IMG 20230119 WA0127

​​​​​​​Karnataka: ಫೆಬ್ರವರಿ 6 ರಂದು ತುಮಕೂರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ…!

Genaral National - ಕನ್ನಡ STATE

ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರು 2023 ರ ಫೆಬ್ರವರಿ 6 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11.30 ರ ಸುಮಾರಿಗೆ ಪ್ರಧಾನಮಂತ್ರಿ ಅವರು ಬೆಂಗಳೂರಿನಲ್ಲಿ 2023 ರ ಇಂಧನ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ತರುವಾಯ 3.30 ಕ್ಕೆ ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ ಮತ್ತು ಹಲವಾರು ಅಭಿವೃದ್ದಿ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ.

ಇಂಧನ ಸಪ್ತಾಹ 2023

ಬೆಂಗಳೂರಿನಲ್ಲಿ ಪ್ರಧಾನಮಂತ್ರಿಯವರು 2023 ರ [ಐಇಡಬ್ಲ್ಯೂ] ಭಾರತ ಇಂಧನ ಸಪ್ತಾಹವನ್ನು ಉದ್ಘಾಟಿಸಲಿದ್ದಾರೆ. ಫೆಬ್ರವರಿ 6 ರಿಂದ 8 ರ ವರೆಗೆ ಐಇಡಬ್ಲ್ಯೂ ಆಯೋಜನೆಗೊಂಡಿದ್ದು, ಇದು ಭಾರತದ ಬೆಳವಣಿಗೆಯಾಗುತ್ತಿರುವ ಇಂಧನ ಪರಿವರ್ತನೆಯ ಶಕ್ತಿಕೇಂದ್ರವಾಗಿರುವುದನ್ನು ಅನಾವರಣಗೊಳಿಸಲಿದೆ.

ಸಾಂಪ್ರದಾಯಿಕ ಮತ್ತು ಸಾಂಪ್ರದಾಯಿಕವಲ್ಲದ ಇಂಧನ ಕೈಗಾರಿಕೆ ವಲಯ,  ಸರ್ಕಾರಗಳು ಮತ್ತು ಶೈಕ್ಷಣಿಕ ವಲಯದ ನಾಯಕರನ್ನು ಇದು ಒಟ್ಟಿಗೆ ತರಲಿದ್ದು, ಸವಾಲುಗಳು ಮತ್ತು ಜವಾಬ್ದಾರಿಯುತ ಇಂಧನ ಪರಿವರ್ತನೆಯ ಅವಕಾಶಗಳ ಕುರಿತು ಚರ್ಚಿಸಲಿದೆ. ಜಗತ್ತಿನಾದ್ಯಂತ 30ಕ್ಕೂ ಹೆಚ್ಚು ಸಚಿವರ ಸಮ್ಮುಖದಲ್ಲಿ, 30 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, ಒಂದು ಸಾವಿರ ಮಳಿಗೆಗಳು, 500 ಕ್ಕೂ ಹೆಚ್ಚು ಭಾಷಣಕಾರರು ಭಾರತದ ಇಂಧನ ಭವಿಷ್ಯ ಕುರಿತ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಚರ್ಚಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರು ಜಾಗತಿಕ ತೈಲ ಮತ್ತು ಅನಿಲ ವಲಯದ ಸಿಇಒಗಳ ದುಂಡು ಮೇಜಿನ ಸಭೆಯಲ್ಲಿ ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಹಸಿರು ಇಂಧನ ಕ್ಷೇತ್ರದಲ್ಲಿ ಬಹುಹಂತದ ಉಪಕ್ರಮಗಳಿಗೆ ಅವರು ಚಾಲನೆ ನೀಡಲಿದ್ದಾರೆ.

ಇಂಧನ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಎಥನಾಲ್ ಮಿಶ್ರಣ ಪ್ರಮುಖವಾಗಿ ಕೇಂದ್ರೀರಿಸಿದ ವಲಯವಾಗಿದೆ. ಸರ್ಕಾರದ ಸುಸ್ಥಿರ ಪ್ರಯತ್ನಗಳಿಂದಾಗಿ 2013 -14 ರಿಂದ ಎಥನಾಲ್ ಉತ್ಪಾದನೆ ಆರು ಪಟ್ಟು ಏರಿಕೆಯಾಗಿದೆ. ಎಥನಾಲ್ ಮಿಶ‍್ರಣ ಮತ್ತು ಜೈವಿಕ ಇಂಧನ ಕಾರ್ಯಕ್ರಮದಡಿ ಕಳೆದ ಎಂಟು ವರ್ಷಗಳ ಅವಧಿಯಲ್ಲಿ ಭಾರತದ ಸಾಧನೆಗಳು ಇಂಧನ ಭದ್ರತೆಯನ್ನು ಹೆಚ್ಚಿಸಿದೆಯಷ್ಟೇ ಅಲ್ಲದೇ 318 ಮೆಟ್ರಿಕ್ ಟನ್ ಗಳಷ್ಟು ಸಿಒ2 ಹೊರ ಸೂಸುವಿಕೆ ಮತ್ತು 54 ಸಾವಿರ ಕೋಟಿ ರೂಪಾಯಿ ಮೊತ್ತದ ವಿದೇಶಿ ವಿನಿಮಯ ಸೇರಿದಂತೆ ಇತರೆ ಪ್ರಯೋಜನಗೆಳಿಗೆ ಕಾರಣವಾಗಿದೆ. ಇದರ ಫಲವಾಗಿ 2014 ರಿಂದ 2022 ರ ಅವಧಿಯಲ್ಲಿ 81,800 ಕೋಟಿ ರೂಪಾಯಿ ಎಥನಾಲ್ ಪೂರೈಕೆದಾರರಿಗೆ ಪಾವತಿಸಲಾಗಿದೆ ಮತ್ತು ರೈತರಿಗೆ 49,000 ಕೋಟಿ ರೂಪಾಯಿ ಮೊತ್ತವನ್ನು ವರ್ಗಾಯಿಸಲಾಗಿದೆ.

ಎಥನಾಲ್ ಮಿಶ್ರಣ ಮಾರ್ಗನಕ್ಷೆಯಡಿ ಪ್ರಧಾನಮಂತ್ರಿ ಅವರು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ತೈಲ ಮಾರುಕಟ್ಟೆ ಕಂಪೆನಿಗಳ 84 ಚಿಲ್ಲರೆ ಮಳಿಗೆಗಳಲ್ಲಿ ಇ20 ಇಂಧನ ಉಪಕ್ರಮವನ್ನು ಪ್ರಾರಂಭಿಸಲಿದ್ದಾರೆ. ಇ20 ಪೆಟ್ರೋಲ್ ನಲ್ಲಿ ಶೇ.20 ರಷ್ಟು ಎಥನಾಲ್ ಮಿಶ್ರಣ ಮಾಡಲಾಗುತ್ತದೆ. ಬರುವ 2025 ರ ವೇಳೆಗೆ ಶೇ.20 ರಷ್ಟು ಎಥನಾಲ್ ಮಿಶ್ರಣ ಮಾಡುವ ಗುರಿಯನ್ನು ಹೊಂದಲಾಗಿದೆ ಮತ್ತು ಇದರ ಪ್ರಗತಿಗಾಗಿ ತೈಲ ಮಾರುಕಟ್ಟೆ ಕಂಪೆನಿಗಳು 2ಜಿ -3ಜಿ ಎಥನಾಲ್ ಘಟಕಗಳನ್ನು ಪ್ರಾರಂಭಿಸಲಿವೆ.

ಪ್ರಧಾನಮಂತ್ರಿ ಅವರು ಹಸಿರು ಸಾಗಣೆ ಜಾಥಾಗೆ ಚಾಲನೆ ನೀಡಲಿದ್ದಾರೆ. ಈ ಜಾಥ ಹಸಿರಿರುವ ಇಂಧನ ಮೂಲಗಳಿಂದ ಚಲಿಸುವ ವಾಹನಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ ಮತ್ತು ಹಸಿರು ಇಂಧನ ಕುರಿತು ಜಾಗೃತಿ ಮೂಡಿಸಲು ಸಹಾಯ ಮಾಡಲಿದೆ.

ಪ್ರಧಾನಮಂತ್ರಿ ಅವರು ಶೀಶೆ ರಹಿತ ಉಪಕ್ರಮದಡಿ ಸಮವಸ್ತ್ರಗಳನ್ನು ಬಿಡುಗಡೆ ಮಾಡಲಿದ್ದಾರೆ.  ಏಕ ಬಳಕೆ ಪ್ಲಾಸ್ಟಿಕ್ ಅನ್ನು ಹಂತ ಹಂತವಾಗಿ ತೊಡೆದುಹಾಕಲು ಪ್ರಧಾನಮಂತ್ರಿ ಅವರ ದೂರದೃಷ್ಟಿಯ ಮಾರ್ಗದರ್ಶನದಿಂದ ಭಾರತೀಯ ತೈಲ ನಿಗಮ ಮರು ಬಳಕೆಯ ಪಾಲಿಯಸ್ಟರ್ [ಆರ್ ಪಿಇಟಿ] ಮತ್ತು ಹತ್ತಿಯಿಂದ ಉತ್ಪಾದಿಸಿದ ಸಮವಸ್ತ್ರವನ್ನು ಚಿಲ್ಲರೆ ವಲಯ ಮತ್ತು ಎಲ್.ಪಿ.ಜಿ ವಿತರಣಾ ಸಿಬ್ಬಂದಿಗೆ ಸಮವಸ್ತ್ರವನ್ನು ವಿತರಿಸುವುದನ್ನು ಇದರಡಿ ಅಳವಡಿಸಿಕೊಳ್ಳಲಾಗಿದೆ.  ಭಾರತೀಯ ತೈಲ ನಿಗಮದ ಪ್ರತಿಯೊಂದು ಸಮವಸ್ತ್ರಕ್ಕೆ 28 ಪೆಟ್ ಶೀಶೆಗಳ ಮರು ಬಳಕೆಯನ್ನು ಮಾಡಲಾಗುತ್ತದೆ. ಭಾರತೀಯ ತೈಲ ನಿಗಮದ ಈ ಉಪಕ್ರಮ ಶೀಶೆ ರಹಿತ ಉಪಕ್ರಮಕ್ಕೆ ಮತ್ತಷ್ಟು ಉತ್ತೇಜನ ನೀಡಲಿದ್ದು, ಸುಸ್ಥಿರ ಉಡುಪುಗಳ ಬ್ರ್ಯಾಂಡ್ ಗಳು, ಮರು ಬಳಕೆಯ ಪಾಲಿಯಸ್ಟರ್ ನಿಂದ ತಯಾರಿಸಿರುವ ಸರಕುಗಳಿಗಾಗಿ ಇದನ್ನು ಪ್ರಾರಂಭಿಸಲಾಗಿದೆ. ಈ ಬ್ರ್ಯಾಂಡ್ ನಡಿ ಭಾರತೀಯ ತೈಲ ನಿಗಮ ಇತರೆ ತೈಲ ಮಾರುಕಟ್ಟೆ ಕಂಪೆನಿಗಳ ಗ್ರಾಹಕರಿಗೆ ಸಮವಸ್ತ್ರದ ಅವಶ್ಯಕತೆಗಳನ್ನು ಪೂರೈಸುವ ಗುರಿ ಹೊಂದಿದೆ. ಸೇನೆಗೆ ಯುದ್ಧದ ಉದ್ದೇಶ ಹೊರತುಪಡಿಸಿದ ಸಮವಸ್ತ್ರಗಳು, ಸಂಸ್ಥೆಗಳಿಗೆ ಸಮವಸ್ತ್ರಗಳು, ಉಡುಪುಗಳು ಮತ್ತು ಚಿಲ್ಲರೆ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶವನ್ನು ಸಹ ಈ ಉಪಕ್ರಮದಡಿ ಹೊಂದಲಾಗಿದೆ.

ಪ್ರಧಾನಮಂತ್ರಿ ಅವರು ಭಾರತೀಯ ತೈಲ ನಿಮಗದ ಒಳಾಂಗಣ ಸೌರ  ಅಡುಗೆ ವ್ಯವಸ್ಥೆಯ ಅವಳಿ ಕುಕ್ ಟಾಪ್ ಮಾದರಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ ಮತ್ತು ಇದರ ವಾಣಿಜ್ಯ ಚಟುವಟಿಕೆಗೆ ಚಾಲನೆ ನೀಡಲಿದ್ದಾರೆ.  ಭಾರತೀಯ ತೈಲ ನಿಗಮ ಭಾರತೀಯ ತೈಲ ನಿಗಮ ಈ ಹಿಂದೆ ಒಂದೇ ಕುಕ್ ಟಾಪ್ ನೊಂದಿಗೆ ನವೀನ ಮತ್ತು ಹಕ್ಕುಸ್ವಾಮ್ಯ ಪಡೆದ ಒಳಾಂಗಣ ಅಡುಗೆ ವ್ಯವಸ್ಥೆಯನ್ನು ಅಭಿವೃದ್ದಿಪಡಿಸಿತ್ತು. ಇದರ ಆಧಾರದ ಮೇಲೆ ಸ್ವೀಕರಿಸಿದ ಅಭಿಪ್ರಾಯಗಳಂತೆ ಎರಡು ಕುಕ್ ಟಾಪ್ ಒಳಗೊಂಡ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ವಿನ್ಯಾಸ ಹೆಚ್ಚು ಹೊಂದಾಣಿಕೆಯಾಗಲಿದೆ ಮತ್ತು ಸುಲಭವಾಗಿ ಬಳಸಬಹುದಾಗಿದೆ.  ಇದು ಕ್ರಾಂತಿಕಾರಿ ಒಳಾಂಗಣ ಸೌರ ಅಡುಗೆಗೆ ಪರಿಹಾರವಾಗಿದ್ದು, ಸೌರ ಮತ್ತು ಸಹಾಯಕ ಶಕ್ತಿ ಮೂಲಗಳೆರೆಡರಲ್ಲೂ ಏಕಕಾಲದಲ್ಲಿ ಇದು ಕಾರ್ಯನಿರ್ವಹಿಸುತ್ತದೆ. ಭಾರತಕ್ಕೆ ಅಡುಗೆ ವಲಯದಲ್ಲಿ ಇದು ವಿಶ್ವಾಸಾರ್ಹ ಪರಿಹಾರವಾಗಿದೆ.

ತುಮಕೂರಿನಲ್ಲಿ ಪ್ರಧಾನಮಂತ್ರಿ

ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಇದು ಮತ್ತೊಂದು ಹೆಜ್ಜೆಯಾಗಿದ್ದು, ಪ್ರಧಾನಮಂತ್ರಿ ಅವರು ತುಮಕೂರಿನಲ್ಲಿ ಎಚ್ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ಲೋಕಾರ್ಪಣೆ ನೆರವೇರಿಸುವರು. ಪ್ರಧಾನಮಂತ್ರಿ ಅವರು 2016 ರಲ್ಲಿ ಈ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು. ಇದು ಹಸಿರು ವಲಯ ಸಮರ್ಪಿತ ಹೆಲಿಕಾಪ್ಟರ್ ಕಾರ್ಖಾನೆಯಾಗಿದ್ದು, ಇದರಿಂದ ಸಾಮರ್ಥ್ಯ ಹೆಚ್ಚಿಸಲಿದೆ ಮತ್ತು ಪರಿಸರ ಸ್ನೇಹಿ ಹೆಲಿಕಾಪ್ಟರ್ ಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದು ಏಷ್ಯಾದಲ್ಲಿಯೇ ಅತಿ ದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯವಿರುವ ಕಾರ್ಖಾನೆಯಾಗಿದೆ ಮತ್ತು ಆರಂಭಿಕವಾಗಿ ಹಗುರ ಬಳಕೆಯ ಹೆಲಿಕಾಪ್ಟರ್ ಗಳನ್ನು [ಎಲ್ ಯುಎಚ್] ಗಳನ್ನು ಉತ್ಪಾದಿಸಲಾಗುತ್ತದೆ. ಎಲ್ ಯುಎಚ್ ದೇಶೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಿದ 3-ಟನ್ ಶ್ರೇಣಿ, ಏಕ ಎಂಜಿನ್ ವಿವಿಧೋದ್ದೇಶ ಉಪಯುಕ್ತತೆಯ ಹೆಲಿಕಾಪ್ಟರ್ ಆಗಿದ್ದು, ಹೆಚ್ಚಿನ ಕುಶಲತೆಯ ವಿಶಿಷ್ಟ್ಯವಾದ ಲಕ್ಷಗಳನ್ನು ಹೊಂದಿದೆ.

ಈ ಕಾರ್ಖಾನೆಯಲ್ಲಿ ಲಘು ಯುದ್ಧ ಹೆಲಿಕಾಪ್ಟರ್ [ಎಲ್.ಸಿ.ಎಚ್] ಇತರೆ ಹೆಲಿಕಾಪ್ಟರ್ ಗಳ ಉತ್ಪಾದನೆಯನ್ನು ಸಹ ವಿಸ್ತರಿಸಲಾಗುತ್ತದೆ ಮತ್ತು ಭಾರತೀಯ ಬಹುಪಾತ್ರದ ಹೆಲಿಕಾಪ್ಟರ್ ಗಳು [ಐಎಂಆರ್ ಎಚ್] ಅಲ್ಲದೇ ದುರಸ್ತಿ ಮತ್ತು ಒಟ್ಟಾರೆ ಎಲ್ ಸಿಎಚ್, ಎಲ್ ಯುಎಚ್, ನಾಗರಿಕ ಎಎಲ್ ಎಚ್ ಮತ್ತು ಐಎಂಆರ್ ಎಚ್ ಹೆಲಿಕಾಪ್ಟರ್ ಗಳನ್ನು ಭವಿಷ್ಯದಲ್ಲಿ ಉತ್ಪಾದಿಸಲಾಗುವುದು. ಬರುವ ದಿನಗಳಲ್ಲಿ ನಾಗರಿಕ ಎಲ್ ಯುಎಚ್ ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಕಾರ್ಖಾನೆ ಹೊಂದಿದೆ.

ಈ ಸೌಲಭ್ಯ ಭಾರತಕ್ಕೆ ತನ್ನ ಸಂಪೂರ್ಣ ಹೆಲಿಕಾಪ್ಟರ್ ಗಳ ಅಗತ್ಯವನ್ನು ಸ್ಥಳೀಯವಾಗಿ ಪೂರೈಸಲು ಅನುವು ಮಾಡಿಕೊಡುತ್ತದೆ ಮತ್ತು ಭಾರತದಲ್ಲಿ ಹೆಲಿಕಾಪ್ಟರ್ ಗಳ ವಿನ್ಯಾಸ, ಅಭಿವೃದ್ದಿ ಮತ್ತು ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಕ್ರಿಯಗೊಳಿಸುವ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಕಾರ್ಖಾನೆ 4.0 ಮಾನದಂಡಗಳಡಿ ಉತ್ಪಾದನಾ ವ್ಯವಸ್ಥೆಯನ್ನು ಹೊಂದಿದ್ದು, ಮುಂದಿನ 20 ವರ್ಷಗಳಲ್ಲಿ ಎಚ್ ಎಎಲ್ ತುಮಕೂರಿನಲ್ಲಿ 3 ರಿಂದ 15 ಟನ್ ಸಾಮರ್ಥ್ಯದ 1000 ಕ್ಕೂ ಹೆಚ್ಚು ಹೆಲಿಕಾಪ್ಟರ್ ಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಈ ವಲಯದಲ್ಲಿ 6000 ಕ್ಕೂ ಹೆಚ್ಚು ಜನರಿಗೆ ಉದ್ಯೋಗ ದೊರೆಯಲಿದೆ.

ಪ್ರಧಾನಮಂತ್ರಿ ಅವರು ತುಮಕೂರು ಕೈಗಾರಿಕಾ ಪ್ರದೇಶಕ್ಕೆ ಶಿಲಾನ್ಯಾಸ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ‍್ದಿ ಕಾರ್ಯಕ್ರಮದಡಿ ತುಮಕೂರಿನಲ್ಲಿ ಮೂರು ಹಂತಗಳಲ್ಲಿ 8484 ಎಕರೆ ಪ್ರದೇಶದಲ್ಲಿ ಮೂರು ಹಂತಗಳ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಇದು ಚೆನ್ನೈ ಬೆಂಗಳೂರು ಕೈಗಾರಿಕಾ ಕಾರಿಡಾರ್ ನ ಭಾಗವಾಗಿದೆ.

ತುಮಕೂರಿನ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರಿನಲ್ಲಿ ಜಲ್ ಜೀವನ್ ಅಭಿಯಾನದ ಯೋಜನೆಗಳಿಗೆ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ. ತಿಪಟೂರಿನ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು 430 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಚಿಕ್ಕನಾಯಕನಹಳ್ಳಿಯ 147 ಜನವಸತಿ ಪ್ರದೇಶಗಳಿಗೆ 115 ಕೋಟಿ ರೂಪಾಯಿ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ವಲಯದ ಜನರಿಗೆ ಶುದ್ದ ಕುಡಿಯುವ ನೀರು ಪೂರೈಸುವ ಉದ್ದೇಶವನ್ನು ಈ ಯೋಜನೆ ಒಳಗೊಂಡಿದೆ.

***

Share on facebook