IMG 20221128 WA0016

ನಂಜನಗೂಡು ಕ್ಷೇತ್ರವನ್ನು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ….!

Genaral STATE

ನಂಜನಗೂಡು ಕ್ಷೇತ್ರವನ್ನು ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು, ನವೆಂಬರ್ 28 : ಮುಂದಿನ ದಿನಗಳಲ್ಲಿ ನಂಜನಗೂಡು ಕ್ಷೇತ್ರ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಂಜನಗೂಡು ಶ್ರೀ ಕಂಠೇಶ್ವರ ದೇವಸ್ಥಾನದ ವಿವಿಧ ಕಾಮಗಾರಿ ಗಳ ಗುದ್ದಲಿ ಪೂಜೆ, ನುಗು ಹಾಗೂ ಹೇಡಿಯಾಳ ಏತ ನೀರಾವರಿ ಯೋಜನೆಗೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದರು.

ಕಬಿನಿ ಏತನೀರಾವರಿ ಪ್ರಾರಂಭಿಸಿ ಬಲದಂಡೆ ಕಾಲುವೆ ಕಾಮಗಾರಿ ನಮ್ಮ ಸರ್ಕಾರದ ಅವಧಿಯಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ಬೇರೆ ಸರ್ಕಾರಗಳು ಗುಂಡ್ಲುಪೇಟೆ, ಚಾಮರಾಜಪೇಟೆ ಕೆರೆಗಳನ್ನು ತುಂಬಿಸಬೇಕು ಎನ್ನುವ ಬಗ್ಗೆ ಕಾಳಜಿ ಮಾಡಲಿಲ್ಲ. ಮಾತಿನಿಂದ ಹೊಟ್ಟೆ ತುಂಬುವುದಿಲ್ಲ. ಸಾಮಾಜಿಕ ನ್ಯಾಯ ಭಾಷಣದಿಂದ ಸಿಗುವುದಿಲ್ಲ. ನಮ್ಮ ಸರ್ಕಾರ ದುರ್ಬಲ ವರ್ಗದವರಿಗೆ ಸಮಾನ ಅವಕಾಶಗಳನ್ನು ಕೊಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಲಾಗಿದೆ. ಎಲ್ಲ ವರ್ಗದವರಲ್ಲಿ ಜಾಗೃತಿ ಮೂಡುತ್ತಿದ್ದು, ಬದಲಾವಣೆ ಪ್ರಾರಂಭವಾಗಿದೆ. ಯಾರು ಎಲ್ಲರನ್ನು ಎದುರಿಸಿ ಬಡವರ ಪರ ನಿಲ್ಲುವವರೇ ನಿಜವಾದ ನಾಯಕ. ವಾಲ್ಮೀಕಿ, ಡಾ.ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು, ಜಗಜೀವನರಾಂ ತಮ್ಮ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ. ಇವರುಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾಯಕರು ನಡೆಯಬೇಕು. ಅವಕಾಶ ಸಿಕ್ಕಾಗ ಸಾಮಾಜಿಕ ನ್ಯಾಯ ಒದಗಿಸಬೇಕು. ಇದು ಜನರ ರಾಜಕಾರಣ. ಆದರೆ ಕೇವಲ ಅಧಿಕಾರಕ್ಕಾಗಿ ರಾಜಕಾರಣ ಮಾಡುವವರೂ ಇದ್ದಾರೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು. ನಂಜನಗೂಡು ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ ಎಂದರು.

IMG 20221128 WA0019

ಮಹಿಳೆಯರಿಗೆ ಹಾಗೂ ಯುವಕರಿಗೆ ಸ್ವಯಂ ಉದ್ಯೋಗ :
ನೂರು ಅಂಬೇಡ್ಕರ್ ಹಾಸ್ಟೆಲ್ ಗಳನ್ನು ಒಂದೇ ವರ್ಷದಲ್ಲಿ ನಿಮಿರ್ಘಸುವ ತೀರ್ಮಾನ ಮಾಡಲಾಗಿದೆ. 50 ಕನಕದಾಸ ಹಾಸ್ಟೆಲ್ , 5 ಮೆಗಾ ಹಾಸ್ಟೆಲ್‍ಗಳನ್ನು ಈ ವರ್ಷ ಪ್ರಾರಂಭ ಮಾಡುತ್ತಿದ್ದೇವೆ. ಪ್ರಮುಖ ಶಿಕ್ಷಣ ಕೇಂದ್ರಗಳಾದ ಬೆಂಗಳೂರು, ಮಂಗಳೂರು, ಗುಲ್ವರ್ಗಾ,ಹುಬ್ಬಳ್ಳಿ,ಮೈಸೂರಿನಲ್ಲಿ ಮೆಗಾ ಹಾಸ್ಟೆಲ್ ನ್ನು ನಿರ್ಮಿಸಲಾಗುವುದು. ಮುಂದಿನ 5 ವರ್ಷಗಳಲ್ಲಿ ಒಟ್ಟು 5 ಸಾವಿರ ಮಕ್ಕಳಿಗೆ ಮೆಗಾ ಹಾಸ್ಟೆಲ್ ಗಳಲ್ಲಿ ವಸತಿ ಕಲ್ಪಿಸಲಾಗುವುದು. ಮಹಿಳೆಯರ ಹಾಗೂ ಯುವಕರ ಸ್ವಯಂ ಉದ್ಯೋಗಕ್ಕಾಗಿ ಸ್ತ್ರೀ ಸಾಮರ್ಥ್ಯ ಯೋಜನೆ ಹಾಗೂ ಸ್ವಾಮಿ ವಿವೇಕಾನಂದ ಯುವಶಕ್ತಿ ಯೋಜನೆ ಪ್ರಾರಂಭಿಸಲಾಗುತ್ತಿದೆ. ಈ ಯೋಜನೆಗಳಲ್ಲಿ ಪ್ರತಿ ಗ್ರಾಮದಲ್ಲಿ ಎರಡು ಸಂಘಗಳಿಗೆ 5 ಲಕ್ಷರೂ. ಆರ್ಥಿಕ ಸಹಾಯ ಮಾಡಿ, ಉತ್ಪನ್ನಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಒದಗಿಸುವ ಮೂಲಕ ಆರ್ಥಿಕವಾಗಿ ಸಬಲಗೊಳಿಸಲಾಗುತ್ತಿದೆ ಎಂದರು.

ತಳಸಮುದಾಯದವರಿಗೆ ಶಿಕ್ಷಣ , ಉದ್ಯೋಗ, ಸಬಲೀಕರಣ :
ಕುಶಲಕರ್ಮಿಗಳಾದ ಕಮ್ಮಾರರು, ಬಡಿಗರು, ಕುಂಬಾರರು, ವಿಶ್ವಕರ್ಮದವರು ಸೇರಿದಂತೆ ವಿವಿಧ ವೃತ್ತಿಯವರಿಗೆ ಕಾಯಕ ಯೋಜನೆಯಡಿ ಆರ್ಥಿಕ ಸಹಾಯ ನೀಡಿ ಅವರ ಕಾಯಕದಲ್ಲಿ ಅಭಿವೃದ್ಧಿ ಹೊಂದುವಂತೆ ಮಾಡಲಾಗುತ್ತಿದೆ. ದುಡಿಮೇಯೇ ದೊಡ್ಡಪ್ಪ ಎಂದು ನಂಬಿರುವ ಸರ್ಕಾರ ದುಡಿಯುವ ವರ್ಗಕ್ಕೆ ಬಲ ತುಂಬಲಾಗುತ್ತಿದೆ.ತಳಸಮುದಾಯದವರಿಗೆ ಶಿಕ್ಷಣ , ಉದ್ಯೋಗ, ಸಬಲೀಕರಣ ಒದಗಿಸಲಾಗುತ್ತಿದೆ. 10 ಲಕ್ಷ ರೈತಮಕ್ಕಳಿಗೆ ರೈತವಿದ್ಯಾನಿಧಿ, 6 ಲಕ್ಷ ರೈತ ಕೂಲಿ ಕಾರ್ಮಿಕರ ಮಕ್ಕಳಿಗೆ, ನೇಕಾರರು, ಮೀನುಗಾರರು, ಆಟೋ ಟ್ಯಾಕ್ಸಿ ಚಾಲಕರ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ. ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಭದ್ರ ಬುನಾದಿಯನ್ನು ಹಾಕಲಾಗುತ್ತಿದೆ. ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿರುವ ಸರ್ಕಾರ, ಡಯಾಲಿಸಿಸ್ ಸೈಕಲ್ ಹೆಚ್ಚಿಸಿದೆ, ಕ್ಯಾನ್ಸರ್ ಚಿಕಿತ್ಸೆ ಹೆಚ್ಚಿಸಲಾಗಿದೆ. ಆಸಿಡ್ ದಾಳಿಗೊಳಗಾದ ಹೆಣ್ಣುಮಕ್ಕಳಿಗೆ ಪ್ರತಿ ತಿಂಗಳು 10 ಸಾವಿರ ಭತ್ಯೆ ಸರ್ಕಾರದಿಂದ ನೀಡಲಾಗು್ತಿದೆ. ಕಿವಿ ಕೇಳದವರಿಗೆ ಶ್ರವಣ ಯಂತ್ರ ಬಡವರಿಗೆ ಉಚಿತವಾಗಿ ನೀಡಲಾಗುತ್ತಿದೆ. ಕಣ್ಣಿನ ಚಿಕಿತ್ಸೆ ಮಾಡಿ ಕನ್ನಡಕವನ್ನು ನೀಡಲಾಗುತ್ತಿದೆ ಎಂದರು.

30 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕೆಲಸ
ನಂಜನಗೂಡು ಪ್ರವಿತ್ರ ಭೂಮಿ. ನಾಡಿನ ಕಲ್ಯಾಣ ಇದರ ಮೂಲಕ ಆಗುವ ಪುಣ್ಯ ಭೂಮಿ. ಶಾಸಕರಾದ ಹರ್ಷವರ್ಧನ್ ಟೊಂಕಕಟ್ಟಿ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ. ಸದಾ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಶಾಸಕರಾಗಿದ್ದು, ಜನೋಪಯೋಗಿ ಜನನಾಯಕರಾಗಿದ್ದಾರೆ. ನುಗು ಏತ ನೀರಾವರಿ ಮುಖ್ಯ ಕಾಲುವೆ ಸರಿಯಾಗಿರಲಿಲ್ಲ. ಜಲಸಂಪನ್ಮೂಲ ಸಚಿವರಿದ್ದ ಸಂದರ್ಭದಲ್ಲಿ ಅದರ ಕಾಲುವೆ ಸರಿಪಡಿಸಿ ನೀರು ಹರಿಸಿದ್ದೇನೆ ಎಂದು ಸ್ಮರಿಸಿದರು. ಈ ಭಾಗದ 7 ಕೆರೆಗಳನ್ನು ತುಂಬಿಸಲು ಸಾಧ್ಯವಾಗಿರಲಿಲ್ಲ. ನೀರಾವರಿಯಲ್ಲಿ ಸಾಧ್ಯವಾಗುವುದಿಲ್ಲವೆಂದು ಮನಗಂಡು ನೀರು ಎತ್ತಲು 30 ಕೋಟಿ ರೂ.ಗಳ ವೆಚ್ಚದಲ್ಲಿ ನೀರು ತುಂಬಿಸುವ ಕೆಲಸವಾಗುತ್ತಿದೆ. ರೈತರಿಗೆ ಇದರಿಂದ ಅನುಕೂಲವಾಗುತ್ತದೆ. ಶಾಸಕ ಹರ್ಷವರ್ಧನ್ ಬೇರೆ ಉಪಾಯಗಳನ್ನು ಮಾಡಿ ರೈತರಿಗೆ ಉಪಯೋಗವಾಗುವ ಕೆಲಸ ಮಾಡಿದ್ದಾರೆ ಎಂದರು.

ಕುಡಿಯುವ ನೀರು ಯೋಜನೆಗೆ ಮಂಜೂರಾತಿ
ಹಡಿಯಾಲ ಏತ ನೀರಾವರಿ ಯೋಜನೆಗೂ ಶಂಕುಸ್ಥಾಪನೆ ಮಾಡಲಾಗಿದ್ದು, ಅದೂ ಕೂಡ ನಂಜನಗೂಡು ತಾಲ್ಲೂಕಿನ ಬಹುತೇಕ ಕೆರೆಗಳನ್ನು ತುಂಬಿಸುವ ಕೆಲಸವಾಗುತ್ತದೆ. ಇವೆರೆಡು ಬಹಳ ಪ್ರಮುಖವಾದ ಬೇಡಿಕೆಗಳಾಗಿದ್ದವು. ಬಹಳ ಜನ ಶಾಸಕರು ಆಶ್ವಾಸನೆ ನೀಡಿದ್ದರು. ಆದರೆ ಆಗಿರಲಿಲ್ಲ. ಜನರನ್ನು ಕೇವಲ ಮತಬ್ಯಾಂಕ್ ಆಗಿ ಕಂಡರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಈ ಜನರ ಋಣ ನಮ್ಮ ಮೇಲಿದೆ. ಅದನ್ನು ತೀರಿಸಲು ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದಾಗ ಮಾತ್ರ ಸಾಧ್ಯವಿದೆ. ಅಂಥ ಛಲ ಹರ್ಷವರ್ಧನ್ ಅವರು ತೋರಿಸಿದ್ದಾರೆ. ಬದನಾಳ ಮತ್ತಿತರ ಸ್ಥಳಗಳಲ್ಲಿ ಗ್ರಾಮಗಳಿಗೆ ಕುಡಿಯುವ ನೀರು ಹಾಗೂ ಕೆರೆಗೆ ನೀರು ತುಂಬುವ ಪ್ರಸ್ತಾವನೆ ಬಂದಿದ್ದು, ಅದಕ್ಕೂ ಕೂಡ ಸರ್ಕಾರ ಮಂಜೂರಾತಿ ನೀಡಿದೆ ಎಂದರು.

IMG 20221128 WA0018

ರಾಜಕೀಯ ಇಚ್ಛಾಶಕ್ತಿಯ ಪ್ರದರ್ಶನ-
ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ನೀರು ಸರಬರಾಜು ಮುಂತಾದ ಇಲಾಖೆಗಳಿಂದ ನೂರಾರು ಕೋಟಿ ರೂ.ಗಳ ಅಭಿವೃದ್ಧಿಯನ್ನು ಇಲ್ಲಿ ಮಾಡಲಾಗಿದೆ. ನಂಜನಗೂಡಿನ ದೇವಸ್ಥಾನದಲ್ಲಿ ಭಕ್ತರಿಗೆ 75 ಕೊಠಡಿಗಳನ್ನು ಕಟ್ಟಬೇಕೆಂಬ ಬೇಡಿಕೆಯನ್ನು ಈಡೇರಿಸಲಾಗಿದ್ದು, ಎಲ್ಲಾ ಸಮುದಾಯಗಳು ಒಂದೇ ಸಮುಚ್ಛಯದಲ್ಲಿ ಆಗಬೇಕೆಂಬ ಶ್ರೀನಿವಾಸ ಪ್ರಸಾದ್ ಅವರ ಕನಸನ್ನು ಹರ್ಷವರ್ಧನ್ ಏಳು ಸಮುದಾಯ ಭವನಗಳನ್ನು ನಿರ್ಮಿಸುವ ಮೂಲಕ ಈಡೇರಿಸುತ್ತಿದ್ದಾರೆ. ಒಂದು ಕ್ಷೇತ್ರವನ್ನು ಕಟ್ಟುವಾಗ ಎಲ್ಲಾ ಜನಾಂಗವನ್ನು ಒಳಗೊಂಡಂತೆ ಅಭಿವೃದ್ಧಿ ಮಾಡುವುದು ಬಹಳ ಮುಖ್ಯ. ಎಲ್ಲ ಜನಾಂಗದ ಆಶೋತ್ತರಗಳು ಹೆಚ್ಚಾಗಿವೆ. ಅದಕ್ಕಾಗಿ ನಮ್ಮ ಸರ್ಕಾರ ಎಸ್.ಸಿ/ ಎಸ್.ಟಿ ಮೀಸಲಾತಿ ನೀಡುವ ಮೂಲಕ 40 ವರ್ಷಗಳ ಬೇಡಿಕೆಯನ್ನು ಈಡೇರಿಸುವ ಕೆಲಸವನ್ನು ಮಾಡಿದೆ. ಜನಸಂಖ್ಯೆ ಹೆಚ್ಚಾಗಿದ್ದು, ಅವರು ಸ್ವಾಭಿಮಾನ, ಸ್ವಾವಲಂಬಿ ಬದುಕು ಮಾಡಬೇಕು. ಸಂವಿಧಾನ ಇರುವುದು ಪ್ರಜಾಪ್ರಭುತ್ವದ ರಕ್ಷಣೆಗಾಗಿ. ಇದಕ್ಕೆ ನಮ್ಮ ಸರ್ಕಾರ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ಈ ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು, ದೀನದಲಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ.

ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ಹರ್ಷವರ್ಧನ್,ಸಂಸದ ಶ್ರೀ ನಿವಾಸ ಪ್ರಸಾದ್, ಸ್ಥಳೀಯ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.