IMG 20201117 WA0026

ಆಸ್ತಿ ವಿವರ ಸಲ್ಲಿಸದ ನಿರ್ಗಮಿತ ಬಿಬಿಎಂಪಿ ಸದಸ್ಯರು….!

DISTRICT NEWS ಬಿಬಿಎಂಪಿ

*ಆಸ್ತಿ ವಿವರ ಸಲ್ಲಿಸದ ನಿರ್ಗಮಿತ ಬಿಬಿಎಂಪಿ ಸದಸ್ಯರ ಮೇಲೆ ಕ್ರಮ ಕೈಗೊಳ್ಳುವಂತೆ ಆಮ್‌ ಆದ್ಮಿ ಪಕ್ಷದಿಂದ ಲೋಕಾಯುಕ್ತರಿಗೆ ದೂರು*
*ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸದ ನಿರ್ಗಮಿತ 124 ಬಿಬಿಎಂಪಿ ಸದಸ್ಯರಿಗೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಬೇಡ: ಆಮ್ ಆದ್ಮಿ ಪಕ್ಷದ ಆಗ್ರಹ*

*ಬೆಂಗಳೂರು ನವೆಂಬರ್‌ 17*: ಲೋಕಾಯುಕ್ತರ ಆದೇಶಕ್ಕೂ ಬೆಲೆ ಕೊಡದೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಗಮಿತ 124 ಸದಸ್ಯರು ತಮ್ಮ ಆಸ್ತಿ ವಿವರ ಸಲ್ಲಿಸದೆ ದ್ರೋಹ ಎಸಗಿದ್ದು, ಇವರುಗಳಿಗೆ ಮುಂಬರುವ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದು. ಹಾಗೆಯೇ, ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ *ಆಮ್ ಆದ್ಮಿ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದಾರೆ*.

ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ ನಂತರ ಮಾತನಾಡಿದ ಅವರು, 2019 ರ ಆಗಸ್ಟ್‌ 28ರಂದು ಆದೇಶ ಹೊರಡಿಸಿದ್ದ ಲೋಕಾಯುಕ್ತರು, 198 ವಾರ್ಡ್‌ಗಳ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದ್ದರು. ಈ ಆದೇಶ ನೀಡಿ ಒಂದು ವರ್ಷವಾದರೂ, 124 ಸದಸ್ಯರು ಇನ್ನೂ ತಮ್ಮ ವಿವರಗಳನ್ನು ಸಲ್ಲಿಸಿಲ್ಲ ಇಂತಹ ಸದಸ್ಯರುಗಳ ಹೆಚ್ಚುವರಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಹೇಳಿದರು.

IMG 20201117 WA0027

ರಾಜ್ಯ ಮಾಧ್ಯಮ ಸಂಚಾಲಕರಾದ ಜಗದೀಶ್ ವಿ ಸದಂ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಎಗ್ಗಿಲ್ಲದೆ ಹೆಚ್ಚಳವಾಗುತ್ತಿದ್ದ ಜನಪ್ರತಿನಿಧಿಗಳ ಆಸ್ತಿ ಗಳಿಕೆಯ ಬಗ್ಗೆ ಸಾಕಷ್ಟು ಅನುಮಾನ ಮೂಡಿದ್ದರಿಂದ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು, ತಮ್ಮ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಬೇಕೆಂಬ ನಿಯಮ 2009 ರಲ್ಲೇ ಜಾರಿಗೆ ಬಂದಿತ್ತು. ಆದರೆ ಈಗ ಲೋಕಾಯುಕ್ತರ ಆದೇಶಕ್ಕೆ ಕನಿಷ್ಟ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆಯ ಮುಖಾಂತರ ಜನಪ್ರತಿನಿಧಿಗಳಾಗಿ ಆರಿಸಿ ಬಂದವರು, ಪ್ರತಿ ವರ್ಷ ಜೂನ್‌ 30ರ ಒಳಗಾಗಿ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಬೇಕೆಂಬ ನಿಯಮ 2009ರಲ್ಲೇ ರೂಪಿತವಾಗಿತ್ತು. ಒಂದು ದಶಕದಷ್ಟು ಸಮಯ ಕಳೆದರೂ, ಈ ನಿಯಮವನ್ನು ಕಠಿಣವಾಗಿ ಜಾರಿಗೆ ಬರುವುದರಲ್ಲೇ ಇದೆ. ಕಾನೂನಿನ ಭಯವಿಲ್ಲದ, ಆಸ್ತಿ ವಿವರ ಸಲ್ಲಿಸದ 124 ನಿರ್ಗಮಿತ ಸದಸ್ಯರ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹಾಗೂ ಲೋಕಾಯುಕ್ತ ಸಂಸ್ಥೆಗೆ ಆಗ್ರಹಿಸಿದರು. ಆಸ್ತಿ ವಿವರ ಸಲ್ಲಿಸದ ನಿರ್ಗಮಿತ ಬಿಬಿಎಂಪಿ ಸದಸ್ಯರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸಲು ತಾಕತ್ತಿದೆಯೇ ಎಂದು ಇದೇ ಸಂಧರ್ಭದಲ್ಲಿ ಪ್ರಶ್ನಿಸಿದರು.

ಡಿಜೆ ಹಳ್ಳಿ ಗಲಬೆಯ ಪ್ರಮುಖ ಆರೋಪಿ ತಲೆ ಮರೆಸಿಕೊಂಡಿರುವ ನಿರ್ಗಮಿತ ಮೇಯರ್‌ ಸಂಪತ್‌ ರಾಜ್‌, ಪುಲಕೇಶಿ ನಗರದ ಅಬ್ದುಲ್ ರಕೀಬ್ ಜಾಕೀರ್ ಹುಸೇನ್, ವಿರೋಧ ಪಕ್ಷದ ನಾಯಕರಾಗಿದ್ದ ಮನೋರಾಯನ ಪಾಳ್ಯದ ಅಬ್ದುಲ್ ವಾಜಿದ್, ಹಿರಿಯೂರು ಬಿಜೆಪಿ ಶಾಸಕಿ ಕೆ.ಆರ್ ಪುರಂ ಪೂರ್ಣಿಮ, ಶಾಸಕ ಮುನಿರತ್ನ ಬೆಂಬಲಿಗ ಯಶವಂತಪುರದ ಜಿ.ಕೆ.ವೆಂಕಟೇಶ್, ಆಸ್ತಿ ವಿವರ ಸಲ್ಲಿಸಿಲ್ಲದ ನಿರ್ಗಮಿತ ಉಪ ಮೇಯರ್ ರಾಮ್ ಮೋಹನ್ ರಾಜು, ಮಹಾಲಕ್ಷೀಪುರಂನ ಕೇಶವಮೂರ್ತಿ ಇವರ ಮಗ ಡ್ರಗ್ ಜಾಲದಲ್ಲಿದ್ದು ತಲೆಮರೆಸಿಕೊಂಡು ಓಡಾಡುತ್ತಿದ್ದಾನೆ. ಇಷ್ಟೆಲ್ಲಾ ಸಮಾಜ ವಿರೋಧಿ ಕೆಲಸಗಳನ್ನು ಮಾಡುತ್ತಿರುವ ಇಂತಹ ಜನಪ್ರತಿನಿಧಿಗಳ ವಿರುದ್ದ ಕ್ರಮಗೊಳ್ಳಬೇಕು ಎಂದು ಲೋಕಾಯಕ್ತಕ್ಕೆ ದೂರು ನೀಡಲಾಗುವುದು ಎಂದರು.
ಆಸ್ತಿ ವಿವರ ಸಲ್ಲಿಸದೇ ಇರುವವರ ವಿರುದ್ದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಲೋಕಾಯುಕ್ತರಿಗೆ ಮನವಿ ಸಲ್ಲಿಸಲಾಗುವುದು. ವಿಪರ್ಯಾಸ ಎಂದರೆ ಕರ್ನಾಟಕ ರಾಜ್ಯ ಭ್ರಷ್ಟಾಚಾರದಲ್ಲಿ ಮೊದಲನೇ ಸ್ಥಾನಕ್ಕೆ ಏರಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ, ಲೋಕಾಯುಕ್ತ ಸಂಸ್ಥೆ ಹಾಳು ಗೆಡವಿ, ಭ್ರಷ್ಟಾಚಾರ ನಿಗ್ರಹ ದಳ ಸ್ಥಾಪಿಸಿ ಸರ್ಕಾರಿ ಕಚೇರಿಗಳನ್ನು ಭ್ರಷ್ಟರ ಕೂಪ ಮಾಡಿದ್ದೆ ಸಾಧನೆ ಎಂದು ವ್ಯಂಗ್ಯವಾಡಿದರು.