0079

Tumkur : ಲೋಕಸಭಾ ಚುನಾವಣೆ- ಇಂದಿನಿಂದಲೇ ನೀತಿ ಸಂಹಿತೆ…!

DISTRICT NEWS ತುಮಕೂರು

ಲೋಕಸಭಾ ಚುನಾವಣೆ- ಇಂದಿನಿಂದಲೇ ನೀತಿ ಸಂಹಿತೆ ಜಾರಿ – ಶುಭ ಕಲ್ಯಾಣ್.

ತುಮಕೂರು(ಕ.ವಾ.)ಮಾ.16: ಭಾರತ ಚುನಾವಣಾ ಆಯೋಗವು ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಘೋಷಿಸಿದ್ದು, ಅದರಂತೆ ನೀತಿ ಸಂಹಿತೆಯು ತಕ್ಷಣದಿಂದ ಜಾರಿಗೆ ಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾರ್ಚ್ 28, 2024ರಂದು ಗೆeóÉಟ್ ಅಧಿಸೂಚನೆ ಹೊರಡಿಸುವಿಕೆ, ಏಪ್ರಿಲ್ 4 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ, ಏಪ್ರಿಲ್ 5 ನಾಮಪತ್ರ ಪರಿಶೀಲನೆ, ಏಪ್ರಿಲ್ 8 ನಾಮಪತ್ರ ಹಿಂತೆಗೆಯುವಿಕೆ, ಮತದಾನ ಏಪ್ರಿಲ್ 26, 2024, ಮತ ಎಣಿಕೆ ಜೂನ್ 4, ಜೂನ್ 6, 2024 ಚುನಾವಣೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗಾಗಿ ಅಂತರರಾಜ್ಯ ಗಡಿ 12, ಅಂತರ ಜಿಲ್ಲಾ ಗಡಿ 16 ಮತ್ತು ಜಿಲ್ಲೆಯೊಳಗೆ 16 ಸೇರಿದಂತೆ ಒಟ್ಟು 44 ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದ್ದು, 50ಸಾವಿರಕ್ಕೂ ಹೆಚ್ಚು ನಗದು ಮತ್ತು 10ಸಾವಿರ ಮೇಲ್ಪಟ್ಟ ವಸ್ತುಗಳನ್ನು ಸಾಗಾಟ ಮಾಡುವಂತಿಲ್ಲ ಎಂದು ಅವರು ತಿಳಿಸಿದರು.
11 ವಿಧಾನಸಭಾ ಕ್ಷೇತ್ರಗಳಿಗೂ ಸಹ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದ್ದು, ಚುನಾವಣಾ ಕೆಲಸಗಳಿಗಾಗಿ ಕಾನೂನು ಸುವ್ಯವಸ್ಥೆ, ಎಂಸಿಸಿ, ಮಾನವ ಸಂಪನ್ಮೂಲ ನಿರ್ವಹಣೆ, ತರಬೇತಿ, ಸಾರಿಗೆ, ಸೈಬರ್ ಸೆಕ್ಯೂರಿಟಿ ಐಟಿ ಸೇರಿದಂತೆ ಎಲ್ಲಾ ವಲಯಗಳ ಚುನಾವಣಾ ಕೆಲಸಗಳಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿರುತ್ತದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 22,77,996 ಮತದಾರರಿದ್ದು, ಈ ಪೈಕಿ 11,47,957 ಮಹಿಳಾ ಮತದಾರರು, 11,29,947 ಪುರುಷ ಮತದಾರರಿದ್ದು, 44429 ಯುವ ಮತದಾರರಿದ್ದಾರೆ ಎಂದು ತಿಳಿಸಿದರು.

IMG 20240316 WA0077
ಜಿಲ್ಲೆಯಾದ್ಯಂತ 2618 ಮತಗಟ್ಟೆಗಳಿದ್ದು, ಈ ಪೈಕಿ 414 ಕ್ರಿಟಿಕಲ್ ಮತಗಟ್ಟೆಗಳು, 55 ಮಹಿಳಾ ಮತಗಟ್ಟೆಗಳು, 11 ವಿಕಲಚೇತನ ಮತಗಟ್ಟೆಗಳು ಮತ್ತು 22 ಯುವ ಅಧಿಕಾರಿಗಳ ಮತಗಟ್ಟೆಗಳಿರುತ್ತವೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಿ-ವಿಜಿಲ್ ಆಪ್‍ಅನ್ನು ಉಪಯೋಗಿಸುವ ಮೂಲಕ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ದೂರು ನೀಡಬಹುದು ಮತ್ತು 1950 ವೋಟರ್ ಹೆಲ್ಪ್‍ಲೈನ್ ಟೋಲ್ ಫ್ರೀ ನಂಬರ್ ಮೂಲಕವೂ ಸಹ ಚುನಾವಣೆಗೆ ಸಂಬಂಧಿಸಿದಂತೆ ದೂರು ದಾಖಲಿಸಬಹುದು ಮತ್ತು ಪ್ರತಿ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಅಂಗವಿಕಲರು ಮತ್ತು 85 ವರ್ಷ ಮೇಲ್ಪಟ್ಟ ವೃದ್ಧರು ನಮೂನೆ-12ಡಿ ಸಲ್ಲಿಸುವ ಮೂಲಕ ಮತದಾನ ಮಾಡಬಹುದಾಗಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅನುಮತಿ ಬೇಕಿದ್ದಲ್ಲಿ ಸುವಿಧ ತಂತ್ರಾಂಶದ ಮೂಲಕ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಮಸ್ಟರಿಂಗ್, ಡಿ-ಮಸ್ಟರಿಂಗ್ ಕೇಂದ್ರಗಳು :- ಚಿ.ನಾ.ಹಳ್ಳಿ ಸರ್ಕಾರಿ ಪಿಯು ಕಾಲೇಜು, ತಿಪಟೂರು ಸರ್ಕಾರಿ ಬಾಲಕರ ಪಿಯು ಕಾಲೇಜು, ತುರುವೇಕೆರೆ ಸರ್ಕಾರಿ ಜ್ಯೂನಿಯರ್ ಕಾಲೇಜು, ಮಧುಗಿರಿ ಸರ್ಕಾರಿ ಪ್ರಥಮದರ್ಜೆ ಕಾಲೇಜು, ತುಮಕೂರು ಸರ್ಕಾರಿ ಪಿಯು ಕಾಲೇಜು, ತುಮಕೂರು ಸರ್ವೋದಯ ಹೈಸ್ಕೂಲ್, ಕೊರಟಗೆರೆ ಸರ್ಕಾರಿ ಪಿಯು ಕಾಲೇಜು, ಗುಬ್ಬಿ ಪ್ರಥಮ ದರ್ಜೆ ಕಾಲೇಜು, ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾವಗಡ ಸರ್ಕಾರಿ ಪಿಯು ಕಾಲೇಜು ಮತ್ತು ಕುಣಿಗಲ್ ಸರ್ಕಾರಿ ಪಿಯು ಕಾಲೇಜುಗಳನ್ನು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕೇಂದ್ರಗಳನ್ನಾಗಿ ಗುರುತಿಸಲಾಗಿದ್ದು, ಮತ ಎಣಿಕೆಯು ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜು, ತುಮಕೂರು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿದೆ.

ಶಿರಾ, ಪಾವಗಡ ಮತ ಎಣಿಕೆ ಚಿತ್ರದುರ್ಗದಲ್ಲಿ ಮತ್ತು ಕುಣಿಗಲ್ ಮತ ಎಣಿಕೆ ರಾಮನಗರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು ಮಾತನಾಡಿ, ಸ್ವೀಪ್ ಚಟುವಟಿಕೆಯಡಿ ಈ ಬಾರಿ ಶೇ.65ಕ್ಕಿಂತ ಕಡಿಮೆಯಾಗಿರುವಂತಹ ಮತಗಟ್ಟೆಗಳನ್ನು ಗುರಿಯಾಗಿರಿಸಿಕೊಂಡು ಪ್ರತಿ ಮತಗಟ್ಟೆವಾರು ಸ್ವೀಪ್ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಲಾಗುವುದು. ಈ ಬಾರಿ 10-15 ವಿಶೇಷ ಥೀಮ್‍ಗಳ ಮೂಲಕ 200-300 ಮತಗಟ್ಟೆಗಳನ್ನು ಅತ್ಯಾಕರ್ಷಕ ಮತಗಟ್ಟೆಗಳನ್ನಾಗಿ ಮಾಡಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗಿದೆ. ನಿರ್ಧಿಷ್ಟ ಇವಿಎಂಗಳನ್ನು ತರಬೇತಿಗೆಂದೇ ಬಳಕೆ ಮಾಡಲಾಗುವುದು, ಪ್ರತಿ ತಾಲ್ಲೂಕಿಗೆ 4-5 ಚುನಾವಣಾ ರಾಯಭಾರಿಗಳನ್ನು ಗುರುತಿಸಿ, ಮತದಾನದ ಮಹತ್ವ ಕುರಿತಂತೆ ಪ್ರಚಾರ ಕೈಗೊಳ್ಳಲಾಗುವುದು. ಈ ಬಾರಿ 44,429 ಯುವ ಮತದಾರರು ನೋಂದಣಿಯಾಗಿದ್ದು, ಅವರುಗಳು ಮತಗಟ್ಟೆಗೆ ಬಂದು ತಪ್ಪದೆ ಮತದಾನ ಮಾಡುವಂತೆ ಚಟುವಟಿಕೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

IMG 20240316 WA0078

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು ಮಾತನಾಡಿ, ಜಿಲ್ಲೆಯ 11 ವಿಧಾನಸಭಾ ಕ್ಷೇತ್ರವಾರು ಪೊಲೀಸ್ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಕೆಎಸ್‍ಆರ್‍ಪಿ, ಸಿಪಿಎಫ್ ತುಗಡಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತೆ ಅಶ್ವಿಜ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
**************