21 11 20 Minister Madhuswamy 11

ಪಾವಗಡ: ಸ್ವಾಮಿ ಜಪಾನಂದಜೀ ಯನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರು….!

DISTRICT NEWS ತುಮಕೂರು

ಜಿಲ್ಲಾ ಉಸ್ತುವಾರಿ ಮಂತ್ರಿಗಳು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ  ಇಂದು ಶ್ರೀ ಜೆ.ಸಿ.ಮಾಧುಸ್ವಾಮಿ ರವರು ಪೂಜ್ಯ ಸ್ವಾಮಿ ಜಪಾನಂದಜೀ ರವರನ್ನು ಭೇಟಿ ಮಾಡಲು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ರಜತ ಮಹೋತ್ಸವದ ನೆನಪಿಗಾಗಿ ನಿರ್ಮಿಸಿರುವ ನೂತನ ಆಸ್ಪತ್ರೆಯ ಕಟ್ಟಡಕ್ಕೆ ಭೇಟಿ ನೀಡಿ ಎಲ್ಲ ವಿವರಗಳನ್ನು ಪಡೆದರು.

ಆಸ್ಪತ್ರೆಯ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಿದರು. ರೋಗಿಗಳಿಗೆ ನೀಡುತ್ತಿರುವ ಸೇವೆಗಳ ವಿವರಗಳನ್ನು ಪಡೆದು ಅತ್ಯಂತ ಸಂತೋಷ ವ್ಯಕ್ತಪಡಿಸಿದರು. ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ನಂತರ ಪೂಜ್ಯ ಸ್ವಾಮೀಜಿರವರೊಂದಿಗೆ ಸೇವಾಶ್ರಮದ ಹಾಗೂ ಆಸ್ಪತ್ರೆಯ ಎಲ್ಲ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು.

ಇದು ಮಾನ್ಯ ಸಚಿವರ ಎರಡನೆಯ ಭೇಟಿಯಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪರವಾಗಿ ಮಾನ್ಯ ಸಚಿವರಿಗೆ ಆಶೀರ್ವಾದಪೂರ್ವಕ ಫಲ ಪುಷ್ಪಗಳನ್ನು ವಿತರಿಸಲಾಯಿತು. ಮಾನ್ಯ ಸಚಿವರೊಂದಿಗೆ ಅವರ ಧರ್ಮಪತ್ನಿ ಹಾಗೂ ಮಕ್ಕಳು ಭಾಗವಹಿಸಿದ್ದರು. ಪೂಜ್ಯ ಸ್ವಾಮೀಜಿ ರವರೊಂದಿಗೆ ಆಸ್ಪತ್ರೆ ಚಟುವಟಿಕೆಗಳ ಬಗ್ಗೆ ಎಲ್ಲ ಮಾಹಿತಿಗಳನ್ನು ಪಡೆದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಕೈಗೊಂಡ ಪ್ರವಾಹ ಪರಿಹಾರ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಮಾನ್ಯ ಸಚಿವರಿಗೆ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಪಾವಗಡದ ಮಾನ್ಯ ಶಾಸಕರಾದ ಶ್ರೀ ವೆಂಕಟರವಣಪ್ಪ, ಉಪವಿಭಾಗಾಧಿಕಾರಿಗಳಾದ ಡಾ.ನಂದಿನಿದೇವಿ, ಪಾವಗಡದ ಹಿರಿಯ ಮುತ್ಸದ್ಧಿಗಳಾದ ಶ್ರೀ ಅಶೋಕ್, ಶ್ರೀ ಶಂಕರ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. ಆಸ್ಪತ್ರೆಯ ಚಟುವಟಿಕೆಗಳ ಬಗ್ಗೆ ಅತ್ಯಂತ ಆಸಕ್ತಿ ವಹಿಸಿ ಮಾನ್ಯ ಸಚಿವರ ಇಬ್ಬರು ಮಕ್ಕಳು ವೈದ್ಯರಾಗಿದ್ದರಿಂದ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ, ಡಾ.ಅಭಿಷೇಕ್, ಆಸ್ಪತ್ರೆಯ ನಿರ್ವಹಣಾಧಿಕಾರಿಗಳಾದ ಶ್ರೀ ಶೋಭಾ, ಕು.ಜಯಶ್ರೀ ರವರೊಂದಿಗೆ ವಿಸ್ತಾರವಾಗಿ ಚರ್ಚಿಸಿದರು. ರಜತ ಮಹೋತ್ಸವದ ನೆನಪಿನ ನೂತನ ಆಸ್ಪತ್ರೆ ಕಟ್ಟಡದ ಉದ್ಘಾಟನೆಯ ಬಗ್ಗೆ ಪೂಜ್ಯ ಸ್ವಾಮೀಜಿ ರವರಿಂದ ಎಲ್ಲ ಮಾಹಿತಿಯನ್ನು ಪಡೆದ ಮಾನ್ಯ ಸಚಿವರು ಎಲ್ಲ ರೀತಿಯ ಸಹಕಾರವನ್ನು ನೀಡಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಸರ್ಕಾರದ ಕಡೆಯಿಂದ ಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಒಟ್ಟಿನಲ್ಲಿ ಮಾನ್ಯ ಉಸ್ತುವಾರಿ ಸಚಿವರು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ, ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಶ್ರೀ ರಾಮಕೃಷ್ಣ ಸೇವಾಶ್ರಮದ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಿ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.