IMG 20221218 WA0014

ಸ್ಯಾಂಟ್ರೋ ರವಿ ಪ್ರಕರಣ: ತನಿಖೆಯಿಂದ ನಿಜಬಣ್ಣ ಬಯಲು…!

Genaral STATE

ಸ್ಯಾಂಟ್ರೋ ರವಿ ಅವ್ಯವಹಾರ ಪ್ರಕರಣ :

ವಿವರವಾದ ತನಿಖೆಯಿಂದ ನಿಜಬಣ್ಣ ಬಯಲಾಗಲಿದೆ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮೈಸೂರು, ಜನವರಿ 07 : ಸ್ಯಾಂಟ್ರೋ ರವಿ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿವರವಾದ ತನಿಖೆಯಿಂದ ನಿಜಬಣ್ಣ ಬಯಲಾಗಲಿದ್ದು, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಮೈಸೂರು ವಿಮಾನ ನಿಲ್ದಾಣಕ್ಕೆ ಬಂದಿಳಿದು ಕಾರ್ಯಕ್ರಮಕ್ಕೆ ತೆರಳುವ ಮುನ್ನ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ಸ್ಯಾಂಟ್ರೋ ರವಿ ವರ್ಗಾವಣೆ ದಂಧೆಯಲ್ಲಿ ಇರುವುದನ್ನು ಪುಷ್ಟೀಕರಿಸುವ ವಿಡಿಯೋ ಆಡಿಯೋಗಳು, ಫೋಟೋಗಳು ಬಿಡುಗಡೆ ಆಗುತ್ತಿವೆ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ, ವಾಟ್ಸಾಪ್ ನಲ್ಲಿ ತಂತ್ರಜ್ಞಾನದ ಸಹಾಯದಿಂದ ಏನು ಬೇಕಾದರೂ ಮಾಡಬಹುದು. ಆದರೆ ಅದು ಮುಖ್ಯವಲ್ಲ. ಯಾವ ವಿಷಯದಲ್ಲಿ ಯಾವ ವ್ಯವಹಾರ ಮಾಡಿದ್ದಾನೆ ಎಂಬ ಬಗ್ಗೆ ವಿವರವಾದ ತನಿಖೆಯಾದಾಗ ನಿಜವಾದ ಬಣ್ಣ ಬಯಲಾಗುತ್ತದೆ. ಹಿಂದಿನ ಪ್ರಕರಣಗಳಿಗೂ ಸೇರಿಸಿ ನಿಖರವಾಗಿ ತನಿಖೆ ಹಾಗೂ ಅವನಿಗಿರುವ ಸಂಪರ್ಕಗಳ ಬಗ್ಗೆಯೂ ತನಿಖೆ ಮಾಡಿಸಲಾಗುವುದು. ಎಲ್ಲ ಸತ್ಯಗಳೂ ಹೊರಗೆ ಬರಲಿ ಎಂಬುದು ನಮ್ಮ ಇಚ್ಛೆ ಎಂದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ :
ಸ್ಯಾಂಟ್ರೋ ರವಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಅಪರಾಧಿಗಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಫೋಟೋಗಳನ್ನು ಹಾಕಿಕೊಳ್ಳುತ್ತಾರೆ. ಫೋಟೋಗಳ ಆಧಾರದ ಮೇಲೆ ತೀರ್ಮಾನಿಸಲು ಸಾಧ್ಯವಿಲ್ಲ. ಆದರೆ ಅವರ ಮೇಲೆ ದೂರು ಬಂದಿದ್ದು, ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಂಡರೆ, ಅವನ ಚಟುವಟಿಕೆಗಳು, ಅಪರಾಧಗಳು ಎಲ್ಲದರ ಬಗ್ಗೆಯೂ ತನಿಖೆ ಮಾಡಲು ಸಾಧ್ಯವಾಗುತ್ತದೆ . ಬೇರೆ ಬೇರೆ ಕ್ಷೇತ್ರದಲ್ಲಿ ಅವನ ಬಗ್ಗೆ ದೂರುಗಳು ಬಂದಿದ್ದು, ಪ್ರಮುಖ ಸಂಪರ್ಕಗಳನ್ನು ಹೊಂದಿದ್ದಾನೆ ಎಂದು ತಿಳಿದುಬಂದಿದೆ.ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕರಾರುವಕ್ಕಾಗಿ ತನಿಖೆ ಮಾಡಲು ಪೊಲೀಸರಿಗೆ ಸೂಚಿಸಲಾಗಿದೆ. 20 ವರ್ಷ ಅವಧಿಯಲ್ಲಿ ಒಂದೂ ಪ್ರಕರಣ ಅವರ ವಿರುದ್ಧ ದಾಖಲಾಗಿಲ್ಲ. ಆದ್ದರಿಂದ ಈ ಬಾರಿ ಈ ದೂರನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ. ಹಿಂದಿನ ಎಲ್ಲ ಪ್ರಕರಣಗಳನ್ನೂ ತನಿಖೆ ಮಾಡಿ, ಅಪರಾಧಿಗೆ ಶಿಕ್ಷೆ ನೀಡಲಾಗುವುದು ಎಂದರು.

ತನಿಖೆಯಲ್ಲಿ ಸತ್ಯಗಳು ಹೊರಬರಲಿವೆ :
ವಿಪಕ್ಷಗಳಿಗೆ ಈ ವಿಷಯ ಒಂದು ಅಸ್ತ್ರವಾಗುತ್ತಿದೆಯೇ ಎಂಬುದಕ್ಕೆ ಉತ್ತರ ನೀಡಿ, ವಿಪಕ್ಷಗಳವರ ಜೊತೆಗೂ ಅವನ ಸಂಪರ್ಕವಿದೆ. ವಿಪಕ್ಷ ನಾಯಕರ ಜೊತೆಗೂ ಹಾಗೂ 20 ವರ್ಷದಿಂದ ಇರುವ ಎಲ್ಲ ರಾಜಕಾರಣಿಗಳ ಜೊತೆ ಅವನ ಸಂಪರ್ಕವಿದೆ. ಆ ತನಿಖೆಯಲ್ಲಿ ಹೊರಬರುವ ಸತ್ಯಗಳು ಹೊರಬರಲಿವೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಕೂಡ ಆಡಿಯೋ ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ ಎಂಬುದಕ್ಕೆ ಪ್ರತಿಕ್ರಯಿಸಿ, ಎಲ್ಲ ವಿಷಯಗಳೂ ತನಿಖೆಗೆ ಒಳಪಡುತ್ತದೆ. ನಾನೂ ಬಹಳ ಜನರ ಹತ್ತಿರ ಅವರ ಹಿನ್ನೆಲೆ ಗೊತ್ತಿಲ್ಲದೇ ಮಾತನಾಡಿರುತ್ತೇನೆ. ಆದರೆ ಮಾತನಾಡಿದತಕ್ಷಣ ನಾನು ಅಪರಾಧಿ ಆಗಲು ಸಾಧ್ಯವಿದೆಯೇ ಎಂದು ಪ್ರಶ್ನಿಸಿದರು.

ವಿಧಾನಸೌಧದ ಗೇಟ್ ಬಳಿ10 ಲಕ್ಷ ಹಣ ಸಿಕ್ಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಿಸಿ, ಆ ಮಾನದಂಡ ತೆಗೆದುಕೊಂಡರೆ 2019 ರಲ್ಲಿ ಮಾನ್ಯ ಪುಟ್ಟರಂಗಶೆಟ್ಟಿ ಅವರ ಕಚೇರಿಯಲ್ಲಿಯೇ 22 ಲಕ್ಷ ರೂ. ಸಿಕ್ಕಿತ್ತು. ಅದು ಯಾವುದೇ ಶಾಪಿಂಗ್ ಕಾಂಪ್ಲೆಕ್ಸ್ ಅಲ್ಲ, ಅದು ಕಾಂಗ್ರೆಸ್ ನ ಭ್ರಷ್ಟಾಚಾರದ ಬ್ಯಾಂಕಾಗಿತ್ತು. ಅಂದು ಯಾಕೆ ತನಿಖೆಯಾಗಲಿಲ್ಲ. ಪುಟ್ಟರಂಗಶೆಟ್ಟಿಯವರ ವಿಚಾರಣೆ ಕೂಡ ನಡೆಯಲಿಲ್ಲ. ಎಸಿಬಿಗೆ ವಹಿಸಿ ಪ್ರಕರಣ ಮುಚ್ಚಿ ಹಾಕಿದ್ದಾರೆ. ಇಂತಹವರು ಇನ್ನೊಬ್ಬರ ಮಾತನಾಡುವ ಹಕ್ಕಿಲ್ಲ ಎಂದರು.

ಬಾರಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶವಿರಲಿದೆ :
ನವದೆಹಲಿಯಲ್ಲಿ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಜ್ಯದ ಸ್ತಬ್ಧಚಿತ್ರಕ್ಕೆ ಅವಕಾಶವಿದೆಯೇ ಎಂಬುದಕ್ಕೆ ಪ್ರತಿಕ್ರಿಯೆ ನೀಡಿ, ಎಲ್ಲ ರಾಜ್ಯಗಳಿಗೂ ಅವಕಾಶ ನೀಡಲಾಗುತ್ತದೆ ಮತ್ತು ಕಳೆದ ಬಾರಿ ರಾಜ್ಯದ ಸ್ತಬ್ಧಚಿತ್ರಕ್ಕೆ ಪ್ರಶಸ್ತಿ ಕೂಡ ಬಂದಿದೆ. ಈ ಬಾರಿಯೂ ಅವಕಾಶವಿದ್ದು,ರಾಜ್ಯದ ಸ್ತಬ್ಧಚಿತ್ರ ಪೆರೇಡ್ ನಲ್ಲಿ ಇರಲಿದೆ ಎಂದು ತಿಳಿಸಿದರು.