IMG 20230429 WA0022

ವಾರ್ತಾ ಇಲಾಖೆಯ‌‌ ನಿರ್ದೇಶಕ ಡಿಪಿಎಂ, ಉಪನಿರ್ದೇಶಕ ಸೇರಿ ನಾಲ್ವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ….!

Genaral STATE

ವಾರ್ತಾ ಇಲಾಖೆಯ‌‌ ನಿರ್ದೇಶಕ ಡಿಪಿಎಂ, ಉಪನಿರ್ದೇಶಕ ಪುಟ್ಟಸ್ವಾಮಯ್ಯ ಸೇರಿ ನಾಲ್ವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ

ಬೆಂಗಳೂರು,ಏ.29(ಕರ್ನಾಟಕ ವಾರ್ತೆ): ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಡಿ.ಪಿ.ಮುರಳೀಧರ್, ಉಪನಿರ್ದೇಶಕರಾದ ಕೆ.ಪಿ.ಪುಟ್ಟಸ್ವಾಮಯ್ಯ, ಆಡಳಿತಾಧಿಕಾರಿ ಲತಾ ಮತ್ತು ಸಿಬ್ಬಂದಿ ಧನರಾಜ್ ಅವರ ಸೇವಾವಯೋ ನಿವೃತ್ತಿ ಹಿನ್ನೆಲೆ ಇಲಾಖೆಯ ವಾರ್ತಾ ಬಳದ ವತಿಯಿಂದ ಕೇಂದ್ರ ಕಚೇರಿಯ ಸುಲೋಚನಾ ಸಭಾಂಗಣದಲ್ಲಿ ಬೀಳ್ಕೊಡುಗೆ ಸಮಾರಂಭ ಇಂದು‌ ಹಮ್ಮಿಕೊಳ್ಳಲಾಗಿತ್ತು.

ವಾರ್ತಾ ಬಳಗದ ವತಿಯಿಂದ ನಿರ್ದೇಶಕ ಡಿ.ಪಿ.ಮುರುಳೀಧರ್ ಮತ್ತು ಇತರರನ್ನು ಹೃದಯಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ದೇಶಕ ಮುರುಳೀಧರ್ ಅವರು  ಸರಕಾರ ಮತ್ತು ಮಾಧ್ಯಮಗಳ ಕೊಂಡಿಯಾಗಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ 30ಕ್ಕೂ ಹೆಚ್ಚು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದು ಸಂತೋಷ ತಂದಿದೆ ಎಂದರು.
ಮಾಧ್ಯಮ ರಂಗದ ಅನುಭವ ಹಿನ್ನೆಲೆ ಇರುವ ಅಧಿಕಾರಿಗಳೇ ಇಲಾಖೆಯ ನಿರ್ದೇಶಕರಾದರೇ ಇಲಾಖೆಯನ್ನು ಹೆಚ್ಚು ವೃತ್ತಿಪರವಾಗಿ ಕಟ್ಟಬಹುದು. ಸರಕಾರ ಈ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿಗಳಿಗೆ ಅವಕಾಶ ಕಲ್ಪಿಸಬೇಕು. ಇಲಾಖೆಗೆ 75 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಕೆಲವೇ ಬೆರಳಿಕೆಯಷ್ಟು ಅಧಿಕಾರಿಗಳಿಗೆ ಮಾತ್ರ ನಿರ್ದೇಶಕ ಸ್ಥಾನಕ್ಕೇರುವ ಅವಕಾಶ ದೊರೆತಿದೆ ಎಂದರು.
ತಮ್ಮ ಸೇವಾವಧಿಯುದ್ದಕ್ಕೂ ಸಲಹೆ-ಸಹಕಾರ ಮಾರ್ಗದರ್ಶನ ನೀಡಿದ ಅಧಿಕಾರಿಗಳ ನೆನಪುಗಳನ್ನು ಹಾಗೂ ಮಾಧ್ಯಮದವರ ಸಹಕಾರವನ್ನು ಮೆಲುಕು ಹಾಕಿದರು.
ಇಲಾಖೆಯಲ್ಲಿ ಬಹಳಷ್ಟು ಜನರು ನಿವೃತ್ತಿಯಾಗುತ್ತಿದ್ದಾರೆ;ಆದರೇ ನೇಮಕವಾಗುತ್ತಿಲ್ಲ. ಇಲಾಖೆಯ ಒಟ್ಟಾರೆ ಮಂಜೂರಾದ ಹುದ್ದೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ. ಕಡಿಮೆ ಮಾನವ ಸಂಪನ್ಮೂಲದೊಂದಿಗೆ ಕೆಲಸಗಳನ್ನು ನಿಭಾಯಿಸುವುದು ಸವಾಲಿನದ್ದಾಗಿದೆ. ಮುಂಬರುವ ದಿನಗಳಲ್ಲಿ ಇಲಾಖೆಯ ಕೆಲಸ ಕಾರ್ಯಗಳಿಗೆ ಅಗತ್ಯ ಸಲಹೆ-ಮಾರ್ಗದರ್ಶನಗಳನ್ನು ನೀಡುವುದರ ಮುಖಾಂತರ ಒತ್ತಾಸೆಯಾಗಿ ನಿಲ್ಲುತ್ತೇನೆ ಎಂದರು.
ಈಗಿರುವ ಹೊಸ ತಂಡವು ತುಂಬಾ ಸಮರ್ಥವಾಗಿದ್ದು,ಇಲಾಖೆಯನ್ನು ಸಮರ್ಪಕವಾಗಿ ಮುನ್ನಡೆಸಿಕೊಂಡು ಹೋಗಲಿದೆ ಎಂಬ ಆಶಾಭಾವನೆಯನ್ನು ಇದೇ ಸಂದರ್ಭದಲ್ಲಿ ಅವರು ವ್ಯಕ್ತಪಡಿಸಿದರು.
ಉಪನಿರ್ದೇಶಕ ಕೆ.ಪಿ‌‌.ಪುಟ್ಟಸ್ವಾಮಯ್ಯ ಅವರು ಮಾತನಾಡಿ, ಮಾಧ್ಯಮ ನಿರ್ವಹಣೆ ಅತ್ಯಂತ ಸವಾಲಿನದ್ದು,ಎಲ್ಲರೊಂದಿಗೆ ಸಂಪರ್ಕ ಸಾಧಿಸಿ ಸಮರ್ಥವಾಗಿ ನಿರ್ವಹಿಸಿದ ತೃಪ್ತಿ ಇದೆ. ಇಲಾಖೆ‌ ನನಗೆ ಅವಕಾಶ ಕಲ್ಪಿಸಿದ್ದು ನನ್ನ ಸೌಭಾಗ್ಯ ಎಂದರು.
ಸನ್ಮಾನ ಸ್ವೀಕರಿಸಿದ ಆಡಳಿತಾಧಿಕಾರಿ ಲತಾ, ಸಿಬ್ಬಂದಿ ಧನರಾಜ್ ಅವರು ಮಾತನಾಡಿದರು.
ವಾರ್ತಾ ಬಳಗದ ಉಪನಿರ್ದೇಶಕರುಗಳಾದ ಪಲ್ಲವಿ ಹೊನ್ನಾಪುರ,ಮಂಜುನಾಥ ಡೊಳ್ಳಿನ್, ರಾಮಲಿಂಗಪ್ಪ ಬಿ.ಕೆ.ಹಿರಿಯ ಸಹಾಯಕ ನಿರ್ದೇಶಕರಾದ ಹಿಮಂತರಾಜು, ಸಹಾಯಕ ನಿರ್ದೇಶಕರಾದ ಬಿ.ಜಿ.ಪೂರ್ಣಿಮಾ, ಭಾಗ್ಯ,ಚೇತನಕುಮಾರ್, ಪತ್ರಕರ್ತರಾದ ವೆಂಕಟಸಿಂಗ್, ಕ್ರಾಂತಿದೀಪ ಮಂಜುನಾಥ, ಮಲ್ಲಿಕಾರ್ಜುನ ಬಂಗ್ಲೆ ಸೇರಿದಂತೆ ವಿಬಿಧೆಡೆಯಿಂದ ಆಗಮಿಸಿದ್ದ ಪತ್ರಕರ್ತರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ಇದ್ದರು.